ಗೆಳೆಯನ ಜೊತೆ ಬೆಂಗಳೂರಿಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ

| Updated By: ವಿವೇಕ ಬಿರಾದಾರ

Updated on: May 24, 2024 | 8:32 AM

ಸ್ನೇಹಿತ ಸಹಾಯ ಮಾಡುತ್ತಾನೆ ಅಂತ ಯುವಕ, ಯುವತಿಗೆ ಬೆಂಗಳೂರಿಗೆ ಬಂದಿದ್ದಾರೆ. ಆದರೆ ಇಲ್ಲಿ ಸ್ನೇಹಿತ ಇವರನ್ನು ಭೇಟಿ ಸಹಿತ ಆಗಲಿಲ್ಲ. ಈಗ ಏನು ಮಾಡಬೇಕೆಂದು ತೋಚದೆ ಜಯನಗರ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಯುವಕ, ಯುವತಿ ಬಳಿ ಬಂದ ಆಟೋ ಚಾಲಕ ಇವರ ಜೊತೆ ನಡೆದುಕೊಂಡ ವರ್ತನೆ ಮಾತ್ರ ಹೀನಾಯವಾಗಿತ್ತು.

ಗೆಳೆಯನ ಜೊತೆ ಬೆಂಗಳೂರಿಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ
ಆಟೋ ಚಾಲಕ, ಕೋಣನಕುಂಟೆ ಪೊಲೀಸ್ ಠಾಣೆ​
Follow us on

ಬೆಂಗಳೂರು, ಮೇ 24: ಊರು ಬಿಟ್ಟು ಬಂದವರಿಗೆ ಕಿರುಕುಳ ನೀಡಿದ ಆಟೋ ಚಾಲಕನ ಮೇಲೆ ಯುವಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಕೋಣನಕುಂಟೆ ಪೊಲೀಸ್ (Police)​ ಠಾಣೆ ವ್ಯಾಪ್ತಿಯಲ್ಲಿ ಗುರುವಾರ (ಮೇ 23) ಮಧ್ಯರಾತ್ರಿ ನಡೆದಿದೆ. ಮಹಮ್ಮದ್ ಅನ್ಸರ್ ಹಲ್ಲೆ ಮಾಡಿದ ಯುವಕ. ಊರು ಬಿಟ್ಟು ಬಂದವರ ಪಾಲಿಗೆ ಆಟೋ ಚಾಲಕ ಯಮನಾಗಿದ್ದು, ಆತನ ಕೈಯಿಂದ ಯುವಕ ಮತ್ತು ಯುವತಿ ತಪ್ಪಿಸಿಕೊಂಡಿದ್ದೆ ರೋಚಕ.

ಚಿಕ್ಕಮಗಳೂರು ಮೂಲದ ಯುವತಿ ತ್ರಿಷಾ, ಕೇರಳ ಮೂಲದ ಯುವಕ ಮಹಮ್ಮದ್ ಅನ್ಸರ್ ಕೆಲಸ ಅರಸಿ ಮೇ 4 ರಂದು ಬೆಂಗಳೂರಿಗೆ ಬಂದಿದ್ದಾರೆ. ಮಹಮದ್ ಅನ್ಸರ್ ಮತ್ತು ತ್ರಿಷಾ ತಮ್ಮ ಸ್ನೇಹಿತ ಚೇತನ್ ಅವರನ್ನು ಭೇಟಿ ಮಾಡಲು ಜಯನಗರ ಮೆಟ್ರೋ ಸ್ಟೇಷನ್ ಬಳಿ ಬಂದು ಕಾಯ್ದಿದ್ದರು. ಆದರೆ ಚೇತನ್ ಇವರನ್ನು ಭೇಟಿಯಾಗಲು ಬರುವುದಿಲ್ಲ. ಆಗ ತ್ರಿಷಾ ಮತ್ತು ಮಹಮದ್ ಆನ್ಸರ್ ಇಬ್ಬರೇ ಇರುವುದನ್ನು ನೋಡಿದ ಓರ್ವ ಆಟೋ ಚಾಲಕ ರಾತ್ರಿ ಸುಮಾರು 10:30 ಸುಮಾರಿಗೆ ಇವರ ಬಳಿ ಬಂದು ನೀವು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ.

ಆಗ ತ್ರಿಷಾ ಮತ್ತು ಮಹಮದ್​ ಅನ್ಸರ್​ ರೈಲ್ವೆ ನಿಲ್ದಾಣಕ್ಕೆ ಹೋಗಬೇಕು ಎಂದಿದ್ದಾರೆ. ಆಗ ಆಟೋ ಚಾಲಕ ಬನ್ನಿ ರೈಲ್ವೆ ನಿಲ್ದಾಣಕ್ಕೆ ಬಿಡುತ್ತೇನೆ ಎಂದಿದ್ದಾನೆ. ಸರಿ ಅಂತ ಯುವಕ ಮತ್ತು ಯುವತಿ ಆಟೋ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಮೇಲೆ ಆಟೋ ಚಾಲಕ, ತ್ರಿಷಾ ಮತ್ತು ಮಹಮದ್ ಅನ್ಸಾರಿ​ಗೆ ತಮಗೆ ರೂಂ ಬೇಕಾ ಎಂದು ಕೇಳಿದ್ದಾನೆ. ಆಗ ತ್ರಿಷಾ ಮತ್ತು ಮಹಮದ್ ಅನ್ಸಾರಿ ರೈಲ್ವೆ ಸ್ಟೇಷನ್​ಗೆ ಬಿಟ್ಟರೆ ಸಾಕು ಎಂದು ಹೇಳಿದ್ದಾರೆ.

ಆಗ ಆಟೋ ಚಾಲಕ “ನನ್ನದೆ ಒಂದು ಮನೆ ಪಿಳ್ಳೆಗಾನಹಳ್ಳಿಯಲಿದೆ. ಅದು ಖಾಲಿ ಇದೆ ಅದನ್ನು ನೀವು ನೋಡಿ ನಿಮಗೆ ಇಷ್ಟವಾದರೆ ಬಾಡಿಗೆಗೆ ಇರಿ” ಎಂದು ಹೇಳಿ ಕರೆದುಕೊಂಡು ಹೋಗುವಾಗ, ಆಟೋ ಚಾಲಕ ಮಧ್ಯ ದಾರಿಯಲ್ಲಿ ಆಟೋ ನಿಲ್ಲಿಸಿದ್ದಾನೆ. ಬಳಿಕ ಮದ್ಯ ತೆಗೆದುಕೊಂಡು ಅಲ್ಲಿಂದ ಪಿಳ್ಳಗಾನಹಳ್ಳಿಯಲ್ಲಿನ, ಒಂದು ಮನೆಯ ಮುಂದೆ ಆಟೋವನ್ನು ನಿಲ್ಲಿಸಿ, ಆ ಮನೆಯೊಳಗೆ ತ್ರಿಷಾ ಮತ್ತು ಮಹಮದ್ ಅನ್ಸಾರಿನನ್ನು ಕರೆದುಕೊಂಡು ಹೋಗಿದ್ದಾನೆ. ಇಷ್ಟೊತ್ತಿಗಾಗಲೆ ಸಮಯ ಮಧ್ಯರಾತ್ರಿ 12:30 ಆಗಿತ್ತು. ಆಗ ಆಟೋ ಚಾಲಕ ನಿಮಗೆ ಈಗಾಗಲೇ ತಡವಾಗಿದೆ ಇವತ್ತು ಇಲ್ಲಿಯೇ ಇದ್ದು ಬೆಳಿಗ್ಗೆ, ಎದ್ದು ಹೋಗಿ ಎಂದು ಹೇಳಿದ್ದಾನೆ. ಬಳಿಕ ಅವರ ಮುಂದೆಯೇ ಆಟೋ ಮದ್ಯ ಕುಡಿದಿದ್ದಾನೆ.

ಇದನ್ನೂ ಓದಿ: ಅಪರಿಚಿತರ ಜೊತೆ ವಿಡಿಯೋ ಕಾಲ್ ‌ಶಂಕೆ; ಪತ್ನಿ ಕೊಂದು ಪತಿ ಪರಾರಿ ಆರೋಪ

ಅಲ್ಲದೆ ಮಹಮದ್​ ಅನ್ಸರ್​ಗೂ ಸಹ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ನಂತರ ಆ ಆಟೋ ಚಾಲಕ ತ್ರಿಷಾರನ್ನು ಕರೆದು ಆತನ ಪಕ್ಕದಲ್ಲಿ, ಮಲಗು ಬಾ ಎಂದು ಹೇಳಿದ್ದಾನೆ. ಆಗ ತ್ರಿಷಾ ಭಯವಾಗಿ ಏನ್ ಅಂಕಲ್ ನೀವು ನನ್ನ ತಂದೆಯಂತೆ ಇದ್ದೀರಿ, ಎಂದು ಹೇಳಿದ್ದಾಳೆ. ಆಗ ಆಟೋ ಚಾಲಕ ಅಲ್ಲಿಯೇ ಇದ್ದ ಒಂದು ಮಚ್ಚನ್ನು ತೋರಿಸಿ ನೀನು ನನ್ನ ಜೊತೆಯಲಿ ಮಲಗಿಕೊಂಡು ನನ್ನ ಜೊತೆಯಲಿ ಸಹಕರಿಸದಿದ್ದರೆ ನಿಮ್ಮ ಇಬ್ಬರನ್ನು ಇಲ್ಲಿಯೇ ಮುಗಿಸಿ, ಎಲ್ಲಿಯಾದರೂ ಬಿಸಾಡುತ್ತೇನೆಂದು ಹೆದರಿಸಿದ್ದಾನೆ.

ಆಗ ತ್ರಿಷಾ ಹೆದರಿ ಆತನ ಹತ್ತಿರ ಹೋದಾಗ, ಆಟೋ ಚಾಲಕ ಮಚ್ಚನ್ನು ಪಕ್ಕದಲ್ಲಿ ಇಟ್ಟು ತ್ರಿಷಾ ಕೈಯನ್ನು ಗಟ್ಟಿಯಾಗಿ ನೋವಾಗುವಂತೆ ಹಿಡಿದು ತಿರುಗಿಸಿ, ಕಿಸ್ ಮಾಡಲು ಬಂದು ಸೊಂಟಕ್ಕೆ, ಎದೆಯ ಭಾಗಕ್ಕೆ ಕೈ ಹಾಕಿದ್ದಾನೆ. ಆಗ ತ್ರಿಷಾ ಕಿರುಚಿಕೊಂಡಿದ್ದಾರೆ. ಆತನು ಬಿಡದಿದ್ದಾಗ ಮಹಮದ್ ಅನ್ಸರ್, ತ್ರಿಷಾರನ್ನು ಬಿಡಿಸಲು ಬಂದು ಅಲ್ಲಿಯೇ ಆಟೋ ಚಾಲಕ ಇಟ್ಟಿದ್ದ ಮಚ್ಚನ್ನು ತೆಗೆದುಕೊಂಡು ಆತನಿಗೆ 2-3 ಬಾರಿ ಹೊಡೆದ್ದಾರೆ.

ಆಗ ಆಟೋ ಚಾಲಕ ರಕ್ತದ ಮಡುವಿನಲ್ಲಿ ನರಳಾಡಲು ಆರಂಭಿಸಿದ್ದಾನೆ. ಬಳಿಕ ತ್ರಿಷಾ ಮತ್ತು ಮಹಮದ್ ಅನ್ಸಾರಿ ಹೊರಗೆ ಬಂದು ಫೋನ್​ನಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಮುಖ್ಯರಸ್ತೆಗೆ ನಡೆದುಕೊಂಡು ಬಂದು ಅಲ್ಲಲ್ಲಿ ಡ್ರಾಪ್ ಕೇಳಿಕೊಂಡು ಮೆಜೆಸ್ಟಿಕ್ ಹೋಗಿದ್ದಾರೆ. ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:24 am, Fri, 24 May 24