BBC: 40 ಕೋಟಿ ಆದಾಯ ಮುಚ್ಚಿಟ್ಟಿದ್ದು ಹೌದೆಂದು ತಪ್ಪೊಪ್ಪಿಕೊಂಡ ಬಿಬಿಸಿ; ಪರಿಷ್ಕೃತ ಐಟಿಆರ್ ಸಲ್ಲಿಸುವಂತೆ ಐಟಿ ಇಲಾಖೆ ಸೂಚನೆ

Tax Evasion Truth of BBC: ಬಿಬಿಸಿಯ ಭಾರತೀಯ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವ ಆರೋಪ ನಿರಾಧಾರ ಎಂಬುದಕ್ಕೆ ಸಾಕ್ಷಿಯಾಗಿ ಸ್ವತಃ ಬಿಬಿಸಿಯೇ ಇದೀಗ ತನ್ನಿಂದ ತೆರಿಗೆ ವಂಚನೆ ಆಗಿರುವುದಾಗಿ ತಪ್ಪೊಪ್ಪಿಕೊಂಡಿದೆ.

BBC: 40 ಕೋಟಿ ಆದಾಯ ಮುಚ್ಚಿಟ್ಟಿದ್ದು ಹೌದೆಂದು ತಪ್ಪೊಪ್ಪಿಕೊಂಡ ಬಿಬಿಸಿ; ಪರಿಷ್ಕೃತ ಐಟಿಆರ್ ಸಲ್ಲಿಸುವಂತೆ ಐಟಿ ಇಲಾಖೆ ಸೂಚನೆ
ಬಿಬಿಸಿ

Updated on: Jun 06, 2023 | 12:46 PM

ನವದೆಹಲಿ: ಬಿಬಿಸಿ ತಾನು 40 ಕೋಟಿ ರೂನಷ್ಟು ಆದಾಯವನ್ನು ಮುಚ್ಚಿಟ್ಟಿದ್ದು ಹೌದು ಎಂಬ ವಿಚಾರವನ್ನು ಒಪ್ಪಿಕೊಂಡಿದ್ದು ಈ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಇಮೇಲ್ ಮೂಲಕ ತಿಳಿಸಿದೆ. ಈ ಬಗ್ಗೆ ತಮಗೆ ಇಬ್ಬರು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಕೆಲ ತಿಂಗಳ ಹಿಂದೆ ಬಿಬಿಸಿಯ ಭಾರತೀಯ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವ ಆರೋಪ ನಿರಾಧಾರ ಎಂಬುದು ಈ ಬೆಳವಣಿಗೆಯಿಂದ ಸಾಬೀತಾಗಿದೆ. ಬಿಬಿಸಿ ವಿರುದ್ಧ ತೆರಿಗೆ ವಂಚನೆ ನಡೆದಿರುವ ಬಗ್ಗೆ ಐಟಿಗೆ ಬಲವಾದ ಮಾಹಿತಿ ಇದ್ದದ್ದರಿಂದಲೇ ರೇಡ್ ನಡೆದಿತ್ತು ಎಂದು ಹೇಳಲಾಗಿದೆ.

40 ಕೋಟಿ ರೂನಷ್ಟು ಆದಾಯ ಮುಚ್ಚಿಟ್ಟಿರುವ ಬಗ್ಗೆ ಇಮೇಲೆ ಬರೆದಿರುವ ಬಿಬಿಸಿಗೆ ಐಟಿ ಇಲಾಖೆ ಉತ್ತರಿಸಿದ್ದು, ಇಮೇಲ್ ಕಳುಹಿಸಿದರೆ ಅದು ಕಾನೂನಾತ್ಮಕ ಎನಿಸುವುದಿಲ್ಲ. ಪರಿಷ್ಕೃತ ಐಟಿ ರಿಟರ್ನ್ಸ್ ಅರ್ಜಿ ಸಲ್ಲಿಸಬೇಕು. ಎಲ್ಲಾ ಬಾಕಿ ತೆರಿಗೆ, ಬಡ್ಡಿ, ದಂಡ ಇತ್ಯಾದಿ ಹಲವು ಕೋಟಿ ರೂ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಆ ಪತ್ರಿಕಾ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿByju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್

ದೇಶದ ಕಾನೂನು ಎಲ್ಲರಿಗೂ ಒಂದೇ. ಮಾಧ್ಯಮ ಸಂಸ್ಥೆ ಎಂದೋ ಅಥವಾ ವಿದೇಶೀ ಸಂಸ್ಥೆ ಎಂದೋ ವಿಶೇಷ ವಿನಾಯಿತಿ ಇರುವುದಿಲ್ಲ. ನಿಯಮದ ಪ್ರಕಾರ ಬಿಬಿಸಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕು. ಈ ಪ್ರಕರಣವು ತಾರ್ಕಿಕವಾಗಿ ಅಂತ್ಯಗೊಳ್ಳುವವರೆಗೂ ಐಟಿ ಇಲಾಖೆಯು ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಫೆಬ್ರುವರಿಯಲ್ಲಿ ಬಿಬಿಸಿ ಕಚೇರಿಗಳ ಮೇಲೆ ದಾಳಿ

ಬಿಬಿಸಿ ಅಥವಾ ಬ್ರಿಟಿಷ್ ಬ್ರಾಡ್​ಕ್ಯಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆ ಬ್ರಿಟನ್ ಮೂಲದ್ದಾಗಿದ್ದು, ಭಾರತದಲ್ಲಿ ಕಚೇರಿ ಹೊಂದಿದೆ. 2023 ಫೆಬ್ರುವರಿ ತಿಂಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡಗಳು ಸರ್ವೆ ಕೈಗೊಂಡಿದ್ದವು. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಐಟಿ ಇಲಾಖೆ ಹೇಳಿದ್ದರೂ, ಈ ಬೆಳವಣಿಗೆಯಲ್ಲಿ ರಾಜಕೀಯ ಪಿತೂರಿ ಇದೆ ಎಂದು ವಿಪಕ್ಷಗಳು ದೂರಿದ್ದವು.

ಇದನ್ನೂ ಓದಿAir Tickets Fare: ಸುಮ್ಮನೆ ವಿಮಾನ ಟಿಕೆಟ್ ದರ ಏರಿಸದಿರಿ: ಏರ್​ಲೈನ್ಸ್ ಸಂಸ್ಥೆಗಳಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಲಹೆ

ಗುಜರಾತ್ ಗಲಭೆ ವಿಚಾರವಾಗಿ ಬಿಬಿಸಿ ಡಾಕ್ಯುಮೆಂಟರಿ ತಯಾರಿಸಿ ಬಿಡುಗಡೆ ಮಾಡಿದ್ದರಿಂದ ಸೇಡಿನ ಕ್ರಮವಾಗಿ ಐಟಿ ರೇಡ್ ನಡೆದಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಬಿಬಿಸಿ ತಾನು ಯಾವುದೇ ತೆರಿಗೆ ವಂಚನೆ ಎಸಗಿಲ್ಲ ಎಂದು ಆಗ ಸಮರ್ಥಿಸಿಕೊಂಡಿತ್ತು. ಈಗ ನಾಲ್ಕೈದು ತಿಂಗಳ ಬಳಿಕ ಬಿಬಿಸಿ ತಾನು 40 ಕೋಟಿ ರೂನಷ್ಟು ಆದಾಯ ಮರೆಮಾಚಿದ್ದು ಹೌದು ಎಂಬುದಾಗಿ ತಪ್ಪೊಪ್ಪಿಕೊಂಡಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us