ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?

PM KUSUM scheme details: ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಲ್ಲಿ ನೀರಸ ಸ್ಪಂದನೆ ಸಿಕ್ಕಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. ಪಿಎಂ ಕುಸುಮ್ ಯೋಜನೆಯಲ್ಲಿ ಎ, ಬಿ ಮತ್ತು ಸಿ ಮೂರು ಕಾಂಪೊನೆಂಟ್​ಗಳಿವೆ. ಈ ಪೈಕಿ ಬಿ ಮತ್ತು ಸಿ ಕಾಂಪೊನೆಂಟ್​ಗಳಿಗೆ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಎ ಕಾಂಪೊನೆಂಟ್​ಗೆ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ.

ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?
ಸೌರ ಕೃಷಿಪಂಪ್​ಸೆಟ್

Updated on: Aug 07, 2025 | 12:05 PM

ಬೆಂಗಳೂರು, ಆಗಸ್ಟ್ 7: ಸರ್ಕಾರದ ಸೌರ ಯೋಜನೆಗಳಲ್ಲಿ ಒಂದಾದ ಪಿಎಂ ಕುಸುಮ್ ಸ್ಕೀಮ್ ಕೃಷಿಕರಿಗೆ (farmers) ಸೌರವಿದ್ಯುತ್ ಒದಗಿಸುವುದರ ಜೊತೆಗೆ ಆದಾಯ ಪಡೆಯಲೂ ಸಹಾಯವಾಗುತ್ತದೆ. ಈ ಸ್ಕೀಮ್​ಗೆ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕುತ್ತಿದೆಯಾದರೂ, ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ಬಂದಿದೆಯಂತೆ. ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಇತ್ತೀಚೆಗೆ ಸಂಸತ್​ನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ನವೀಕರಣ ಇಂಧನ ಸಚಿವ ಶ್ರೀಪಾದ್ ನಾಯ್ಕ್ ಅವರು, ಕರ್ನಾಟಕದಲ್ಲಿ ಪಿಎಂ ಕುಸುಮ್ ಯೋಜನೆಗೆ (PM Kusum Scheme) ನಿರೀಕ್ಷಿತ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದಿದ್ದಾರೆ.

2019ರಲ್ಲಿ ಆರಂಭವಾದ ಪಿಎಂ ಕುಸುಮ್ ಸ್ಕೀಮ್ ಗ್ರಾಮೀಣ ಭಾಗದಲ್ಲಿ ಸೌರ ವಿದ್ಯುತ್ ಅಳವಡಿಕೆಗೆ ಉತ್ತೇಜಿಸುವ ಯೋಜನೆಯಾಗಿದೆ. ಇದರಲ್ಲಿ ಎ, ಬಿ ಮತ್ತು ಸಿ ಎನ್ನುವ ಮೂರು ಭಾಗಗಳಿವೆ. ಈ ಪೈಕಿ ಪಿಎಂ ಕುಸುಮ್​ನ ಬಿ ಮತ್ತು ಸಿ ಕಾಂಪೊನೆಂಟ್​ಗಳು ಕರ್ನಾಟಕದಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿವೆ. ಕುಸುಮ್-ಎ ಕಾಂಪೊನೆಂಟ್​ಗಂತೂ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಸರ್ಕಾರದ ಟ್ರೆಷರಿ ಬಿಲ್​ಗಳಲ್ಲಿ ಎಸ್​ಐಪಿ ಮೂಲಕ ಹೂಡಿಕೆ; ಆರ್​ಬಿಐ ರಿಟೇಲ್ ಡೈರೆಕ್ಟ್​ನಲ್ಲಿ ಅವಕಾಶ

ಏನಿವು ಪಿಎಂ ಕುಸುಮ್ ಸ್ಕೀಮ್​ನ ಮೂರು ಕಾಂಪೊನೆಂಟ್​ಗಳು?

ಕಾಂಪೊನೆಂಟ್ ಎ: ವಿದ್ಯುತ್ ಸಬ್​ಸ್ಟೆಷನ್​ಗಳಿಂದ 5 ಕಿಮೀ ಪರಿಧಿಯೊಳಗೆ ಇರುವ ಬಂಜರು ಭೂಮಿಯಲ್ಲಿ 2 ಮೆ.ವ್ಯಾ.ವರೆಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬಹುದು. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಡಿಸ್ಕಾಮ್​ಗೆ ಮಾರುವ ಮೂಲಕ ಆದಾಯ ಪಡೆಯಬಹುದು.

ಕಾಂಪೊನೆಂಟ್ ಬಿ: ಸೌರ ಕೃಷಿಪಂಪ್​ಸೆಟ್​ಗಳ ಸ್ಥಾಪನೆಗೆ ಸರ್ಕಾರವು ನೆರವು ಒದಗಿಸುತ್ತದೆ. ಸೌರ ಪಂಪ್​ಸೆಟ್ ಸ್ಥಾಪಿಸಲು ಕೇಂದ್ರದಿಂದ ಶೇ. 30, ರಾಜ್ಯದಿಂದ ಶೇ. 30 ನೆರವು ಸಿಗುತ್ತದೆ. ಉಳಿದ ಶೇ. 40ರಷ್ಟು ವೆಚ್ಚವನ್ನು ರೈತರು ಭರಿಸಬೇಕಾಗುತ್ತದೆ.

ಕಾಂಪೊನೆಂಟ್ ಸಿ: ಎಲೆಕ್ಟ್ರಿಸಿಟಿ ಗ್ರಿಡ್​ಗೆ ಕನೆಕ್ಟ್ ಆಗಿರುವ ಕೃಷಿ ಪಂಪ್​ಸೆಟ್​ಗಳ ಸೌರೀಕರಣ ಮಾಡಲಾಗುವ ಸ್ಕೀಮ್ ಇದು. ಇದರಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್​ಗೆ ಮಾರಲು ಅವಕಾಶ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ 20ನೇ ಕಂತಿನ ಹಣ ಬಂದಿಲ್ಲವಾ? ಈ ಕಾರಣಗಳಿದ್ದೀತು ಗಮನಿಸಿ

ನವೀಕರಣ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 2025ರ ಜುಲೈವರೆಗೆ ಪಿಎಂ ಕುಸುಮ್ ಕಾಂಪೊನೆಂಟ್ ಬಿ ಅಡಿಯಲ್ಲಿ 41,365 ಸೋಲಾರ್ ಪಂಪ್​ಗಳನ್ನು ಮಂಜೂರು ಮಅಡಲಾಗಿದೆ. ಈ ಪೈಕಿ 2,388 ಪಂಪ್​ಸೆಟ್​ಗಳನ್ನು ಮಾತ್ರ ಅಳವಡಿಸಲಾಗಿದೆ. ಇನ್ನು, ಕಾಂಪೊನೆಂಟ್ ಸಿ ಅಡಿಯಲ್ಲಿ ಮಂಜೂರಾದ 6.28 ಲಕ್ಷ ಪಂಪ್​ಗಳ ಪೈಕಿ 23,133 ಪಂಪ್​ಗಳನ್ನು ಮಾತ್ರ ಸೋಲರೈಸ್ ಮಾಡಲಾಗಿದೆ. ಬೆಳಗಾವಿ, ಕಲಬುರ್ಗಿ, ಮೈಸೂರು ಇತ್ಯಾದಿ ಪ್ರಮುಖ ಕೃಷಿ ಪ್ರಾಧಾನ್ಯ ಜಿಲ್ಲೆಗಳಲ್ಲಿ ಬಹಳ ಕಡಿಮೆ ಅಳವಡಿಕೆ ಆಗಿರುವುದು ಗಮನಾರ್ಹ.

ಪಿಎಂ ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಕುಸುಮ್ ಯೋಜನೆಯ ಬಿ ಮತ್ತು ಸಿ ಕಾಂಪೊನೆಂಟ್ ಅಡಿಯಲ್ಲಿ ಕೃಷಿ ಪಂಪ್​ಗಳನ್ನು ಸ್ಥಾಪಿಸಬಹುದು. ಅದಕ್ಕಾಗಿ, ಕರ್ನಾಟಕ ನವೀಕರಣ ಇಂಧನ ಅಭಿವೃದ್ಧಿ ಸಂಸ್ಥೆ (ಕೆಆರ್​ಇಡಿಎಲ್) ಅಥವಾ ರೈತರಿಗೆ ಅವರ ಜಿಲ್ಲೆಯ ವ್ಯಾಪ್ತಿಗೆ ಬರುವ ಎಸ್ಕಾಮ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆಆರ್​ಇಡಿಎಲ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಕ್ರಮ ಇಲ್ಲಿದೆ:

ಕೆಆರ್​ಇಡಿಎಲ್ ವೆಬ್​ಸೈಟ್​ಗೆ ಹೋಗಿ: kredl.karnataka.gov.in

ಸ್ಕೀಮ್ಸ್ ಅಡಿಯಲ್ಲಿ ಪಿಎಂ ಕುಸುಮ್ ಅನ್ನು ಆಯ್ದುಕೊಳ್ಳಿ. ಇಲ್ಲಿ ಮುಂದಿನ ಕ್ರಮಗಳು, ದಾಖಲೆಗಳು ಇತ್ಯಾದಿ ವಿವರ ಸಿಗುತ್ತದೆ. ಅವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

ಯೋಜನೆಗೆ ಯಾರು ಅರ್ಹರು?

ಕೃಷಿ ಭೂಮಿ ಹೊಂದಿರುವ ರೈತರು ಈ ಸ್ಕೀಮ್​ನಲ್ಲಿ ಪಾಲ್ಗೊಳ್ಳಬಹುದು. ಅವರ ಕೃಷಿಭೂಮಿಯಲ್ಲಿ ಸೂರ್ಯನ ಬೆಳಕು ಸಾಕಷ್ಟು ಬೀಳುವಂತಿರಬೇಕು.

ಇದನ್ನೂ ಓದಿ: PM DDK Yojana: ಕೋಟ್ಯಂತರ ರೈತರ ಭವಿಷ್ಯ ಹೆಚ್ಚಿಸಬಲ್ಲ ಪಿಎಂ ಧನ-ಧಾನ್ಯ ಕೃಷಿ ಯೋಜನೆ; ಏನಿದು ಪಿಎಂಡಿಡಿಕೆವೈ?

ಪಿಎಂ ಕುಸುಮ್ ಯೋಜನೆಗೆ ದಾಖಲೆಗಳು?

ಆಧಾರ್ ಕಾರ್ಡ್, ಜಮೀನು ಮಾಲಿಕತ್ವದ ದಾಖಲೆ (ಆರ್​ಟಿಸಿ ಇತ್ಯಾದಿ), ಬ್ಯಾಂಕ್ ಪಾಸ್​ಬುಕ್, ಫೋಟೋ, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿ ದಾಖಲೆಗಳು ಬೇಕಾಗುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೆಆರ್​ಇಡಿಎಲ್ ವೆಬ್​ಸೈಟ್ ಅಥವಾ ಎಸ್ಕಾಮ್ ಕಚೇರಿಯಲ್ಲಿ ಪಡೆದ ಅರ್ಜಿಯನ್ನು ಭರ್ತಿ ಮಾಡಿ ಆ ಕಚೇರಿಗೆ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಬೇಕು. ಕೆಲ ಜಿಲ್ಲೆಗಳಲ್ಲಿ ಆನ್​ಲೈನ್​ನಲ್ಲಿ ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರಬಹುದು. ಆ ಪೋರ್ಟಲ್ ವಿಳಾಸ: https://pumpset.karnataka.gov.in

ನೀವು ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಬಂದು ನಿಮ್ಮ ಜಮೀನು ಪರಿಶೀಲನೆ ಮಾಡಿ, ಎಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶ ಇದೆ, ಅದನ್ನು ಮಂಜೂರು ಮಾಡುತ್ತಾರೆ. ಈ ಘಟಕ ಸ್ಥಾಪನೆಯ ವೆಚ್ಚದಲ್ಲಿ ಶೇ. 10ರಿಂದ 40ರಷ್ಟನ್ನು ನೀವು ಭರಿಸಬೇಕಾಗುತ್ತದೆ. ಉಳಿದವಕ್ಕೆ ಸರ್ಕಾರಗಳು ಸಬ್ಸಿಡಿ ನೀಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:34 am, Thu, 7 August 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us