Bengaluru News: ಕೋರ್ಟ್​​ಗೆ ಹಾಜರುಪಡಿಸಲು ಕರೆತಂದಿದ್ದ ಆರೋಪಿ ಠಾಣೆಯಲ್ಲೇ ಸಾವು

| Updated By: Rakesh Nayak Manchi

Updated on: Jan 05, 2023 | 2:55 PM

2017ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಕೋರ್ಟ್​​ಗೆ ಹಾಜರುಪಡಿಸಬೇಕಿತ್ತು. ಆದರೆ ಬೆಳಗ್ಗೆ ಆರೋಪಿ ಮೃತಪಟ್ಟಿದ್ದಾನೆ.

Bengaluru News: ಕೋರ್ಟ್​​ಗೆ ಹಾಜರುಪಡಿಸಲು ಕರೆತಂದಿದ್ದ ಆರೋಪಿ ಠಾಣೆಯಲ್ಲೇ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪ್ರಕರಣವೊಂದರಲ್ಲಿ ಭಾಗಿಯಾಗಿ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ನಿನ್ನೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಲ್ಲದೆ ಇಂದು ಕೋರ್ಟ್​​ಗೆ ಹಾಜರುಪಡಿಸುವ ಮುನ್ನವೇ ಸಾವನ್ನಪ್ಪಿದ ಘಟನೆ (Accused died at Cottonpet police station) ನಗರದ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆರೋಪಿ ವಿನೋದ್​ನನ್ನು ಬುಧವಾರ (ಜನವರಿ 04)ದಂದು ಬಂಧಿಸಿದ ನಗರದ ಕಾಟನ್​ಪೇಟೆ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಬೇಕಿತ್ತು. ಆದರೆ ಬೆಳಗ್ಗೆ ವಿನೋದ್ ಜ್ಞಾನತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ಕೊಂಡೊಯ್ದಾಗ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

2017ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರೋಪಿ ವಿನೋದ್, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಹಿನ್ನಲೆ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಅದರಂತೆ ಕಾಟನ್​ಪೇಟೆ ಪೊಲೀಸರು ವಿನೋದ್​ನನ್ನು ನಿನ್ನೆ ವಶಕ್ಕೆ ಪಡೆದಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು.​ ಆದರೆ ಇಂದು ಮುಂಜಾನೆ ಆರೋಪಿ ವಿನೋದ್​​ ಜ್ಞಾನತಪ್ಪಿ ಬಿದ್ದಿದ್ದನು. ಬೆಳಗಿನ ಜಾವ 3.45ರ ಸುಮಾರಿಗೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ವಿನೋದ್​ನನ್ನು ನೋಡಿದ ಪೊಲೀಸರು ಕೂಡಲೇ ವಿಕ್ಟೋರಿಯಾ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ಮುನ್ನವೇ ವಿನೋದ್ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಡಿಫರೆಂಟ್ ಆಗಿ ಮನೆಗಳ್ಳತನ ಮಾಡುತ್ತಿದ್ದ ಟಚ್ ಗಣೇಶನನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಪ್ರಕರಣ ಸಿಐಡಿಗೆ ವರ್ಗಾವಣೆ

ಲಾಕಪ್ ಡೆತ್ ಪ್ರಕರಣ ಸಂಬಂಧ ಹೇಳಿಕೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕಾಟನ್ ಪೇಟೆಯಲ್ಲಿ‌ 2017ರಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ. ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿರುತ್ತದೆ. ನಿನ್ನೆ ಸಂಜೆ ವಿನೋದ್​ನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾತ್ರಿ ವೇಳೆ ಠಾಣೆಯಲ್ಲಿ ಮಲಗಿದ್ದಾನೆ. ಬೆಳ್ಳಗ್ಗೆ 3:45 ಸಮಯದಲ್ಲಿ ನಮ್ಮ ಸಿಬ್ಬಂದಿ ಹೋಗಿ ಎಬ್ಬಿಸಿದಾಗ ಎದ್ದಿಲ್ಲ. ಹೀಗಾಗಿ ಕೊಡಲ್ಲೇ ಆತನನ್ನು ಆಸ್ಪತ್ರೆಗೆ‌ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದಾಗ ಮಾರ್ಗ‌ಮಧ್ಯೆ ಮೃತಪಟ್ಟಿದ್ದಾನೆ. ಈಗ ಪ್ರಕರಣ CRPC 176 ಅಡಿಯಲ್ಲಿ ದಾಖಲಿಸಿಕೊಂಡಿದ್ದೇವೆ. ಲಾಕಪ್ ಡೆತ್ ಪ್ರಕರಣದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನ ಪಾಲಿಸುತ್ತೇವೆ. ಮುಂದಿನ ತನಿಖೆಗೆ ಪ್ರಕರಣವನ್ನ‌ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಬಜಾಜ್ ಫೈನಾನ್ಸ್ ಕಾರ್ಡ್ ಗ್ರಾಹಕರೇ.. ನಿಮ್ಮ ಕಾರ್ಡ್​ ಬಳಸಿ ಶಾಪಿಂಗ್ ಮಾಡೋ ವಂಚಕರಿದ್ದಾರೆ ಎಚ್ಚರ

ಪೊಲೀಸರಿಗೆ ತಲೆನೋವಾಗಿ ಕಾಡುತ್ತಿರುವ ನೇಪಾಳಿಗಳು

ನಗರಕ್ಕೆ ಕೆಲಸಕ್ಕೆ ಬಂದು ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಕೆಲವು ನೇಪಾಳಿಗಳು ಪೊಲೀಸರ ತಲೆನೋವಿಗೆ ಕಾರಣರಾಗಿದ್ದಾರೆ. ನೇಪಾಳಿ ದಂಪತಿ ಮನೆಯಲ್ಲಿ ಯಾರು ಇಲ್ಲದನ್ನೆ ಟಾರ್ಗೆಟ್ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಡಿಆರ್ ಮತ್ತು ನೆಟ್ ವರ್ಕ್ ಡಂಪ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.

ಕಳೆದ 9 ವರ್ಷಗಳಿಂದ ಗೋಲ್ಡನ್ ಬೆಲ್ ಅಪಾರ್ಟ್​​ಮೆಂಟ್​​ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಮತ್ತು ಜಯಂತಿ ಅಲ್ಲಿನ ನಿವಾಸಿಗಳ ನಂಬಿಕೆ ಗಳಿಸಿದ್ದರು. ಆದರೆ ದಂಪತಿಯೊಂದು ಮೂರು ದಿನ ಕೊಡಗಿಗೆ ಹೋಗಿದ್ದಾಗ ಆ ಮನೆಯನ್ನು ಟಾರ್ಗೆಟ್ ಮಾಡಿದ ಶಿವರಾಜ್ ಮತ್ತು ಜಯಂತಿ 230 ಗ್ರಾಂ ಚಿನ್ನಾಭರಣ, 2 ಲ್ಯಾಪ್​​ಟಾಪ್ ಕದ್ದು ಪರಾರಿಯಾಗಿದ್ದಾರೆ. ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಡಿಆರ್ ಮತ್ತು ನೆಟ್​​ವರ್ಕ್ ಡಂಪ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ನಂಬರ್​​ನಿಂದ ಯಾರಿಗೆಲ್ಲ ಕರೆ ಹೋಗಿದೆ? ಕೊನೆಯದಾಗಿ ಆರೋಪಿಗಳು ಯಾರಿಕೆ ಕರೆ ಮಾಡಿದ್ದಾರೆ ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಹೆಸರಲ್ಲಿ ಯಾವುದಾದರೂ ಟಿಕೆಟ್ ಬುಕ್ ಅಗಿದಿಯಾ ಎಂದು ಬಸ್ ಬುಕ್ಕಿಂಗ್ ಸೆಂಟರ್​​ಗಳಲ್ಲಿ ಹಾಗೂ ರೈಲ್ವೆನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್​​ನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Thu, 5 January 23