Shocking: ವರ್ಕ್ ಫ್ರಂ ಹೋಂ ಮಾಡೋರೇ ಹುಷಾರ್; ಈ ಮುಖಂಡರು ಹೇಳೋ ಮಾತು ನೋಡಿದ್ರೆ ವೃತ್ತಿಜೀವನ ಮುಗಿದಂತೆಯಾ? ಯಾರ್‍ಯಾರು ಏನು ಹೇಳಿದ್ರು?

|

Updated on: May 07, 2023 | 7:24 PM

Work From Home Vs Work From Office: ಇತ್ತೀಚೆಗೆ ಐಬಿಎಂ ಕಾರ್ಪೊರೇಷನ್ ಸಂಸ್ಥೆಯ ಸಿಇಒ ಅರವಿಂದ್ ಕೃಷ್ಣ ಮತ್ತು ಓಪನ್ ಎಐ ಕಂಪನಿಯ ಸಿಇಒ ಸ್ಯಾಮ್ ಆಲ್ಟ್​ಮನ್ ಅವರು ವರ್ಕ್ ಫ್ರಂ ಹೋಮ್ ಬಗ್ಗೆ ನೀಡಿದ ಹೇಳಿಕೆಗಳು ಚಿಂತನೆಗೆ ಗ್ರಾಸ ಒದಗಿಸುವಂತಿವೆ.

Shocking: ವರ್ಕ್ ಫ್ರಂ ಹೋಂ ಮಾಡೋರೇ ಹುಷಾರ್; ಈ ಮುಖಂಡರು ಹೇಳೋ ಮಾತು ನೋಡಿದ್ರೆ ವೃತ್ತಿಜೀವನ ಮುಗಿದಂತೆಯಾ? ಯಾರ್‍ಯಾರು ಏನು ಹೇಳಿದ್ರು?
ವರ್ಕ್ ಫ್ರಂ ಹೋಂ
Follow us on

ನವದೆಹಲಿ: ಕೋವಿಡ್ ಬಂದ ಬಳಿಕ ಉದ್ಯೋಗಜಗತ್ತು ಕೆಲಸ ಮಾಡಲು ಹೊಸ ವಿಧಾನ ಕಂಡುಕೊಂಡಿತ್ತು. ವರ್ಕ್ ಫ್ರಂ ಹೋಂ (Remote Work) ಎಂಬುದು ಕೋವಿಡ್ ಸೋಂಕು ಹರಡದಿರಲೆಂದು ಕಂಡುಕೊಂಡ ವಿಧಾನ. ಈಗಲೂ ಬಹಳ ಮಂದಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಿದ್ದಾರೆ. ಇನ್ನು, ಕಾರ್ಪೊರೇಟ್ ಕಂಪನಿಗಳ ಮ್ಯಾನೇಜರುಗಳು ಕಚೇರಿಯಿಂದ ಕೆಲಸ ಮಾಡುವ (Work From Office) ಅಭಿಪ್ರಾಯ ಹೊಂದಿದ್ದಾರೆ. ಒಂದು ರೀತಿಯಲ್ಲಿ ಅನೇಕ ಕಂಪನಿಗಳಲ್ಲಿ ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು ಎನ್ನುವಂತಹ ಸ್ಥಿತಿ. ಕೆಲಸ ಮಾಡಲು ಕಚೇರಿ ಆದರೇನು, ಮನೆಯಾದರೇನು, ಕಚೇರಿಗೆ ಹೋದರೂ ಅದೇ ಕೆಲಸ, ಮನೆಯಲ್ಲಿ ಮಾಡಿದರೂ ಅದೇ ಕೆಲಸ ಅಲ್ಲವಾ ಎಂಬುದು ವರ್ಕ್ ಫ್ರಂ ಹೋಮ್ ಅಭಿಲಾಷಿಗಳ ಪ್ರಶ್ನೆ. ಆದರೆ ಬಹುತೇಕ ಕಂಪನಿಗಳ ಮುಖ್ಯಸ್ಥರು ವರ್ಕ್ ಫ್ರಂ ಹೋಂ ನಿಲ್ಲಿಸುವ ಅಭಿಪ್ರಾಯದ ಪರವಾಗಿಯೇ ಇದ್ದಾರೆ. ಮನೆಯಿಂದ ಕೆಲಸ ಮಾಡುವುಕ್ಕೆ ಒಗ್ಗಿಹೋದ ಉದ್ಯೋಗಿಗಳನ್ನು ಕಚೆರಿಗೆ ಕರೆಸುವುದೇ ದೊಡ್ಡ ತಲೆನೋವಿನ ಕೆಲಸವಾಗಿದೆ. ಇತ್ತೀಚೆಗೆ ಐಬಿಎಂ ಕಾರ್ಪೊರೇಷನ್ ಸಂಸ್ಥೆಯ ಸಿಇಒ ಅರವಿಂದ್ ಕೃಷ್ಣ ಮತ್ತು ಓಪನ್ ಎಐ (OpenAI) ಕಂಪನಿಯ ಸಿಇಒ ಸ್ಯಾಮ್ ಆಲ್ಟ್​ಮನ್ (Sam Altman) ಅವರು ವರ್ಕ್ ಫ್ರಂ ಹೋಮ್ ಬಗ್ಗೆ ನೀಡಿದ ಹೇಳಿಕೆಗಳು ಚಿಂತನೆಗೆ ಗ್ರಾಸ ಒದಗಿಸುವಂತಿವೆ.

ಮನೆಯಿಂದ ಕೆಲಸ ಮಾಡಿದರೆ ವೃತ್ತಿಯಲ್ಲಿ ಏಳಿಗೆ ಕಷ್ಟ ಎಂದು ಖಡಕ್ ವಾರ್ನಿಂಗ್ ಕೊಟ್ಟ ಐಬಿಎಂ ಸಿಇಒ ಅರವಿಂದ್ ಕೃಷ್ಣ

ಜಾಗತಿಕ ಐಟಿ ದೈತ್ಯ ಐಬಿಎಂ ಕಾರ್ಪೊರೇಷನ್​ನ ಸಿಇಒ ಅರವಿಂದ್ ಕೃಷ್ಣ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದು ಅವರ ವೃತ್ತಿಜೀವನಕ್ಕೆ ತಡೆಯಾಗಬಹುದು ಎಂದು ಎಚ್ಚರಿಸಿದ್ದಾರೆ. ತಾವು ಯಾರನ್ನೂ ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ಬಲವಂತ ಮಾಡುವುದಿಲ್ಲ. ಆದರೆ ವರ್ಕ್ ಫ್ರಂ ಹೋಮ್ ಮಾಡುತ್ತಿರುವವರು ವೃತ್ತಿಯಲ್ಲಿ ಬೆಳವಣಿಗೆ ಹೊಂದಲು, ಮ್ಯಾನೇಜರ್ ಹುದ್ದೆಗೆ ಏರಲು ಕಷ್ಟವಾಗುತ್ತದೆ ಎಂದಿದ್ದಾರೆ. ಈ ಮೂಲಕ ಐಬಿಎಂನಲ್ಲಿ ಕೆಲಸ ಮಾಡುತ್ತಿರುವ 2.6 ಲಕ್ಷ ಉದ್ಯೋಗಿಗಳ ಮನಸ್ಸಲ್ಲಿ ಚಳಿಯ ಗಾಳಿ ಬೀಸಿದ್ದಾರೆ.

ಇದನ್ನೂ ಓದಿGreat Comeback: 40 ವರ್ಷಕ್ಕೆ ನಿವೃತ್ತರಾಗಿ ಸ್ಪಾನಲ್ಲಿ ಕೆಲಸ ಮಾಡಿದ ಕೊನೇರು ಸುಧೀರ್ ಈಗ 12,000 ಕೋಟಿ ರೂ ಕಂಪನಿಯ ಒಡೆಯ

ವರ್ಕ್ ಫ್ರಂ ಹೋಮ್ ಮಾಡಿದವರಿಗೆ ಯಾಕೆ ಬಡ್ತಿ ಸಿಗಲ್ಲ?

ಕೆಲಸದಲ್ಲಿ ಬಡ್ತಿ ಎಂದರೆ ಸಾಮಾನ್ಯವಾಗಿ ಉನ್ನತದ ಸ್ತರದ ಮ್ಯಾನೇಜರ್ ಹುದ್ದೆಗಳಿಗೆ ಏರುವುದು; ಒಬ್ಬ ಉದ್ಯೋಗಿಯಾದವರು ಟೀಮ್ ಲೀಡರ್, ಮ್ಯಾನೇಜರ್, ವಿಪಿ ಇತ್ಯಾದಿ ಬಡ್ತಿ ಹೊಂದುತ್ತಾ ಹೋಗಬಹುದು. ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರ ಪ್ರಕಾರ ರಿಮೋಟ್ ವರ್ಕ್, ಅಂದರೆ ಮನೆಯಿಂದ ಕೆಲಸ ಮಾಡುತ್ತಾ ಮ್ಯಾನೇಜರ್ ಹುದ್ದೆ ನಿಭಾಯಿಸುವುದು ಕಷ್ಟವಾಗುತ್ತಂತೆ. ಆಗೊಮ್ಮೆ ಈಗೊಮ್ಮೆಯಾದರೂ ತಂಡದವರ ಮುಖ ನೋಡದಿದ್ದರೆ ಟೀಮ್ ಮ್ಯಾನೇಜ್ ಹೇಗೆ ಮಾಡಲು ಸಾಧ್ಯ ಎಂಬುದು ಅವರ ಪ್ರಶ್ನೆ.

‘ನೀವು ಸದಾ ಕಾಲ ಅವರ ಮುಖ ನೋಡುವ ಅಗತ್ಯ ಇಲ್ಲ. ಎಲ್ಲರೂ ನನ್ನ ಕಣ್ಮುಂದೆ ಕೆಲಸ ಮಾಡಬೇಕು ಎನ್ನುವ ನಿಯಮವೇ ಸದಾ ಇರಬೇಕೆಂದಿಲ್ಲ. ಕೆಲವೊಮ್ಮೆಯಾದರೂ ಅಂಥದ್ದು ಆಗಬೇಕು’ ಎಂದು ಕಚೇರಿಗೆ ಬಂದು ಕೆಲಸ ಮಾಡುವ ಪದ್ಧತಿಯನ್ನು ಅರವಿಂದ್ ಕೃಷ್ಣ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿBEML Sale: ಬೆಮೆಲ್ ಮಾರಾಟಕ್ಕೆ ಸರ್ಕಾರದಿಂದ ಇನ್ನೊಂದು ಹೆಜ್ಜೆ?; ಶೇ. 26ರಷ್ಟು ಪಾಲು ಮಾರಲು ಶೀಘ್ರದಲ್ಲೇ ಬಿಡ್​ಗಳಿಗೆ ಆಹ್ವಾನ

ಕುತೂಹಲ ಎಂದರೆ ಜಗತ್ತಿನಾದ್ಯಂತ ವರ್ಕ್ ಫ್ರಂ ಹೋಮ್ ಹೆಚ್ಚಾದ ಬಳಿಕ ಐಬಿಎಂನ ಹೈಬ್ರಿಡ್ ಕ್ಲೌಡ್ ಕಂಪ್ಯೂಟಿಂಗ್ ಬ್ಯುಸಿನೆಸ್​ನಲ್ಲಿ ಭರ್ಜರಿ ಬೆಳವಣಿಗೆಯಾಗಿದೆ.

ಕಚೇರಿಯಿಂದ ಕೆಲಸ ಮಾಡುವ ಉದ್ಯೋಗಿಗಳಿಂದ ಹೊಸ ಉತ್ಪನ್ನ ಸೃಷ್ಟಿ ಸಾಧ್ಯ ಎನ್ನುವ ಸ್ಯಾಮ್ ಆಲ್ಟ್​ಮ್ಯಾನ್

ವರ್ಕ್ ಫ್ರಂ ಹೋಂ ಬದಲು ಕಚೇರಿಯಿಂದ ಕೆಲಸ ಮಾಡಬೇಕೆನ್ನುವ ಸಮರ್ಥಕರ ವಾದಕ್ಕೆ ಓಪನ್​ಎಐ ಕಂಪನಿ ಸಿಇಒ ಸ್ಯಾಮ್ ಆಲ್ಟ್​ಮನ್ ಧ್ವನಿಗೂಡಿಸಿದ್ದಾರೆ. ಉದ್ಯಮ ವಲಯದಲ್ಲಿ ವರ್ಕ್ ಫ್ರಂ ಹೋಮ್ ಪ್ರಯೋಗ ಬಹಳ ದೊಡ್ಡ ತಪ್ಪು ನಿರ್ಧಾರವಾಗಿತ್ತು ಎಂಬುದು ಆಲ್ಟ್​ಮ್ಯಾನ್ ಅನಿಸಿಕೆ. ಕಚೇರಿಯಿಂದ ಕೆಲಸ ಮಾಡುವ ಉದ್ಯೋಗಿಗಳು ಹೊಸ ಉತ್ಪನ್ನ ಸೃಷ್ಟಿಸುತ್ತಾರೆ. ಮನೆಯಿಂದ ಕೆಲಸ ಮಾಡುವವರು ಗೊಂದಲ ಸೃಷ್ಟಿಸುತ್ತಾರೆ ಎಂದು ಸ್ಯಾಮ್ ಆಲ್ಟ್​ಮನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ