HMPV Virus: ಷೇರು ಮಾರುಕಟ್ಟೆ ಮೇಲೂ ಎಚ್​ಎಂಪಿವಿ ವೈರಸ್ ಪ್ರಭಾವ, ಸಾವಿರಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್

ಕರ್ನಾಟಕದಲ್ಲಿ ಎಚ್​ಎಂಪಿವಿ ವೈರಸ್ ಪತ್ತೆಯಾಗಿರುವ ವಿಚಾರ ದೇಶದ ಷೇರುಮಾರುಕಟ್ಟೆ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದ ಭೀತಿ ಹೂಡಿಕೆದಾರರಲ್ಲಿ ಮತ್ತೆ ಮನಮಾಡಿರುವ ಶಂಕೆ ಮೂಡಿದ್ದು, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ನಿಫ್ಟಿ ತೀವ್ರ ಕುಸಿತ ಕಂಡಿವೆ.

HMPV Virus: ಷೇರು ಮಾರುಕಟ್ಟೆ ಮೇಲೂ ಎಚ್​ಎಂಪಿವಿ ವೈರಸ್ ಪ್ರಭಾವ, ಸಾವಿರಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ

Updated on: Jan 06, 2025 | 12:58 PM

ಮುಂಬೈ, ಜನವರಿ 6: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್​ಎಂಪಿವಿ ವೈರಸ್ ಪತ್ತೆಯಾಗಿದೆ ಎಂಬ ವಿಚಾರ ಷೇರು ಮಾರುಕಟ್ಟೆಗಳಲ್ಲಿಯೂ ತಲ್ಲಣಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1100 ಅಂಕಗಳಿಗಿಂತ ಹೆಚ್ಚು ಕುಸಿದರೆ, ನಿಫ್ಟಿ ಶೇ 1 ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿತು.

ಮಧ್ಯಾಹ್ನ 12.30 ರ ವೇಳೆಗೆ ಸೆನ್ಸೆಕ್ಸ್ 1,100 ಅಂಶ ಕುಸಿದು 78,065 ಕ್ಕೆ ಇಳಿಕೆಯಾಯಿತು. ನಿಫ್ಟಿ 23,600 ಅಂಶಗಳಿಗೆ ಕುಸಿಯಿತು.

ಲೋಹಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ರಿಯಲ್ ಎಸ್ಟೇಟ್, ತೈಲ ಮತ್ತು ಅನಿಲ, ಹಣಕಾಸು ಸಂಸ್ಥೆಗಳ ಷೇರುಗಳು ನಕಾರಾತ್ಮಕ ವಹಿವಾಟು ದಾಖಲಿಸಿದವು.

ಯಾವೆಲ್ಲ ಷೇರುಗಳ ವಹಿವಾಟು ಕುಸಿತ?

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಮೌಲ್ಯದಲ್ಲಿ ಶೇ 7 ರಷ್ಟು ಕುಸಿದವು. ಬ್ಯಾಂಕ್ ಆಫ್ ಬರೋಡಾ, ಎಚ್‌ಪಿಸಿಎಲ್, ಬಿಪಿಸಿಎಲ್, ಟಾಟಾ ಸ್ಟೀಲ್, ಅದಾನಿ ಎನರ್ಜಿ ಸೊಲ್ಯೂಷನ್ಸ್ ಮತ್ತು ಪಿಎನ್‌ಬಿ ಷೇರುಗಳ ಸಹ ತಲಾ ಶೇ 4-5 ರಷ್ಟು ಕುಸಿತ ಕಂಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ಪ್ರಮುಖ ಷೇರುಗಳು ಸೆನ್ಸೆಕ್ಸ್ ಕುಸಿತಕ್ಕೆ ಗಮನಾರ್ಹ ಕೊಡುಗೆ ನೀಡಿದವು.

ಎಚ್​ಎಂಪಿವಿ ಪ್ರಕರಣದ ಅನಿರೀಕ್ಷಿತ ಸುದ್ದಿಯು ಮಾರುಕಟ್ಟೆ ಮೇಲೆ ಪ್ರಭಾವ ಬೀರಿರುವುದು ನಿಜ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಮಕ್ಕಳಲ್ಲಿ ಎಚ್​ಎಂಪಿವಿ ವೈರಸ್ ಪತ್ತೆ

ಕರ್ನಾಟಕದ ಬೆಂಗಳೂರಿನಲ್ಲಿ ಇಬ್ಬರು ಶಿಶುಗಳಲ್ಲಿ ಎಚ್​ಎಂಪಿವಿ (HMPV) ವೈರಸ್ ಸೋಮವಾರ ಬೆಳಗ್ಗೆ ದೃಢಪಟ್ಟಿದೆ. ಆದರೆ, ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ಸೇ ಇದು ಎಂಬುದು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಎಚ್​ಎಂಪಿವಿ ವೈರಸ್ ಭಾರತದಲ್ಲೂ ಇದೆ. ಇದು ಚೀನಾ ವೈರಸ್​ ಎಂಬುದು ದೃಢಪಟ್ಟಿಲ್ಲ ಹಾಗಾಗಿ ಆತಂಕ ಬೇಡ ಎಂದೂ ಆರೋಗ್ಯ ಇಲಾಖೆ ಹೇಳಿದೆ. ಆದಾಗ್ಯೂ ಷೇರುಮಾರುಕಟ್ಟೆ ಮೇಲೆ ಇದು ಗಂಭೀರ ಪರಿಣಾಮ ಬೀರಿರುವುದು ನಿಜ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Mon, 6 January 25

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us