ಎಂಎಲ್ಸಿ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ನ ಚಿನ್ನ ಕಳವು
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 1.249 ಕೆಜಿ 22 ಕ್ಯಾರಟ್ ಚಿನ್ನದ ಬಳೆಗಳು ಕಳುವಾಗಿವೆ. ಜನವರಿ 14 ರಂದು ಹಾಲ್ ಮಾರ್ಕಿಂಗ್ಗಾಗಿ ಕಳುಹಿಸಲಾದ ಚಿನ್ನ ಕಳುವಾಗಿದೆ. ಚಿನ್ನವನ್ನು ವಾಪಸ್ ನೀಡುವಂತೆ ಹಾಲ್ ಮಾರ್ಕಿಂಗ್ ಅಂಗಡಿ ಮಾಲೀಕ ಭರತ್ ಚಾಟಡ್ ಕೇಳಿದರೇ, ನಮ್ಮ ಅಂಗಡಿ ಕೆಲಸಗಾರ ಚಿನ್ನ ಕದ್ದು ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.

ಬೆಂಗಳೂರು, ಜನವರಿ 21: ವಿಧಾನ ಪರಿಷತ್ ಸದಸ್ಯ ಶರವಣ (Sharavana) ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ (Sri Sai Gold Palace) ಚಿನ್ನ ಕಳುವಾಗಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಭೀಮರಾಜು ನೌಕರ ಭರತ್ ಕುಮಾರ್ ರಾವಲ್ ಎಂಬುವವರಿಗೆ ಸಂಸ್ಥೆಯ ಪರವಾಗಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಮಾಡಿಸಿಕೊಂಡು ಬರಲು ಜನವರಿ 14 ರಂದು ಸಂಜೆ 05:30ರ ಸುಮಾರಿಗೆ 1 ಕೆಜಿ 249 ಗ್ರಾಂ ಚಿನ್ನದ ಬಳೆಗಳು (22 ಕ್ಯಾರೇಟ್) ಕೊಟ್ಟು ನಗರತ್ ಪೇಟೆಯಲ್ಲಿನ ಭರತ್ ಚಾಟಡ್ರವರ ಮಾಲೀಕತ್ವದ ಕೋನಾರ್ಕ್ ಹಾಲ್ ಮಾರ್ಕಿಂಗ್ ಮತ್ತು ಆಸೆಯಿಂಗ್ ಸೆಂಟರ್ಗೆ ಕಳುಹಿಸಿದ್ದಾರೆ.
ಭರತ್ ಕುಮಾರ್ ಬಂಗಾರದ ಬಳೆಗಳನ್ನು ಭರತ್ ಚಾಟಡ್ಗೆ ಕೊಟ್ಟಿದ್ದು, ಪ್ಯಾಕಿಂಗ್ ಲಿಸ್ಟ್ ಎಂಬ ಹೆಸರಿನಲ್ಲಿ ರಸೀದಿ ನೀಡಿದ್ದಾರೆ. ಮರುದಿನ ಜನವರಿ 15 ರಂದು ಭರತ್ ಚಾಟಡ್ ಬಳಿ ಹೋಗಿ ಹಾಲ್ ಮಾರ್ಕಿಂಗ್ಗಾಗಿ ಕೊಟ್ಟಿದ್ದ ಚಿನ್ನದ ಬಳೆಗಳನ್ನು ವಾಪಸ್ ನೀಡಿ ಎಂದು ಮ್ಯಾನೇಜರ್ ಭೀಮರಾಜು ಕೇಳಿದ್ದಾರೆ.
ಇದನ್ನೂ ಓದಿ: ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ. ಕಾರಿನಲ್ಲೇ ಪ್ರಯಾಣಿಸಿದ್ದ ದರೋಡೆಕೋರರು!
ಆಗ, ಭರತ್ ಚಾವಡ್ “ನೀವು ನೀಡಿದ್ದ ಎಲ್ಲ ಚಿನ್ನದ ಬಳೆಗಳನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ” ಎಂದು ಹೇಳಿದ್ದಾರೆ. ಈ ಸಂಬಂಧ ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟಡ್ ವಿರುದ್ಧ ದೂರು ದಾಖಲಿಸಿದ್ದಾರೆ.
ಚಿನ್ನ ಕದ್ದ ಆರೋಪಿಗಳು ಒಂದೇ ಗಂಟೆಯಲ್ಲಿ ಅರೆಸ್ಟ್
ಬೈಕ್ನಲ್ಲಿ ಬಂದು ಮಾಂಗಲ್ಯ ಸರ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಒಂದೇ ಗಂಟೆಯಲ್ಲಿ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳೆತಿಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ ಲಿಖಿತ ಹೆಚ್.ಆರ್. ಎಂಬ ಮಹಿಳೆ ಜಮೀನಿನಲ್ಲಿ ಹೂವು ಬಿಡುಸುತ್ತಿದ್ದರು. ಈ ವೇಳೆ ಕಳ್ಳರು ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ಮಹಿಳೆ ತಕ್ಷಣ ಕೊಡಿಗೇನಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕಾರ್ಯಪ್ರವೃತ್ತರಾದ ಪೊಲೀಸರು, ಮಧುಗಿರಿ ಪಟ್ಟಣದ ಗೌರಿಬಿದನೂರು ರಸ್ತೆಯ ತ್ಯಾಜ್ಯ ವಿಲೇವಾರಿ ಬಳಿ ಹೋಗುತಿದ್ದ ಇಬ್ಬರನ್ನೂ ಪರಿಶೀಲಿಸಿದಾಗ ಚಿನ್ನದ ಸರ ಪತ್ತೆಯಾಗಿದೆ. ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Tue, 21 January 25