ಬಾಲ್ಯದ ಗೆಳೆಯನನ್ನು ನಂಬಿ ಕುಟುಂಬ ಬಿಟ್ಟು ಹೋದವಳು 12 ವರ್ಷದ ಬಳಿಕ ಶವವಾಗಿ ಪತ್ತೆ

ಆಕೆಯದ್ದು ಶಾಲಾ ದಿನದಲ್ಲಿ ಶುರುವಾದ ಪ್ರೀತಿ. ಓದುವುದನ್ನು ಬಿಟ್ಟು ಯುವಕನ ಜೊತೆ ಓಡಾಡಿದ್ದ ಆಕೆ ಆತನೇ ಸರ್ವಸ್ವ ಎಂದು ಭಾವಿಸಿದ್ದಳು. ಪುಸ್ತಕ ಬಿಟ್ಟು ಕುಟುಂಬವನ್ನು ತೊರೆದು ಆತನ ಜೊತೆ ಓಡಿ ಹೋದ ಆಕೆ, ಜನ್ಮವಿಡಿ ಜೊತೆಯಾಗಿರುತ್ತಾನೆ ಅಂತ ಭಾವಿಸಿದ್ದಳು. ಆದರೆ ಆಕೆಯ ಕನಸಿಗೆ ನೀರು ಎರೆಚಿದ ಯುವಕ ಮದುವೆಯಾದ 12ನೇ ವರ್ಷಕ್ಕೆ ಆಕೆಯ ಉಸಿರನ್ನೇ ನಿಲ್ಲಿಸಿದ್ದಾನೆ.

ಬಾಲ್ಯದ ಗೆಳೆಯನನ್ನು ನಂಬಿ ಕುಟುಂಬ ಬಿಟ್ಟು ಹೋದವಳು 12 ವರ್ಷದ ಬಳಿಕ ಶವವಾಗಿ ಪತ್ತೆ
ಮೃತ ಇಂದು
Edited By: ವಿವೇಕ ಬಿರಾದಾರ

Updated on: May 05, 2024 | 3:09 PM

ಬೆಂಗಳೂರು, ಮೇ 05: ಕೆಲ ದಿನಗಳ ಹಿಂದೆ ಕೊರಮಂಗಲದ ರೆಸಿಡೆನ್ಶಿಯಲ್ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಓರ್ವ ಮಹಿಳೆ ಶವ ಪತ್ತೆಯಾಗಿತ್ತು. ಈ ವಿಚಾರ ತಿಳಿದ ಕೊರಮಂಗಲ ಠಾಣೆಯ ಪೊಲೀಸರು (Police) ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಕೊಲೆ ಎಂದು ಕಂಡುಬಂತು. ಇಂದು ಕೊಲೆಯಾದ ಮಹಿಳೆ. ಸೆಲ್ವನ್ ಫ್ರಾನ್ಸಿಸ್ ಕೊಲೆ ಆರೋಪಿ.

ಇಂದು 12 ವರ್ಷಗಳ ಹಿಂದೆ ಸೆಲ್ವನ್ ಫ್ರಾನ್ಸಿಸ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದಳು. 12 ವರ್ಷಗಳ ಹಿಂದೆ ಇಂದು ಶಾಲೆಗೆ ಹೊಗುವ ವಯಸ್ಸಿನಲ್ಲಿ. ಪೋಷಕರು ಇಂದುಳನ್ನು ವಿವೇಕನಗರದ ಆಸ್ಟಿನ್ ಟೌನ್​​ನ ಬಾಲಕಿಯರ ಶಾಲೆಗೆ ಸೇರಿಸಿದ್ದರು. ಈ ವೇಳೆ ಇಂದುಳಿಗೆ ಅದೇ ಏರಿಯಾದ ಸೆಲ್ವನ್ ಎಂಬುವನ ಪರಿಚಯವಾಗಿತ್ತು. ಆಗ ಆತನಿಗೆ ೧೮ ವರ್ಷ ವಯಸ್ಸು. ಹುಡುಗಾಟದ ವಯಸ್ಸಿನಲ್ಲಿದ್ದ ಇಬ್ಬರು, ಪ್ರೀತಿ, ಪ್ರೇಮ-ಪ್ರಣಯ ಅಂತ ಶುರು ಮಾಡಿಕೊಂಡರು. ಹೀಗೆ ಓಡಾಡುತ್ತಿದ್ದ ಇವರು ಬೇಗನೆ ಮದುವೆಯಾದರು.

ಪೋಷಕರಿಗಿಂತ ಪ್ರೀತಿನೇ ಹೆಚ್ಚು ಅಂತ ಇಂದು ಎಲ್ಲರನ್ನು ಬಿಟ್ಟು ಸೆಲ್ವನ್ ಜೊತೆ ಮದುವೆಯಾಗಿದ್ದಳು. ಇವರಿಬ್ಬರ ಪ್ರೀತಿಯ ಕಾಣಿಕೆ ಅಂತ ಎರಡು ಮುದ್ದಾದ ಮಗು ಸಹ ಹುಟ್ಟಿದವು. ಸೆಲ್ವನ್ ಪೆಯ್ಟಿಂಗ್ ಕೆಲಸ ಮಾಡುತಿದ್ದರೆ, ಇಂದು ಮಗು ನೋಡಿಕೊಂಡಿದ್ದಳು. ಆರಂಭದಲ್ಲಿ ಎಲ್ಲವೂ ಸಹ ಚೆನ್ನಾಗಿ ಇತ್ತು. ಆದರೆ ಬರಬರುತ್ತ ಅಲ್ಲಿ ಅನುಮಾನದ ಹುಳು ಶುರುವಾಗಿತ್ತು.

ಮಕ್ಕಳು ದೊಡ್ಡವರಾಗುತಿದ್ದಂತೆ ಖರ್ಚು-ವೆಚ್ಚ ಹೆಚ್ಚಾಗಿತ್ತು. ತಾನೂ ದುಡಿಯಲು ಆರಂಭಿಸಿದರೇ ಮನೆಗೊಂದಿಷ್ಟು ಹೆಚ್ಚಿಗೆ ಹಣ ಬರತ್ತೆ ಅಂತ ಇಂದು ಕೆಲಸಕ್ಕೆ ಸೇರಿದಳು. ಆದರೆ ಈ ನಡೆ ಸೆಲ್ವನ್​ಗೆ ಇಂದು ಅನುಮಾನ ಹಟ್ಟಿತು. ಈ ಅನುಮಾನದಿಂದ ಕಳೆದ ಒಂದು ವರ್ಷದಿಂದ ದಂಪತಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು.

ಇಂದು ಮೇಲೆ ಅನುಮಾನಪಡಲು ಆರಂಭಿಸಿದ ಸೆಲ್ವನ್, ಆಕೆಯನ್ನು ಹಿಂಬಾಲಿಸುವುದು. ಆಕೆ ಏನೆ ಮಾಡಿದರು ಪ್ರಶ್ನೆ ಮಾಡುತಿದ್ದನು. ಇದನ್ನು ಇಂದು ಪ್ರಶ್ನಿಸಿದರೇ ಮನೆಯಲ್ಲಿ ಜಗಳ ಶುರುವಾಗುತ್ತಿತ್ತು. ತನ್ನ ದುಃಖವನ್ನು ಇಂದು ತವರು ಮನೆಯವರ ಮುಂದೆ ಹೇಳಿಕೊಳ್ಳುತ್ತಿದ್ದಳು.

ಇದನ್ನೂ ಓದಿ: ಗಂಡ ಹೆಂಡತಿ ಜಗಳಕ್ಕೆ ಮೊಸಳೆಗೆ ತುತ್ತಾದ ಮಗು

ಬಳಿಕ ಗಂಡನ ಈ ಅನುಮಾನದ ಹುಳುವಿನಿಂದ ನೊಂದ ಇಂದು ಗಂಡನ ಮನೆ ಬಿಟ್ಟು ವೆಂಕಟಪುರದಲ್ಲಿದ್ದ ತಾಯಿ ಮನೆಗೆ ಬಂದಿದ್ದಾಳೆ. ಆದರೂ ಸಹ ಆತ ಆಕೆಗೆ ಕಿರುಕುಳ ಕೊಡುವುದನ್ನು ಮುಂದುವರೆಸಿದ್ದನು. ಇನ್ನು ಇದೇ ವಿಚಾರವಾಗಿ ಆಕೆ ವಿವೇಕನಗರ ಪೊಲೀಸ್ ಠಾಣೆಗೆ ಸಹ ದೂರು ನೀಡಿದ್ದಳು. ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.

ಕೊನೆಗೆ ವೆಂಕಟಾಪುರದ ತಾಯಿ ಮನೆಯಲ್ಲೇ ಮಗು ಜೊತೆ ಉಳಿದುಕೊಂಡ ಆಕೆಗೆ ಗಂಡನ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ. ಅದು ಕೇವಲ ಕರೆ ಮಾಡಿ ಅಥವಾ ಮನೆ ಬಳಿ ಬಂದು ಗಲಾಟೆ ಆಗಿದ್ದರೂ ಆಕೆ ಹೇಗೋ ನಿಭಾಯಿಸುತ್ತಿದ್ದಳು. ಆದರೆ ಸೆಲ್ವನ್ ಆಕೆ ಕೆಲಸ ಮಾಡುವ ಕೊರಮಂಗಲದ ಜಾಗಕ್ಕೂ ಬಂದು ಗಲಾಟೆ ಮಾಡುತಿದ್ದನು.

ಕಳೆದ ಮೇ 2ರಂದು ಸಹ ಇಂದು ಕೆಲಸ ಮಾಡುತಿದ್ದ ಕಡೆ ಬಂದ ಸೆಲ್ವನ್ ಗಲಾಟೆ ಶುರು ಮಾಡಿದ್ದನು. ಆಗ ಮಾತಿಗೆ ಮಾತು ಬೆಳೆದು ಒಂದಿಷ್ಟು ವಾಗ್ವಾದ ಸಹ ಆಗಿದೆ. ಆ ಬಳಿಕ ಇಂದು ನೇರವಾಗಿ ಕೊರಮಂಗಲ ಠಾಣೆಗೆ ಬಂದು ಗಂಡನ ಕಿರುಕುಳದ ಬಗ್ಗೆ ಪೊಲೀಸರಿಗೆ ಹೇಳಿದ್ದಳು. ಈಕೆಯ ಕಥೆ ಕೇಳಿದ ಪೊಲೀಸರು ಸೆಲ್ವನ್​ಗೆ ಕರೆ ಮಾಡಿ, ಠಾಣೆಗೆ ಬರಲು ಹೇಳಿದರು. ಆದರೆ ಈ ವಿಚಾರ ತಿಳಿದ ಸೆಲ್ವನ್ ತಾನು ದೂರು ಇದ್ದೇನೆ ಸರ್ ಬರಲು ಆಗಲ್ಲ ಅಂದಿದ್ದನು. ಆದರೆ ಈ ವೇಳೆ ಆತ ಠಾಣೆ ಬಳಿಯೇ ನಿಂತು ಆಕೆಯನ್ನು ಗಮನಿಸುತ್ತಿದ್ದನು.

ಯಾವಾಗ ಪೊಲೀಸರಿಗೆ ಈ ರೀತಿ ಹೇಳಿದ ಇತ್ತ ಪೊಲೀಸರು ಆತನ ಕರೆಸುವಂತೆ ಪತ್ನಿ ಇಂದುಗೆ ಸಹ ಹೇಳಿದ್ದಾರೆ. ಇಂದು ಬೇಸರದಲ್ಲಿ ಪೊಷಕರಿಗೆ ಕರೆ ಮಾಡಿ ಮಾತನಾಡುತ್ತ ಠಾಣೆಯಿಂದ ಹೊರಗೆ ಹೆಜ್ಜೆ ಹಾಕಿದ್ದಾಳೆ. ಆಗ ಸಮಯ ಸರಿಸುಮಾರು ಮಧ್ಯಾಹ್ನ 3:30 ಆಗಿತ್ತು. ಆಕೆ ಹೊರ ಬರುವುದನ್ನೇ ಕಾದಿದ್ದ ಸೆಲ್ವನ್ ಠಾಣೆಯಿಂದ ಸ್ವಲ್ಪ ದೂರು ಬರುವವರೆಗೂ ಆತ ಕಾದು, ನಂತರ ಆಕೆಯನ್ನು ತಡೆದ. ಪಕ್ಕದಲ್ಲೇ ಇದ್ದ ರೆಸಿಡೆನ್ಸಿಯಲ್ ರಸ್ತೆಗೆ ಕರೆದೊಯ್ದನು. ಆದರೆ ಆತನಿಗೆ ಆಕೆ ಜೊತೆ ಮಾತನಾಡುವ ಉದ್ದೇಶವಿರಲಿಲ್ಲ, ಬದಲಾಗಿ ಆತ ಬೇರೆಯದ್ದೇ ತಯಾರಿ ಮಾಡಿಕೊಂಡು ಬಂದಿದ್ದನು.

ಯಾವಾಗ ಗಂಡ ಸೆಲ್ವನ್ ಕರೆದ ಅಂತ ಮಾತಾಡಿಕೊಂಡು ಹಿಂದೆ ನಡೆದ ಆಕೆಗೆ ನಿಜಕ್ಕೂ ಆತನ ಯೋಚನೆಗಳು ತಿಳಿದಿರಲಿಲ್ಲ. ತನ್ನ ತಾಯಿ ಜೊತೆ ಪೋನ್​ನಲ್ಲಿ ಮಾತನಾಡುತ್ತ ಆತನ ಹಿಂದೆ ಕೊರಮಂಗಲದ 6ನೇ ಕ್ರಾಸ್​​ಗೆ ಬಂದಿದ್ದಳು. ಹಿಂದೆ ಬಂದ ಪತ್ನಿ ಇಂದುಳಿಗೆ ಸೆಲ್ವನ್​​ ಚಾಕುವಿನಿಂದ ಕೈ, ಎದೆ, ಕುತ್ತಿಗೆ ಹೀಗೆ ಸಿಕ್ಕ ಸಕ್ಕ ಕಡೆ ಚುಚ್ಚಿದ್ದಾನೆ. ಗಂಡನ ದಾಳಿಗೆ ಒಳಗಾದ ಇಂದು ಸ್ಥಳದಲ್ಲೇ ಕುಸಿದು ಬಿದಿದ್ದಳು.

ಹತ್ತಕ್ಕೂ ಅಧಿಕ ಬಾರಿ ಇರಿದ ಸೆಲ್ವನ್ ಅಲ್ಲಿಂದ ಕಾಲ್ಕಿತಿದ್ದ. ಇತ್ತ ಕೊರಮಂಗಲ ಠಾಣೆಗೆ ಹೊಂದಿಕೊಂಡ ಆಗ್ನೇಯ ವಿಭಾಗ ಡಿಸಿಪಿ ಕಚೇರಿಯ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು, ಇಂದುಳನ್ನು ಬದುಕುಳಿಸಲು ಆಗಲಿಲ್ಲ.

ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡ ಕೊರಮಂಗಲ ಪೊಲೀಸರಿಗೆ ಅದಾಗಲೆ ಈ ಕೃತ್ಯ ಎಸಗಿದ್ದು ಪತಿಯದ್ದೇ ಅನ್ನೋ ಅನುಮಾನ ಮೂಡಿತ್ತು. ಕೂಡಲೇ ಘಟನಾ ಸ್ಥಳದ ಸುತ್ತಮುತ್ತ ಇದ್ದ ಸಿಸಿಟಿವಿ ಪರಿಶೀಲಿಸಿದರು. ಅಲ್ಲಿಗೆ ಗಂಡನ ಕೃತ್ಯದ ಅಸಲಿ ಸತ್ಯ ಬಯಲಾಗಿತ್ತು. ಕೂಡಲೇ ಅಲರ್ಟ್ ಆದ ಕೊರಮಂಗಲ ಪೊಲೀಸರು ಸೆಲ್ವನ್​​ನನ್ನು ಬಂಧಿಸಿದರು. ಸದ್ಯ ಕೊರಮಂಗಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us