ಉಜ್ಬೆಕಿಸ್ತಾನದಲ್ಲಿ ಬೆಂಗಳೂರಿಗನ ಹೋಟೆಲ್; ಮಸಾಲೆ ದೋಸೆ, ಚಿಕನ್ ಬಿರಿಯಾನಿ ಬಲು ಫೇಮಸ್

|

Updated on: Nov 19, 2023 | 5:55 PM

The Indian Kitchen Restaurant In Uzbekistan: ಪ್ರಪಂಚ ಪರ್ಯಟನೆ ಮಾಡಬೇಕೆಂಬ ಹಪಾಹಪಿಯಲ್ಲಿದ್ದ ಬೆಂಗಳೂರಿನ ನೌಷಾದ್ ಅವರು ಸ್ಯಾಮರ್​ಕ್ಯಾಂಡ್​ನಲ್ಲಿ ಹೋಟೆಲ್ ಆರಂಭಿಸಲು ನಿರ್ಧರಿಸಿದರು. ಅಂತೆಯೇ ಅವರು ದಿ ಇಂಡಿಯಾ ಕಿಚನ್ ರೆಸ್ಟೋರೆಂಟ್ ತೆರೆದಿದ್ದಾರೆ. ಭಾರತೀಯ ಸಮುದಾಯ ಮಾತ್ರವಲ್ಲ, ಸ್ಥಳೀಯ ಜನರಿಗೂ ಅಚ್ಚುಮೆಚ್ಚಾಗುವಂತೆ ಬೆಳೆದಿದೆ.

ಉಜ್ಬೆಕಿಸ್ತಾನದಲ್ಲಿ ಬೆಂಗಳೂರಿಗನ ಹೋಟೆಲ್; ಮಸಾಲೆ ದೋಸೆ, ಚಿಕನ್ ಬಿರಿಯಾನಿ ಬಲು ಫೇಮಸ್
ದಿ ಇಂಡಿಯಾ ಕಿಚನ್ ಹೋಟೆಲ್
Follow us on

ಬೆಂಗಳೂರು, ನವೆಂಬರ್ 19: ಬೆಂಗಳೂರಿನ ವ್ಯಕ್ತಿಯೊಬ್ಬರು ದೂರದ ಉಜ್ಬೆಕಿಸ್ತಾನದಲ್ಲಿ ಭಾರತೀಯ ರೆಸ್ಟೋರೆಂಟ್​ವೊಂದನ್ನು ತೆರೆದಿದ್ದು, ಅಲ್ಲಿಯ ಭಾರತೀಯ ಸಮುದಾಯ ಮಾತ್ರವಲ್ಲ, ಸ್ಥಳೀಯ ಜನರಿಗೂ ಅಚ್ಚುಮೆಚ್ಚಾಗುವಂತೆ ಬೆಳೆದಿದೆ. ಸ್ಟೀಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಮೊಹಮ್ಮದ್ ನೌಶಾದ್ ಅವರು ಒಂದು ವರ್ಷದ ಹಿಂದೆ (2022ರಲ್ಲಿ) ಉಜ್ಬೆಕಿಸ್ತಾನದ ಸ್ಯಾಮೆರ್​ಕ್ಯಾಂಡ್ ನಗರದಲ್ಲಿ (Samarkand city of Uzbekistan) ಆರಂಭಿಸಿದ ‘ದಿ ಇಂಡಿಯನ್ ಕಿಚನ್’ ರೆಸ್ಟೋರೆಂಟ್ ಬಹಳ ಜನಪ್ರಿಯವಾಗಿದೆ.

ಉಜ್ಬೆಕಿಸ್ತಾನದಲ್ಲಿ ಭಾರತೀಯ ಸಮುದಾಯದವರು 5,000ಕ್ಕೂ ಹೆಚ್ಚು ಮಂದಿ ಇದ್ದಾರೆ. ಇದರ ಜೊತೆಗೆ ಉಜ್ಬೆಕಿಸ್ತಾನಕ್ಕೆ ಪ್ರವಾಸ ಹೋಗಿ ಬರುವವರ ಸಂಖ್ಯೆಯೂ ದೊಡ್ಡದು. ಈ ವರ್ಷವೊಂದರಲ್ಲೇ 30,000 ಭಾರತೀಯರು ಉಜ್ಬೆಕಿಸ್ತಾನಕ್ಕೆ ಪ್ರವಾಸ ಮಾಡಿದ್ದಾರೆ. ಇನ್ನು, ಸಮರಖಂಡ್ ಅಥವಾ ಸ್ಯಾಮೆರ್​ಕ್ಯಾಂಡ್ ಉಜ್ಬೆಕಿಸ್ತಾನದ ಎರಡನೇ ಅತಿದೊಡ್ಡ ನಗರವಾಗಿದೆ. ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆಂದು ಭಾರತೀಯರು ಬರುತ್ತಾರೆ. ಇಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾರತೀಯರು ಇದ್ದಾರೆ. ಭಾರತೀಯ ಶೈಲಿಯ ಆಹಾರ ಇಲ್ಲಿ ಸಿಗುವುದಿಲ್ಲ. ಮೊಹಮ್ಮದ್ ನೌಷಾದ್ ಅವರು ಸ್ಯಾಮೆರ್​ಕ್ಯಾಂಡ್​ಗೆ ಹೋದಾಗ ಈ ಬೇಡಿಕೆಯನ್ನು ಗುರುತಿಸಿದರು.

ಇದನ್ನೂ ಓದಿ: ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?

ಪ್ರಪಂಚ ಪರ್ಯಟನೆ ಮಾಡಬೇಕೆಂಬ ಹಪಾಹಪಿಯಲ್ಲಿದ್ದ ಬೆಂಗಳೂರಿನ ನೌಷಾದ್ ಅವರು ಸ್ಯಾಮರ್​ಕ್ಯಾಂಡ್​ನಲ್ಲಿ ಹೋಟೆಲ್ ಆರಂಭಿಸಲು ನಿರ್ಧರಿಸಿದರು. ಅಂತೆಯೇ ಅವರು ದಿ ಇಂಡಿಯಾ ಕಿಚನ್ ರೆಸ್ಟೋರೆಂಟ್ ತೆರೆದಿದ್ದಾರೆ.

ಮಸಾಲೆ ದೋಸೆ, ಚಿಕನ್ ಬಿರ್ಯಾನಿ ಬಲು ಫೇಮಸ್

ಕುತೂಹಲವೆಂದರೆ ಮೊಹಮ್ಮದ್ ನೌಷಾದ್ ಅವರು ಭಾರತೀಯ ಸಮುದಾಯದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಶೈಲಿಯ ಹೋಟೆಲ್ ಅನ್ನು ಆರಂಭಿಸಿದ್ದರು. ಅವರ ಹೋಟೆಲ್​ನ ಊಟದ ರುಚಿ ಭಾರತೀಯರಿಗೆ ಮಾತ್ರವಲ್ಲ, ಸ್ಥಳೀಯ ಉಜ್ಬೆಕ್ ಜನರನ್ನೂ ಸೆಳೆದಿದೆ. ಇಲ್ಲಿಯ ಮಸಾಲೆ ದೋಸೆ ಮತ್ತು ಚಿಕನ್ ಬಿರಿಯಾನಿ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.

ಇದನ್ನೂ ಓದಿ: ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

ದಿ ಇಂಡಿಯಾ ಕಿಚನ್ ಹೋಟೆಲ್ ಯಶಸ್ಸಿನ ಹಿಂದೆ ಮೊಹಮ್ಮದ್ ನೌಷಾದ್ ಮಾತ್ರವಲ್ಲ ಅಶೋಕ್ ಕಾಳಿದಾಸ ಎಂಬ ವ್ಯಕ್ತಿಯೂ ಇದ್ದಾರೆ. ತಮಿಳುನಾಡು ಮೂಲದ ಅಶೋಕ್ ಕಾಳಿದಾಸ ಅವರು ಈ ರೆಸ್ಟೋರೆಂಟ್​​ನ ಬಾಣಸಿಗ ಅಥವಾ ಚೆಫ್. ತಾಷ್ಕೆಂಟ್​ನಲ್ಲಿದ್ದ ಅವರನ್ನು ನೌಷಾದ್ ಅವರು ಸ್ಯಾಮೆರ್​ಕ್ಯಾಂಡ್​ಗೆ ಕರೆತಂದು ಜವಾಬ್ದಾರಿ ಕೊಟ್ಟಿದ್ದಾರೆ. ಇಬ್ಬರು ದಕ್ಷಿಣ ಭಾರತೀಯರು ಸೇರಿ ಉಜ್ಬೆಕಿಸ್ತಾನದಲ್ಲಿ ಭಾರತೀಯ ಸಾಂಪ್ರದಾಯಿಕ ಆಹಾರವನ್ನು ಉಣಬಡಿಸುತ್ತಿದ್ದಾರೆ.

ದಿ ಇಂಡಿಯನ್ ಕಿಚನ್ ರೆಸ್ಟೋರೆಂಟ್​ನ ಮಾಲೀಕರು ಮತ್ತು ಸಿಬ್ಬಂದಿವರ್ಗ

ಉಜ್ಬೆಕಿಸ್ತಾನ ಅನೇಕ ಐತಿಹಾಸಿಕ ಸ್ಥಳಗಳಿರುವ ದೇಶ. ಹೀಗಾಗಿ, ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತದಿಂದಲೂ ಬಹಳ ಮಂದಿ ಪ್ರವಾಸಿಗರು ಉಜ್ಬೆಕಿಸ್ತಾನಕ್ಕೆ ಹೋಗಿಬರುತ್ತಾರೆ. ಸ್ಯಾಮರ್​ಕ್ಯಾಂಡ್ ಮಾತ್ರವಲ್ಲ ಟ್ಯಾಶ್ಕೆಂಟ್, ಬುಖಾರ, ಕೀವಾ ಮೊದಲಾದ ಐತಿಹಾಸಿಕ ಸ್ಥಳಗಳಿವೆ. ಬುಖಾರಾ ಮತ್ತು ಖೀವಾದಲ್ಲೂ ಭಾರತೀಯ ರೆಸ್ಟೋರೆಂಟ್​ಗಳನ್ನು ತೆರೆಯಲು ಮೊಹಮ್ಮದ್ ನೌಷಾದ್ ಆಸಕ್ತರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Sun, 19 November 23