ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಕೊಲೆ ಪ್ರಕರಣ; ಮೂವರು ಆರೋಪಿಗಳು ಅಂದರ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 15, 2023 | 6:53 AM

ಯುವಕನೋರ್ವನನ್ನು ದುಷ್ಕರ್ಮಿಗಳು ಕಾರ್​ನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ಕೊಲೆ ಮಾಡಿದ್ದರು. ಕೊಲೆ ಮಾಡಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಪತ್ತೆ ಮಾಡಿದ್ದಾರೆ. ವಿಚಿತ್ರವೆಂದ್ರೆ, ಕೊಲೆಯಾದ ವ್ಯಕ್ತಿಗೂ, ಕೊಲೆ ಮಾಡಿದ ಹಂತಕರಿಗೆ ಯಾವುದೇ ದ್ವೇಷವೇ ಇರಲಿಲ್ಲ. ಹಾಗಾದರೆ ಕೊಲೆಗೆ ಕಾರಣವೇನು ಅಂತೀರಾ? ಇಲ್ಲಿದೆ ನೋಡಿ.

ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಕೊಲೆ ಪ್ರಕರಣ; ಮೂವರು ಆರೋಪಿಗಳು ಅಂದರ್​
ಆರೋಪಿಗಳು
Follow us on

ಕಲಬುರಗಿ: ನಗರದ ತಾರಪೈಲ್ ನಿವಾಸಿಯಾಗಿದ್ದ ಇಪ್ಪತ್ತಾರು ವರ್ಷದ ವಿಕ್ರಮ್ ಲಿಂಗೇರಿ ಎನ್ನುವ ಯುವಕ ಕಳೆದ ಜೂನ್​ 25 ರಂದು ಕೊಲೆಯಾಗಿದ್ದ. ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಬಳಿ ರಸ್ತೆ ಪಕ್ಕದಲ್ಲಿ ವಿಕ್ರಮ್​ನನ್ನು ಕೊಲೆ(Murder) ಮಾಡಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದರು. ಜೂನ್ 26 ರಂದು ರಸ್ತೆ ಪಕ್ಕದಲ್ಲಿ ಶವ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಗಾಣಗಾಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದರು. ಇನ್ನು ಕೊಲೆಯಾದ ವ್ಯಕ್ತಿ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಮದುವೆಯಾಗಿರಲಿಲ್ಲ. ಇತ ಜೂನ್ 25 ರಂದು ಮುಂಜಾನೆ ಮನೆಯಿಂದ ಹೋಗಿದ್ದು, ನಂತರ ತಾಯಿ ಅನೇಕ ಬಾರಿ ಕರೆ ಮಾಡಿದ್ದಾಳೆ. ಆದ್ರೆ, ಪೋನ್ ಸ್ವಿಚ್ ಆಪ್ ಆಗಿತ್ತು. ಮಾರನೇ ದಿನ ಮುಂಜಾನೆ ಕೂಡ ಪೋನ್ ಮಾಡಿದ್ದಾಳೆ. ಪೋನ್ ಮತ್ತೆ ಸ್ವಿಚ್ ಆಪ್ ಎಂದು ಬಂದಿದೆ. ಎಲ್ಲಿಯಾದ್ರು, ಹೋಗಿರಬಹುದೆಂದು ತಾಯಿ ಸುಮ್ಮನಾಗಿದ್ದಳಂತೆ. ಆದ್ರೆ, ನಂತರ ವಿಕ್ರಮ್ ಕೊಲೆಯಾಗಿದ್ದಾನೆ ಎನ್ನುವುದು ಗೊತ್ತಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಕ್ರಮ್ ಕೊಲೆಗೆ ಕಾರಣವಾಯಿತು ಚಿಕ್ಕಪ್ಪನ ಮಗನ ಪ್ರೀತಿ

ವಿಕ್ರಮ್ ಕೊಲೆಗೆ ಸಂಬಂಧಿಸಿದಂತೆ ಕಲಬುರಗಿ ನಗರದ ಹನಮಂತ ನಗರದ ನಿವಾಸಿಗಳಾಗಿರುವ ನಿತೀಶ್ ರಾಠೋಡ್, ಪವನ್ ಪವಾರ್, ಸಂತೋಷ್ ಕುಮಾರ್ ಪೂಜಾರಿ ಎನ್ನುವ ಮೂವರನ್ನು ಬಂಧಿಸಿದ್ದಾರೆ. ಇನ್ನು ಕೊಲೆಗಾರರಿಗೆ, ಕೊಲೆಯಾದ ವಿಕ್ರಮ್ ನಡುವೆ ಯಾವುದೇ ದ್ವೇಷ ಇರಲಿಲ್ಲ. ಆದ್ರೆ, ಕೊಲೆಗೆ ಕಾರಣವಾಗಿದ್ದು ವಿಕ್ರಮ್ ಚಿಕ್ಕಪ್ಪನ ಮಗನ ಪ್ರೀತಿ. ಹೌದು, ಕೊಲೆಯಾಗಿರುವ ವಿಕ್ರಮ್​ನ ಚಿಕ್ಕಪ್ಪನ ಮಗ, ಹಣಮಂತನಗರದ ಇನ್ನೊಂದು ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಯುವತಿ ಮತ್ತು ಯುವಕ ಇಬ್ಬರು ಓಡಿ ಹೋಗಿದ್ದಾರೆ. ಯುವತಿ ಸಂಬಂಧಿಗಳಾಗಿದ್ದ ನಿತೀಶ್, ಪವನ್ ಮತ್ತು ಇನ್ನುಳಿದವರು, ವಿಕ್ರಮ್​ನ ಚಿಕ್ಕಪ್ಪನ ಮನೆಗೆ ಬಂದು, ನಮ್ಮ ಯುವತಿ ಎಲ್ಲಿಯೆಂದು ಕೇಳಿದ್ದರಂತೆ. ಆಗ ವಿಕ್ರಮ್ ಏರೋ ಧ್ವನಿಯಲ್ಲಿ ಮಾತನಾಡಿದ್ದನಂತೆ. ವಿಕ್ರಮ್ ನದ್ದೆ ಹೆಚ್ಚಾಗಿದೆ, ಈತನಿಗೆ ಒಂದು ಗತಿ ಕಾಣಿಸಬೇಕೆಂದು ತಿಳಿದ ಯುವತಿ ಸಂಬಂಧಿಗಳು, ಜೂನ್ 25 ರಂದು ಕಾರ್​ನಲ್ಲಿ ಕರೆದುಕೊಂಡು ಹೋಗಿ, ಮಾರಕಾಸ್ತ್ರದಿಂದ ಇರಿದು, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಶವವನ್ನು ರಸ್ತೆ ಪಕ್ಕದಲ್ಲಿ ಬಿಟ್ಟು ಪರಾರಿಯಾಗಿದ್ದರು.

ಇದನ್ನೂ ಓದಿ:ಕೋಲಾರ ಪೊಲೀಸರಿಗೆ ಕೊಲೆಗಾರನ ಬಗ್ಗೆ ಟಿಪ್ಸ್ ಕೊಟ್ಟಿದ್ದು ಚಿಪ್ಸ್ ಪ್ಯಾಕೆಟ್, ಆದರೆ ಅದನ್ನು ಮೂವರು ಖರೀದಿಸಿದ್ದರು! ಕೊನೆಗೆ ಹಂತಕನ ಹಿಡಿದ್ದಿದ್ದು ಹೇಗೆ?

ಸದ್ಯ ವಿಕ್ರಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಣಗಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಪ್ರೀತಿಸಿದವರು ಓಡಿ ಹೋಗಿ ಸಂಸಾರ ನಡೆಸುತ್ತಿದ್ದರೆ, ಇತ್ತ ಮದುವೆಯಾಗಿ ತಾಯಿಗೆ ಆಧಾರವಾಗಬೇಕಿದ್ದ ವಿಕ್ರಮ್ ಕೊಲೆಯಾಗಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 am, Sat, 15 July 23