India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?

| Updated By: Srinivas Mata

Updated on: Jun 01, 2021 | 6:43 PM

ಭಾರತದ ಸ್ವಾತಂತ್ರ್ಯಾ ನಂತರ ಕಾಲ ಘಟ್ಟದಲ್ಲಿ ಕಂಡರಿಯದಂಥ ಜಿಡಿಪಿ ಕುಸಿತವನ್ನು 2020- 21ರಲ್ಲಿ ಕಾಣುವಂತಾಗಿದೆ. ಆರ್​ಬಿಐ ಮುಂದೆ ಕಠಿಣವಾದ ಸವಾಲಿದೆ. ದೇಶದ ಆರ್ಥಿಕತೆ ಮತ್ತೆ ಹಳಿಗೆ ತರಲು ಏನು ಮಾಡಿದರೂ ಈಗ ಕಷ್ಟ ಎಂಬಂತಿದೆ ಸ್ಥಿತಿ.

India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?
ಸಾಂದರ್ಭಿಕ ಚಿತ್ರ
Follow us on

2020-21ನೇ ಹಣಕಾಸು ವರ್ಷದ ಜಿಡಿಪಿ ಶೇ 7.3ರಷ್ಟು ಕುಸಿದಿದೆ. 1947ರಲ್ಲಿ ಭಾರತ ಸ್ವತಂತ್ರಗೊಂಡ ನಂತರ ಕಂಡ ಅತಿ ದೊಡ್ಡ ಕುಸಿತ ಇದು. ದೇಶದ ಜಿಡಿಪಿ ಕಡಿಮೆ ಆಗುತ್ತಾ ಬಂದು ಅರ್ಧ ದಶಕವೇ ಕಳೆಯಿತು. ಆದರೆ ಅನಿರೀಕ್ಷಿತವಾಗಿ ಎರಗಿದ್ದು ಕೋವಿಡ್ -19 ಬಿಕ್ಕಟ್ಟು. ಲಾಕ್​ಡೌನ್​ನಿಂದ ಆರ್ಥಿಕತೆ ಮೇಲೆ ಇನ್ನಷ್ಟು ಒತ್ತಡ ಬಿತ್ತು. ಚಲನೆಯಲ್ಲಿನ ಮಿತಿಯಿಂದ ಆರ್ಥಿಕತೆಯು ಬೆಳವಣಿಗೆ ಕಡೆ ಸಾಗಲಿಲ್ಲ; 1979ರಿಂದ ಏನು ಆಗಬೇಕಿತ್ತೋ ಅದು ಆಗುತ್ತಿಲ್ಲ. ನಿಮಗೆ ಗೊತ್ತಿರಲಿ, ದೇಶದ ಇತಿಹಾಸದಲ್ಲಿ ಐದು ಬಾರಿ ಮಾತ್ರ ನೆಗೆಟಿವ್ (ನಕಾರಾತ್ಮಕ) ಬೆಳವಣಿಗೆ ದಾಖಲಾಗಿದೆ. ಈ ಆರ್ಥಿಕ ಕುಸಿತಗಳಿಗೆ ಕಾರಣವಾಗಿದ್ದು ಬರ, ನೆರೆ ಅಥವಾ ಎನರ್ಜಿ ದರಗಳ ಕಾರಣಕ್ಕೆ ಕೃಷಿ ಮೇಲೆ ಅವಲಂಬಿತವಾದ ಆರ್ಥಿಕತೆ ಹಳಿ ತಪ್ಪುವಂತಾಯಿತು.

ನಿಮಗೆ ಗೊತ್ತಿರಬೇಕಾದ್ದು ಏನೆಂದರೆ, ಏನಿದು ಜಿಡಿಪಿ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಅದಕ್ಕೆ ಸಂಬಂಧಿಸಿದ ಅಂಕಿ- ಅಂಶ ಏಕೆ ಬಿಡುಗಡೆ ಮಾಡಲಾಗುತ್ತಿದೆ ಎಂಬ ಸಂಗತಿ. ಅಷ್ಟೇ ಅಲ್ಲ, ಒಂದು ಹಣಕಾಸು ವರ್ಷದ ಕೊನೆಗೆ ನಾಲ್ಕು ತ್ರೈಮಾಸಿಕದ (ಮೂರು ತಿಂಗಳಿಗೆ ನಾಲ್ಕು ಕಂತನ್ನು ಒಗ್ಗೂಡಿಸಿ) ವಾರ್ಷಿಕ ಲೆಕ್ಕಾಚಾರವನ್ನು ಕೇಂದ್ರದ ಸಾಂಖ್ಯಿಕ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್​ನಿಂದ ಜೂನ್, ಜುಲೈನಿಂದ ಸೆಪ್ಟೆಂಬರ್, ಅಕ್ಟೋಬರ್​ನಿಂದ ಡಿಸೆಂಬರ್, ಜನವರಿಯಿಂದ ಮಾರ್ಚ್ ಹೀಗೆ ಮೂರು ತಿಂಗಳ ನಾಲ್ಕು ಕಂತು ಮತ್ತು ಏಪ್ರಿಲ್​ 1ರಿಂದ ಮಾರ್ಚ್​ 31ರ ತನಕ ವಾರ್ಷಿಕ ಲೆಕ್ಕಾಚಾರ ಇದು. ಮೇ 31ನೇ ತಾರೀಕಿನಂದು 2021ನೇ ಇಸವಿಯ ಜನವರಿಯಿಂದ ಮಾರ್ಚ್ ತ್ರೈಮಾಸಿಕ ಹಾಗೂ 2020-21ನೇ ಸಾಲಿನ ವಾರ್ಷಿಕ ಅಂಕಿ- ಅಂಶ ಬಂತು. ಅದರ ಪ್ರಕಾರ, 2019- 20ನೇ ಸಾಲಿನ ಜನವರಿಯಿಂದ -ಮಾರ್ಚ್ ಅವಧಿಗೆ ಹೋಲಿಸಿದರೆ ಈ ಬಾರಿ ಬೆಳವಣಿಗೆ ಕಂಡಿದೆ. ಆದರೆ ಆ ಪ್ರಮಾಣ ಶೇ 1.6 ಮಾತ್ರ. ಇನ್ನು ವಾರ್ಷಿಕವಾಗಿ ನೋಡಿದರೆ ಶೇ 7.3ರಷ್ಟು ಕಡಿಮೆ ಆಗಿದೆ. 2019- 20ನೇ ಸಾಲಿಗೆ ಹೋಲಿಸಿದರೆ, 2020- 21ರದಲ್ಲಿ ಜಿಡಿಪಿ ಶೇ 7.3 ಕುಗ್ಗಿದೆ.

ಇನ್ನು ಜಿಡಿಪಿ ಅಂದರೇನು ಅನ್ನೋದನ್ನು ತಿಳಿದುಕೊಳ್ಳಿ. ಒಂದು ನಿರ್ದಿಷ್ಟ ಅವಧಿಗೆ, ಮೊದಲೇ ಹೇಳಿದ ಹಾಗೆ ಮೂರು ತಿಂಗಳು ಅಥವಾ ಒಂದು ವರ್ಷ ಹೀಗೆ. ಒಂದು ದೇಶದಲ್ಲಿ ಉತ್ಪಾದನೆ ಆಗುವ ಎಲ್ಲ ಸರಕು ಮತ್ತು ಸೇವೆಗಳ ಒಟ್ಟು ಮೊತ್ತವನ್ನು ಜಿಡಿಪಿ ಎನ್ನಲಾಗುತ್ತದೆ. ಇದರಲ್ಲಿ ಎಲ್ಲ ವಲಯಗಳು ಬರುತ್ತವೆ. 2019- 20ರಲ್ಲಿ ಉತ್ಪಾದನೆಯಾದ ಎಲ್ಲ ಸರಕು- ಸೇವೆಗಳ ಆರ್ಥಿಕ ಮೌಲ್ಯಕ್ಕಿಂತ 2020- 21ರದು ಶೇ 7.3ರಷ್ಟು ಕಡಿಮೆ ಆಗಿದೆ ಅಂದರೆ ಅದು ಹೇಗೆ ಆರ್ಥಿಕತೆ ಮೇಲೆ ಪರಿಣಾಮ ಬೀರಿರುತ್ತದೆ ಎಂದು ಊಹಿಸಬಹುದು. ಆದರೂ 2021- 22ನೇ ಸಾಲಿಗೆ ಶೇ 8- 9.5ರಷ್ಟು ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು.

ಈಗ ಜಿಡಿಪಿ ಕುಸಿದಿದೆಯಲ್ಲ, ಈ ಹಿಂದೆ ಯಾವಾಗ ಹೀಗಾಗಿತ್ತು ಅಂತ ನೋಡುವುದಾದರೆ, 1980ರ ದಶಕದ ಮುಂಚೆ ಹೀಗಾಗಿತ್ತು. ಭಾರತದ ಹಲವು ಭಾಗಗಳಲ್ಲಿ ಬರ ಆವರಿಸಿತ್ತು. ಗಾಯದ ಮೇಲೆ ಬರೆ ಅನ್ನೋ ಹಾಗೆ ತೈಲ ದರ ದುಪ್ಪಟ್ಟಾಗಿತ್ತು. ಇರಾನ್ ಕ್ರಾಂತಿಯ ಕಾರಣಕ್ಕೆ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗಿ ಪಡಿಪಾಟಲು ಅನುಭವಿಸುವಂತಾಯಿತು. 1979ರಲ್ಲಿ ಕಂಡಂತೆ ಜಿಡಿಪಿಯು ಶೇ 5.2ರಷ್ಟು ಕುಗ್ಗಿದ್ದು ಐತಿಹಾಸಿಕ ಕುಸಿತವಾದರೆ, ಈ ಬಾರಿಯದು ಸ್ವಾತಂತ್ರ್ಯ ನಂತರದ ಮಹಾ ಹಿಂಜರಿತ. ಇನ್ನು ಗ್ರಾಸ್ ವ್ಯಾಲ್ಯೂ ಆ್ಯಡೆಡ್ (ಜಿವಿಎ) ಅಂತ ಕೇಳಿರುತ್ತೀರಿ. ಹಾಗಂದರೆ ಜಿಡಿಪಿ ಬೆಳವಣಿಗೆಗೆ ಯಾವ ವಲಯದ ಕೊಡುಗೆ ಎಷ್ಟಿದೆ ಎಂಬುದರ ಸೂಚಕ ಅದು. ಕೋವಿಡ್ ವರ್ಷದಲ್ಲಿ ಬಹುತೇಕ ವಲಯಗಳು ಜಿವಿಎ ಕೊಡುಗೆಯಲ್ಲಿ ಇಳಿಕೆ ಕಂಡಿವೆ.

ಆದರೆ, ಕೃಷಿ, ಅರಣ್ಯ ಮತ್ತು ಬೇಸಾಯ ಹಾಗೂ ವಿದ್ಯುಚ್ಛಕ್ತಿ, ಅನಿಲ, ನೀರು ಪೂರೈಕೆ ಇತರ ಸೇವೆಗಳು ಸಕಾರಾತ್ಮಕ ಕೊಡುಗೆ ನೀಡಿವೆ. ಸರಳವಾಗಿ ಹೇಳಬೇಕೆಂದರೆ, ಮೂಲಭೂತ ಅಗತ್ಯಗಳಾದ ಆಹಾರ, ನೀರು, ವಿದ್ಯುಚ್ಛಕ್ತು ಮತ್ತು ಅನಿಲಕ್ಕೆ ಮಾತ್ರ ಬೇಡಿಕೆ ಹಾಗೆ ಇದೆ. ಈ ಮಧ್ಯೆ ಪ್ರವಾಸೋದ್ಯಮ ವಲಯ, ಸಂವಹನ, ಸಾರಿಗೆ ಮತ್ತು ಇತರ ಸೇವೆಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಶೇ 18.2ರಷ್ಟು ಇಳಿಕೆ ಕಂಡಿವೆ. 2019-20ರಲ್ಲಿ ಮೂರನೇ ಅತ್ಯಂತ ವೇಗವಾಗಿ ಬೆಳೆದ ವಲಯವಾಗಿತ್ತು.

ಎಲ್ಲರ ಕಣ್ಣು ರಿಸರ್ವ್ ಬ್ಯಾಂಕ್ ಮೇಲೆ
ಜಿಡಿಪಿ ಬೆಳವಣಿಗೆ ಕುಸಿತ ಕಂಡ ಮೇಲೆ ಮತ್ತೆ ಹಳಿಗೆ ತರುವಂಥ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ. ಅದಕ್ಕೆ ಇರುವ ಒಂದು ದಾರಿ ಅಂದರೆ, ಅದು ಆರ್ಥಿಕತೆಗೆ ಹಣಕಾಸು ಪೂರೈಕೆ ಮಾಡುವುದು. ಈ ವಿಚಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರದ ಅಡಿ ಬರುತ್ತದೆ. ಈ ವಾರ ಆರ್​ಬಿಐ ಸಾಲ ನೀತಿಯ ಪರಾಮರ್ಶೆ ಸಭೆ ನಿಗದಿ ಆಗಿದೆ. ಬಡ್ಡಿ ದರವನ್ನು ಕಡಿತ ಮಾಡುವ ಮೂಲಕ ಅಥವಾ ಸಾಲ ಪಡೆಯುವುದು ಸುಲಭಗೊಳಿಸಿ ಹಣಕಾಸು ಪೂರೈಕೆಯನ್ನು ಆರ್​ಬಿಐ ಸಲೀಸು ಮಾಡಬೇಕು. ಎರಡೂ, ಕಡೇ ಪಕ್ಷ ಸಿದ್ಧಾಂತದ ದೃಷ್ಟಿಯಿಂದಲಾದರೂ ಸಾಲ ಸುಲಭವಾಗಿ ದೊರೆಯುವಂತೆ ಮಾಡುತ್ತವೆ.

ಹೆಚ್ಚಿನ ಸಾಲ ಅಂದರೆ ಆ ಮೂಲಕ ಕಾರ್ಖಾನೆಗಳ ಸ್ಥಾಪನೆ, ವಿಸ್ತರಣೆ, ಮನೆ ಖರೀದಿ ಅಥವಾ ಕಾರು ಖರೀದಿ ಹೀಗೆ ವಿವಿಧ ಆರ್ಥಿಕ ಚಟುವಟಿಕೆ ಮತ್ತು ಬೆಳವಣಿಗೆಗೆ ಸಹಾತ ಮಾಡುತ್ತದೆ. ಆದರೆ ಅದರ ನಕಾರಾತ್ಮಕ ಪರಿಣಾಮವೂ ಇದೆ. ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ. ಹೆಚ್ಚಿನ ಹಣ ಓಡಾಡುವುದು ಹೌದಾದರೂ ಖರೀದಿ ಆಗುವುದು ಅದೇ ಪ್ರಮಾಣದ ಸರಕು ಮತ್ತು ಸೇವೆಗಳೇ. ಇನ್ನು ಬಡ್ಡಿ ದರ ಜಾಸ್ತಿ ಮಾಡಿ, ಹಣದುಬ್ಬರ ನಿಯಂತ್ರಿಸುತ್ತೇವೆ ಅಂದರೆ ಆಗಲ್ಲ. ಆಗ ಏನಾಗುತ್ತದೆ ಅಂದರೆ, ಹಣ ಪೂರೈಕೆ ಹೆಚ್ಚಿಸುವುದರಿಂದ ಆಗುತ್ತಿದ್ದದ್ದು ಉಲ್ಟಾ ನಡೆಯುತ್ತದೆ. ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಬಡ್ಡಿ ದರವನ್ನು ಕಡಿಮೆ ಮಾಡಬೇಕು. ಮತ್ತು ಈ ಮಧ್ಯೆ ಹಣದುಬ್ಬರ ಲೆಕ್ಕಾಚಾರ ಬಡ್ಡಿ ಏರಿಕೆಯನ್ನು ಸೂಚಿಸುತ್ತದೆ. ಇಂಥ ಸನ್ನಿವೇಶವನ್ನು ಆರ್​ಬಿಐ ಗವರ್ನರ್ ಹೇಗೆ ನಿರ್ವಹಿಸುತ್ತಾರೆ ಎಂಬುದು ಪ್ರಶ್ನೆ.

ಒಂದು ವೇಳೆ ಆರ್​ಬಿಐ ಸಮಿತಿಯು ಹೆಚ್ಚು ಹಣ ಪೂರೈಕೆಗೆ ನಿರ್ಧರಿಸಿದರೆ ಬಡ್ಡಿ ದರ ಇಳಿಸಲಿದೆ. ಇದರಿಂದ ಆಹಾರ, ಇಂಧನ ದರ ಸೇರಿದಂತೆ ಇತರ ಅಗತ್ಯ ವಸ್ತುಗಳ ಹಣದುಬ್ಬರ ಸ್ಥಿತಿ ಮತ್ತೂ ಕಷ್ಟವಾಗುತ್ತದೆ. ತಜ್ಞರು ಅಭಿಪ್ರಾಯ ಪಡುವಂತೆ, ಈಗ ಕಾದು ನೋಡುವುದೇ ಉತ್ತಮ ಸಂಗತಿ. ಸದ್ಯಕ್ಕಂತೂ ಆರ್​ಬಿಐನಿಂದ ಬಡ್ಡಿ ದರ ಏರಿಕೆ ಆಗಲ್ಲ. ಅದರಲ್ಲೂ ಈಗಿನ ಆರ್​ಬಿಐ ಆರ್ಥಿಕ ನೀತಿಯು ಹಣದುಬ್ಬರದ ಬಗ್ಗೆಯೇ ಕಾಳಜಿ ವಹಿಸಿದೆ ಎನ್ನುತ್ತಾರೆ. ಒಟ್ಟಿನಲ್ಲಿ ಐತಿಹಾಸಿಕ ಕಾಲಘಟ್ಟದಲ್ಲಿ ಆರ್ಥಿಕತೆ ಸವಾಲಿನ ಎದುರು ಸರ್ಕಾರದ ಕ್ರಮ ಏನಾಗಿರುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ: India GDP: 2020-21 ನಾಲ್ಕನೇ ತ್ರೈಮಾಸಿಕ ಜಿಡಿಪಿ ಶೇ 1.6ರಷ್ಟು ಬೆಳವಣಿಗೆ; ಇಡೀ ವರ್ಷಕ್ಕೆ ಶೇ 7.3ರಷ್ಟು ಕುಸಿತ

(India GDP record contraction of 7.3%. By this record historical low after India independence. Now question about what next?)

Published On - 6:41 pm, Tue, 1 June 21