Year Ender 2023: ಹಿಂಡನ್ಬರ್ಗ್ ರಿಪೋರ್ಟ್​ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು

Important Business Events of The Year: 2023, ಹಿಂಡನ್ಬರ್ಗ್ ರಿಸರ್ಚ್ ವರದಿ, ವೈಮಾನಿಕ ಸಂಸ್ಥೆಗಳ ದಿವಾಳಿ ಸ್ಥಿತಿ, ಬೈಜುಸ್ ಸಂಕಷ್ಟ ಇತ್ಯಾದಿ ಋಣಾತ್ಮಕ ಬೆಳವಣಿಗೆ ಕಂಡ ವರ್ಷ. ಎಚ್​ಡಿಎಫ್​ಸಿ ವಿಲೀನ ಸೇರಿದಂತೆ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳನ್ನು ಕಂಡ ವರ್ಷ ಇದು. ಟಾಟಾ ಸಂಸ್ಥೆಯೊಂದರ ಐಪಿಒ, ಐಟಿಸಿ ಡೀಮರ್ಜರ್, ಜಿಯೋ ಸಿನಿಮಾ ಡಿಸ್ನೀ ಒಪ್ಪಂದ ಮೊದಲಾದ ಕೆಲ ಮಹತ್ವದ ಬೆಳವಣಿಗೆಳಿವೆ.

Year Ender 2023: ಹಿಂಡನ್ಬರ್ಗ್ ರಿಪೋರ್ಟ್​ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು
ಸೆಬಿ
Follow us
|

Updated on: Dec 31, 2023 | 10:33 AM

2024ರಲ್ಲಿ ಭಾರತ ಹೊಸ ಉತ್ಸಾಹ, ಹೊಸ ಆಶಯಗಳೊಂದಿಗೆ ಅಡಿ ಇಡುತ್ತಿದೆ. 2023ರಲ್ಲಿ ಉದ್ಯಮ ವಲಯದ ಮೇಲೆ ಪರಿಣಾಮ ಬೀರಿದ ಹಲವು ವಿದ್ಯಮಾನಗಳು ನಡೆದಿವೆ. ಹಿಂಡನ್ಬರ್ಗ್ ರಿಸರ್ಚ್ ವರದಿ, ವೈಮಾನಿಕ ಸಂಸ್ಥೆಗಳ ದಿವಾಳಿ ಸ್ಥಿತಿ, ಬೈಜುಸ್ ಸಂಕಷ್ಟ ಇತ್ಯಾದಿ ಋಣಾತ್ಮಕ ಬೆಳವಣಿಗೆ ಕಂಡ ವರ್ಷ. ಹಾಗೆಯೇ, ಎಚ್​ಡಿಎಫ್​ಸಿ ವಿಲೀನ ಸೇರಿದಂತೆ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳನ್ನು ಕಂಡ ವರ್ಷ ಇದು. ಇಂಥ ಕೆಲ ವಿದ್ಯಮಾನಗಳತ್ತ ಒಂದು ನೋಟ ಇಲ್ಲಿದೆ…

ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ವರದಿ

2023ರ ವರ್ಷಾರಂಭದಲ್ಲೇ ಅದಾನಿ ಗ್ರೂಪ್ ಸಂಸ್ಥೆಗೆ ಹಿಂಡನ್ಬರ್ಗ್ ರಿಸರ್ಚ್ ಶಾಕ್ ಕೊಟ್ಟಿತು. ವಿಶ್ವದ ಎರಡನೇ ಅತಿಶ್ರೀಮಂತನಾಗಲು ಅಗುದಿ ದೂರದಲ್ಲೇ ಇದ್ದ ಗೌತಮ್ ಅದಾನಿ ಸಂಪತ್ತು ದಿಢೀರನೇ ಕುಸಿದುಹೋಗುವಂತೆ ಮಾಡಿತು ಈ ವರದಿ. ತನ್ನ ಕಂಪನಿಗಳ ಷೇರುಬೆಲೆ ಕೃತಕವಾಗಿ ಉಬ್ಬುವಂತೆ ಮಾಡಿರುವುದೂ ಸೇರಿದಂತೆ ಅದಾನಿ ಗ್ರೂಪ್ ಅನೇಕ ಅಕ್ರಮಗಳನ್ನು ಎಸಗಿದೆ ಎಂದು ಹಿಂಡನ್ಬರ್ಗ್ ಆರೋಪಗಳ ಸುರಿಮಳೆಯೇ ಮಾಡಿತು.

ಇದರ ಬೆನ್ನಲ್ಲೇ, ಲಂಬವಾಗಿ ಏರುತ್ತಿದ್ದ ಅದಾನಿ ಷೇರುಗಳು ಅದೇ ರೀತಿಯಲ್ಲಿ ಕೆಳಮುಖವಾಗಿ ಇಳಿದವು. ಹೂಡಿಕೆದಾರರು ಲಕ್ಷಾಂತರ ಕೋಟಿ ರೂ ಹಣ ನಷ್ಟ ಮಾಡಿಕೊಂಡರು. ಸದ್ಯ, ಪ್ರಕರಣ ಕೋರ್ಟ್ ಕಟಕಟೆಯಲ್ಲಿದೆ. ಸೆಬಿ ತನಿಖೆ ಪೂರ್ಣಗೊಳಿಸಬೇಕಿದೆ.

ಇದನ್ನೂ ಓದಿ: Fear of Job Loss: ಜಾಬ್ ಲಾಸ್ ಭಯ ನಿಮ್ಮನ್ನೂ ಕಾಡ್ತಿದೆಯಾ? ಜಾಬ್ ಕಳೆದುಕೊಳ್ಳುವ ಭಯದಲ್ಲಿರುವ ದೇಶದ ಜನರೆಷ್ಟು?

ಎಚ್​ಡಿಎಫ್​​ಸಿ ಬ್ಯಾಂಕುಗಳ ವಿಲೀನ

ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಸಂಸ್ಥೆಗಳ ವಿಲೀನ 2023ರ ವರ್ಷದ ಭಾರತೀಯ ಕಾರ್ಪೊರೇಟ್ ಕ್ಷೇತ್ರದ ಪ್ರಮುಖ ಘಟನೆಗಳಲ್ಲೊಂದಾಗಿದೆ. ಜುಲೈ 1ರಂದು ಈ ವಿಲೀನದ ಪರಿಣಾಮ ಎಚ್​ಡಿಎಫ್​ಸಿ ಬ್ಯಾಂಕ್ ಭಾರತದ ಅತಿದೊಡ್ಡ ಬ್ಯಾಂಕ್ ಆಯಿತು. ಒಟ್ಟು ಆಸ್ತಿ 18 ಲಕ್ಷ ಕೋಟಿ ರೂನೊಂದಿಗೆ ಅದು ಜಾಗತಿಕ ಬ್ಯಾಂಕಿಂಗ್ ದೈತ್ಯ ಸಂಸ್ಥೆಗಳ ಸಾಲಿಗೆ ಸೇರಿತು.

ವೈಮಾನಿಕ ಸಂಸ್ಥೆಗಳ ದಿವಾಳಿ ಸ್ಥಿತಿ ಮುಂದುವರಿಕೆ

ಭಾರತದಲ್ಲಿ ಕಡಿಮೆ ದರದಲ್ಲಿ ವೈಮಾನಿಕ ಸೇವೆ ನೀಡುತ್ತಿದ್ದ ಗೋ ಫಸ್ಟ್ 2023ರ ಮೇ ತಿಂಗಳಲ್ಲಿ ದಿವಾಳಿ ತಡೆಗೆ ನೆರವು ಯಾಚಿಸಿತು. ತನ್ನ ಎಲ್ಲಾ ವಿಮಾನ ಹಾರಾಟಗಳನ್ನು ನಿಲ್ಲಿಸಿತು. ವಿಮಾನಗಳಿಗೆ ಅಳವಡಿಸಲಾಗಿರುವ ಪ್ರ್ಯಾಟ್ ಅಂಡ್ ವಿಟ್ನೀ ಕಂಪನಿಯ ಎಂಜಿನ್​ಗಳು ಸರಿಯಾಗಿ ಕೆಲಸ ಮಾಡದ ಪರಿಣಾಮ ಹಲವು ವಿಮಾನಗಳು ನಿಂತಿವೆ. ಇದರಿಂದ ತನಗೆ ಭಾರೀ ನಷ್ಟವಾಗಿದೆ. ಎಂಜಿನ್ ರಿಪೇರಿ ಮಾಡಲು ಅಥವಾ ಬದಲೀ ಎಂಜಿನ್ ಕೊಡಲು ಪಿ ಅಂಡ್ ಟಿ ಸ್ಪಂದಿಸುತ್ತಿಲ್ಲ ಎಂಬುದ ಗೋ ಫಸ್ಟ್ ಆರೋಪ. ಸದ್ಯ ಇದು ದಿವಾಳಿಯಾಗುವುದನ್ನು ತಡೆಯಲು ಪ್ರಾಧಿಕಾರದಿಂದ ಪ್ರಕ್ರಿಯೆ ಚಾಲನೆಯಲ್ಲಿದೆ.

ಸೆಮಿಕಂಡಕ್ಟರ್ ಬೆಳವಣಿಗೆ

ಕಂಪ್ಯೂಟರ್, ಮೊಬೈಲ್ ಇತ್ಯಾದಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅತ್ಯಗತ್ಯವಾಗಿರುವುದು ಸೆಮಿಕಂಡಕ್ಟರ್ ಚಿಪ್​ಗಳು. ಇವುಗಳನ್ನು ಭಾರತದಲ್ಲಿ ತಯಾರಿಸಲು ಸರ್ಕಾರ ಎಲ್ಲಾ ಪ್ರಯತ್ನ ಹಾಕುತ್ತಿದೆ. ಹಲವು ಸಂಸ್ಥೆಗಳು ಮುಂದೆ ಬರುತ್ತಿವೆ. ಫಾಕ್ಸ್​ಕಾನ್ ಮತ್ತು ವೇದಾಂತ ಎರಡೂ ಸೇರಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಯೋಜಿಸಿದ್ದವು. ಆದರೆ, ಜುಲೈನಲ್ಲಿ ಫಾಕ್ಸ್​ಕಾನ್ ಈ ಜಂಟಿ ವ್ಯವಹಾರದಿಂದ ಹಿಂತೆಗೆದುಕೊಂಡಿತು. ಎರಡೂ ಸಂಸ್ಥೆಗಳು ಪ್ರತ್ಯೇಕವಾಗಿ ಘಟಕ ಸ್ಥಾಪಿಸಲು ಹೊರಟಿವೆ.

ಈ ಮಧ್ಯೆ ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್ ಸಂಸ್ಥೆ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸುವುದಾಗಿ ಘೋಷಿಸಿದೆ. ಕೆಲವೇ ತಿಂಗಳಲ್ಲಿ ಇಲ್ಲಿ ಉತ್ಪಾದನೆ ಶುರುವಾಗಲಿರುವುದು ಭಾರತದ ಸೆಮಿಕಂಡಕ್ಟರ್ ಯೋಜನೆಗೆ ಒಂದು ಬಲ ಸಿಕ್ಕಂತಾಗಿದೆ.

ಇದನ್ನೂ ಓದಿ: India@ 2075- ಅಮೆರಿಕವನ್ನು ಆರ್ಥಿಕವಾಗಿ ಭಾರತ ಯಾವಾಗ ಹಿಂದಿಕ್ಕಬಹುದು?: ಜಿಯೋಪೊಲಿಟಿಕಲ್ ತಜ್ಞೆ ವೆಲಿನಾ ಅಂದಾಜು

ಟಿಸಿಎಸ್ ಸ್ಕ್ಯಾಮ್

2023ರ ಜೂನ್ ತಿಂಗಳಲ್ಲಿ ಕಾರ್ಪೊರೇಟ್ ಜಗತ್ತನ್ನು ಬೆಚ್ಚಿಬೀಳಿಸಿದ ಹಗರಣ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್​ನಲ್ಲಿ ನಡೆದಿದೆ. ಟಿಸಿಎಸ್​ನ ಹಿರಿಯ ಅಧಿಕಾರಿಗಳು ಜಾಬ್ ಏಜೆನ್ಸಿಗಳಿಂದ ಲಂಚ ಪಡೆದು ಅವರ ಅಭ್ಯರ್ಥಿಗಳಿಗೆ ಕೆಲಸ ಕೊಡುತ್ತಿದ್ದಾರೆ ಎನ್ನುವ ಆರೋಪ ಇದು. ಟಿಸಿಎಸ್ ಆಂತರಿಕ ತನಿಖೆ ನಡೆಸಿ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಟಿಸಿಎಸ್ ನೇಮಕಾತಿ ವಿಭಾಗದ ಮುಖ್ಯಸ್ಥರೂ ಸೇರಿ ಕೆಲ ಹಿರಿಯ ಉದ್ಯೋಗಿಗಳನ್ನೂ ಮನೆಗೆ ಕಳುಹಿಸಿದೆ.

ದಾಖಲೆ ಸಂಖ್ಯೆಯಲ್ಲಿ ವಿಮಾನಗಳಿಗೆ ಆರ್ಡರ್

ಭಾರತದಲ್ಲಿ ಕೆಲ ವೈಮಾನಿಕ ಕಂಪನಿಗಳು ದಿವಾಳಿ ಏಳುವ ಸ್ಥಿತಿಗೆ ಹೋಗಿರುವ ಹೊತ್ತಿನಲ್ಲೇ, ಏರ್ ಇಂಡಿಯಾ ಮತ್ತು ಇಂಡಿಗೋ ಏರ್ಲೈನ್ಸ್ ಸಂಸ್ಥೆಗಳು ಸಾಕಷ್ಟು ವಿಮಾನಗಳಿಗೆ ಆರ್ಡರ್ ಕೊಟ್ಟಿರುವ ಘಟನೆ 2023ರಲ್ಲಿ ನಡೆದಿದೆ. ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾ ಸಂಸ್ಥೆ ಬೋಯಿಂಗ್ ಮತ್ತು ಏರ್​ಬಸ್​ನಿಂದ ಒಟ್ಟು 470 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತು. ಇದು ಜಾಗತಿಕ ವೈಮಾನಿಕ ಇತಿಹಾಸದಲ್ಲೇ ಒಂದೇ ಬಾರಿಗೆ ಮಾಡಲಾದ ಅತಿದೊಡ್ಡ ಒಪ್ಪಂದ.

ಆದರೆ, ಅದಾಗಿ ಕೆಲ ದಿನಗಳ ಬಳಿಕ ಇಂಡಿಗೋ ಏರ್​ಲೈನ್ಸ್ ಸಂಸ್ಥೆ ಏರ್​ಬಸ್​ನಿಂದ 500 ವಿಮಾನಗಳಿಗೆ ಆರ್ಡರ್ ಕೊಡುವ ಮೂಲಕ ದಾಖಲೆ ಮುರಿಯಿತು.

ಈ ಮೇಲಿನ ಘಟನೆಗಳು ಮಾತ್ರವಲ್ಲದೆ, ಬೈಜುಸ್ ಹಗರಣ ಇತ್ಯಾದಿ ನಿರಾಸೆಯ ವಿದ್ಯಮಾನಗಳಿವೆ. ಟಾಟಾ ಸಂಸ್ಥೆಯೊಂದರ ಐಪಿಒ, ಐಟಿಸಿ ಡೀಮರ್ಜರ್, ಜಿಯೋ ಸಿನಿಮಾ ಡಿಸ್ನೀ ಒಪ್ಪಂದ ಮೊದಲಾದ ಕೆಲ ಮಹತ್ವದ ಬೆಳವಣಿಗೆಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ