ನವದೆಹಲಿ, ಮಾರ್ಚ್ 25: ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ ಗಾಯವಾಗಿ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಮುಂದಾಗದೇ ಪ್ರಾಣ ಬಿಟ್ಟಿರುವುದುಂಟು. ಈ ಹಿನ್ನೆಲೆಯಲ್ಲಿ, ಜನರಲ್ಲಿ ಸಹಾಯ ಮನೋಭಾವನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಪಘಾತದ ಗಾಯಾಳುವಿನ ನೆರವಿಗೆ ಮುಂದಾಗುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದಿದ್ದಾರೆ.
‘ಅಪಘಾತಗೊಂಡ ವ್ಯಕ್ತಿಗೆ ನೆರವು ನೀಡಲು ಮುಂದಾಗುವ ಯಾವುದೇ ಮೂರನೇ ವ್ಯಕ್ತಿಗೂ 25,000 ರೂ ಬಹುಮಾನ ನೀಡುತ್ತೇವೆ,’ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ; ಪಿಎಸ್ಎಲ್ ಗುರಿ ಮುಟ್ಟಬೇಕು: ಬ್ಯಾಂಕುಗಳಿಗೆ ಆರ್ಬಿಐ ತಾಕೀತು
‘ಅಪಘಾತದಿಂದ, ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂವರೆಗೂ ಧನಸಹಾಯ ನೀಡಲಾಗುವುದು. ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
‘ಭಾರತದಲ್ಲಿ ಪ್ರತೀ ವರ್ಷ 4,80,000 ಅಪಘಾತಗಳು ಸಂಭವಿಸುತ್ತವೆ. 18ರಿಂದ 45 ವರ್ಷ ವಯಸ್ಸಿನ 1,88,000 ಮಂದಿ ಸಾವನ್ನಪ್ಪುತ್ತಿದ್ದಾರೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ 10,000 ಮಂದಿ ಇದ್ದಾರೆ. ಇದು ದೊಡ್ಡ ಸಾರ್ಜನಿಕ ಆರೋಗ್ಯ ಸಮಸ್ಯೆಯೇ ಆಗಿದೆ. ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ’ ಎಂದು ನಿತಿನ್ ಗಡ್ಕರಿ ಖೇದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವೆನುಜುವೇಲಾದಿಂದ ಯಾರೇ ತೈಲ ಖರೀದಿಸಿದರೂ ಅವರಿಗೆ ಶೇ. 25 ಸುಂಕ: ಅಮೆರಿಕ ಅಧ್ಯಕ್ಷ ಘೋಷಣೆ; ಟ್ರಂಪ್ ಕೋಪಕ್ಕೆ ಏನು ಕಾರಣ?
ಕಳಪೆ ರಸ್ತೆಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಕಳಪೆ ರಸ್ತೆ ನಿರ್ಮಾಣಕ್ಕೆ ಕಳಪೆ ಡಿಪಿಆರ್ಗಳು ಕಾರಣ. ಡಿಪಿಆರ್ ಕನ್ಸಲ್ಟೆಂಟ್ಗಳು ಇದಕ್ಕೆ ಜವಾಬ್ದಾರರು. ವೆಚ್ಚ ಉಳಿಸಲು ಅಥವಾ ಇನ್ಯಾವುದೋ ಕಾರಣಕ್ಕೆ ಸರಿಯಾಗಿ ಡಿಪಿಆರ್ ಸಿದ್ಧಪಡಿಸುವುದಿಲ್ಲ ಎಂದು ಕೇಂದ್ರ ಹೆದ್ದಾರಿ ಸಚಿವರಾದ ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ