ಬೆಳಗಾವಿ: ರಾತ್ರಿ ಮನೆಯಿಂದ ಆಚೆ ಹೋದವ ಬರ್ಬರವಾಗಿ ಕೊಲೆಯಾದ, ಆಂಟಿಗಾಗಿ ಬಿತ್ತು ಹೆಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2023 | 7:58 AM

ಆತನ ಒಂದು ಕೈ ಸರಿ‌ ಇಲ್ಲದಿದ್ರೂ ತನ್ನ ಕಾಲ ಮೇಲೆ ತಾನು ನಿಂತುಕೊಂಡು ಊರಲ್ಲಿ ನಾಲ್ಕು ಜನರಿಗೂ ಬೇಕಾಗಿದ್ದ, ಮನೆ ನಿಭಾಯಿಸುವುದರ ಜೊತೆಗೆ ಗ್ರಾಮಸ್ಥರಿಗೆ ಸಣ್ಣ ಪುಟ್ಟ ಕೆಲಸ ಮಾಡಿ ಕೊಡುತ್ತಾ ಅನುಕೂಲಕರವಾಗಿದ್ದ. ಹೀಗಿದ್ದವ ಅದೊಂದು ರಾತ್ರಿ ಊರ ಹೊರಗೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಆತ‌ ಕೊಲೆಯಾದ ಸ್ಥಿತಿ ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ರೇ, ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು. ಅಷ್ಟಕ್ಕೂ ಅದ್ಯಾವ ಕಾರಣಕ್ಕೆ ಅಂತೀರಾ ಇಲ್ಲಿದೆ ನೋಡಿ.

ಬೆಳಗಾವಿ: ರಾತ್ರಿ ಮನೆಯಿಂದ ಆಚೆ ಹೋದವ ಬರ್ಬರವಾಗಿ ಕೊಲೆಯಾದ, ಆಂಟಿಗಾಗಿ ಬಿತ್ತು ಹೆಣ
ಬೆಳಗಾವಿ ಕೊಲೆಯಾದ ವ್ಯಕ್ತಿ ಪವನ್​
Follow us on

ಬೆಳಗಾವಿ: ಮಗನನ್ನ ಕಳೆದುಕೊಂಡು ಗೋಳಾಡುತ್ತಿರುವ ಕುಟುಂಬಸ್ಥರು, ಎಲ್ಲರಿಗೂ ಬೇಕಾದ ಹುಡುಗ ಕೊಲೆಯಾದ ವಿಚಾರ ಕೇಳಿ ಶಾಕ್ ಆದ ಗ್ರಾಮಸ್ಥರು, ಜಮೀನಿನ ಕಾಲು ದಾರಿಯೂದ್ದಕ್ಕೂ ಚಿಮ್ಮಿರುವ ರಕ್ತ, ಬಾವಿ ಬಳಿ ಗ್ರಾಮಸ್ಥರ ಜಮಾವಣೆ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ. ಈ ಪೋಟೋದಲ್ಲಿರುವ ಯುವಕನ ಹೆಸರು ಮಾರುತಿ ಅಲಿಯಾಸ್ ಪವನ್ ಕನ್ನೀಕರ್, 32ವರ್ಷದ ಈತನಿಗೆ ಇನ್ನೂ ಮದುವೆಯಾಗಿರಲಿಲ್ಲ. ಹೀಗಿದ್ದವ ಫೆ.20ರಂದು ಮನೆಯಲ್ಲಿ ಊಟ ಮಾಡಿಕೊಂಡು ಜಮೀನಿನಲ್ಲಿದ್ದ ಕೋಳಿ ಪಾರಂ ಗೆ ಮಲಗಲು ಹೋಗುತ್ತೇನೆ ಎಂದು ಹೊರಟು ಹೋಗಿದ್ದ ಮಾರುತಿ. ಬೆಳಗ್ಗೆ ಅನ್ನುವಷ್ಟರಲ್ಲಿ ಕೊಲೆಯಾಗಿ ಹೋಗಿದ್ದ.

ಮೃತ ಪವನ್​ ಯಾರು?

ಕೊಲೆಯಾದ ಮಾರುತಿ ಅಲಿಯಾಸ್ ಪವನ್ ಒಂದು ಕೈ ಸರಿಯಿಲ್ಲದಿದ್ರೂ ತನ್ನ ಕಾಲ ಮೇಲೆ ತಾನೂ ನಿಲ್ಲಬೇಕೆಂಬ ಉದ್ದೇಶದಿಂದ ಮನೆಯ ಒಂದು ಕೊಠಡಿಯಲ್ಲಿ ಪೋಟೋ ಸ್ಟೂಡಿಯೋ, ಜೊತೆಗೆ ಜಮೀನಿನಲ್ಲಿ ಕೋಳಿ ಪಾರಂ ಕೂಡ ಮಾಡಿ ಜೀವನ ನಡೆಸುತ್ತಿದ್ದ. ಇನ್ನೂ ಮದುವೆಯಾಗದ ಈತನಿಗೆ ಅಣ್ಣ ಮತ್ತು ಅಕ್ಕ ಇದ್ದು ಇಬ್ಬರದ್ದೂ ಮದುವೆಯಾಗಿತ್ತು. ಪವನ್ ಬರೀ ತನ್ನ ಕೆಲಸ ಅಷ್ಟೇ ಅಲ್ಲದೇ ಊರಲ್ಲಿ ರೇಷನ್ ಕಾರ್ಡ್ ಮಾಡಿಕೊಡುವುದರಿಂದ ಹಿಡಿದು ಸಣ್ಣ ಪುಟ್ಟ ಸಹಾಯ ಮಾಡುತ್ತ ಎಲ್ಲರಿಗೂ ಬೇಕಾಗಿದ್ದ. ಇದರ ಜೊತೆಗೆ ಜಮೀನಿನಲ್ಲಿ ಕಬ್ಬು ಕೂಡ ಬೆಳೆಯುತ್ತಿದ್ದು ಅದೆಲ್ಲವನ್ನೂ ಪವನ್ ನಿಭಾಯಿಸಿಕೊಂಡು ಹೋಗುತ್ತಿದ್ದ. ಇತ ದಿನನಿತ್ಯ ಜಮೀನಿನಲ್ಲಿದ್ದ ಕೋಳಿ ಪಾರಂಗೆ ಮಲಗಲು ಹೋಗುತ್ತಿದ್ದ. ಅದರಂತೆ ಫೆ.20ರಂದು ಮಲಗಲು ಮನೆಯಿಂದ ಹೋಗಿದ್ದಾನೆ. ರಾತ್ರಿ ಒಂಬತ್ತು ಗಂಟೆಗೆ ಮನೆಯಿಂದ ಹೋದವ ನಂತರ ಯಾರ ಪೋನ್ ಕೂಡ ರಿಸೀವ್ ಮಾಡಿಲ್ಲ. ಮಲಗಿರಬಹುದು ಅಂತಾ ಸುಮ್ಮನಾಗಿದ್ದ ಕುಟುಂಬಸ್ಥರು ಮಾರನೇ ದಿನ ಹತ್ತು ಗಂಟೆಯಾದ್ರೂ ಪವನ್ ಮನೆಗೆ ಬಾರದಿದ್ದಾಗ ಜಮೀನಿಗೆ ಹೋಗಿ ನೋಡಿದ್ದಾರೆ. ಅಲ್ಲಿ ಕಾಣದಿದ್ದಾಗ ಪವನ್‌ಗಾಗಿ ಎಲ್ಲರೂ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎಲ್ಲಿಯೂ ಬಂದಿಲ್ಲ ಅಂದಾಗ ಮತ್ತೆ ಗ್ರಾಮದ ಕಡೆ ಹುಡುಕಾಟ ನಡೆಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಬೈಕ್ ಬಿದ್ದ ಒಂದು ಕಿಮೀ ದೂರದಲ್ಲಿರುವ ಬಾವಿಯೊಂದರಲ್ಲಿ ಪವನ್ ಸಿಕ್ಕಿದ್ದಾನೆ . ಕೂಡಲೇ ಮಾರಿಹಾಳ ಪೊಲೀಸರಿಗೆ ಗ್ರಾಮಸ್ಥರು ಸುದ್ದಿಮುಟ್ಟಿಸಿದ್ದಾರೆ.

ಇದನ್ನೂ ಓದಿ:ಕೊಲೆಯನ್ನೂ ಮೀರಿಸೋ ರೀತಿಯಲ್ಲಿ ವ್ಯಕ್ತಿ ಸೂಸೈಡ್; ಚಾಕುವಿನಿಂದ ಎರ್ರಾಬಿರ್ರಿ ಇರಿದುಕೊಂಡು ಆತ್ಮಹತ್ಯೆ

ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಮಾರಿಹಾಳ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾವಿಯಿಂದ 200ಮೀಟರ್ ದೂರದ ಕಾಲು ದಾರಿಯಲ್ಲಿ ರಕ್ತ ಚಿಮ್ಮಿರುವುದನ್ನ ಕಂಡು ಪವನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಯಾರೋ ಆತನನ್ನ ಕೊಲೆ ಮಾಡಿ ಶವ ಎಸೆದಿದ್ದಾರೆ ಎಂದು ಗೊತ್ತಾಗಿದೆ. ಕೂಡಲೇ ಬಾವಿಯಿಂದ ಶವವನ್ನ ಮೇಲೆತ್ತಿದ ಪೊಲೀಸರು ಶವವನ್ನ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಬೈಕ್ ಬಿದ್ದ ಜಾಗ, ರಕ್ತ ಬಿದ್ದಿರುವ ಜಾಗ ಹಾಗೂ ಬಾವಿ ಬಳಿ ಪರಿಶೀಲನೆ ನಡೆಸಿ ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ. ಜೊತೆಗೆ ಬೈಕ್ ಬಿದ್ದ ಕಡೆ ಎಣ್ಣೆ ಬಾಟಲ್​ಗಳು ಬಿದ್ದಿರುವುದನ್ನ ಕಂಡು ಪಾರ್ಟಿ ಮಾಡಿ ಕೊಲೆ ಮಾಡಿರಬಹುದು ಅನ್ನೋ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. ಮೊದಲು ಸ್ನೇಹಿತರಿಂದಲೇ ಹಣಕ್ಕಾಗಿ ಈ ಕೃತ್ಯ ಎಸಗಿರಬಹುದು ಅಂದುಕೊಂಡ ಪೊಲೀಸರು ಅದೇ ಆಯಾಮದಲ್ಲಿ ವಿಚಾರಣೆ ನಡೆಸಿದ್ದರು.

ತನಿಖೆ ಚುರುಕುಗೊಳಿಸಿದ ಪೊಲೀಸರು

ಆತನ ಅಂತ್ಯಕ್ರಿಯೆ ಆದ ಮಾರನೇ ದಿನ ತನಿಖೆ ಚುರುಕುಗೊಳಿಸಿದ ಮಾರಿಹಾಳ ಠಾಣೆ ಪೊಲೀಸರು ಪವನ್‌ಗೆ ಕೊನೆಯದಾಗಿ ಬಂದಿದ್ದ ಪೋನ್ ಕರೆ ಮಾಹಿತಿ ಪಡೆದಿದ್ದಾರೆ. ಯಾವ ನಂಬರ್​ನಿಂದ ಪೋನ್ ಬಂದಿತ್ತು. ಅನ್ನೋದನ್ನ ತೆಗೆದು ಆತನ ಹಿಂದೆ ಬಿದ್ದಿದ್ದಾರೆ. ಇತ್ತ ಆತನ ಗೆಳೆಯರನ್ನೂ ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ವಿಚಾರ ಗೊತ್ತಾಗಿಲ್ಲ. ಕೊನೆಯದಾಗಿ ಕರೆ ಮಾಡಿದ್ದವನನ್ನ ಎತ್ತಿಹಾಕಿಕೊಂಡು ಬಂದ ಪೊಲೀಸರು ತಮ್ಮದೇ ಭಾಷೆಯಲ್ಲಿ ಒಂದು ರೌಂಡ್ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಸತ್ಯ ಬಾಯಿ ಬಿಟ್ಟಿದ್ದಾನೆ.

ಇದನ್ನೂ ಓದಿ: ಓಡಿ ಹೋದ ಪ್ರೇಮಿಗಳ ಕುಟುಂಬದ ನಡುವೆ ಗಲಾಟೆ; ನ್ಯಾಯ ಪಂಚಾಯ್ತಿ ಮಾಡಲು ಹೋಗಿ ಕೊಲೆಯಾದ

ಆಂಟಿ ವಿಚಾರಕ್ಕಾಗಿ ಕೊಲೆ

ಪೊಲೀಸರ ವಿಚಾರಣೆಯಲ್ಲಿ ಆರೋಪಿ ಸೋಮನಾಥ್ ಗೋಮನಾಚಿ ಬಾಯಿಬಿಟ್ಟಿದ್ದು ಅದೊಂದು ಆಂಟಿ ವಿಚಾರ. ಪವನ್ ಹಾಗೂ ಸೋಮನಾಥ್ ಇಬ್ಬರದ್ದು ಬೇರೆ ಗ್ರಾಮ. ಆರೋಪಿ ಸೋಮನಾಥ್ ಬಸರಿಕಟ್ಟಿ ಗ್ರಾಮದ ಪಕ್ಕದಲ್ಲಿರುವ ನಿಲಜಿ ಗ್ರಾಮದ ನಿವಾಸಿ. ಆದರೆ ಇವರ ನಡುವೆ ವೈರತ್ವಕ್ಕೆ ಕಾರಣವಾಗಿದ್ದು ಬಸರಿಕಟ್ಟಿ ಗ್ರಾಮದ ಆಂಟಿ ವಿಚಾರಕ್ಕೆ. ಹೌದು ಈ ಗ್ರಾಮದ ಆಂಟಿಯೊಬ್ಬರ ಜತೆಗೆ ಆರೋಪಿ ಸೋಮನಾಥ್ ಸಂಪರ್ಕದಲ್ಲಿದ್ದ. ಇನ್ನೂ ಅದೇ ಆಂಟಿ ಜೊತೆಗೆ ಕೆಲ ದಿನಗಳ ಹಿಂದೆ ಕೊಲೆಯಾದ ಪವನ್ ಕೂಡ ಸಂಪರ್ಕಕ್ಕೆ ಬರ್ತಾನೆ. ಇಬ್ಬರು ಒಂದೇ ಆಂಟಿ ಹಿಂದೆ ಬಿದ್ದಿದ್ದೇವೆ ಅನ್ನೋದು ಕೆಲವೇ ದಿನಗಳ ಹಿಂದೆ ಹೊರ ಬರುತ್ತೆ. ಸೋಮನಾಥ್ ಆಂಟಿ ಜೊತೆ ಇದ್ದಾಗಲೇ ಕೊಲೆಯಾದ ಪವನ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಹೀಗಿದ್ದಾಗ ಪವನ್ ಇಬ್ಬರಿರುವ ಪೋಟೊಗಳನ್ನ ತೆಗೆದುಕೊಂಡಿರುತ್ತಾನೆ ಪವನ್. ಇದಾದ ಸ್ವಲ್ಪ ದಿನಕ್ಕೆ ಆಂಟಿಯನ್ನ ಬಿಟ್ಟು ಬಿಡು ಇಲ್ಲವಾದ್ರೇ ನೀನು ಆಂಟಿ ಜೊತೆಗೆ ಇರುವ ಪೋಟೊಗಳನ್ನ ಲೀಕ್ ಮಾಡುತ್ತೇನೆ ಎಂದು ಹೆದರಿಸಿರುತ್ತಾನಂತೆ ಮೃತ ಪವನ್.

ಇದರಿಂದ ಗಾಬರಿಯಾದ ಸೋಮನಾಥ್ ಪವನ್​ನ್ನು ಜೀವಂತ ಉಳಿಸಬಾರದು ಅಂದುಕೊಂಡು ಕೊಲೆ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಅದರಂತೆ ಫೆ.20ರಂದು ರಾತ್ರಿ ಗೆಳಯ ಪರಶುರಾಮ್​ನನ್ನ ಕರೆದುಕೊಂಡು ನಿಲಜಿಯಿಂದ ಬಸರಿಕಟ್ಟಿಗೆ ಆಗಮಿಸುತ್ತಾರೆ. ಪಾರ್ಟಿ ಮಾಡುವ ಉದ್ದೇಶದಿಂದ ಎಣ್ಣೆ ಪಾರ್ಸಲ್ ಸಮೇತ ಬಂದಿದ್ದ ಸೋಮನಾಥ್ ಮತ್ತು ಪರಶುರಾಮ್ ಮೊದಲು ಒಂದು ರೌಂಡ್ ಎಣ್ಣೆ ಹೊಡೆದು ಮುಗಿಸಿದ್ದಾರೆ. ಇದಾದ ಬಳಿಕ ಪವನ್‌ಗೆ ಸೋಮನಾಥ್ ಕರೆ ಮಾಡಿ ಶಾಲೆ ಬಳಿ ಬರುವಂತೆ ಹೇಳಿದ್ದಾನೆ. ಊಟ ಮಾಡಿ ಮನೆಯಲ್ಲಿ ಕುಳಿತಿದ್ದವ ಪೋನ್ ಬರ್ತಿದ್ದಂತೆ ಮನೆಯಲ್ಲಿ ಮಲಗಲು ಕೋಳಿ ಪಾರಂಗೆ ಹೋಗುತ್ತನೆ ಎಂದು ಹೊರಟು ಹೋಗಿದ್ದಾನೆ‌.

ಇನ್ನು ಪವನ್ ಬರ್ತಿದ್ದಂತೆ ಆತನ ಮೊಬೈಲ್​ನಲ್ಲಿದ್ದ ಪೋಟೊಗಳನ್ನ ಡಿಲಿಟ್ ಮಾಡುವಂತೆ ಹೇಳಿದ್ದಾನೆ. ಇದಕ್ಕೆ ಪವನ್ ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ.‌ ಇದಾದ ಬಳಿಕ ಅಲ್ಲೇ ಇದ್ದ ಕಲ್ಲು ಎತ್ತಿ ಪವನ್ ತಲೆ ಮೇಲೆ ಹಾಕಿದ್ದಾರೆ. ಜಮೀನಿಗೆ ಹೋಗುವ ಕಾಲು ದಾರಿಯಲ್ಲಿ ಆತನನ್ನ ಕೊಂದು ಬಳಿಕ ಶವವನ್ನ ಕೈಯಲ್ಲಿ ಎತ್ತಿಕೊಂಡು ಅಲ್ಲೇ ಇದ್ದ ಬಾವಿಯೊಂದಕ್ಕೆ ಎಸೆದು ಎಸ್ಕೇಪ್ ಆಗಿದ್ದಾರೆ. ಕೊನೆಯ ಕಾಲ್ ಆಧಾರದ ಮೇಲೆ ಆರೋಪಿಗಳಾದ ಸೋಮನಾಥ್ ಮತ್ತು ಪರಶುರಾಮ್ ನನ್ನ ಬಂಧಿಸಿ ಪೊಲೀಸರುಬ ಜೈಲಿಗಟ್ಟಿದ್ದಾರೆ‌.

ಇದನ್ನೂ ಓದಿ:Bengaluru: ಪ್ರೀತಿಸಿ ಅವೈಡ್ ಮಾಡಿದ ಪ್ರಿಯತಮೆ; ಮನಸೋ ಇಚ್ಛೆ ಇರಿದು ಯುವತಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ!

ಒಟ್ಟಾರೆ ಊರಿಗೆ ಬೇಕಾದ, ಮನೆಗೆ ಆಧಾರವಾಗಿದ್ದ ಪವನ್​ ಬರ್ಬರವಾಗಿ ಹತ್ಯೆಯಾಗಿದ್ದು ಇಡೀ ಗ್ರಾಮಸ್ಥರ ನಿದ್ದೆಗೆಡಸಿದೆ. ಅದೇನೆ ಇರಲಿ ತನ್ನ ಪಾಡಿಗೆ ತಾನಿದ್ದು ತಾನೇ ದುಡಿದು ನೆಮ್ಮದಿಯಿಂದ ಜೀವನ ಕಟ್ಟಿಕೊಳ್ಳುತ್ತಿದ್ದವ ಆಂಟಿ ಹಿಂದೆ ಬಿದ್ದು ಹಾಳಾದ್ನಾ ಅನ್ನೋದು ಒಂದು ಕಡೆಯಾದರೆ, ಕೊಲೆ ಮಾಡಿ ಆರೋಪಿ ಸುಳ್ಳು ಹೇಳಿಕೆ ಕೊಡುತ್ತಿದ್ದಾನಾ ಅನ್ನೋ ಆಯಾಮದಲ್ಲಿ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆಂಟಿಯನ್ನ ಕರೆದು ವಿಚಾರಣೆ ಕೂಡ ನಡೆಸಿದ್ದು ಇದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಆದರೆ ಮನೆಗೆ ಆಧಾರವಾಗಿದ್ದ ಮಗನನ್ನ ಕಳೆದುಕೊಂಡು ಕುಟುಂಬಸ್ಥರು ಮಾತ್ರ ಗೋಳಾಡುತ್ತಿರುವುದು ಹೇಳತೀರದ್ದಾಗಿದೆ.

ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 am, Mon, 6 March 23