ಬ್ಯಾಂಕುಗಳಲ್ಲಿ ಅನ್​ಕ್ಲೇಮ್ಡ್ ಡೆಪಾಸಿಟ್ ಪ್ರಮಾಣ ಮಾರ್ಚ್ ಅಂತ್ಯಕ್ಕೆ 78,213 ಕೋಟಿ ರೂ

Unclaimed bank deposits rise by 26pc: ಆರ್​ಬಿಐನ ಡಿಇಎ ಫಂಡ್​ನಲ್ಲಿ 2024ರ ಮಾರ್ಚ್ ಅಂತ್ಯಕ್ಕೆ ಇರುವ ಹಣದ ಪ್ರಮಾಣ 78,213 ಕೋಟಿ ರೂ. ಬ್ಯಾಂಕುಗಳಲ್ಲಿ ನಿಗದಿತ ಅವಧಿಯೊಳಗೆ ಕ್ಲೇಮ್ ಆಗದೇ ಉಳಿದಿರುವ ಡೆಪಾಸಿಟ್​​ಗಳನ್ನು ಈ ಆರ್​ಬಿಐ ಫಂಡ್​ಗೆ ವರ್ಗಾಯಿಸಲಾಗುತ್ತದೆ. ಕಳೆದ ವರ್ಷದ ಮಾರ್ಚ್ ಅಂತ್ಯದಲ್ಲಿ ಈ ಫಂಡ್​ನಲ್ಲಿ ಇದ್ದ ಹಣ 62,225 ಕೋಟಿ ರೂ. ಒಂದು ವರ್ಷದಲ್ಲಿ ಶೇ. 26ರಷ್ಟು ಫಂಡ್ ಹೆಚ್ಚಾಗಿದೆ.

ಬ್ಯಾಂಕುಗಳಲ್ಲಿ ಅನ್​ಕ್ಲೇಮ್ಡ್ ಡೆಪಾಸಿಟ್ ಪ್ರಮಾಣ ಮಾರ್ಚ್ ಅಂತ್ಯಕ್ಕೆ 78,213 ಕೋಟಿ ರೂ
ಹಣ

Updated on: May 30, 2024 | 4:48 PM

ನವದೆಹಲಿ, ಮೇ 30: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣದ ಪ್ರಮಾಣ ಒಂದು ವರ್ಷದಲ್ಲಿ ಶೇ. 26ರಷ್ಟು ಹೆಚ್ಚಾಗಿದೆ. ಆರ್​ಬಿಐನ ವಾರ್ಷಿಕ ವರದಿ ಪ್ರಕಾರ 2024ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್ ಫಂಡ್​ಗೆ ವರ್ಗಾವಣೆ ಆಗಿರುವ ಮೊತ್ತ 78,213 ಕೋಟಿ ರೂ. ಕಳೆದ ವರ್ಷ, ಅಂದರೆ 2023ರ ಮಾರ್ಚ್ ತಿಂಗಳ ಕೊನೆಯಲ್ಲಿ ಈ ಫಂಡ್​ನಲ್ಲಿ 62,225 ಕೋಟಿ ರೂ ಇತ್ತು. ಈ ಬಾರಿ ಅದು ಶೇ. 26ರಷ್ಟು ಹೆಚ್ಚಾಗಿದೆ.

ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷ ಕಾಲ ಒಮ್ಮೆಯೂ ನಿರ್ವಹಣೆ ಆಗದಿರುವ ಖಾತೆ ಅಥವಾ ಠೇವಣಿಯನ್ನು ಆರ್​ಬಿಐನ ಡಿಎಇ ಫಂಡ್​ಗೆ ವರ್ಗಾವಣೆ ಮಾಡಲಾಗುತ್ತದೆ. ಆರ್​ಬಿಐನ ನಿಯಂತ್ರಣಕ್ಕೆ ಒಳಪಟ್ಟಿರುವ ಎಲ್ಲಾ ಕಮರ್ಷಿಯಲ್ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳು ಈ ನೀತಿಯನ್ನು ಅನುಸರಿಸಬೇಕಾಗುತ್ತದೆ.

ಕ್ಲೇಮ್ ಆಗದೇ ಈ ರೀತಿ ಆರ್​ಬಿಐನ ಡಿಇಎ ಖಾತೆಗೆ ವರ್ಗಾವಣೆ ಆದ ಠೇವಣಿದಾರರ ಹಣವೇನೂ ಅಲಭ್ಯದ ಸ್ಥಿತಿಗೆ ಹೋಗುವುದಿಲ್ಲ. ಠೇವಣಿದಾರರು ಜೀವಂತವಾಗಿದ್ದರೆ ಅವರನ್ನ ಪತ್ತೆ ಮಾಡಿ ಅವರಿಗೆ ತಲುಪಿಸುವ ಪ್ರಯತ್ನಗಳನ್ನು ಬ್ಯಾಂಕುಗಳು ಮಾಡುತ್ತವೆ. ಠೇವಣಿದಾರ ಮೃತಪಟ್ಟರೆ ಅವರ ಅರ್ಹ ವಾರಸುದಾರರಿಗೆ ಅದನ್ನು ತಲುಪಿಸುವುದು ಬ್ಯಾಂಕುಗಳದ್ದೇ ಜವಾಬ್ದಾರಿ. ಆರ್​ಬಿಐ ಈ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಬ್ಯಾಂಕುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಏಪ್ರಿಲ್ 1ರಿಂದಲೇ ಈ ಮಾರ್ಗಸೂಚಿಗಳು ಜಾರಿಗೆ ಬಂದಿವೆ.

ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಹಿಂದಿನ ಹಣಕಾಸು ವರ್ಷದಲ್ಲಿ ಶೇ. 7.6, ಈ ವರ್ಷ ಶೇ. 7: ಆರ್​ಬಿಐ ಅಂದಾಜು

ಕ್ಲೇಮ್ ಆಗದೇ ಡಿಇಎ ಫಂಡ್​ಗೆ ಹಣ ವರ್ಗಾವಣೆ ಆಗಿದ್ದರೆ, ಸಂಬಂಧಪಟ್ಟವರು ಅಂಥವನ್ನು ಹುಡುಕಲು ಆರ್​ಬಿಐ ಕೇಂದ್ರೀಕೃತವಾಗಿರುವ ಫೋರ್ಟಲ್​ವೊಂದನ್ನು ಅಭಿವೃದ್ಧಿಪಡಿಸಿದೆ. ಉದ್ಗಮ್ ಅಥವಾ ಅನ್​ಕ್ಲೇಮ್ಡ್ ಡೆಪಾಸಿಟ್ಸ್ ಗೇಟ್​ವೇ ಟು ಅಕ್ಸೆಸ್ ಇನ್ಫಾರ್ಮೇಶನ್ ಎಂಬ ಈ ವೆಬ್ ಪೋರ್ಟಲ್​ನಲ್ಲಿ ವಿವಿಧ ಬ್ಯಾಂಕುಗಳಲ್ಲಿನ ಅನ್​ಕ್ಲೇಮ್ಡ್ ಡೆಪಾಸಿಟ್​​ಗಳನ್ನು ಶೋಧಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us