ಸಿನಿಮೀಯ ಘಟನೆ; ಉದ್ಯೋಗಿಯಾಗಿ ಸೇರಿಕೊಂಡು ಪ್ರಾಜೆಕ್ಟ್ ಲಪಟಾಯಿಸುತ್ತಿದ್ದ ಬೆಂಗಳೂರಿನ ಬಿಸಿನೆಸ್​ಮ್ಯಾನ್

|

Updated on: Sep 04, 2023 | 2:35 PM

Filmy Style Business Cheating: ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದ ಸಿಂಗಾಪುರ ಮೂಲದ ಕಂಪನಿಯಲ್ಲಿ ವೆಂಡರ್ ಮ್ಯಾನೇಜ್ಮೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಮಲರ್​ಪವರಾಜ್ ಎಂಬಾತ ಪ್ರಾಜೆಕ್ಟ್​ಗಳ ಸೂಕ್ಷ್ಮ ಮಾಹಿತಿ ಕದ್ದು ತನ್ನದೇ ಮಾಲಕತ್ವದ ಕಂಪನಿಗೆ ವರ್ಗಾಯಿಸುತ್ತಿದ್ದ. ಇದರಿಂದ ಈ ಕಂಪನಿಗೆ ಬರಬೇಕಿದ್ದ ಪ್ರಾಜೆಕ್ಟ್​ಗಳು ಆ ಕಂಪನಿ ಪಾಲಾಗುತ್ತಿದ್ದವು. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿನಿಮೀಯ ಘಟನೆ; ಉದ್ಯೋಗಿಯಾಗಿ ಸೇರಿಕೊಂಡು ಪ್ರಾಜೆಕ್ಟ್ ಲಪಟಾಯಿಸುತ್ತಿದ್ದ ಬೆಂಗಳೂರಿನ ಬಿಸಿನೆಸ್​ಮ್ಯಾನ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 4: ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಅದೇ ಕಂಪನಿಯ ಪ್ರತಿಸ್ಪರ್ಧಿ ಕಂಪನಿಗೆ ಸೂಕ್ಷ್ಮ ಮಾಹಿತಿ ಕದ್ದು ಕಳುಹಿಸುವ ಘಟನೆಗಳ ಬಗ್ಗೆ ಕೇಳಿರಬಹುದು. ಟಾಲಿವುಡ್​ನ ಮಹೇಶ್ ಬಾಬು ನಟಿಸಿದ ಶ್ರೀಮಂತುಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ಇಂತಹ ದೃಶ್ಯಗಳಿವೆ. ಇಂಥದ್ದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ವೆಂಡರ್ ಮ್ಯಾನೇಜರ್ (Vendor Management Manager) ಆಗಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ, ಸೂಕ್ಷ್ಮ ಮಾಹಿತಿಯನ್ನು ಅಕ್ರಮವಾಗಿ ತನ್ನದೇ ಮಾಲಕತ್ವದ ಬೇರೆ ಕಂಪನಿಗೆ ಕಳುಹಿಸಿ ಹಲವು ಪ್ರಾಜೆಕ್ಟ್​ಗಳನ್ನು ಲಪಟಾಯಿಸುತ್ತಿದ್ದ ಘಟನೆ ನಡೆದಿದೆ. ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಅದರ ಪ್ರಕಾರ ಅಮಲರ್​ಪವರಾಜ್ (Amalorpavaraj) ಎಂಬ ಅರೋಪಿ ವಿರುದ್ದ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಮಲರ್​ಪವರಾಜ್ ಕೃತ್ಯಗಳನ್ನು ಎಸಗುತ್ತಿದ್ದ ಪರಿ ಇದು…

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಮಲರ್​ಪವರಾಜ್ 2003ರಲ್ಲಿಒಂದು ಕಂಪನಿ ಸ್ಥಾಪಿಸಿರುತ್ತಾರೆ. ಸಾಫ್ಟ್​ವೇರ್ ಸಲ್ಯೂಷನ್ಸ್ ಒದಗಿಸುವ ಕಂಪನಿ ಅದು. ಆದರೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇವರ ಕಂಪನಿಗೆ ಸರಿಯಾಗಿ ಏನೂ ಗೀಟದೇ ನಷ್ಟ ಕಾಣುತ್ತದೆ. ಆಗ ಅಮಲರ್​ಪವರಾಜ್ ತನ್ನ ಪ್ರತಿಸ್ಪರ್ಧಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಸೇರಿಕೊಂಡು ಪ್ರಾಜೆಕ್ಟ್​ಗಳನ್ನು ಕದ್ದು ಸಾಗಿಸುವ ಸಂಚು ರೂಪಿಸುತ್ತಾರೆ.

ಇದನ್ನೂ ಓದಿ: ರಿಲಾಯನ್ಸ್​ನ ಜೆಎಫ್​ಎಸ್ ಷೇರುಬೆಲೆ ಕುಸಿಯುತ್ತಿದ್ದುದು ಯಾಕೆ? ಷೇರುಸೂಚಿಗಳಿಂದ ಹೊರಬೀಳುವುದು ಜಿಯೋಗೆ ಅನುಕೂಲವಾ? ಪ್ರೈಸ್​ಬ್ಯಾಂಡ್ ಬದಲಿಸಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್

ಸಿಂಗಾಪುರ ಮೂಲದ ತನ್ನ ಪ್ರತಿಸ್ಪರ್ಧಿ ಕಂಪನಿಯೊಂದರ ಬೆಂಗಳೂರು ವಿಭಾಗಕ್ಕೆ ಈತ 2019ರಲ್ಲಿ ವೆಂಡರ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರುತ್ತಾರೆ. ತಾಂತ್ರಿಕ ಸಹಾಯ ಕೋರಿ ಬರುವ ವೆಂಡರ್​ಗಳಿಗೆ (ಮಾರಾಟಗಾರರು) ಮಾರ್ಗದರ್ಶನ ನೀಡುವುದು ಮತ್ತು ಅವರ ಸಮಸ್ಯೆ ನಿರ್ವಹಿಸುವುದು ಈತನ ಕೆಲಸದ ಜವಾಬ್ದಾರಿಯಾಗಿರುತ್ತದೆ.

ಆದರೆ, ಅಮಲರ್​ಪವರಾಜ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರಾಜೆಕ್ಟ್​ಗಳ ಸೂಕ್ಷ್ಮ ಮಾಹಿತಿಯನ್ನು ಇವರು ತನ್ನ ಮಾಲಕತ್ವದ ಕಂಪನಿಗೆ ಕೊಡುತ್ತಿರುತ್ತಾರೆ. ಆ ಕಂಪನಿಯವರು ಕಡಿಮೆ ಬೆಲೆ ಕೋಟ್ ಮಾಡುತ್ತಿದ್ದುದರಿಂದ ಪ್ರಾಜೆಕ್ಟ್​ಗಳು ಸಿಗುತ್ತಿರುತ್ತವೆ.

ಒಂದು ದಿನ, ಅಮಲರ್​ಪವರಾಜ್ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲಕರಿಗೆ ತಮಗೆ ಬರಬೇಕಿದ್ದ ಪ್ರಾಜೆಕ್ಟ್​ಗಳು ಬೇರೆ ಕಂಪನಿಗೆ ಹೋಗುತ್ತಿದ್ದುದು ಗೊತ್ತಾಗುತ್ತದೆ. ಆಗ ಅವರಿಗೆ ತಮ್ಮ ಎದುರಾಳಿ ಕಂಪನಿಯ ಮಾಲೀಕ ತಮ್ಮದೇ ಕಂಪನಿಯಲ್ಲಿ ವೆಂಡರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದು ತಿಳಿಯುತ್ತದೆ.

ಇದನ್ನೂ ಓದಿ: ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು

ಇದು ಗೊತ್ತಾಗುತ್ತಲೇ ಅಮಲರ್​​ಪವರಾಜ್ ಪರಾರಿಯಾಗಿದ್ದಾರೆ. ದಿ ಹಿಂದೂ ಪತ್ರಿಕೆಯಲ್ಲಿ ಬಂದ ವರದಿಯಲ್ಲಿರುವ ಮಾಹಿತಿ ಪ್ರಕಾರ 77 ಲಕ್ಷ ರೂ ಮೊತ್ತದ ವಿವಿಧ ಪ್ರಾಜೆಕ್ಟ್​ಗಳು ಈ ರೀತಿ ವರ್ಗಾವಣೆ ಆಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಕ್ತ ತಂತ್ರಾಂಶ ಸೇವೆ ಒದಗಿಸುವ ಸಿಂಗಾಪುರ ಮೂಲದ ಈ ಕಂಪನಿ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದೆ. ಪೊಲೀಸರು ಆರೋಪಿಯನ್ನು ಹುಡುಕಲು ಯತ್ನಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ