AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಕೆಲಸ ಕಳಕೊಂಡ ಇಂಜಿನಿಯರ್ ಮೈಸೂರಿನಲ್ಲಿ ಅದ್ಭುತ ನಕಲಿ ನೋಟು ತಯಾರಿಸುತ್ತಿದ್ದ; ಹರಿಹರ ಪೊಲೀಸರಿಗೆ ಸಿಕ್ಕಿಬಿದ್ದ!

ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಇಂಜಿನಿಯರ್ ಮೈಸೂರಿನಲ್ಲಿ ರಿಸರ್ವ್​​ ಬ್ಯಾಂಕಿನ ನೋಟು ಮುದ್ರಣ ಘಟಕಕ್ಕೆ ಹತ್ತಿರದ ಕೂರಗಳ್ಳಿಮೇಗಲದಲ್ಲಿ ರೂಮ್ ಮಾಡಿಕೊಂಡಿದ್ದ. ರೂಮಿನಲ್ಲಿ ಈತ ನೈಜ ನೋಟು ಮುದ್ರಣ ಘಟಕಕ್ಕಿಂತಲೂ ಅದ್ಭುತವಾಗಿ ನೋಟು ತಯಾರಿಸುತ್ತಿದ್ದ!

ಕೊರೊನಾದಿಂದ ಕೆಲಸ ಕಳಕೊಂಡ ಇಂಜಿನಿಯರ್ ಮೈಸೂರಿನಲ್ಲಿ ಅದ್ಭುತ ನಕಲಿ ನೋಟು ತಯಾರಿಸುತ್ತಿದ್ದ; ಹರಿಹರ ಪೊಲೀಸರಿಗೆ ಸಿಕ್ಕಿಬಿದ್ದ!
ಕೊರೊನಾದಿಂದ ಕೆಲಸವಿಲ್ಲದೆ ಇಂಜಿನಿಯರ್ ಖೋಟಾ ನೋಟು ತಯಾರಿಸುತ್ತಿದ್ದ!
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Jan 27, 2024 | 11:22 AM

ಅಲ್ಲೊಬ್ಬನ ಕೈಯಲ್ಲಿ ಗರಿ ಗರಿ ನೋಟು ಕಾಣುತ್ತಿದ್ದವು. ಬೀಡಿ ಸಿಗರೇಟ್ ಗೂ ಪರದಾಡುತ್ತಿದ್ದ ವ್ಯಕ್ತಿ ಕೈಯಲ್ಲಿ ನೋಟ್ ನೋಡಿ ಜನಕ್ಕೆ ಸಂಶಯ ಬಂದಿತ್ತು. ಮೇಲಾಗಿ ಸಂಜೆ ಆಗುತ್ತಿದ್ದಂತೆ ಇಸ್ಪೀಟ್ ಆಟಕ್ಕೆ ಕುಳಿತುಕೊಳ್ಳಲು ಶುರು ಮಾಡಿದ್ದ. ಸೋತರು ಗೆದ್ದರು ಮುಖದ ಹಾವ ಭಾವ ಮಾತ್ರ ಬದಲಾಗುತ್ತಿರಲಿಲ್ಲ. ಇದೇ ಸಂಶಯ ಬಂದು ಆತನ ನೋಟ-ನೋಟು ಗಮನಿಸಿ ಓರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ. ಎಂಬಿಎ ಮುಗಿಸಿದ್ದ ಇಂಜಿನಿಯರ್ ನೋಟುಗಳ ಸೃಷ್ಟಿಕರ್ತನಾಗಿದ್ದಾನೆ. ಇಲ್ಲಿದೆ ನೋಡಿ ಕೋಟಾ ನೋಟು ಕಿಲಾಡಿಗಳು ಸ್ಟೋರಿ.

ಫೋಟೋದಲ್ಲಿರುವ ಈತನನ್ನೊಮ್ಮೆ ನೋಡಿ. ಹೆಸರು ತಳವಾರ ಕುಬೇರಪ್ಪ ಅಂತಾ. ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ನಿವಾಸಿ. ಈತನನನ್ನ ಬಂಧಿಸಿದಾಗ ಈ ಕೋಟಾ ನೋಟು ರಾಮಾಯಣ ಬಯಲಾಗಿದೆ ನೋಡಿ. ಎಲ್ಲಿ ನೋಡಿದರಲ್ಲಿ ಐದು ನೂರು ಹಾಗೂ ಎರಡು ನೂರು ಮುಖ ಬೆಲೆಯ ನೋಟುಗಳು. ಪೊಲೀಸರು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ತಂದಿದ್ದರು.

ಇದು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಡಿಸಿಆರ್ ಬಿ‌ ಪೊಲೀಸರ ಕಾರ್ಯಾಚಣೆ ನಡೆಸಿದಾಗ ಸಿಕ್ಕ ಖೋಟಾ ನೋಟುಗಳು. ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಓರ್ವ ಇಂಜಿನಿಯರ್ ಸೇರಿ ಆರು ಜನರ ಗ್ಯಾಂಗ್ ವೊಂದನ್ನ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಬರೋಬರಿ 7.70 ಲಕ್ಷ ರೂಪಾಯಿ ಮೌಲ್ಯದ ಐದು ನೂರು ಹಾಗೂ ಎರಡು ನೂರು ಮುಖಬೆಲೆಯ ಖೋಟಾ ನೋಟು ವಶಪಡಿಸಿಕೊಂಡಿದ್ದಾರೆ.

ಖೋಟಾ ನೋಟು ತಯಾರು‌ ಮಾಡಲು ಬಳಸುತ್ತಿದ್ದ ‌ಲ್ಯಾಪ್ ಟಾಪ್ ಸೇರಿ‌ ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ ಪಡಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ಕುಬೇರಪ್ಪ ತಳವಾರ್, ಹರೀಶ್ ಗೌಡ, ಶಿವಮೊಗ್ಗದ ಭದ್ರಾವತಿ ಮೂಲದ ಇಂಜಿನಿಯರ್ ಜೆ. ರುದ್ರೇಶ್, ಮೈಸೂರಿನ ಮನೋಜ್ ಗೌಡ, ಮಂಡ್ಯದ ಸಂದೀಪ್ ಹಾಗೂ ಚಿತ್ರದುರ್ಗ ಮೂಲದ ಕೃಷ್ಣ ನಾಯ್ಕ ಬಂಧಿತ ಆರೋಪಿಗಳು.

ಆರೋಪಿ ಇಂಜಿನಿಯರ್ ಜೆ ರುದ್ರೇಶ ಎಂಬಾತನೇ ಮೈಸೂರಿನ ಕೂರಗಳ್ಳಿಮೇಗಲ ಕೊಪ್ಪಲುನಲ್ಲಿ ರೂಮ್ ಮಾಡಿಕೊಂಡು ಖೋಟಾನೋಟು ತಯಾರಿಕೆ ಮಾಡುತ್ತಿದ್ದ. ಈತ ಕೊರೊನಾ ಸಂಕಷ್ಟದ ಕಾಲದಲ್ಲಿ ಉದ್ಯೋಗವಿಲ್ಲದೇ ಖೋಟಾ ನೋಟು ತಯಾರಿಕೆಯಲ್ಲಿ ತೊಡಗಿದ್ದಾಗಿ ಕಿಲಾಡಿ ಇಂಜಿನಿಯರ್ ಒಪ್ಪಿಕೊಂಡಿದ್ದಾನೆ.

ಕೊರೊನಾ ದಲ್ಲಿ ಕೆಲ್ಸಾ ಕಳೆದುಕೊಂಡು ಕೆಲ ತಿಂಗಳು ಕೋಳಿ ಫಾರ್ಮ್​​ ಇಟ್ಟುಕೊಂಡಿದ್ದ ಇಂಜಿನಿಯರ್ ರುದ್ರೇಶ್. ವಿಶೇಷವಾಗಿ ಮೈಸೂರಿನಲ್ಲಿ ರಿಸರ್ವ್​​ ಬ್ಯಾಂಕಿನ ನೋಟು ಮುದ್ರಣ ಘಟಕಕ್ಕೆ ಹತ್ತಿರದ ಕೂರಗಳ್ಳಿಮೇಗಲದಲ್ಲಿ ರೂಮ್ ಮಾಡಿಕೊಂಡಿದ್ದ. ರೂಮ್ ನಲ್ಲಿ ಈತ ನೈಜ ನೋಟು ಮುದ್ರಣ ಘಟಕಕ್ಕಿಂತಲೂ ಅದ್ಭುತವಾಗಿ ನೋಟು ತಯಾರಿಸುತ್ತಿದ್ದ. ಇವುಗಳನ್ನ ಪೆಟ್ರೋಲ್ ಬಂಕ್​ ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ನೀಡಿ ವಂಚಿಸುತ್ತಿದ್ದರು.

ಇಂತಹ ಕೆಲಸ ಮಾಡುವುದರಲ್ಲಿ ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ತಳವಾರ ಕುಬೇರಪ್ಪ ಚಾಲಾಕಿ. ಈತನಿಗೆ ಲಿಂಕ್ ಆಗಿ ಐಗೂರ ಲಿಂಗಾಪುರದ ನಿವಾಸಿ ಹರೀಶ್ ಗೌಡ ಕೆಲ್ಸಾ ಮಾಡುತ್ತಿದ್ದ. ಪರಸ್ಪರ ಇವರು ಸಿಕ್ಕಿದ್ದು ಮಾತ್ರ ವಿಚಿತ್ರ. ಇಸ್ಪೀಟ್ ಆಟಕ್ಕೂ ಖೋಟಾ ನೋಟು ಬಳಸಿದ್ದಾರೆ. ಇಸ್ಪೀಟ್ ಆಟದಲ್ಲಿ ಅದು ನಕಲಿ ನೋಟು ಎಂದು ಗೊತ್ತಾಗಿದೆ. ಮಾಹಿತಿ ಬಂದ ಬಳಿಕ ಇವರನ್ನ ವಶಕ್ಕೆ ಪಡೆದು ನೋಡಿದಾಗ ಖೋಟಾ ನೋಟು ಸಿಕ್ಕಿವೆ. ಆಗ ದಾವಣಗೆರೆ ಪೊಲೀಸರು ಮೈಸೂರಿಗೆ ಪ್ರಯಾಣ ಬೆಳಸಿದ್ದಾರೆ. ಅಲ್ಲಿ ನೋಡಿದರೆ ಕೋಟಾ ನೋಟು ತಯಾರಿ ಲೋಕ ಅನಾವರಣಗೊಂಡಿದೆ.

ಕೊರೊನಾದಲ್ಲಿ ಉದ್ಯೋಗ ಕಳೆದುಕೊಂಡ ಇಂಜಿನಿಯರ್ ರುದ್ರೇಶ ಭದ್ರಾವತಿ ಬಿಟ್ಟು ಮೈಸೂರು ಸೇರಿ ಇಂತಹ ಅಪರಾಧ ಕೃತ್ಯ ಮಾಡುತ್ತಿದ್ದ. ಈತ ಇತ್ತೀಚಿಗೆ ಅಂದ್ರೆ ಕೊರೊನಾ ನಂತರ ನೋಟು ಸಿದ್ದಪಡಿಸುತ್ತಿದ್ದ. ಆದ್ರೆ ಇಲ್ಲಿನ ಆರೋಪಿಗಳ ಪಟ್ಟಿಯಲ್ಲಿ ನಂಬರ್ ಓನ್ ಆಗಿರುವ ತಳವಾರ ಕುಬೇರಪ್ಪ ವಿರುದ್ಧ ಹೊಸಪೇಟೆಲ್ಲಿ ಖೋಟಾ ನೋಟು ವಿಚಾರದಲ್ಲಿಯೇ ಕೇಸ್ ಬುಕ್ ಆಗಿದೆ. ಇದರ ಹಿಂದಿನ ರಹಸ್ಯವನ್ನ ಪೊಲೀಸರು ಪತ್ತೆ ಹಚ್ಚಬೇಕಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.