ಯಾದಗಿರಿ: ಇಬ್ಬರ ನಡುವೆ ಜಗಳ; ಬಿಡಿಸಲು ಹೋದವನನ್ನ ಚಾಕುವಿನಿಂದ ಇರಿದು ಕೊಲೆ

|

Updated on: May 20, 2023 | 2:58 PM

ಆತ ತಾನಾಯ್ತು ತನ್ನ ಕೆಲಸವಾಯ್ತು ಎಂದು ಜೀವನ ನಡೆಸುತ್ತಿದ್ದ. ಮನೆ ಮುಂದೆಯೇ ಸಣ್ಣ ಹೋಟೆಲ್ ನಡೆಸಿಕೊಂಡು ಬಂದ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದ್ರೆ, ಮಡದಿ ಮಕ್ಕಳು ತವರು ಮನೆಗೆ ಹೋಗಿದ್ದಾರೆ ಎಂದು ರಾತ್ರಿ ಊಟಕ್ಕೆ ಹೋಟೆಲ್​ಗೆ ಹೋಗಿದ್ದ. ಇನ್ನೇನು ಊಟ ಮಾಡಬೇಕು ಎನ್ನುವಷ್ಟರಲ್ಲಿಯೇ ಜಗಳ ನಡೆದಿತ್ತು. ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು ಎನ್ನುವ ಹಾಗೆ, ಯಾರೋ ಕೊಲೆಯಾಗಬೇಕಾದ ಜಾಗದಲ್ಲಿ ಆತ ಕೊಲೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದಾದ್ರು ಯಾಕೆ? ಈ ಸ್ಟೋರಿ ನೋಡಿ.

ಯಾದಗಿರಿ: ಇಬ್ಬರ ನಡುವೆ ಜಗಳ; ಬಿಡಿಸಲು ಹೋದವನನ್ನ ಚಾಕುವಿನಿಂದ ಇರಿದು ಕೊಲೆ
ಮೃತ ಶ್ರೀನಿವಾಸ್​
Follow us on

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ತಂದುಕೊಟ್ಟಿದೆ. ಚುನಾವಣೆ ಮುಗಿದ ಕೂಡಲೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಬಿಜೆಪಿ ಪಕ್ಷದಿಂದ ಆರೋಪಗಳು ಕೇಳಿ ಬಂದಿದೆ. ಅದರಂತೆ ಯಾದಗಿರಿ ನಗರದಲ್ಲೂ ಚುನಾವಣೆ ಮುಗಿದ ಎರಡೇ ದಿನಕ್ಕೆ ಕೊಲೆಯೊಂದು ನಡೆದು ಹೋಗಿದೆ. ಇಲ್ಲಿ ಕೊಲೆಯಾದ ವ್ಯಕ್ತಿ 44 ವರ್ಷದ ಶ್ರೀನಿವಾಸ್. ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ನಿವಾಸಿಯಾಗಿರುವ ಶ್ರೀನಿವಾಸ್ ಮೇ.15 ರ ರಾತ್ರಿ ಕೆಲಸವನ್ನ ಮುಗಿಸಿಕೊಂಡು ಹೈದ್ರಾಬಾದ್ ರಸ್ತೆಯಲ್ಲಿರುವ ರಾಯಲ್ ಗಾರ್ಡನ್ ಎನ್ನುವ ಹೋಟೆಲ್​ಗೆ ಊಟಕ್ಕೆ ಹೋಗಿದ್ದ. ಊಟಕ್ಕೆ ಕುಳಿತ್ತಿದ್ದ ಕೂಡ. ಹೀಗೆ ಕುಳಿತುಕೊಂಡಾಗ ಹೋಟೆಲ್ ಹೊರಗಡೆ ಹೋಟೆಲ್ ಮಾಲೀಕ ಹಾಗೂ ಪಕ್ಕದಲ್ಲೇ ಇರುವ ಬಾರ್ ಮಾಲೀಕನ ಮದ್ಯ ಜಗಳ ನಡೆದಿತ್ತು. ಊಟಕ್ಕೆ ಕುಳಿತ್ತಿದ್ದ ಶ್ರೀನಿವಾಸ್ ಎದ್ದು ಹೊರಗಡೆ ಬಂದು ಜಗಳ ಬಿಡಿಸಲು ಮುಂದಾಗಿದ್ದ. ಇದೇ ಅವನ ಜೀವವನ್ನ ಕಸಿದುಕೊಂಡಿದೆ.

ಹೌದು ಜಗಳ ಬಿಡಿಸಿದ ಕೂಡಲೇ ಜಗಳ ಕೂಡ ತಣ್ಣಗಾಗಿತ್ತು. ಆದ್ರೆ, ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹ್ಮದ್ ಅನಾಸ್ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಬಾರ್ ಮಾಲೀಕ ಚಂದ್ರಶೇಖರ್​ಗೆ ಕೊಲೆ ಮಾಡಲು ಮುಂದಾಗುತ್ತಾನೆ. ಆದ್ರೆ, ಚಂದ್ರಶೇಖರ್ ಸ್ವಲ್ಪದರಲ್ಲೇ ಪಾರಾಗಿದ್ದು, ಪಕ್ಕದಲ್ಲೇ ನಿಂತಿದ್ದ ಶ್ರೀನಿವಾಸ್ ಹೊಟ್ಟೆಗೆ ಚಾಕು ಬಿದ್ದಿದೆ. ಹೊಟ್ಟೆಗೆ ಚಾಕು ಬಿಳುತ್ತಿದ್ದ ಹಾಗೆ ಶ್ರೀನಿವಾಸ್ ಕೆಳಗಡೆ ಕುಸಿದು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಸ್ಥಳದಲ್ಲೇ ನೆರದಿದ್ದ ಜನ ಏಕ್ ದಮ್ ಹೌಹಾರಿ ಹೋಗುತ್ತಾರೆ. ಇಲ್ಲಿ ಕೊಲೆ ನಡೆಯುತ್ತೆಂದು ಯಾರು ಕೂಡ ಊಹಿಸರಲಿಲ್ಲ. ಆದ್ರೆ, ಕ್ಷಣಮಾತ್ರದಲ್ಲೇ ಸ್ಥಳದಲ್ಲೇ ಕೊಲೆ ನಡೆದು ಹೋಗಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿಯ ಕೊಲೆ; ಮದುವೆ ಮನೆಯಲ್ಲೀಗ ಸೂತಕದ ಛಾಯೆ

ಜಗಳಕ್ಕೆ ಕಾರಣವೇನು?

ಅಷ್ಟಕ್ಕೂ ಇಲ್ಲಿ ಜಗಳ ಬಂದಿದ್ದಾದ್ರು ಯಾಕೆ ಅಂದ್ರೆ, ಕಳೆದ ಕೆಲ ತಿಂಗಳಗಳ ಹಿಂದೆಷ್ಟೆ ಈ ರಾಯಲ್ ಗಾರ್ಡನ್ ಹೋಟೆಲ್ ಆರಂಭವಾಗಿದೆ. ಈ ಹೋಟೆಲ್ ಪಕ್ಕದಲ್ಲಿ ಬಾರ್ ಕೂಡ ಇದೆ. ಬಾರ್ ಮಾಲೀಕ ಚಂದ್ರಶೇಖರ್ ನಿತ್ಯ ತನ್ನ ಕಾರು ಹೋಟೆಲ್ ಪಕ್ಕದಲ್ಲಿ ಪಾರ್ಕ್ ಮಾಡುತ್ತಿದ್ದ. ಹೀಗಾಗಿ ಹೋಟೆಲ್​ಗೆ ಬಂದ ಗ್ರಾಹಕರ ಕಾರು ಮತ್ತು ಬೈಕ್​​ಗಳನ್ನ ನಿಲ್ಲಿಸೋಕೆ ಜಾಗ ಇರುತ್ತಿರಲಿಲ್ಲ. ಹೀಗಾಗಿ ಇದೆ ವಿಚಾರಕ್ಕೆ ಆಗಾಗ ಬಾರ್ ಮಾಲೀಕ ಹಾಗೂ ಹೋಟೆಲ್ ಮಾಲೀಕ ಅಬ್ದುಲ್ ಸತ್ತಾರ್ ಜೊತೆ ಜಗಳ ಆಗುತ್ತಿತ್ತು, ಮತ್ತೆ ಶಾಂತವಾಗುತ್ತಿತ್ತು. ಆದ್ರೆ, ಮೇ.15 ರ ರಾತ್ರಿ ವೇಳೆ ಚಂದ್ರಶೇಖರ್ ಮತ್ತೆ ಇಲ್ಲೇ ಕಾರ್ ಪಾರ್ಕ್ ಮಾಡಿದ್ದ.
ರಾತ್ರಿ 10.30 ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಚಂದ್ರಶೇಖರ್ ರೆಡಿಯಾಗಿದ್ದ.

ಹೀಗಾಗಿ ಬಾರ್​ನಿಂದ ನೇರವಾಗಿ ಹೋಟೆಲ್ ಬಳಿ ಕಾರು ತೆಗೆಯಲು ಬಂದಿದ್ದ. ಆದ್ರೆ, ಕಾರಿನ ಹಿಂದೆ ಹೋಟೆಲ್ ಗೆ ಬಂದಿದ್ದ ಗ್ರಾಹಕರು, ಕಾರು ಮತ್ತು ಬೈಕ್​ಗಳನ್ನ ಪಾರ್ಕ್ ಮಾಡಿದ್ರು. ಹೀಗಾಗಿ ಚಂದ್ರಶೇಖರ್ ಹೋಟೆಲ್ ಮಾಲೀಕನಿಗೆ ಹೋಗಿ ಹೇಳಿದ್ದಾನೆ. ನನ್ನ ಕಾರು ಹೊರ ತೆಗೆಯಬೇಕು ಹೀಗಾಗಿ ನಿಮ್ಮ ಹೋಟೆಲ್ ಬಂದಿದ್ದ ಗ್ರಾಹಕರ ಬೈಕ್ ಮತ್ತು ಕಾರುಗಳನ್ನ ತೆಗೆಸಲು ಹೇಳಿ ಅಂತ ಹೇಳಿದ್ದಾನೆ. ಆದ್ರೆ, ಇದೆ ವಿಚಾರಕ್ಕೆ ಹೋಟೆಲ್ ಮತ್ತು ಬಾರ್ ಮಾಲೀಕನ ಮದ್ಯ ಜಗಳ ಆಗಿದೆ. ಆರಂಭದಲ್ಲಿ ವಾಗ್ವಾದ ಅಷ್ಟೇ ನಡೆದಿದೆ. ಆದ್ರೆ, ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಹೈದ್ರಾಬಾದ್ ಮೂಲದ ಮಹ್ಮದ್ ಅನಾಸ್ ನೇರವಾಗಿ ಚಂದ್ರಶೇಖರದ್ದು ಜಾಸ್ತಿ ಆಗಿದೆ ಅಂತ ಕೊಲೆ ಮಾಡಲು ಮುಂದಾಗಿದ್ದ. ಆದ್ರೆ ಚಂದ್ರಶೇಖರ್ ದೈವ ಬಲದಿಂದ ಪಾರಾಗಿದ್ರೆ, ಊಟಕ್ಕೆ ಬಂದಿದ್ದ ಅಮಾಯಕ ಶ್ರೀನಿವಾಸ್ ಕೊಲೆಯಾಗಿದ್ದಾನೆ.

ಇದನ್ನೂ ಓದಿ:ತನ್ನದೇ ಕೊಲೆ ವಿಚಾರಣೆಯಲ್ಲಿ ಸಾಕ್ಷಿ ಹೇಳಿದ ಸಂತ್ರಸ್ತೆ; ಮೇ 23 ರಂದು OTT ಅಲ್ಲಿ ಬರುತ್ತಿದೆ ನೈಜ ಘಟನೆ ಆಧಾರಿತ ಡಾಕ್ಯುಮೆಂಟರಿ

ಕೊಲೆಗೆ ಕೋಮು ಬಣ್ಣ ಬಡೆಯಲು ಪ್ಲಾನ್​

ಶ್ರೀನಿವಾಸ್ ಕೊಲೆಯಾಗುತ್ತಿದ್ದ ಹಾಗೆ ಸ್ಥಳೀಯರು ಹಿಂದೂ ಪರ ಸಂಘಟನೆಗಳು ಇದಕ್ಕೆ ಕೋಮು ಬಣ್ಣ ಕಟ್ಟಲು ಪ್ಲಾನ್ ಮಾಡಿದ್ರು. ಕೊಲೆಯಾದವನು ಹಿಂದೂ, ಕೊಲೆ ಮಾಡಿದವನು ಮುಸ್ಲಿಂ ಆಗಿದ್ದರಿಂದ ಪಕ್ಕ ಇದು ಹಿಂದೂ ಮುಸ್ಲಿಂ ಅಂತ ಸೃಷ್ಟಿ ಮಾಡಲು ಮುಂದಾಗಿದ್ರು. ಹೀಗಾಗಿ ಕೊಲೆಯಾದ ರಾತ್ರಿನೇ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ರು. ಕಾಂಗ್ರೆಸ್ ಬಹುಮತದಿಂದ ಗೆದ್ದಿದೆ ಆದ್ರೆ, ಆಗಲೇ ರಾಜ್ಯ ಮತ್ತು ಜಿಲ್ಲೆಯಲ್ಲಿ ಹಿಂದೂಗಳ ಕೊಲೆಯಾಗುತ್ತಿವೆ ಎಂದು ವಿಷಯ ಸೃಷ್ಟಿ ಮಾಡಲು ಮುಂದಾಗಿದ್ರು. ಬೆಳಗ್ಗೆಯಾಗುವಷ್ಟರಲ್ಲಿ ಈ ವಿಷಯ ಬಿಜೆಪಿ ಮುಖಂಡರ ಗಮನಕ್ಕೂ ಬಂದಿತ್ತು. ಹೀಗಾಗಿ ಮಾರನೇ ದಿನವೇ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಯಾದಗಿರಿ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಕೂಡ ವ್ಯಕ್ತ ಪಡಿಸಿದ್ರು.

ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಕೂಡ ಆಕ್ರೋಶ ವ್ಯಕ್ತ ಪಡಿಸಿ, ಶವಾಗಾರದಿಂದ ನೇರವಾಗಿ ಶ್ರೀನಿವಾಸ್​ ಶವವನ್ನ ತಂದು ಗಾಂಧಿ ಸರ್ಕಲ್​ನಲ್ಲಿ ಇಟ್ಟು ಪ್ರತಿಭಟನೆ ಮಾಡುವ ಉದ್ದೇಶ ಕೂಡ ಹೊಂದಿದ್ರು. ಆದ್ರೆ, ಇದಕ್ಕೆ ಶ್ರೀನಿವಾಸ್ ಕುಟುಂಬಸ್ಥರು ನಿರಾಕರಿಸಿದ್ದಾರೆ. ಹಿಂದೂ ಮುಸ್ಲಿಂ ಅಂತ ಪಟ್ಟ ಕಟ್ಟಲು ಮುಂದಾಗಿದ್ದ ಹಿಂದೂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಇದು ಹಿಂದೂ ಮುಸ್ಲಿಂ ಅಂತ ಅಲ್ಲ ಬದಲಿಗೆ ಆಕಸ್ಮಿಕವಾಗಿ ನಡೆದ ಕೊಲೆ ಎಂದು ಖುದ್ದ ಕುಟುಂಬಸ್ಥರೆ ಹೇಳಿದ್ದಾರೆ. ಇದರ ಬಗ್ಗೆ ಯಾದಗಿರಿ ಎಸ್ ಪಿ ಕೂಡ ಸ್ಪಷ್ಟನೆ ನೀಡಿದ್ದು, ಶ್ರೀನಿವಾಸ್ ಯಾವುದೇ ಹಿಂದೂ ಪರ ಸಂಘಟನೆ ಆಗಲಿ ಪಕ್ಷದಲ್ಲಾಗಲಿ ಗುರುತಿಸಿಕೊಂಡವನಲ್ಲ, ಜೊತೆಗೆ ಈ ಕೊಲೆ ಕೂಡ ಉದ್ದೇಶಪೂರಕವಾಗಿ ನಡೆದಿದಲ್ಲ. ಬದಲಿಗೆ ಯಾರಿಗೋ ಹೊಡೆಯಲು ಹೋಗಿ ಇನ್ಯಾರಿಗೋ ಹೊಡಿದಿದ್ದಾರೆಂದು ಹೇಳಿದ್ದಾರೆ.

ಇದನ್ನೂ ಓದಿ:ಹಳಿಯಾಳ: ಜಮೀನು ವಿವಾದ, ಫಾರೆಸ್ಟ್ ವಾಚ್​ಮ್ಯಾನ್​ನ ಕಾಲು ಕತ್ತರಿಸಿ ಭೀಕರ ಕೊಲೆ

ಇನ್ನು ಮೃತ ಶ್ರೀನಿವಾಸ್ ಕಳೆದ ಎರಡು ವರ್ಷಗಳ ಹಿಂದೆ ತನ್ನ ಸಹೋದರನನ್ನ ಕಳೆದುಕೊಂಡಿದ್ದಾನೆ. ಹೀಗಾಗಿ ಇಡೀ ಕುಟುಂಬವನ್ನ ತಾನೆ ನೋಡಿಕೊಳ್ಳುತ್ತಿದ್ದ. ಮನೆ ಮುಂದೆಯೇ ತಳ್ಳೋ ಗಾಡಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದ. ಬಜ್ಜಿ, ಮಂಡಕ್ಕಿ ಸೇರಿದಂತೆ ನಾನಾ ರೀತಿಯ ತಿನಿಸುಗಳನ್ನ ಮಾಡಿ ಮಾರಾಟ ಮಾಡುತ್ತಿದ್ದ. ಇದರಿಂದ ಬಂದ ಆದಾಯದಿಂದ ಕುಟುಂಬವನ್ನ ನೋಡಿಕೊಳ್ಳುತ್ತಿದ್ದ. ಇನ್ನು ಶ್ರೀನಿವಾಸ್​ಗೆ ಹಿಂದೂ ಸಮುದಾಯಕ್ಕಿಂತ ಮುಸ್ಲಿಂ ಸಮುದಾಯವರೇ ಹೆಚ್ಚು ಪರಿಚಿತರಾಗಿದ್ದಾರೆ. ಯಾಕೆಂದ್ರೆ, ಹೆಚ್ಚು ಮುಸ್ಲಿಂ ಜನ ಇರುವ ಬಡಾವಣೆಯಲ್ಲಿ ಈ ಶ್ರೀನಿವಾಸ್ ವಾಸ ಮಾಡುತ್ತಿದ್ದ. ಹೀಗಾಗಿ ಯಾರ ತಂಟೆ ಹೋಗುವವನಲ್ಲ. ಶ್ರೀನಿವಾಸ್ ಗೆ ಏನಾದ್ರು ತೊಂದರೆಯಾದ್ರೆ, ಮೊದಲು ಬಂದು ನಿತ್ತುಕೊಳ್ಳುವವರೆ ಈ ಮುಸ್ಲಿಂ ಸಮುದಾಯದ ಜನ. ಅಕ್ಕಪಕ್ಕದ ಮನೆಯವರಂತೂ ನಿತ್ಯ ಶ್ರೀನಿವಾಸ್ ಮನೆಗೆ ಬಂದು ಹೋಗುವುದನ್ನ ಮಾಡುತ್ತಿದ್ರು. ಹೀಗಾಗಿ ಕೊಲೆಯಾದ ದಿನ ಕೂಡ ಹೆಚ್ಚಾಗಿ ಮುಸ್ಲಿಂ ಸಮುದಾಯದ ಜನರೆ, ಬಂದು ಸಾಂತ್ವಾನ ಹೇಳುವ ಕೆಲಸ ಮಾಡಿದ್ದಾರೆ. ಈ ಕೊಲೆಯಾಗಿದ್ದು ಉದ್ದೇಶಪೂರಕ ಅಲ್ಲ, ಬದಲಿಗೆ ಆಕಸ್ಮಿಕವಾಗಿ ನಡೆದಿದೆ ಎಂದು ಖುದ್ದು ಶ್ರೀನಿವಾಸ್ ಕುಟುಂಬಸ್ಥರೇ ಹೇಳುತ್ತಿದ್ದಾರೆ.

ಆರೋಪಿಗಳು ಅರೆಸ್ಟ್​

ಇನ್ನು ಕೊಲೆಯಾದ ಕೂಡಲೇ ಸ್ಥಳಕ್ಕೆ ಬಂದಿದ್ದ ಯಾದಗಿರಿ ನಗರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ. ಹೌದು ಈ ಕೊಲೆ ಉದ್ದೇಶಪೂರ್ವಕವಲ್ಲದ ಕಾರಣ, ಯಾರೂ ಕೂಡ ಊರು ಬಿಟ್ಟು ಹೋಗಿರಲಿಲ್ಲ. ಹೀಗಾಗಿ ಯಾದಗಿರಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಿಕೊಂಡು ಆರೋಪಿಗಳಾದ ಹೋಟೆಲ್ ಮಾಲೀಕ ಅಬ್ದುಲ್ ಸತ್ತಾರ್,ಮಹ್ಮದ್ ಅನಾಸ್,ಮಕ್ಬೂಲ್ ಖಾನ್,ಕಾನು ಜಾನ್,ಮುಜಫರ್ ಅಲಿ ಹಾಗೂ ಸುನೀಲ್ ಗೆ ಯಾದಗಿರಿ ನಗರದಲ್ಲೇ ಅರೆಸ್ಟ್ ಮಾಡಿದ್ದಾರೆ. ಇನ್ನು ಉದ್ದೇಶಪೂರಕವಾಗಿ ಯಾರಿಗೂ ಕೊಲೆ ಮಾಡಬೇಕೆಂದು ಅಂದುಕೊಂಡಿರಲಿಲ್ಲ. ಆದ್ರೆ, ಮಿಸ್ ಆಗಿ ಇದು ನಡೆದು ಹೋಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಬಾಯಿ ಮಾತಿನಿಂದ ಜಗಳ ಬಗೆ ಹರಿಸಿಕೊಳ್ಳಬೇಕಾಗಿತ್ತು. ಆದ್ರೆ, ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಕೊಲೆ ಮಾಡಲು ಮುಂದಾಗಿ ಅಮಾಯಕನ ಕೊಲೆ ಮಾಡಿ ಆರೋಪಿಗಳು ಜೈಲು ಸೇರಿದ್ದಾರೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ