ರಾಯಚೂರು: ಗೋಶಾಲೆಗಳಿಗಾಗಿ ಸಂಗ್ರಹಿಸಿದ್ದ ಜೋಳದ ಬಣವಿಗಳಿಗೆ ಬೆಂಕಿ (Fire Accident) ತಗುಲಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಮಾನವಿ ತಾಲ್ಲೂಕಿನ ದೇವಿಪೂರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಆಂಧ್ರ ಮೂಲದ ರೈತರೊಬ್ಬರು ಸಂಗ್ರಹಿಸಿದ್ದ ಮೇವಿನ ಬಣವಿಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿರೊ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಲಕ್ಷಾಂತರ ರೂ.ಮೌಲ್ಯದ ಮೇವು ಸುಟ್ಟು ಭಸ್ಮವಾಗಿದೆ. ಎರಡು ವಾಹನಗಳ ಮೂಲಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಗಾಳಿಗೆ ಹಾರಿಹೋದ ಮನೆಯ ಮೇಲ್ಛಾವಣಿ:
ಹಾವೇರಿ: ಭಾರಿ ಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿ ಹೋದಂತಹ ಘಟನೆ ನಡೆದಿದೆ. ಜಿಲ್ಲೆಯ ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾರಿ ಗಾಳಿಯೊಂದಿಗೆ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಮಳೆಗೆ ಐವತ್ತಕ್ಕೂ ಅಧಿಕ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ಮನೆಯ ಮೇಲ್ಛಾವಣಿಗಳು ಹಾರಿ ಹೋಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ಹಾಳಾಗಿದ್ದು, ಮನೆಯಿಂದ ಜನರು ಹೊರಗೋಡಿ ಬಂದಿದ್ದಾರೆ. ಭಾರಿ ಗಾಳಿಯಿಂದ ಅದೃಷ್ಟವಶಾತ್ ಯಾವುದೆ ಜೀವ ಹಾನಿಯಾಗಿಲ್ಲ.
ಭೀಕರ ಮಳೆ, ಗಾಳಿಯಿಂದ ಮನೆಯ ಮೇಲೆ ಬಿದ್ದ ಮರ:
ಬಾಗಲಕೋಟೆ: ಜಿಲ್ಲೆಯ ಇಳಕಲ್ ಭಾಗದಲ್ಲಿ ಭೀಕರ ಮಳೆ ಗಾಳಿಯಿಂದಾಗಿ ತಗಡಿನ ಶೆಡ್ ಮನೆ ಮೇಲೆ ಮರ ಬಿದ್ದಿರುವಂತಹ ಘಟನೆ ನಡೆದಿದೆ. ಇಳಕಲ್ ತಾಲ್ಲೂಕಿನ ಗೋನಾಳ ಎಸ್ ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಕ್ಕಮ್ಮ ಭಂಗಿ ಎಂಬುವರ ಮನೆ ಮೇಲೆ ಮರ ಬಿದ್ದಿದೆ. ಅದೃವಶಾತ್ ಯಾವುದೆ ಜೀವ ಹಾನಿ ಸಂಭವಿಸಿಲ್ಲ. ಇಳಕಲ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು, ಕೃತಜ್ಞತೆ ತಿಳಿಸಿದ ಉಕ್ರೇನ್