ಬೀಸುವ ಒಂದು ದೊಣ್ಣೆಯಿಂದ ಸ್ಪೈಸ್​ಜೆಟ್ ಪಾರು; ಇನ್​ಸಾಲ್ವನ್ಸಿ ಕೇಸ್ ಹಿಂಪಡೆದ ಏರ್​ಕ್ಯಾಸಲ್

SpiceJet vs Aircastle dispute: ಭಾರತದ ಏರ್​ಲೈನ್ ಸಂಸ್ಥೆಯಾದ ಸ್ಪೈಸ್​ಜೆಟ್ ವಿರುದ್ಧ ಸಲ್ಲಿಸಲಾಗಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ಏರ್​ಕ್ಯಾಸಲ್ ಹಿಂಪಡೆದುಕೊಂಡಿದೆ. 23.39 ಮಿಲಿಯನ್ ಡಾಲರ್ ಮೊತ್ತದ ವ್ಯಾಜ್ಯದಲ್ಲಿ ಸದ್ಯಕ್ಕೆ 5 ಮಿಲಿಯನ್ ಡಾಲರ್​ಗೆ ಸೆಟಲ್ಮೆಂಟ್ ಮಾಡಿಕೊಳ್ಳಲಾಗಿದೆ. ಕೋರ್ಟ್ ಮಾರ್ಗದ ಬದಲು ಸಂಧಾನದ ಮೂಲಕ ವ್ಯಾಜ್ಯ ಶಮನ ಮಾಡಿಕೊಳ್ಳುವ ಈ ಎರಡು ಕಂಪನಿಗಳ ಪ್ರಯತ್ನ ಫಲಪ್ರದವಾಗಿದೆ.

ಬೀಸುವ ಒಂದು ದೊಣ್ಣೆಯಿಂದ ಸ್ಪೈಸ್​ಜೆಟ್ ಪಾರು; ಇನ್​ಸಾಲ್ವನ್ಸಿ ಕೇಸ್ ಹಿಂಪಡೆದ ಏರ್​ಕ್ಯಾಸಲ್
ಸ್ಪೈಸ್​ಜೆಟ್

Updated on: Nov 28, 2024 | 12:48 PM

ನವದೆಹಲಿ, ನವೆಂಬರ್ 28: ಸ್ಪೆಸ್​ಜೆಟ್ ಏರ್​ಲೈನ್ ಸಂಸ್ಥೆ ವಿರುದ್ದ ಸಲ್ಲಿಸಿದ್ದ ಸಾಲವಸೂಲಾತಿ ಪ್ರಕರಣವನ್ನು ಐರ್ಲೆಂಡ್​ನ ಏರ್​ಕ್ಯಾಸಲ್ ಹಿಂಪಡೆದುಕೊಂಡಿದೆ. ಸಾಲ ಮರಳಿಸುವ ಸಂಬಂಧ ಸ್ಪೈಸ್​ಜೆಟ್ ಆಫರ್ ಅನ್ನು ಏರ್​ಕ್ಯಾಸಲ್ ಒಪ್ಪಿಕೊಂಡಿದೆ. ಈ ಕಾರಣಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್​ಸಿಎಲ್​ಟಿ) ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಅರ್ಜಿಯನ್ನು ಅದು ವಾಪಸ್ ತೆಗೆದುಕೊಂಡಿದೆ. ನಿನ್ನೆ ನಡೆದ ಈ ಬೆಳವಣಿಗೆ ಬೆನ್ನಲ್ಲೇ ಇಂದು ಸ್ಪೈಸ್ ಜೆಟ್ ಷೇರುಬೆಲೆ ಹೆಚ್ಚತೊಡಗಿದೆ.

ಏರ್​ಕ್ಯಾಸಲ್ ಡೆಸಿಗ್ನೇಟೆಡ್ ಆ್ಯಕ್ಟಿವಿಟಿ ಕಂಪನಿ ಮತ್ತು ವಿಲ್ಮಿಂಗ್​ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್​ ಸಂಸ್ಥೆಯೊಂದಿಗಿನ 23.39 ಮಿಲಿಯನ್ ಡಾಲರ್ ಸಾಲದ ವ್ಯಾಜ್ಯವನ್ನು ಅಂತ್ಯಗೊಳಿಸಿರುವುದಾಗಿ ಕಳೆದ ತಿಂಗಳು ಸ್ಪೈಸ್​ಜೆಟ್ ಘೋಷಿಸಿತ್ತು. 5 ಮಿಲಿಯನ್ ಡಾಲರ್ ಮೊತ್ತಕ್ಕೆ ಸೆಟಲ್ಮೆಂಟ್​ಗೆ ಬರಲಾಗಿದೆ. ಹಾಗೆಯೇ, ನಿರ್ದಿಷ್ಟ ಏರ್​​ಕ್ರಾಫ್ಟ್ ಎಂಜಿನ್​ಗಳ ದುರಸ್ತಿಗೂ ಒಪ್ಪಂದ ಮಾಡಲಾಗಿದೆ.

ವ್ಯಾಜ್ಯ ಶಮನಕ್ಕಾಗಿ ಕೋರ್ಟ್ ದಾರಿಯಲ್ಲಿ ಹೋದರೆ ಸುದೀರ್ಘ ಕಾಲ ಹಿಡಿಯುತ್ತದೆ. ಅದರ ಬದಲು ಸಂಧಾನ ಪ್ರಕ್ರಿಯೆ ಮೂಲದ ವ್ಯಾಜ್ಯಕ್ಕೆ ಪರಿಹಾರ ಹುಡಕಲು ಎರಡೂ ಸಂಸ್ಥೆಗಳು ನಿರ್ಧರಿಸಿದ್ದವು. ಅದರಂತೆ ಸದ್ಯಕ್ಕೆ ಒಂದು ದಾರಿ ಕಂಡುಕೊಂಡಿವೆ. ಇದರೊಂದಿಗೆ, ಏರ್​ಕ್ಯಾಸಲ್ ಸಂಸ್ಥೆ ಸ್ಪೈಸ್​ಜೆಟ್ ವಿರುದ್ಧದ ಎಲ್ಲಾ ಕೋರ್ಟ್ ಮೊಕದ್ದಮೆಗಳನ್ನು ಹಿಂಪಡೆದುಕೊಂಡಿದೆ.

ಇದನ್ನೂ ಓದಿ: 50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿ ಪರಿತಪಿಸುತ್ತಿರುವ ವ್ಯಕ್ತಿ

ಆದರೆ, ಸ್ಪೈಸ್​ಜೆಟ್ ಸಂಸ್ಥೆ ವಿರುದ್ಧ ಇನ್ನೂ ಕೆಲ ದೊಣ್ಣೆಗಳು ಬೀಸುತ್ತಿವೆ. ಇತ್ತೀಚೆಗಷ್ಟೇ ಸಬರ್ಮತಿ ಏವಿಯೇಶನ್ ಮತ್ತು ಜೆಟ್​ಏರ್17 ಎನ್ನುವ ಸಂಸ್ಥೆಗಳು ಎರಡು ಇನ್ಸಾಲ್ವೆನ್ಸಿ ಅರ್ಜಿಗಳನ್ನು ಸ್ಪೈಸ್ ಜೆಟ್ ವಿರುದ್ಧ ಸಲ್ಲಿಸಿವೆ. ಸಬರಮತಿ ಏವಿಯೇಶನ್ ಅರ್ಜಿ ಸಂಬಂಧ ಎನ್​ಸಿಎಲ್​ಟಿಯಿಂದ ಸ್ಪೈಸ್​ಜೆಟ್​ಗೆ ನೋಟೀಸ್ ಹೋಗಿದೆ. ಇನ್ನೊಂದೆಡೆ, ಜೆಟ್​ಏರ್17 ಸಂಸ್ಥೆ ತನಗೆ ಸ್ಪೈಸ್​ಜೆಟ್​ನಿಂದ 27 ಮಿಲಿಯನ್ ಡಾಲರ್ ಹಣ ಬಾಕಿ ಬರಬೇಕೆಂದು ಅರ್ಜಿ ಹಾಕಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನ್ಯಾಯಮಂಡಳಿಯು ಜೆಟ್​ಏರ್​ಗೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us