ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ
Mukesh Ambani interview with Gautam Kumra of Mckinsey: ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ ತಮ್ಮ ಸಂಸ್ಥೆಯ ಯಶಸ್ಸಿನ ಗುಟ್ಟು ಹಾಗು ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತದ ನಂಬರ್ ಒನ್ ಶ್ರೀಮಂತರೂ ಆಗಿರುವ ಅಂಬಾನಿ, ರಿಲಾಯನ್ಸ್ ಅನ್ನು ಡೀಪ್ಟೆಕ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ದೈತ್ಯ ಕಂಪನಿಯಾಗಿ ಮಾಡಹೊರಟಿದ್ದಾರೆ. ರಿಲಾಯನ್ಸ್ ಸಾಮ್ರಾಜ್ಯದ ಯಶಸ್ಸಿನ ಹಿಂದಿರುವ ಐದಾರು ಮೂಲಭೂತ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.

ನವದೆಹಲಿ, ಜೂನ್ 25: ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಎನಿಸಿರುವ, ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆಗಿರುವ ಮುಕೇಶ್ ಅಂಬಾನಿ (Mukesh Ambani) ತಮ್ಮ ಸಂಸ್ಥೆಯನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಸನ್ನಾಹದಲ್ಲಿದ್ದಾರೆ. ಮೆಕಿನ್ಸೀ ಕಂಪನಿ ಗೌತಮ್ ಕುಮ್ರಾ (Gautam Kumra, Mckinsey) ಜೊತೆ ಸಂದರ್ಶನದಲ್ಲಿ ಭಾಗವಹಿಸಿದ ಮುಕೇಶ್ ಅಂಬಾನಿ, ತಮ್ಮ ರಿಲಾಯನ್ಸ್ ಸಂಸ್ಥೆಯು ಅತ್ಯಾಧುನಿಕ ಮ್ಯಾನುಫ್ಯಾಕ್ಚರಿಂಗ್ ಹಾಗೂ ಡೀಪ್ಟೆಕ್ ಕಂಪನಿ ಎನಿಸಲಿದೆ ಎಂದಿದ್ದಾರೆ.
‘ಹಸಿರು ಇಂಧನ ಕ್ಷೇತ್ರದಲ್ಲಿ ವಿಶ್ವದ ಬಹಳ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ಮಿಸುತ್ತಿದೆ. ಸೋಲಾರ್, ಬ್ಯಾಟರಿ, ಹೈಡ್ರೋಜನ್, ಬಯೋ ಎನರ್ಜಿ ಮುಂತಾದವು ಈ ಇಕೋಸಿಸ್ಟಂನಲ್ಲಿ ಇರಲಿವೆ. ಈ ಭೂಮಿಯನ್ನು ಉಳಿಸಲು ನಮ್ಮ ಸಣ್ಣ ಪ್ರಯತ್ನ ಇದು’ ಎಂದು ಸಂದರ್ಶನದಲ್ಲಿ ಅಂಬಾನಿ ಹೇಳಿದ್ದಾರೆ.
ತಂತ್ರಜ್ಞಾನ ಸ್ವಾವಲಂಬನೆ: ಅಂಬಾನಿ
‘2027ಕ್ಕೆ ರಿಲಾಯನ್ಸ್ಗೆ 50 ವರ್ಷ ಆಗುತ್ತದೆ. ಆದರೆ, ನೂರು ವರ್ಷ ಪೂರ್ಣಗೊಂಡ ಬಳಿಕವೂ ರಿಲಾಯನ್ಸ್ ಕಂಪನಿಯ ದೇಶ ಸೇವೆ ಮತ್ತು ಮಾನವ ಸೇವೆ ಮುಂದುವರಿಯಬೇಕು ಎನ್ನುವುದು ನನ್ನ ಭಾವನೆ. ಅದು ಆಗುತ್ತದೆ’ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಇದನ್ನೂ ಓದಿ: India Ranking: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ
‘2021ರಲ್ಲಿ ನಾವು 5ಜಿ ಆರಂಭಿಸಿದಾಗ, ಸಾಫ್ಟ್ವೇರ್, ಹಾರ್ಡ್ವೇರ್ ಇತ್ಯಾದಿ ಪ್ರತಿಯೊಂದನ್ನೂ ಕೂಡ ನಾವೇ ಸ್ವಂತವಾಗಿ ನಿರ್ಮಿಸಿದ್ದೇವೆ. ಎರಿಕ್ಸನ್, ನೊಕಿಯಾದಂತಹ ಜಾಗತಿಕ ಕಂಪನಿಗಳ ಜೊತೆ ರಿಲಾಯನ್ಸ್ ಕೆಲಸ ಮಾಡಿದೆಯಾದರೂ ಶೇ. 80ರಷ್ಟು ತಂತ್ರಜ್ಞಾನವನ್ನು ಸ್ವಂತವಾಗಿ ಸಾಧಿಸಿದ್ದೇವೆ’ ಎಂದು ಆರ್ಐಎಲ್ ಛೇರ್ಮನ್ ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಯ ಏಳ್ಗೆಗೆ ಪೂರಕವಾಗಿರುವ ಮೌಲ್ಯಗಳಿವು…
ಗೌತಮ್ ಕುಮ್ರಾ ಜೊತೆಗಿನ ಸಂದರ್ಶನದಲ್ಲಿ ಮುಕೇಶ್ ಅಂಬಾನಿ ಅವರು ನಿರ್ದಿಷ್ಟ ಮೌಲ್ಯಗಳನ್ನು ತಮ್ಮ ಪ್ರತಿಯೊಂದು ಬ್ಯುಸಿನೆಸ್ನಲ್ಲೂ ಒಳಗೊಳ್ಳುವುದಾಗಿ ಹೇಳಿದ್ದಾರೆ.
ಎಷ್ಟು ಅಗತ್ಯ: ದೇಶದ ಅಭಿವೃದ್ಧಿಗೆ ಇದು ಎಷ್ಟು ಅಗತ್ಯ ಎಂಬುದು ಮೊದಲ ಹಾಗೂ ಮೂಲಭೂತವಾದ ಸಂಗತಿ.
ಭವಿಷ್ಯದ ಉದ್ಯಮ: ಯಾವುದಾದರೂ ಹೊಸ ಉದ್ಯಮ ಪ್ರಾರಂಭಿಸಬೇಕಾದಾಗ, ಅದು ಮುಂದಿನ 20 ವರ್ಷವಾದರೂ ಪ್ರಸ್ತುತವಾಗಿರುವಂತಿರಬೇಕು.
ಇದನ್ನೂ ಓದಿ: ಭಾರತದಲ್ಲಿ ವಿಜ್ಞಾನಿಗಳಿಗೆ ಮಾರ್ಗ ಸಲೀಸು ಮಾಡುತ್ತಿರುವ ಸರ್ಕಾರ; ಇತ್ತೀಚಿನ ವರ್ಷಗಳಲ್ಲಿ ಬದಲಾಗಿರುವುದು ಏನು?
ಸಂಸ್ಥೆ ನಿರಂತರ: ನೀವು ಬರುವಾಗ ಏನೂ ಹೊತ್ತು ಬರುವುದಿಲ್ಲ. ಹೋಗುವಾಗ ಏನೂ ಹೊತ್ತೊಯ್ಯುವುದಿಲ್ಲ. ಕೊನೆಯಲ್ಲಿ ಉಳಿಯುವುದು ಸಂಸ್ಥೆ. ನಮ್ಮ ನಂತರವೂ ರಿಲಾಯನ್ಸ್ ಇರಬೇಕು ಎಂದು ಅಪ್ಪ ಹೇಳಿದ ಮಾತನ್ನು ಪಾಲಿಸುತ್ತಿದ್ದೇನೆ. ಸಂಸ್ಥೆಯು 100 ವರ್ಷವಾದರೂ ಮುಂದುವರಿಯುತ್ತಿರಬೇಕು.
ಉದ್ದೇಶ ಸ್ಪಷ್ಟ ಇರಬೇಕು: ನಿಮ್ಮ ಉದ್ದೇಶ ಮತ್ತು ಗುರಿ ಏನೆಂಬುದು ಸ್ಪಷ್ಟವಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಅಗಾಧ ಸಾಮರ್ಥ್ಯ ಇದೆ. ಆದರೆ, ನಮ್ಮ ಅಭ್ಯಾಸಗಳಿಂದ ಕಟ್ಟಿಹೋಗಿದ್ದೇವೆ. ಈ ಅಭ್ಯಾಸಗಳೇ ನಮ್ಮ ಸಾಮರ್ಥ್ಯವನ್ನು ಕಟ್ಟಿಹಾಕುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ