ಎಷ್ಟು ಅಂತ ಸಬ್ಸಿಡಿ ಕೊಡ್ತೀರಿ..! ಹಳೆಯ 28ಎನ್​ಎಂ ಚಿಪ್ ತಯಾರಿಸಿಕೊಂಡು ಏನ್ ಮಾಡ್ತೀರಿ?: ರಘುರಾಮ್ ರಾಜನ್

|

Updated on: May 14, 2024 | 4:42 PM

Raghuram Rajan continues to criticize Govt Policies: ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರೋಧಿಸುವುದನ್ನು ಮುಂದುವರಿಸಿದ್ದಾರೆ. ಪಿಎಲ್​ಐ ಸ್ಕೀಮ್ ಮೂಲಕ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಿಗೆ ಸಬ್ಸಿಡಿ ಕೊಡುತ್ತಿರುವುದು ಸರ್ಕಾರದ ತಪ್ಪು ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗ ಸೃಷ್ಟಿ ಇಲ್ಲದ ಮ್ಯಾನುಫ್ಯಾಕ್ಚರಿಂಗ್ ವಲಯಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತಿದೆ. ಉದ್ಯೋಗ ಸೃಷ್ಟಿ ಮಾಡಬಲ್ಲ ಕ್ಷೇತ್ರಗಳು ಸೊರಗುತ್ತಿವೆ ಎಂದು ಸರ್ಕಾರದ ತಪ್ಪು ಆದ್ಯತೆಯನ್ನೂ ಅವರು ಎತ್ತಿತೋರಿಸಿದ್ದಾರೆ.

ಎಷ್ಟು ಅಂತ ಸಬ್ಸಿಡಿ ಕೊಡ್ತೀರಿ..! ಹಳೆಯ 28ಎನ್​ಎಂ ಚಿಪ್ ತಯಾರಿಸಿಕೊಂಡು ಏನ್ ಮಾಡ್ತೀರಿ?: ರಘುರಾಮ್ ರಾಜನ್
ರಘುರಾಮ್ ರಾಜನ್
Follow us on

ನವದೆಹಲಿ, ಮೇ 14: ಈಗಿನ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಕಟು ವಿಮರ್ಶಕರಲ್ಲಿ ಒಬ್ಬರೆನಿಸಿರುವ ರಘುರಾಮ್ ರಾಜನ್ (Raghuram Rajan) ತಮ್ಮ ವಾದ ಸರಣಿ ಮುಂದುವರಿಸಿ, ಸರ್ಕಾರದ ಮ್ಯಾನುಫ್ಯಾಕ್ಚರಿಂಗ್ ನೀತಿ ಎಷ್ಟು ಲೋಪಪೂರಿತವಾಗಿದೆ ಎಂಬುದನ್ನು ತೋರಿಸಲು ಯತ್ನಿಸಿದ್ದಾರೆ. ಭಾರತ ಚೀನಾಗೆ ಪರ್ಯಾಯವಾಗಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನಲ್ಲಿ ಬೆಳೆಯುವುದು ಕಷ್ಟ. ಸರ್ವಿಸ್ ಸೆಕ್ಟರ್​ನತ್ತ ಹೆಚ್ಚು ಗಮನ ಕೊಡುವುದು ಒಳ್ಳೆಯದು ಎಂದು ಈ ಹಿಂದೆಯೂ ಅವರು ಹೇಳಿದ್ದರು. ಅದಕ್ಕೆ ಕೇಂದ್ರದ ಕೆಲ ಸಚಿವರಿಂದ ಖಾರದ ಪ್ರತಿಕ್ರಿಯೆಗಳು ಬಂದಿವೆ. ಈ ಬಗ್ಗೆ ರಘುರಾಮ್ ರಾಜನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಬರೆದಿದ್ದು, ತಾನು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬೆಳೆಸಬೇಕೆನ್ನುವುದನ್ನು ವಿರೋಧಿಸುತ್ತಿಲ್ಲ. ಆದರೆ, ಉದ್ಯೋಗ ಸೃಷ್ಟಿ ಮಾಡದ ಉತ್ಪಾದನಾ ವಲಯಕ್ಕೆ ಸರ್ಕಾರ ಸಬ್ಸಿಡಿ ಮೂಲಕ ಉತ್ತೇಜಿಸುತ್ತಿರುವುದನ್ನು ವಿರೋಧಿಸುತ್ತಿರುವುದಾಗಿ ಹೇಳಿದ್ದಾರೆ.

ಕಾರ್ಮಿಕ ದುಡಿಮೆ ಅಗತ್ಯ ಇರುವ ಮತ್ತು ಉದ್ಯೋಗ ಹೆಚ್ಚು ಇರುವ ಉತ್ಪಾದನಾ ಕ್ಷೇತ್ರದ ಭಾಗವನ್ನು ಸರ್ಕಾರ ನಡು ನೀರಲ್ಲಿ ಕೈಬಿಟ್ಟಿದೆ. ಆದರೆ, ಚಿಪ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಕ್ಷೇತ್ರಗಳಿಗೆ ಸಖತ್ ಸಬ್ಸಿಡಿ ಆಫ್ ಮಾಡುತ್ತಿದೆ ಎಂದು ಹೇಳಿದ ರಾಜನ್, ತಮ್ಮ ವಾದಕ್ಕೆ ಔದ್ಯಮಿಕ ಉತ್ಪಾದನಾ ಸೂಚಿ (ಐಐಪಿ) ದತತಾಂಶವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕಿರಿಕಿರಿ ತಪ್ಪುತ್ತಾ? ಸ್ಪ್ಯಾಮ್ ಕರೆ ಮಾಡುವವರನ್ನು ಕ್ರಿಮಿನಲ್ ಕೆಟಗರಿಗೆ ಸೇರಿಸಹೊರಟಿದೆ ಸರ್ಕಾರ

ಔದ್ಯಿಕ ಉತ್ಪಾದನಾ ಸೂಚಿಯ 23 ಭಾಗಗಳು ಹಾಗೂ ಕಾರ್ಮಿಕ ಶಕ್ತಿ ಬೇಡುವ 11 ವಲಯಗಳು 2016-17ಕ್ಕೆ ಹೋಲಿಸಿದರೆ 2023ರಲ್ಲಿ ಕಳೆಗುಂದಿವೆ. ಕಾರ್ಮಿಕ ಶಕ್ತಿ ಹೆಚ್ಚು ಅಗತ್ಯ ಇರುವ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಭಾರತದ ಜಾಗತಿಕ ವ್ಯವಹಾರ ಪಾಲು 2015ರಿಂದೀಚೆ ಶೇ. 20ರಷ್ಟು ಬಿದ್ದು ಹೋಗಿದೆ. ಅದೇ ವೇಳೆ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ದೇಶಗಳ ಪಾಲು ವೃದ್ಧಿಸಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

28 ಎನ್​ಎಂ ಚಿಪ್ ತಯಾರಿಸಿ ಏನು ಮಾಡುತ್ತೀರಿ?

ರಘುರಾಮ್ ರಾಜನ್ ಅವರು ಸರ್ಕಾರದ ಪಿಎಲ್​ಐ ಸ್ಕೀಮ್ ಅನ್ನು ಪ್ರಮುಖವಾಗಿ ವಿರೋಧಿಸುತ್ತಿದ್ದಾರೆ. ಆದರೆ, ತಾನು ರಕ್ಷಣಾ ಕ್ಷೇತ್ರದಲ್ಲಿ ತರಲಾಗಿರುವ ಪಿಎಲ್​ಐ ಯೋಜನೆಯನ್ನು ವಿರೋಧಿಸುತ್ತಿರುವುದಾಗಿ ಸರ್ಕಾರ ಬಿಂಬಿಸುತ್ತಿರುವುದನ್ನು ರಾಜನ್ ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: ಬಿರ್ಲಾ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜು

‘ಕಾರ್ಮಿಕ ಶಕ್ತಿ ಬೇಡುವ ಕ್ಷೇತ್ರವನ್ನು ನರಳಲು ಬಿಟ್ಟು ಸರ್ಕಾರ ಚಿಪ್ ತಯಾರಿಕೆಗೆ ಸಬ್ಸಿಡಿ ಕೊಡುತ್ತಿದೆ. ನಮಗೆ ಪರಿಣಿತಿ ಕಡಿಮೆ ಇರುವ ಮತ್ತು ಅಮೂಲಾಗ್ರ ತಯಾರಿಕೆಗೆ ಆಸ್ಪದ ಕೊಡದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಬ್ಸಿಡಿ ಸುರಿಯುತ್ತಿದೆ ಸರ್ಕಾರ. ಹಳೆಯ ತಲೆಮಾರಿ 28 ಎನ್​ಎಂ ಚಿಪ್​ಗಳನ್ನು ತಯಾರಿಸುವುದರಿಂದ ರಾಷ್ಟ್ರೀಯ ಭ್ರದ್ರತೆಗೆ ಹೇಗೆ ಸಹಾಯವಾದೀತು? ಚಿಪ್ ಉತ್ಪಾದನೆಗೆ ಬೇಕಾದ ಸರಬರಾಜು ಸರಪಳಿಗೆ ಬೇರೆ ದೇಸಗಳ ಮೇಲೆ ಅವಲಂಬಿತವಾಗುವುದು ತಪ್ಪುವುದಿಲ್ಲ. ಹೊಸ ತಲೆಮಾರಿನ ಸೆಲ್ ಫೋನ್​ಗಳಲ್ಲಿ ಬಳಸಲಾಗುವ 3 ಎನ್​ಎಂ ಮತ್ತು 2 ಎನ್​ಎಂ ಚಿಪ್​ಗಳನ್ನು ನಾವು ತಯಾರಿಸುವುದು ಯಾವಾಗ? ಅದಕ್ಕೆ ಎಷ್ಟು ಎಂದು ಸಬ್ಸಿಡಿ ಕೊಡುತ್ತೀರಿ?’ ಎಂದು ಮಾಜಿ ಆರ್​ಬಿಐ ಗವರ್ನರ್ ಆದ ರಾಜನ್ ಪ್ರಶ್ನೆ ಮಾಡಿದ್ದಾರೆ.

ಸರ್ಕಾರ ಚಿಪ್ ತಯಾರಿಕೆಗೆ ಸಬ್ಸಿಡಿ ಕೊಡುವ ಬದಲು ಶಿಕ್ಷಣ ಗುಣಮಟ್ಟ ಹೆಚ್ಚಿಸಿದರೆ ಚಿಪ್ ಡಿಸೈನ್ ಮಾಡಬಲ್ಲಂತಹವರ ಸಂಖ್ಯೆ ಹೆಚ್ಚುತ್ತದೆ. ಸಾಕಷ್ಟು ಪರಿಣಿತಿ ಲಭ್ಯವಾದಲ್ಲಿ ಯಾವಾಗ ಬೇಕಾದರೂ ಅತ್ಯಾಧುನಿಕ ಚಿಪ್​ಗಳ ತಯಾರಿಕೆ ಮಾಡಬಹುದು ಅಲ್ಲವೇ? ಎಂಬುದು ರಘುರಾಮ್ ರಾಜನ್ ಅವರ ಪ್ರಶ್ನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ