Goondagiri: ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಹೋಟೆಲ್​ನಲ್ಲಿ 30 ದುಷ್ಕರ್ಮಿಗಳಿಂದ ದಾಂಧಲೆ

SLV Bhawan Vandalised In Bengaluru: ಅವೆನ್ಯೂ ರಸ್ತೆಯ ಸಿಟಿ ರಸ್ತೆಯಲ್ಲಿರುವ ಎಸ್​ಎಲ್​ವಿ ಭವನ್ ಹೋಟೆಲ್ ಮೇಲೆ ಭಾನುವಾರ ರಾತ್ರಿ 30 ಜನರ ಗುಂಪು ನುಗ್ಗಿ ಗಲಾಟೆ ನಡೆಸಿ ಪೀಠೋಪಕರಣಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ನಡೆದಿದೆ.

Goondagiri: ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಹೋಟೆಲ್​ನಲ್ಲಿ 30 ದುಷ್ಕರ್ಮಿಗಳಿಂದ ದಾಂಧಲೆ
ಪ್ರಾತಿನಿಧಿಕ ಚಿತ್ರ
Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 14, 2023 | 9:42 AM

ಬೆಂಗಳೂರು: ಕೆಆರ್ ಮಾರ್ಕೆಟ್​ನ ಅವೆನ್ಯೂ ರಸ್ತೆ ಸಮೀಪ ಇರುವ ಹೋಟೆಲ್​ವೊಂದರಲ್ಲಿ ದುಷ್ಕರ್ಮಿಗಳ ಗುಂಪು ದಾಂಧಲೆ (Crime Incident) ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸಿ.ಟಿ. ರಸ್ತೆಯಲ್ಲಿರುವ ಎಸ್​ಎಲ್​ವಿ ಭವನ್ ಹೋಟೆಲ್​ನಲ್ಲಿ (SLV Bhavan Hotel Vandalised) ಭಾನುವಾರ ರಾತ್ರಿ ಈ ಘಟನೆ ನಡೆದಿರುವುದು ಗೊತ್ತಾಗಿದೆ. ಇದು ಹೋಟೆಲ್ ಮಾಲೀಕ ಮತ್ತು ಕಟ್ಟಡ ಮಾಲೀಕರ ನಡುವಿನ ವ್ಯಾಜ್ಯ ಕಾರಣ ಎಂದು ಹೇಳಲಾಗುತ್ತಿದೆ.

ಭಾನುವಾರ ರಾತ್ರಿ 30 ಜನರು ಎಸ್​ಎಲ್​ವಿ ಭವನ್ ಹೋಟೆಲ್​ಗೆ ನುಗ್ಗಿ ಅಲ್ಲಿದ್ದ ಟೇಬಲ್, ಕುರ್ಚಿ, ಪಾತ್ರೆ ಇತ್ಯಾದಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹೋಟೆಲ್​ನ ಗೋಡೆಗೂ ಹಾನಿ ಮಾಡಿದ್ದಾರೆ. ಇದು ರೌಡಿಗಳು ಮಾಡಿರುವ ಕೃತ್ಯ ಎಂದು ಬೆಂಗಳೂರು ಹೋಟೆಲ್​ಗಳ ಸಂಘಟನೆಯೊಂದು ಹೇಳಿದೆ.

ಆದರೆ, ಘಟನಾ ಸ್ಥಳಕ್ಕೆ ಪೊಲೀಸರು ಹೋಗಿದ್ದರಾದರೂ ಆರೋಪಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಹಲಸೂರು ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ. ರೆಸ್ಟೋರೆಂಟ್ ಮಾಲೀಕರು ನಿನ್ನೆ ಸಂಜೆಯವರೆಗೂ ಠಾಣೆಯಲ್ಲಿ ದೂರು ಸಲ್ಲಿಸಿಲ್ಲವಾದ್ದರಿಂದ ಪೊಲೀಸರಿಗೆ ಮುಂದಿನ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ

ದೂರು ಸಲ್ಲಿಸುವಂತೆ ನಾವು ಅವರಿಗೆ ತಿಳಿಸಿದ್ದೇವೆ. ಒಮ್ಮೆ ಅವರು ಕಂಪ್ಲೇಂಟ್ ನೀಡಿದರೆ ಮುಂದಿನ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಠಾಣೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವ್ಯಾಜ್ಯ

ಎಸ್​ಎಲ್​ವಿ ಭವನ ರೆಸ್ಟೋರೆಂಟ್​ನ ಮಾಲೀಕರು ಮತ್ತು ಅದರ ಕಟ್ಟಡ ಮಾಲೀಕರ ಮಧ್ಯೆ ಬಹಳ ವರ್ಷಗಳಿಂದ ವ್ಯಾಜ್ಯ ಇದೆ. ಸಿವಿಲ್ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದೆ. ಕಟ್ಟಡ ಮಾಲೀಕ ಮೈಸೂರಿನಲ್ಲಿ ಇದ್ದಾರೆ ಎಂದು ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ. ರೆಸ್ಟೋರೆಂಟ್ ಜಾಗವನ್ನು ತೆರವು ಮಾಡುವಂತೆ ಹಲವು ದಿನಗಳಿಂದ ಈತ ಧಮಕಿ ಹಾಕುತ್ತಿದ್ದನೆಂದೂ ಹೇಳಲಾಗುತ್ತಿದೆ.

Published On - 9:42 am, Tue, 14 February 23