ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್

Toyota Motor's R&D centre in Bangalore: ಬಿಡದಿಯಲ್ಲಿರುವ ತನ್ನ ಫ್ಯಾಕ್ಟರಿ ಬಳಿ ಟೊಯೋಟಾ ಮೋಟಾರ್ ಸಂಸ್ಥೆ ಆರ್ ಅಂಡ್ ಡಿ ಘಟಕ ಸ್ಥಾಪಿಸುತ್ತಿದೆ. ಸುಜುಕಿ ಮೊಟಾರ್ ಸಂಸ್ಥೆಯ ಸಹಯೋಗದಲ್ಲಿ ಟೊಯೋಟಾದ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ನಿರ್ಮಾಣವಾಗಲಿದೆ. ಮೊದಲಿಗೆ 300 ಉದ್ಯೋಗಿಗಳು ಇದರಲ್ಲಿ ಇರಲಿದ್ದು, 2027ರಲ್ಲಿ ಸಿಬ್ಬಂದಿ ಸಂಖ್ಯೆಯನ್ನು 1,000ಕ್ಕೆ ಏರಿಸುವ ಸಾಧ್ಯತೆ ಇದೆ.

ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್
ಟೊಯೋಟಾ ಮೋಟಾರ್

Updated on: Mar 21, 2025 | 4:17 PM

ಬೆಂಗಳೂರು, ಮಾರ್ಚ್ 21: ಜಪಾನ್ ಮೂಲದ ಟೊಯೋಟಾ ಮೋಟಾರ್ ಕಾರ್ಪೊರೇಶನ್ ಸಂಸ್ಥೆ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (Toyota R & D Centre) ತೆರೆಯಲು ಹೊರಟಿದೆ. ಭಾರತದಲ್ಲಿ ಟೊಯೋಟಾದ ಮೊದಲ ಆರ್ ಅಂಡ್ ಡಿ ಘಟಕ ಇದಾಗಲಿದೆ. ಬಿಡದಿಯಲ್ಲಿರುವ ಟೊಯೋಟಾದ ಫ್ಯಾಕ್ಟರಿ ಸ್ಥಳದ ಬಳಿಯೇ ಈ ಹೊಸ ಆರ್ ಅಂಡ್ ಡಿ ಸೆಂಟರ್ ಸ್ಥಾಪನೆಯಾಗಲಿದೆ. ಮೊದಲಿಗೆ 200 ಮಂದಿ ಉದ್ಯೋಗಿಗಳೊಂದಿಗೆ ಇದು ಆರಂಭವಾಗಲಿದ್ದು, ಇನ್ನೆರಡು ವರ್ಷದಲ್ಲಿ, ಅಂದರೆ, 2027ರೊಳಗೆ ತಂಡದ ಸಂಖ್ಯೆ 1,000ಕ್ಕೆ ಏರಿಸುವ ಗುರಿ ಇಟ್ಟುಕೊಂಡಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ಸಾಲುಸಾಲಾಗಿ ಆರ್ ಅಂಡ್ ಡಿ ಘಟಕಗಳನ್ನು ಸ್ಥಾಪಿಸುತ್ತಿವೆ. ಈ ಸೆಕ್ಟರ್​​ನ್ಲಲಿ ನಾವೀನ್ಯತೆ ಗಳಿಸಲು, ಹೊಸ ಆವಿಷ್ಕಾರ, ತಂತ್ರಜ್ಞಾನ ಅಭಿವೃದ್ಧಿಗೆ ಈ ಆರ್ ಅಂಡ್ ಡಿ ಸಹಾಯಕವಾಗಲಿವೆ. ಮರ್ಸೀಡೀಸ್ ಬೆಂಜ್ ಸಂಸ್ಥೆ ಬೆಂಗಳೂರಿನಲ್ಲಿ ಬೃಹತ್ತಾದ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಿದೆ. ಅಲ್ಲಿ ಬರೋಬ್ಬರಿ 9,000 ಮಂದಿ ಕೆಲಸ ಮಾಡುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಟೊಯೋಟಾ ಕೂಡ ರೀಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪಿಸಲು ಸಜ್ಜಾಗಿದೆ.

ಭಾರತದಲ್ಲಿ ನಂಬರ್ ಒನ್ ಆಟೊಮೊಬೈಲ್ ಸಂಸ್ಥೆಯಾದ ಸುಜುಕಿ ಮೋಟಾರ್​ ಹರ್ಯಾಣದ ರೋಹ್ತಕ್​​ನಲ್ಲಿ 3,000 ಎಂಜಿನಿಯರುಗಳ ತಂಡ ಇರುವ ಆರ್ ಅಂಡ್ ಡಿ ಅನ್ನು ನಡೆಸುತ್ತಿದೆ. ಸುಜುಕಿಯಲ್ಲಿ ಶೇ. 5.4ರಷ್ಟು ಪಾಲು ಹೊಂದಿರುವ ಟೊಯೋಟಾ, ತನ್ನ ಪ್ರತಿಸ್ಪರ್ಧಿಯೊಂದಿಗೆ ಸಹಯೋಗದಲ್ಲಿ ಬ್ಯುಸಿನೆಸ್ ನಡೆಸುತ್ತಿದೆ. ಈಗ ಸುಜುಕಿಯ ಆರ್ ಅಂಡ್ ಡಿ ಘಟಕ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಟೊಯೋಟಾ ಬಹಳ ಹತ್ತಿರದಿಂದ ಗಮನಿಸುತ್ತಿದೆ. ಟೊಯೋಟಾದ ಆರ್ ಅಂಡ್ ಡಿ ಘಟಕ ನಿರ್ಮಾಣ ಮತ್ತು ಕಾರ್ಯನಿರ್ವಹಣೆಗೆ ಸುಜುಕಿ ಬೆಂಬಲ ನೀಡಲಿದೆ.

ಇದನ್ನೂ ಓದಿ: ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು

ಜಪಾನ್ ಮೂಲದ ಟೊಯೋಟಾ ಸಂಸ್ಥೆ ಜಪಾನ್ ಹೊರಗೆ ಏಷ್ಯಾ ಪೆಸಿಫಿಕ್ ಭಾಗದಲ್ಲಿ ಎರಡು ಆರ್ ಅಂಡ್ ಡಿ ಘಟಕಗಳನ್ನು ಮಾತ್ರ ಹೊಂದಿದೆ. ಚೀನಾ ಮತ್ತು ಥಾಯ್ಲೆಂಡ್​​ನ್ಲಲಿ ಅವು ಇವೆ. ಈಗ ಭಾರತದಲ್ಲೂ ಇದು ಸ್ಥಾಪನೆಯಾಗಲಿದೆ. 2010ರಲ್ಲೇ ಟೊಯೋಟಾ ಸಂಸ್ಥೆ ಭಾರತದಲ್ಲಿ ಆರ್ ಅಂಡ್ ಡಿ ಘಟಕ ಸ್ಥಾಪಿಸಬೇಕಿತ್ತು. ಕಾರಣಾಂತರದಿಂದ ತನ್ನ ನಿರ್ಧಾರ ಕೈಬಿಟ್ಟಿತ್ತು. ಈಗ ಭಾರತದಲ್ಲಿ ಸ್ಪರ್ಧೆ ಕಠಿಣಗೊಂಡಿರುವುದು, ಚೀನಾದಲ್ಲಿ ಬ್ಯುಸಿನೆಸ್ ಕಡಿಮೆ ಆಗಿರುವುದು ಟೊಯೋಟಾವನ್ನು ಮೈಕೊಡವಿಕೊಳ್ಳುವಂತೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us