Sundar Pichai: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!

|

Updated on: May 18, 2024 | 11:57 AM

ಎಐ ವಿಚಾರವಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತದ ಎಂಜಿನಿಯರ್​​ಗಳಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಎಐಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಭಾರತದ ಮಾರುಕಟ್ಟೆಯಲ್ಲಿ ಅದರ ಪರಿಣಾಮ ಹೇಗಿರಲಿದೆ ಎಂಬುದರ ಜತೆಗೆ ಸುಂದರ್ ಪಿಚೈ ಭಾರತೀಯ ಯುವ ಟೆಕ್ಕಿಗಳಿಗೆ ನೀಡಿದ ಸಲಹೆ ಏನು ಎಂಬ ವಿವರ ಇಲ್ಲಿದೆ.

Sundar Pichai: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!
ವರುಣ್ ಮಯ್ಯ ಜತೆ ಸಂದರ್ಶನದಲ್ಲಿ ಸುಂದರ್ ಪಿಚೈ
Image Credit source: YouTube/@Varun Mayya
Follow us on

ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಕೃತಕ ಬುದ್ಧಿಮತ್ತೆ (Artificial Intelligence) ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​​ದೇ ಸುದ್ದಿ. ಒಂದಡೆ ಎಐಯಿಂದ (AI) ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕದಲ್ಲಿ ಅನೇಕರಿದ್ದರೆ, ಮತ್ತೊಂದೆಡೆ ಹೊಸ ತಂತ್ರಜ್ಞಾವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ವೃತ್ತಿಜೀವನದಲ್ಲಿ ಅಪ್​​ಡೇಟ್ ಆಗಬೇಕಾದ ಸವಾಲು ಟೆಕ್ಕಿಗಳ ಮುಂದಿದೆ. ಈ ಸಂದರ್ಭದಲ್ಲಿ ಗೂಗಲ್ ಸಿಇಒ (Google CEO) ಸುಂದರ್ ಪಿಚೈ (Sundar Pichai) ಭಾರತದ ಎಂಜಿನಿಯರ್​​ಗಳಿಗೆ ಮಹತ್ವದ ಸಲಹೆ ನೀಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ವರುಣ್ ಮಯ್ಯಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಿಚೈ, ಭಾರತೀಯ ಮಾರುಕಟ್ಟೆಯಲ್ಲಿ ಎಐ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ದೇಶದ ಎಂಜಿನಿಯರ್​ಗಳಿಗೆ ಸಲಹೆಯನ್ನೂ ನೀಡಿದ್ದಾರೆ. ಗೂಗಲ್​ನ ವಾರ್ಷಿಕ ಐ/ಒ ಡೆವಲಪ್​ಮೆಂಟ್ ಇವೆಂಟ್ ವೇಳೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪಿಚೈ ಅವರನ್ನು ಭೇಟಿಯಾದ ವರುಣ್ ಮಯ್ಯ ಸಂದರ್ಶನ ನಡೆಸಿದ್ದಾರೆ. ಇದನ್ನವರು ತಮಾಷೆಯಿಂದ ‘AI Coachella’ ಎಂದೂ ಕರೆದಿದ್ದಾರೆ.

10 ನಿಮಿಷಗಳ ಸಂದರ್ಶನವನ್ನು ವರುಣ್ ಮಯ್ಯ ಯೂಟ್ಯೂಬ್​ನಲ್ಲಿ ಕೂಡ ಹಂಚಿಕೊಂಡಿದ್ದಾರೆ. ಸುಂದರ್ ಪಿಚೈ ಜತೆ ಸಂದರ್ಶನ ನಡೆಸುವ ಗೌರವ ನನ್ನದಾಯಿತು. ನಾವು ಎಐ ಯಲ್ಲಿನ ಅದ್ಭುತ ಪ್ರಗತಿಯತ್ತ ಧುಮುಕುತ್ತಿರುವುದರ ಬಗ್ಗೆ ಮತ್ತು ಭಾರತವು ಇದನ್ನು ಎದುರಿಸಲು ಹೇಗೆ ಸಿದ್ಧವಾಗಿದೆ ಎಂಬುದರ ಜೊತೆಗೆ ಇನ್ನೂ ಕೆಲವು ಆಸಕ್ತಿದಾಯಕ ಒಳನೋಟಗಳನ್ನು ಚರ್ಚಿಸಿದೆವು ಎಂದು ಅವರು ಬರೆದುಕೊಂಡಿದ್ದಾರೆ.

ಸಂದರ್ಶನದ ಒಂದು ಹಂತದಲ್ಲಿ “ಸ್ಪರ್ಧಾತ್ಮಕ ಪರೀಕ್ಷೆ” ಮನಸ್ಥಿತಿಯಿಂದ ಹೊರಬರಲು ಮತ್ತು ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಉದಯೋನ್ಮುಖ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಏನು ಸಲಹೆ ನೀಡುತ್ತೀರಿ ಎಂದು ಪಿಚೈ ಅವರನ್ನು ಮಯ್ಯ ಕೇಳಿದ್ದಾರೆ.

ಸುಂದರ್ ಪಿಚೈ ಸಲಹೆ ಏನು?

ವರುಣ್ ಮಯ್ಯ ಪ್ರಶ್ನೆಗೆ ಉತ್ತರಿಸಿದ ಪಿಚೈ, ಆಳವಾಗಿ ಅರ್ಥ ಮಾಡಿಕೊಳ್ಳುವುದರಲ್ಲೇ ನಿಜವಾದ ಯಶಸ್ಸು ಅಡಗಿದೆ ಎಂದರು. ಆಮೀರ್ ಖಾನ್​​ರ ತ್ರೀ ಈಡಿಯಟ್ಸ್​​ ಸಿನಿಮಾದ ದೃಶ್ಯವೊಂದನ್ನು ಉಲ್ಲೇಖಿಸಿದ ಅವರು ವಿಷಯವೊಂದನ್ನು ತಿಳಿಯುವುದು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವುದರ ನಡುವಣ ವ್ಯತ್ಯಾಸವನ್ನು ವಿವರಿಸಿದರು.

ನೀವು ತಂತ್ರಜ್ಞಾನವನ್ನು ಆಳವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಹಾಗೆ ಮಾಡಿದರೆ ನೀವು ಪರಿವರ್ತನೆ ಹೊಂದಬಹುದು. ನೀವು ಕೆಲಸಗಳನ್ನು ಸಮರ್ಥವಾಗಿ ಮಾಡಬಹುದು ಎಂದು ಪಿಚೈ ಹೇಳಿದ್ದಾರೆ. ಈ ರೀತಿ ಮಾಡುವುದನ್ನು ಯಾವಗಲೂ ಪ್ರೋತ್ಸಾಹಿಸುವುದಾಗಿಯೂ ಅವರು ಹೇಳಿದ್ದಾರೆ.

ಸುಂದರ್ ಪಿಚೈ ಸಂದರ್ಶನ ಇಲ್ಲಿ ನೋಡಿ

ಇದನ್ನೂ ಓದಿ: ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್

ಸಂದರ್ಶನದಲ್ಲಿ ಅವರು ಭಾರತೀಯ ಮಾರುಕಟ್ಟೆಯಲ್ಲಿ ಎಐ, ವ್ರಾಪರ್ ಸ್ಟಾರ್ಟ್‌ಅಪ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ ಸೃಜನಶೀಲ ಅಳವಡಿಕೆಯ ಬಗ್ಗೆಯೂ ಮಾತನಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ