ಚೀನಾ ಸರಕುಗಳ ಕುರಿತು ಭಾರತ ಮೊದಲೇ ನೀಡಿದ್ದ ಎಚ್ಚರಿಕೆ ನಿರ್ಲಕ್ಷಿಸಿತ್ತು ಯೂರೋಪ್: ಬೆಲ್ಜಿಯಂ ಪ್ರಧಾನಿ ವೀವರ್ ವಿಷಾದ

ಚೀನಾದ ಸರಕುಗಳು ಡಂಪ್ ಆಗುವುದು, ಅದರ ಮಾರುಕಟ್ಟೆ ನೀತಿಗಳು ಇವುಗಳ ಅಪಾಯವನ್ನು ಭಾರತ ಮೊದಲೇ ಗುರುತಿಸಿತ್ತು ಎಂದು ಬೆಲ್ಜಿಯಂ ಪ್ರಧಾನಿ ಹೇಳಿದ್ದಾರೆ. ಚೀನಾ ಕುರಿತು ಭಾರತ ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ, ಯೂರೋಪ್ ಇದನ್ನು ನಿರ್ಲಕ್ಷಿಸಿತು ಎಂದು ಬಾರ್ಟ್ ಡಿ ವೀವರ್ ವಿಷಾದಿಸಿದ್ದಾರೆ. ಬೆಲ್ಜಿಯಂ ಪ್ರಧಾನಿಗಳು ಭಾರತಕ್ಕೆ ಸೆಪ್ಟೆಂಬರ್ 2-4ರವರೆಗೆ ಪ್ರವಾಸದಲ್ಲಿದ್ದ ವೇಳೆ ಈ ಮಾತುಗಳನ್ನಾಡಿದ್ದಾರೆ.

ಚೀನಾ ಸರಕುಗಳ ಕುರಿತು ಭಾರತ ಮೊದಲೇ ನೀಡಿದ್ದ ಎಚ್ಚರಿಕೆ ನಿರ್ಲಕ್ಷಿಸಿತ್ತು ಯೂರೋಪ್: ಬೆಲ್ಜಿಯಂ ಪ್ರಧಾನಿ ವೀವರ್ ವಿಷಾದ
ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್
Image Credit source: PTI

Updated on: Sep 04, 2026 | 5:21 PM

ನವದೆಹಲಿ, ಸೆಪ್ಟೆಂಬರ್ 4: ಅತಿಯಾದ ಆರ್ಥಿಕ ಅವಲಂಬನೆ ಹಾಗೂ ಚೀನಾದ ಮಾರುಕಟ್ಟೆ ನೀತಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ನೀಡಿದ್ದ ಎಚ್ಚರಿಕೆಯನ್ನು ಯುರೋಪ್ ನಿರ್ಲಕ್ಷಿಸಿ ತಪ್ಪು ಮಾಡಿತು ಎಂದು ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ (Belgium PM Bart De Wever) ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ದೆಹಲಿಯಲ್ಲಿ ‘ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ’ (CII) ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾದ ಹೆಸರು ಪ್ರಸ್ತಾಪಿಸದೆ ಆ ದೇಶವನ್ನು ಕುಟುಕಿದರು. ಮಾರುಕಟ್ಟೆಗೆ ಅಗ್ಗದ ಸರಕುಗಳನ್ನು ಸುರಿಯುವ (Dumping) ತಂತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯುರೋಪ್‌ಗೆ ಎಚ್ಚರಿಕೆಯ ಕರೆ ಎಂದ ಬಾರ್ಟ್ ಡಿ ವೀವರ್

“ಕಳೆದ ಕೆಲವು ವರ್ಷಗಳು ಯುರೋಪ್‌ಗೆ ಕಣ್ಣು ತೆರೆಸುವ ಸತ್ಯವನ್ನು ಬಯಲು ಮಾಡಿವೆ. ಕನಿಷ್ಠ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಿದೇಶಿ ಸರಕುಗಳನ್ನು ನಮ್ಮ ಮಾರುಕಟ್ಟೆಗೆ ತಂದು ಸುರಿಯುವುದನ್ನು ನಾವು ದೀರ್ಘಕಾಲ ನೋಡುತ್ತಾ ಕುಳಿತೆವು. ಇದರ ಪರಿಣಾಮವಾಗಿ ನಮ್ಮ ದೇಶೀಯ ಕೈಗಾರಿಕಾ ತಳಹದಿ ದುರ್ಬಲಗೊಂಡಿತು” ಎಂದು ಬೆಲ್ಜಿಯಂ ಪ್ರಧಾನಿ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಯುಕೆ ಭೇಟಿ; ಲಂಡನ್‌ನಲ್ಲಿ ಸುನಿಲ್ ಅಂಬೇಕರ್ ಸುದ್ದಿಗೋಷ್ಠಿ

ಭಾರತ ನೀಡಿದ್ದ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ತಪ್ಪು ಮಾಡಿದೆವು: ಬೆಲ್ಜಿಯಂ ಪ್ರಧಾನಿ

“ಈ ಅಪಾಯವನ್ನು ನಮಗಿಂತ ಮುಂಚಿತವಾಗಿಯೇ ಭಾರತ ಗುರುತಿಸಿತ್ತು. ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಬಹುಕಾಲದ ಹಿಂದೆಯೇ ಯುರೋಪ್‌ಗೆ ಈ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ನಾವು ಅದನ್ನು ನಿರ್ಲಕ್ಷಿಸಿದೆವು. ಈಗ ನಾವು ಆ ತಪ್ಪನ್ನು ತಿದ್ದುಕೊಳ್ಳುತ್ತಿದ್ದೇವೆ ಹಾಗೂ ಭಾರತದ ಮಾತನ್ನು ಆಲಿಸುತ್ತಿದ್ದೇವೆ” ಎಂದು ಬಾರ್ಟ್ ಡಿ ವೀವರ್ ಹೇಳಿದರು.

ಆರ್ಥಿಕ ಅವಲಂಬನೆಯು ಬಲಪ್ರಯೋಗಕ್ಕೆ ಅಸ್ತ್ರ ಆಗಕೂಡದು. ನಮ್ಮ ಮೇಲೆ ಯಾರದ್ದೂ ಬಲಪ್ರಯೋಗ ಆಗಲು ಬಯಸೋದಿಲ್ಲ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಭಾರತಕ್ಕೆ ಹೆಮ್ಮೆ ತಂದಿತ್ತ ‘ನಾಟಿ ಬಾಯ್’; ಈ ಜಿಎಸ್​ಎಲ್​ವಿ ರಾಕೆಟ್​ನ ಯಶಸ್ವಿ ಉಡ್ಡಯನಕ್ಕೆ ಇಸ್ರೋ ಇಷ್ಟು ಗರ್ವ ಪಡುತ್ತಿರುವುದು ಯಾಕೆ?

ಭಾರತದ ಜೊತೆ ಪಾಲುದಾರಿಕೆ: “ಜಾಗತಿಕ ಅಸ್ಥಿರತೆಯ ಈ ಸಮಯದಲ್ಲಿ ನಮಗೆ ಭಾರತ ಅತ್ಯಂತ ಪ್ರಮುಖ ಹಾಗೂ ನಂಬಿಕಸ್ಥ ಪಾಲುದಾರ ರಾಷ್ಟ್ರವಾಗಿದೆ. ನಂಬಿಕೆಯ ಆಧಾರದ ಮೇಲೆ ನಾವು ಆರ್ಥಿಕ, ರಾಜಕೀಯ ಮತ್ತು ಕೌಶಲ ಕ್ಷೇತ್ರದಲ್ಲಿ ಭಾರತದೊಂದಿಗಿನ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತೇವೆ” ಎಂದು ಅವರು ತಿಳಿಸಿದರು.

ಬೆಲ್ಜಿಯಂ ಪ್ರಧಾನಿಗಳ ಭಾರತದ ಪ್ರವಾಸ ಸೆಪ್ಟೆಂಬರ್ 2ರಂದು ಆರಂಭವಾಗಿದ್ದು, ಇವತ್ತು ಅಂತ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us