ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

Amar K. Ambani analyzes Indian market and FIIs exit: ಭಾರತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ನಿರ್ಗಮನಕ್ಕೆ ಡಾಲರ್ ಎದುರು ರೂಪಾಯಿ ಕುಸಿತ, AI ತಂತ್ರಜ್ಞಾನದಲ್ಲಿ ಭಾರತದ ಕೊರತೆ ಮತ್ತು ಬದಲಾದ ತೆರಿಗೆ ನೀತಿಗಳು ಪ್ರಮುಖ ಕಾರಣ. ಈ ಹೂಡಿಕೆದಾರರು ಮರಳಿ ಬರಬೇಕೆಂದರೆ ಭಾರತೀಯ ಷೇರು ಮಾರುಕಟ್ಟೆ ಮೌಲ್ಯಗಳು ಅತ್ಯಂತ ಅಗ್ಗವಾಗಬೇಕು, IPO ಮಾರುಕಟ್ಟೆ ಚೇತರಿಸಿಕೊಳ್ಳಬೇಕು ಅಥವಾ ಜಾಗತಿಕ ಮಾರುಕಟ್ಟೆಗಳಲ್ಲಿ ಅಪಾಯ ಹೆಚ್ಚಾಗಬೇಕು.

ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು
ಗ್ಲೋಬ್​ನಲ್ಲಿ ಭಾರತ
Image Credit source: Getty Images

Updated on: May 26, 2026 | 12:25 PM

ನವದೆಹಲಿ, ಮೇ 26: ಭಾರತದ ಮಾರುಕಟ್ಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ ಒಂದು-ಒಂದೂವರೆ ವರ್ಷದಿಂದ ಸಾಲು ಸಾಲಾಗಿ ನಿರ್ಗಮಿಸುತ್ತಿದ್ದಾರೆ. ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಈ ವಿದೇಶೀ ಹೂಡಿಕೆಗಳ ಹೊರಹರಿವು ಯಾಕಾಗಿ ಆಗುತ್ತಿದೆ? ಮತ್ತೆ ಮರಳಿ ಬರುವ ಸಾಧ್ಯತೆ ಇದೆಯಾ? ಯೆಸ್ ಸೆಕ್ಯೂರಿಟೀಸ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರ್ ಕೆ ಅಂಬಾನಿ (Amar K Ambani) ಅವರು ಈ ವಿಚಾರದ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದು, ಅವರ ಪ್ರಕಾರ ಜಾಗತಿಕ ಮತ್ತು ದೇಶೀಯ ಆರ್ಥಿಕ ಬದಲಾವಣೆಗಳಿಂದಾಗಿ ವಿದೇಶಿ ಬಂಡವಾಳವು ಭಾರತದಿಂದ ಬೇರೆಡೆಗೆ ಹರಿಯುತ್ತಿದೆಯಂತೆ. ಹಾಗೆಯೇ, ಈ ವಿದೇಶೀ ಹೂಡಿಕೆಗಳು ತತ್​ಕ್ಷಣಕ್ಕೆ ಭಾರತಕ್ಕೆ ಮರಳಿ ಬರುವ ಸಾಧ್ಯತೆ ಇಲ್ಲ ಎಂದೂ ಹೇಳಿದ್ದಾರೆ. ಆ ಹೂಡಿಕೆಗಳು ಮರಳಿ ಬರಬೇಕೆಂದರೆ ಪೂರಕವಾಗಿರುವ ಮೂರು ರೀತಿಯ ಸನ್ನಿವೇಶಗಳು ಇರಬೇಕಾಗುತ್ತದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಅವರು ಭಾರತದಿಂದ ಎಫ್​ಐಐಗಳು ದೂರ ಉಳಿಯಲು ಏನು ಕಾರಣ ಮತ್ತು ಅವು ಮರಳಿ ಬರಬೇಕಾದರೆ ಯಾವ ಸ್ಥಿತಿ ಇರಬೇಕು ಎಂಬುದನ್ನು ವಿಶ್ಲೇಷಿಸಿದ್ದಾರೆ.

FIIಗಳು ಭಾರತದಿಂದ ದೂರ ಉಳಿಯಲು ಮುಖ್ಯ ಕಾರಣಗಳು

  • ದೀರ್ಘಾವಧಿಯ ಹಿಂಜರಿತ: FIIಗಳ ಈ ನಿರಾಸಕ್ತಿ ಕೇವಲ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆಯ ಬಳಿಕ ಶುರುವಾಗಿದ್ದಲ್ಲ. ಇದು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಲೇ ಆರಂಭವಾಗಿದೆ. 2003 ರಿಂದ 2008 ರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಹರಿದುಬಂದ ಒಟ್ಟು ಮಾರುಕಟ್ಟೆ ಬಂಡವಾಳದ (Market Cap) ಶೇಕಡಾವಾರು ಪ್ರಮಾಣದಷ್ಟು ದೊಡ್ಡ ಹಣ ಆ ನಂತರದ ವರ್ಷಗಳಲ್ಲಿ ಬಂದಿಲ್ಲ.
  • ಡಾಲರ್ ಎದುರು ದುರ್ಬಲ ಲಾಭ: ವಿದೇಶಿ ಹೂಡಿಕೆದಾರರಿಗೆ ಡಾಲರ್ ರೂಪದಲ್ಲಿ ಭಾರತದಿಂದ ಸಿಗುತ್ತಿರುವ ಆದಾಯವು ತುಂಬಾ ಸಾಧಾರಣವಾಗಿದೆ. ಜೊತೆಗೆ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಅವರಿಗೆ ನಷ್ಟ ಉಂಟುಮಾಡುತ್ತಿದೆ. ಇದೇ ಸಮಯದಲ್ಲಿ ಅಮೆರಿಕದ ಪ್ರಮುಖ 7 ತಂತ್ರಜ್ಞಾನ ಕಂಪನಿಗಳು (Magnificent Seven) ಜಾಗತಿಕವಾಗಿ ಭಾರಿ ಲಾಭ ತಂದುಕೊಟ್ಟಿವೆ.
  • AI ಕ್ರಾಂತಿಯ ಕೊರತೆ: ಜಾಗತಿಕ ಹೂಡಿಕೆ ನಿಧಿಗಳು ಭಾರತವನ್ನು “ಹಳೆಯ ಆರ್ಥಿಕತೆ” (Old Economy) ಹೊಂದಿರುವ ಮಾರುಕಟ್ಟೆಯಾಗಿ ನೋಡುತ್ತಿವೆ. ಅಮೆರಿಕ, ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಇರುವಂತೆ ಹೂಡಿಕೆಗೆ ಪೂರಕವಾದ ಪ್ರಮುಖ AI ಆಧಾರಿತ ಕಂಪನಿಗಳು ಭಾರತದಲ್ಲಿ ಹೆಚ್ಚಾಗಿ ಇಲ್ಲ. ಹಾಗಾಗಿ ಜಾಗತಿಕ ಹಣ ಆ ದೇಶಗಳತ್ತ ಮುಖ ಮಾಡಿದೆ.
  • ತೆರಿಗೆ ನೀತಿಗಳ ಬದಲಾವಣೆ: ಭಾರತದಲ್ಲಿ ಎಫ್ ಆಂಡ್ ಒ (F&O) ಮೇಲಿನ ತೆರಿಗೆ, ಗಾರ್ (GAAR) ನಿಯಮಗಳು ಮತ್ತು ಮಾರಿಷಸ್ ಮೂಲದ ಹೂಡಿಕೆದಾರರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸಿರುವುದು ವಿದೇಶಿ ಹೂಡಿಕೆದಾರರಿಗೆ ಭಾರತದ ಮೇಲಿನ ಆಕರ್ಷಣೆ ತಗ್ಗಿಸಿದೆ ಎಂದು ಅಮರ್ ಕೆ. ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

FIIಗಳು ಮರಳಿ ಬರಲು ಬೇಕು ಈ 3 ಟ್ರಿಗರ್ಸ್ (ಪ್ರಚೋದಕಗಳು)

ಅಮರ್ ಅಂಬಾನಿ ಅವರ ಪ್ರಕಾರ, ವಿದೇಶಿ ಹೂಡಿಕೆದಾರರು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಮರಳಿ ಬರಬೇಕಾದರೆ ಈ ಮೂರು ಸನ್ನಿವೇಶಗಳಲ್ಲಿ ಯಾವುದಾದರೂ ಒಂದು ಸಂಭವಿಸಬೇಕು:

  1. ಷೇರುಗಳ ಮೌಲ್ಯ ಅತ್ಯಂತ ಅಗ್ಗವಾದಾಗ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಅಥವಾ ಮೌಲ್ಯಮಾಪನವು ತೀರಾ ತಳಮಟ್ಟಕ್ಕೆ ಇಳಿದು, ಹೂಡಿಕೆಗೆ ಅತ್ಯಂತ ಆಕರ್ಷಣೀಯ ಎನಿಸಿದಾಗ ಮಾತ್ರ (Valuations hit rock bottom) ಅವರು ಬರುತ್ತಾರೆ.
  2. ಐಪಿಒ (IPO) ಮಾರುಕಟ್ಟೆ ಭರ್ಜರಿಯಾಗಿ ಚೇತರಿಸಿಕೊಂಡಾಗ: ಮಾರುಕಟ್ಟೆಯಲ್ಲಿ ಹೊಸ ಮತ್ತು ದೊಡ್ಡ ಕಂಪನಿಗಳ ಐಪಿಒ ಚಟುವಟಿಕೆಗಳು ವ್ಯಾಪಕವಾಗಿ ಹೆಚ್ಚಾದಾಗ ವಿದೇಶಿ ಬಂಡವಾಳ ಹರಿದುಬರಬಹುದು.
  3. ಜಾಗತಿಕ ಮಾರುಕಟ್ಟೆಗಳು ಅತಿ ಬಳಕೆಯಾದಾಗ: ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಅಪಾಯಕಾರಿ ಎನಿಸಿದಾಗ, ತಮ್ಮ ಹೂಡಿಕೆಯನ್ನು ವೈವಿಧ್ಯಮಯಗೊಳಿಸಲು (Diversification) ಭಾರತ ಅವರಿಗೆ ಸುರಕ್ಷಿತ ಆಯ್ಕೆಯಾಗಿ ಕಾಣಿಸಬಹುದು.

ಇದನ್ನೂ ಓದಿ: ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ

ಇತರ ಪ್ರಮುಖ ಆರ್ಥಿಕ ಮುನ್ಸೂಚನೆಗಳು

ಯೆಸ್ ಸೆಕ್ಯೂರಿಟೀಸ್​ನ ಕಾರ್ಯವಾಹಕ ನಿರ್ದೇಶಕರಾದ ಅಮರ್ ಅಂಬಾನಿ ಅವರು ಇತರ ಕೆಲ ಆರ್ಥಿಕ ಮುನ್ಸೂಚನೆಗಳನ್ನು ನೀಡಿದ್ದಾರೆ. ಕಾರ್ಪೊರೇಟ್ ಗಳಿಕೆಯ ಕುಸಿತ, ಹಣದುಬ್ಬರ ಏರಿಕೆ; ಜಾಗತಿಕ ಮಾರುಕಟ್ಟೆ ಅಲುಗಾಟವು ಭಾರತೀಯ ಮಾರುಕಟ್ಟೆಯ ಮುನ್ನಡೆಗೆ ಅಡ್ಡಗಾಲಾಗಿದೆ ಎನ್ನುತ್ತಾರೆ. ಖಾಸಗಿ ವಲಯದ ಉದ್ಯಮಗಳ ಸಾಮರ್ಥ್ಯ ಬಳಕೆ ಸದ್ಯ ಶೇ. 74-75ರಷ್ಟಿದ್ದು ಅದು ಶೇ. 80 ದಾಟಿದಾರ ಹೊಸ ಹೂಡಿಕೆಗಳು ಬರಬಹುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us