
ಹೈದರಾಬಾದ್, ಜುಲೈ 20: ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ಅಪ್ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ತನ್ನ ‘ವಿಕ್ರಮ್-1’ (Vikram-1) ರಾಕೆಟ್ನ ಯಶಸ್ವಿ ಉಡಾವಣೆಯ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆಯನ್ನು ಸಂಸತ್ತಿನ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಪ್ರಧಾನಿಯವರಿಂದ ಸಂಸತ್ತಿನಲ್ಲಿ ತಮ್ಮ ತಂಡದ ಸಾಧನೆಗೆ ಸಿಕ್ಕ ಮನ್ನಣೆಗೆ ಸ್ಕೈರೂಟ್ ಸಂಸ್ಥೆಯು ಹರ್ಷ ವ್ಯಕ್ತಪಡಿಸಿದ್ದು, “ನಾವು ಭಾರತದಿಂದ ಜಗತ್ತಿಗಾಗಿ ಹೊಸ ಆವಿಷ್ಕಾರಗಳನ್ನು ಮುಂದುವರಿಸುತ್ತೇವೆ” ಎಂದು ಧನ್ಯವಾದ ಅರ್ಪಿಸಿದೆ.
‘ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ದಿನದಂದು ಪ್ರಧಾನಿ ಮೋದಿ ಅವರು ಸ್ಕೈರೂಟ್ ತಂಡದ ಬಗ್ಗೆ ಮಾತನಾಡಿದ್ದು ಬಹಳ ಸಂತೋಷದ ಸಂಗತಿ. ನಮ್ಮ ತಂಡದ ಸರಾಸರಿ ವಯಸ್ಸು ಅವರು ಹೇಳಿದಂತೆ ಕೇವಲ 28 ವರ್ಷ. ಭಾರತೀಯ ಎಂಜಿನಿಯರುಗಳಿಗೆ ಮಹತ್ವಾಕಾಂಕ್ಷೆಯೊಂದಿಗೆ ಅವಕಾಶ ಸಿಕ್ಕರೆ ಏನು ಸಾಧಿಸಬಹುದು ಎನ್ನುವುದಕ್ಕೆ ಇದು ಕನ್ನಡಿ ಹಿಡಿದಿದೆ. ನಾವು ಭಾರತದಿಂದ ವಿಶ್ವಕ್ಕಾಗಿ ನಿರ್ಮಿಸುವುದನ್ನು ಮುಂದುವರಿಸುತ್ತೇವೆ’ ಎಂದು ಸ್ಕೈರೂಟ್ ಏರೋಸ್ಪೇಸ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಾಹ್ಯಾಕಾಶ ವಲಯದಲ್ಲಿ ಭಾರತದ ಹೊಸ ಸೂರ್ಯೋದಯ:ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ
ಹಲವು ಉದ್ಯಮಿಗಳು, ರಾಜಕಾರಣಿಗಳು, ಸಚಿವರು, ಸಿನಿಮಾ ನಟರು, ವಿಚಾರವಾದಿಗಳು ಹೀಗೆ ಸಮಾಜದ ವಿವಿಧ ವರ್ಗಗಳ ನಾಯಕರು ಸ್ಕೈರೂಟ್ ಸಾಧನೆಯನ್ನು ಕೊಂಡಾಡಿದ್ದಾರೆ, ಅಭಿನಂದಿಸಿದ್ದಾರೆ. ಈ ಎಲ್ಲರಿಗೂ ಸ್ಕೈರೂಟ್ ಸಂಸ್ಥೆ ಧನ್ಯವಾದ ಹೇಳಿದೆ.

ಪ್ರಧಾನಿ ಮೋದಿಗೆ ಸ್ಕೈರೂಟ್ ಧನ್ಯವಾದ
ಸಂಸತ್ತಿನ ಮಳೆಗಾಲದ ಅಧಿವೇಶನದ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ಕೈರೂಟ್ ಸಂಸ್ಥೆಯ ಯುವ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. “ಸ್ಕೈರೂಟ್ ಸ್ಟಾರ್ಟ್ಅಪ್ನ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು. ಇಂತಹ ಯುವಕರು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ… ಖಾಸಗಿ ಕ್ಷೇತ್ರದಿಂದ ಇಂತಹ ದೊಡ್ಡ ಸಾಧನೆ ಮಾಡಿರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಇದು ದೇಶದ ಯುವಜನತೆಯ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ” ಎಂದರು.
ಇದನ್ನೂ ನೋಡಿ: ಸಂಸತ್ ಮುಂಗಾರು ಅಧಿವೇಶನ: ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ ಮೋದಿ
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ‘ವಿಕ್ರಮ್-1’ ರಾಕೆಟ್ ಯಶಸ್ವಿಯಾಗಿ ಕಕ್ಷೆಯನ್ನು ತಲುಪಿದೆ. ಈ ರಾಕೆಟ್ ವಿವಿಧ ಉಪಗ್ರಹಗಳನ್ನು ಕಕ್ಷೆಗೆ ಹೊತ್ತೊಯ್ದಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾದ ನಂತರ ಖಾಸಗಿ ವಲಯದಿಂದ ಕಕ್ಷೆಗೆ ಉಪಗ್ರಹ/ರಾಕೆಟ್ ಕಳುಹಿಸಿದ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಗೆ ಭಾರತ ಪಾತ್ರವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ