RBI MPC Meet: ಆರ್​ಬಿಐ ಎಂಪಿಸಿ ಸಭೆ; ಸಮಿತಿಯಲ್ಲಿ ಹೊಸ ಸದಸ್ಯರು; ಸಭೆಯಲ್ಲಿ ಹೊಸ ನಿರ್ಧಾರ ಬರುತ್ತಾ?

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆಯುತ್ತಿದ್ದು, ನಾಳೆ ನಿರ್ಧಾರ ಪ್ರಕಟವಾಗಲಿದೆ. ಸಮಿತಿಯಲ್ಲಿ ಮೂವರು ಹೊಸ ಬಾಹ್ಯ ಸದಸ್ಯರನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಇವರಿಂದ ಆರ್​ಬಿಐ ಎಂಪಿಸಿ ನೀತಿಯಲ್ಲಿ ಬದಲಾವಣೆ ಆಗಬಲ್ಲುದಾ ಎನ್ನುವ ಪ್ರಶ್ನೆ ಇದೆ.

RBI MPC Meet: ಆರ್​ಬಿಐ ಎಂಪಿಸಿ ಸಭೆ; ಸಮಿತಿಯಲ್ಲಿ ಹೊಸ ಸದಸ್ಯರು; ಸಭೆಯಲ್ಲಿ ಹೊಸ ನಿರ್ಧಾರ ಬರುತ್ತಾ?
ಆರ್​ಬಿಐ
Follow us
|

Updated on: Oct 08, 2024 | 12:31 PM

ನವದೆಹಲಿ, ಅಕ್ಟೋಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಿನ್ನೆ ಸೋಮವಾರ ಆರಂಭವಾಗಿದೆ. ಮೂರು ದಿನ ನಡೆಯುವ ಈ ಸಭೆಯಲ್ಲಿ ನಿನ್ನೆ ಮತ್ತು ಇಂದು ಪ್ರಮುಖ ಸಂಗತಿಗಳ ಚರ್ಚೆಯಾಗುತ್ತದೆ. ನಾಳೆ ಬುಧವಾರ ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು ಸಭೆಯ ನಿರ್ಧಾರಗಳನ್ನು ಪ್ರಕಟಗೊಳಿಸಲಿದ್ದಾರೆ.

ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ, ಹಣಕಾಸು ಸ್ಥಿತಿ ಹೇಗಿದೆ, ಹಣದುಬ್ಬರ, ಜಿಡಿಪಿ ಇತ್ಯಾದಿ ಹೇಗಿವೆ, ಇವೆಲ್ಲವನ್ನೂ ಅವಲೋಕಿಸಲಾಗುತ್ತದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಯಾವ ಹಣಕಾಸು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಚರ್ಚಿಸಿ ನೀತಿ ರೂಪಿಸಲಾಗುತ್ತದೆ. ಇದು ಈ ಎಂಪಿಸಿ ಸಭೆಯ ಪ್ರಮುಖ ಉದ್ದೇಶ. ಹೆಚ್ಚಿನ ಜನರ ಗಮನ ಇರುವುದು ರೆಪೋ ದರ ಅಥವಾ ಬಡ್ಡಿದರದ ಬಗ್ಗೆ ಎಂಪಿಸಿ ತೆಗೆದುಕೊಳ್ಳುವ ನಿರ್ಧಾರದತ್ತ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ

ಸದ್ಯ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಒಂದೂವರೆ ವರ್ಷದಿಂದ ಈ ದರದಲ್ಲಿ ಬದಲಾವಣೆ ಆಗಿಲ್ಲ. ಹಿಂದಿನ ಒಂಬತ್ತು ಸಭೆಗಳಲ್ಲಿ ಯಥಾಸ್ಥಿತಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಾರಿಯ ಸಭೆಯಲ್ಲೂ ಇದೇ ಯಥಾಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ. ಡಿಸೆಂಬರ್​ನಲ್ಲಿ ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಆರ್​​ಬಿಐ ಎಂಪಿಸಿ ಸಭೆಗೆ ಹೊಸ ಮೂವರು ಸದಸ್ಯರು

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಒಟ್ಟು ಆರು ಸದಸ್ಯರಿರುತ್ತಾರೆ. ಮೂವರು ಸದಸ್ಯರು ಆರ್​ಬಿಐನ ಒಳಗಿನವರೇ ಆಗಿರುತ್ತಾರೆ. ಇತರ ಮೂವರು ಸದಸ್ಯರು ಹೊರಗಿನವರಾಗಿರುತ್ತಾರೆ.

ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇವವ್ರತಾ ಪಾತ್ರ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಅವರು ಆರ್​ಬಿಐ ಅನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಷೇರುಗಳ ಮೇಲೆ ಹೂಡಿಕೆ: ಪಿಇ ರೇಶಿಯೋ ಮಾನದಂಡ ಬಳಸಿ ಷೇರಿನ ನಿಜಮೌಲ್ಯ ತಿಳಿಯಿರಿ

ಸೌಗತ ಭಟ್ಟಾಚಾರ್ಯ, ಡಾ. ನಾಗೇಶ್ ಕುಮಾರ್ ಮತ್ತು ಪ್ರೊಫೆಸರ್ ರಾಮ್ ಸಿಂಗ್ ಅವರು ಹೊಸದಾಗಿ ಎಂಪಿಸಿಗೆ ನೇಮಕವಾದ ಬಾಹ್ಯ ಸದಸ್ಯರಾಗಿದ್ದಾರೆ.

ಸೌಗತ ಭಟ್ಟಾಚಾರ್ಯ ಅವರು ಆರ್ಥಿಕ ತಜ್ಞರಾಗಿದ್ದಾರೆ. ಡಾ. ನಾಗೇಶ್ ಅವರು ಇನ್ಸ್​ಟಿಟ್ಯೂಟ್ ಫಾರ್ ಸ್ಟಡೀಸ್ ಇನ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಪ್ರೊ. ರಾಮ್ ಸಿಂಗ್ ಅವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್​ನ ಡೈರೆಕ್ಟರ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ