ಈ ವರ್ಷ ಸಿಪಿಎಸ್​ಇಯಿಂದ 53,000 ಕೋಟಿ ರೂ ಡಿವಿಡೆಂಡ್ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ

Dividend from CPSE: 2024-25ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಸಿಪಿಎಸ್​ಇಗಳಿಂದ ಹೆಚ್ಚು ಡಿವಿಡೆಂಡ್ ಸಿಗುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್​ನಲ್ಲಿ 48,000 ಕೋಟಿ ರೂ ಡಿವಿಡೆಂಡ್ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಈಗ 5,000 ಕೋಟಿ ರೂನಷ್ಟು ಹೆಚ್ಚು ಡಿವಿಡೆಂಡ್ ನಿರೀಕ್ಷಿಸುವ ಸಾಧ್ಯತೆ ಇದೆ. ಅಂದರೆ ಡಿವಿಡೆಂಡ್ ಟಾರ್ಗೆಟ್ ಅನ್ನು 53,000 ಕೋಟಿ ರೂಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿರುವುದು ತಿಳಿದುಬಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ 63,000 ಕೋಟಿ ರೂನಷ್ಟು ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರ ಪಡೆದಿತ್ತು.

ಈ ವರ್ಷ ಸಿಪಿಎಸ್​ಇಯಿಂದ 53,000 ಕೋಟಿ ರೂ ಡಿವಿಡೆಂಡ್ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ
ನಿರ್ಮಲಾ ಸೀತಾರಾಮನ್

Updated on: May 21, 2024 | 2:55 PM

ನವದೆಹಲಿ, ಮೇ 21: ಈ ಹಣಕಾಸು ವರ್ಷದಲ್ಲಿ (2024-25) ಕೇಂದ್ರ ಸರ್ಕಾರಿ ಉದ್ದಿಮೆಗಳಿಂದ ಬರಬಹುದಾದ ಡಿವಿಡೆಂಡ್ ಅಥವಾ ಲಾಭಾಂಶಗಳು (dividend) ಹೆಚ್ಚಾಗಬಹುದು ಎಂದು ಹಣಕಾಸು ಸಚಿವಾಲಯ (finance ministry) ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ. ವರ್ಷದ ಡಿವಿಡೆಂಡ್ ಟಾರ್ಗೆಟ್ ಅನ್ನು 5,000 ಕೋಟಿ ರೂಗಳಷ್ಟು ಹೆಚ್ಚಿಸಲು ಯೋಜಿಸಲಾಗಿದೆ. ಚುನಾವಣೆಗೆ ಮುನ್ನ ಫೆಬ್ರುವರಿ 1ರಂದು ನಡೆದ ಮಧ್ಯಂತರ ಬಜೆಟ್​ನಲ್ಲಿ ಸಿಪಿಎಸ್​ಇಗಳಿಂದ 48,000 ಕೋಟಿ ರೂ ಡಿವಿಡೆಂಡ್ ನಿರೀಕ್ಷಿಸಲಾಗಿತ್ತು. ಈಗ ಅದನ್ನು 53,000 ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜುಲೈನಲ್ಲಿ ಮಂಡಿಸಲಾಗುವ ಪೂರ್ಣಪ್ರಮಾಣದ ಬಜೆಟ್​ನಲ್ಲಿ ಇದರ ಎಸ್ಟಿಮೇಟ್ ಅನ್ನು ಅಧಿಕೃತವಾಗಿ ಪ್ರಕಟಿಸಬಹುದು.

ಡಿಸೆಂಬರ್ ಮತ್ತು ಜನವರಿಯಲ್ಲಿ ಮಾಡಲಾದ ಅಂದಾಜಿನ ಆಧಾರದ ಮೇಲೆ ಇಂಟೆರಿಮ್ ಬಜೆಟ್​ನಲ್ಲಿ ಡಿವಿಡೆಂಡ್ ಎಸ್ಟಿಮೇಶನ್ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರಿ ಉದ್ದಿಮೆಗಳ ಲಾಭಗಳ ಬಗ್ಗೆ ಉತ್ತಮ ನೋಟ ಸಿಕ್ಕಿರುವುದರಿಂದ ಹೆಚ್ಚು ನಿಖರವಾಗಿ ಎಸ್ಟಿಮೇಟ್ ಮಾಡಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.

2022-23ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಿ ಉದ್ದಿಮೆಗಳಿಂದ ಸರ್ಕಾರಕ್ಕೆ ಬಂದ ಡಿವಿಡೆಂಡ್ ಮೊತ್ತ 59,953 ಕೋಟಿ ರೂ ಇತ್ತು. 2023-24ರಲ್ಲಿ ಇದು 63,000 ಕೋಟಿ ರೂಗೆ ಏರಿದೆ. ಈ ವರ್ಷವೂ ಇಷ್ಟೇ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ. ಈ ವರ್ಷ ಇಲ್ಲಿಯವರೆಗೆ ಈ ಉದ್ದಿಮೆಗಳಿಂದ ಸರ್ಕಾರಕ್ಕೆ ಬಂದಿರುವ ಲಾಭಾಂಶ 4,837.25 ಕೋಟಿ ರೂ ಇದೆ.

ಇದನ್ನೂ ಓದಿ: ಈ ವೇಗದಲ್ಲಿ ಹೋದ್ರೆ ಭಾರತ ಶ್ರೀಮಂತ ದೇಶ ಆಗೋದು ಯಾವಾಗ?: ರಘುರಾಮ್ ರಾಜನ್

ಡಿವಿಡೆಂಡ್ ಎಂದರೆ ಏನು?

ಡಿವಿಡೆಂಡ್ ಎಂದರೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ ತನ್ನ ಪ್ರತೀ ಷೇರಿಗೆ ನೀಡುವ ಲಾಭಾಂಶವಾಗಿದೆ. ಸರ್ಕಾರಿ ಉದ್ದಿಮೆಗಳಲ್ಲಿ ಸರ್ಕಾರದ ಪಾಲು ಅತ್ಯಧಿಕ ಇರುತ್ತದೆ. ಹೀಗಾಗಿ, ಹೆಚ್ಚಿನ ಲಾಭಾಂಶವು ಸರ್ಕಾರಕ್ಕೆ ಹೋಗುತ್ತದೆ. ಹಲವು ಸರ್ಕಾರಿ ಉದ್ದಿಮೆಗಳು ಆರೋಗ್ಯಕರ ರೀತಿಯಲ್ಲಿ ನಡೆಯುತ್ತಿದ್ದು ಷೇರುಬೆಲೆ ಕೂಡ ಅಧಿಕ ಮಟ್ಟದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us