ರಾಮೇಶ್ವರಂ ಕೆಫೆ ಬಾಂಬರ್ ಕೊಲ್ಕತ್ತಾದಲ್ಲಿರುವುದು NIAಗೆ​​ ಗೊತ್ತಾಗಿದ್ದೇಗೆ? ಸೆರೆ ಹಿಡಿದಿದ್ದೇ ರೋಚಕ!

Bengaluru Rameshwaram Cafe blast: ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಟ ಮಟ ಮಧ್ಯಾಹ್ನ ಬಾಂಬ್ ಸ್ಫೋಟವಾಗಿತ್ತು. ಹಸಿವು ನೀಗಿಸಿಕೊಳ್ಳಲು ಬಂದ ಗ್ರಾಹಕರು ಒಂದು ಕ್ಷಣ ದಿಗಿಲಿಗೆ ಬಿದ್ದಿದ್ರು. ಕಿಕ್ಕಿರಿದು ತುಂಬಿದ್ದ ಜನರ ಮಧ್ಯೆ ಗ್ರಾಹಕರಂತೆ ಬಂದು ಬಾಂಬ್ ಇಟ್ಟು ಹೋಗಿದ್ದ ಬಾಂಬರ್ ಕೊನೆಗೂ ಲಾಕ್ ಆಗಿದ್ದಾನೆ. ಬರೋಬ್ಬರಿ 43 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ NIA ತೋಡಿದ ಖೆಡ್ಡಾಗೆ ಬಾಂಬರ್ ಬಿದ್ದಿದ್ದಾನೆ. ಹಾಗಾದ್ರೆ, NIA ಅಧಿಕಾರಿಗಳು ಉಗ್ರರಿಗೆ ಖೆಡ್ಡಾ ತೋಡಿದ್ದೇಗೆ? ಪಶ್ಚಿಮ ಬಂಗಾಳದಲ್ಲಿ ಉಗ್ರರು ಅಡಿಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದೇಗೆ ಎನ್ನುವ ವಿವರ ಇಲ್ಲಿದೆ.

ರಾಮೇಶ್ವರಂ ಕೆಫೆ ಬಾಂಬರ್ ಕೊಲ್ಕತ್ತಾದಲ್ಲಿರುವುದು NIAಗೆ​​ ಗೊತ್ತಾಗಿದ್ದೇಗೆ? ಸೆರೆ ಹಿಡಿದಿದ್ದೇ ರೋಚಕ!
ಬಂಧಿತ ಉಗ್ರರು
Edited By:

Updated on: Apr 12, 2024 | 7:01 PM

ಬೆಂಗಳೂರು, (ಏಪ್ರಿಲ್ 12): ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್​ ಸ್ಫೋಟ (Bengaluru Rameshwaram Cafe blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಪಾತಕಿ ಮುಸಾವೀರ್ ಶಾಜೀಬ್ ಹುಸೇನ್‌ (mussavir shazeeb hussain) ಹಾಗೂ ಬಾಂಬ್‌ ಇಡುವ ಪ್ಲ್ಯಾನ್‌ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್‌ ಮತೀನ್‌ ತಾಹಾನನ್ನು (Abdul Mateen Taha) ರಾಷ್ಟ್ರೀಯ ತನಿಖಾ ದಳ (ಎನ್‌ಐಎ – NIA) ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮುಸಾವೀರ್‌ಗೆ ಬಾಂಬ್ ಮಾರ್ಗದರ್ಶನ ಕೊಟ್ಟಿದ್ದ ಪಾಪಿಯೇ ಮತೀನ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್‌ಗೆ ಕುಕ್ಕರ್‌ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ಮಸಲತ್ತು ಮಾಡಿದ್ದ ಎನ್ನುವುದು ಎನ್​ಐಎ ತನಿಖೆಯಿಂದ ಹೊರಬಿದ್ದಿದೆ.

ರಾತ್ರಿ 11 ಗಂಟೆಗೆ ರೇಡ್.. ಬೆಳಗ್ಗೆ 5 ಗಂಟೆಗೆ ಉಗ್ರರ ಬಂಧನ!

ಮತೀನ್ ನೀಡಿದ ಸೂಚನೆಯಂತೆ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಬಾಂಬರ್ ಮುಸಾವಿರ್, ಸೀದಾ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಈತನಿಗಾಗಿ ಎನ್‌ಐಎ ಅಧಿಕಾರಿಗಳು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯದಲ್ಲಿ ಶೋಧ ನಡೆಸಿದ್ರು. ಇಬ್ಬರು ಉಗ್ರರು ಪಶ್ಚಿಮ ಬಂಗಾಳದಲ್ಲಿ ಇದ್ದಾರೆಂಬ ಮಾಹಿತಿ ಗೊತ್ತಾಗ್ತಿದ್ದಂತೆ ಅಲರ್ಟ್ ಆದ ಎನ್ಐಎ ಉಗ್ರರಾದ ಮುಸಾವಿರ್​ ಹುಸೇನ್​ ಹಾಗೂ ಮತೀನ್ ತಾಹನನ್ನ ಲಾಕ್ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್: ಆರೋಪಿಗಳನ್ನು ಹಿಡಿಯಲು ನೆರವಾಗಿದ್ದು ನಮ್ಮ ಪೊಲೀಸ್: ಬಿಜೆಪಿ ವಿರುದ್ದ ಸಿಡಿಗುಟ್ಟಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಏಪ್ರಿಲ್ 11ರ ರಾತ್ರಿ 11 ಗಂಟೆಗೆ ಉಗ್ರರು ಹೋಟೆಲ್‌ನಲ್ಲಿ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ನಕಲಿ ಆಧಾರ್ ಕಾರ್ಡ್ ನೀಡಿದ್ದ ವಾಸವಿದ್ದ ಹೋಟೆಲ್‌ ಮೇಲೆ ಸ್ಥಳೀಯ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ರಾತ್ರಿಯಿಡಿ ವಿಚಾರಣೆ ನಡೆಸಿ ಇಂದು (ಏಪ್ರಿಲ್ 12) ಬೆಳಗ್ಗೆ 5 ಗಂಟೆಗೆ ಕಂಠಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.  ಆದ್ರೆ, ಆರೋಪಿಗಳ ಕಾರ್ಯಚರಣೆ ಬಗ್ಗೆ ಯಾರಿಗೂ ಗೊತ್ತಾಗದಂತೆ ಗೌಪ್ಯವಾಗಿ ಇಡಲಾಗಿತ್ತು. ಎನ್​ಐಎ ಅಧಿಕಾರಿಗಳು ಮತ್ತು ಕಂಠಿ ಪೊಲೀಸರಿಗೆ ಮಾತ್ರ ಮಾಹಿತಿ ನೀಡಿತ್ತು. ನಸುಕಿನ ವೇಳೆ ಆರೋಪಿಗಳನ್ನು ಹಿಡಿದು ತಂದ ಬಳಿಕ ಎಲ್ಲರಿಗೂ ಗೊತ್ತಾಗಿದೆ. ಸದ್ಯ ಇಬ್ಬರು ಉಗ್ರರನ್ನ ಪರಗಣ ಜಿಲ್ಲೆಯ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಎನ್‌ಐಎ ವಿಶೇಷ ಕೋರ್ಟ್ ಇಬ್ಬರು ಉಗ್ರರನ್ನ ಮೂರು ದಿನ ಟ್ರಾನ್ಸಿಟ್ ಕಸ್ಟಡಿಗೆ ನೀಡಿದ್ದು, ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.

ಮೊದಲಿಗೆ ಕಳಸ ಮೂಲದ ಮುಜಾಮಿಲ್‌ನನ್ನ ಬಂಧಿಸಿದ್ದ ಎನ್ಐಎ ತೀವ್ರ ವಿಚಾರಣೆಗೊಳಪಡಿಸಿತ್ತು. ಯಾಕಂದ್ರೆ, ಇದೇ ಮುಜಾಮಿಲ್, ಬಾಂಬರ್ ಮುಸಾವಿರ್ ಮತ್ತು ಮಾಸ್ಟರ್ ಮೈಂಡ್ ಮತೀನ್‌ ಜೊತೆ ನೇರ ಸಂಪರ್ಕದಲ್ಲಿದ್ದ. ಮತೀನ್‌ನನ್ನ ಮುಜಾಮಿಲ್ 10ಕ್ಕೂ ಹೆಚ್ಚು ಬಾರಿ ಭೇಟಿಯಾಗಿದ್ದ. ಅಲ್ಲದೇ, ಮುಸಾವೀರ್‌ಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ನೀಡಿದ್ದ. ಹೀಗಾಗಿ ಮುಜಾಮಿಲ್‌ಗೆ ಎನ್‌ಐಎ ಸರಿಯಾಗಿ ಬೆಂಡೆತ್ತಿ, ಬಾಂಬರ್‌ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹಿಸಿದೆ. ಈ ವೇಳೆ ರಾಮೇಶ್ವರಂ ಕೆಫೆಯ ಸ್ಫೋಟಕ್ಕೆ ಪ್ಲ್ಯಾನ್ ರೂಪಿಸಿದ್ದೇ ಮತೀನ್ ತಾಹ ಎನ್ನುವುದು ಗೊತ್ತಾಗಿದೆ. ಸ್ಫೋಟದ ನಂತರ ನಕಲಿ ಐಡಿಗಳನ್ನ ಬಳಸಿ ಇಬ್ಬರು ಉಗ್ರರು ತಲೆಮರೆಸಿಕೊಂಡಿದ್ರು. ಮುಜಾಮಿಲ್ ನೀಡಿದ ಸುಳಿವಿನ ಮೇರೆಗೆ NIA ತಂಡ ದಾಳಿ ಮಾಡಿದಾಗ ಮಿಡ್ನಾಪುರದಲ್ಲಿ ಮುಸಾವಿರ್ ಮತ್ತು ಮತೀನ್ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್, ಮಾಸ್ಟರ್​ ಮೈಂಡ್​​ ಪಶ್ಚಿಮ ಬಂಗಾಳದಲ್ಲಿ ಎನ್​ಐಎ ವಶಕ್ಕೆ

ತಮಿಳುನಾಡಿನ ಕಡಲೂರಿನಲ್ಲಿ ಬಾಂಬರ್ ಮುಸಾವಿರ್ ಮತ್ತು ಮತೀನ್ ಬಾಂಬ್ ತಯಾರಿಸಿದ್ರು. ಅದೇ ಬಾಂಬ್ ಎತ್ತಿಕೊಂಡು ಬೆಂಗಳೂರಿನ ಕೆ.ಆರ್‌.ಪುರಂ ಮೂಲಕ ರಾಮೇಶ್ವರಂ ಕೆಫೆಗೆ ಬಂದಿದ್ದ ಮುಸಾವಿರ್, ಮತೀನ್ ಮಾಡಿದ್ದ ಪ್ಲ್ಯಾನ್‌ನಂತೆಯೇ ಬಾಂಬ್ ಇಟ್ಟು ಹೋಗಿದ್ದ. ಬಾಂಬ್ ಇಟ್ಟ ಬಳಿಕ ಉಗ್ರ ಮುಸಾವಿರ್ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ಬೆಂಗಳೂರಿನಿಂದ ಬಳ್ಳಾರಿ, ಬಳ್ಳಾರಿಯಿಂದ ಕಲಬುರಗಿ, ಕಲಬುರಗಿಯಿಂದ ಹೈದರಾಬಾದ್​​​ಗೆ ಬಸ್​ನಲ್ಲೇ ಪ್ರಯಾಣ ಮಾಡಿದ್ದ. ಈ ಮೊದಲೇ ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದ ಮತೀನ್‌ ಬಳಿ ಹೋಗಿದ್ದ. ಟೈಮ್ ನೋಡಿಕೊಂಡು ಬಾಂಗ್ಲಾದೇಶಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ರು. ಆದ್ರೆ, ಪಕ್ಕಾ ಮಾಹಿತಿ ಪಡೆದು NIA ಅಧಿಕಾರಿಗಳು ರೇಡ್ ಮಾಡಿ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮುಸಾವಿರ್ ಮತ್ತು ಅಬ್ದುಲ್ ಮತೀನ್‌ನನ್ನ NIA ಅಧಿಕಾರಿಗಳು 8 ವರ್ಷದಿಂದ ಹುಡುಕುತ್ತಿದ್ರು. ಇಬ್ಬರ ಮೇಲೂ 10ರಿಂದ 15 ಕೇಸ್‌ಗಳಿದ್ದು ಪ್ರತ್ಯೇಕ ಪ್ರಕರಣದಲ್ಲಿ ಬೇಕಾಗಿದ್ರು. ಸದ್ಯ ರಾಮೇಶ್ವರಂ ಕೆಫೆ ಕೇಸ್‌ನಲ್ಲಿ ಇಬ್ಬರು ಲಾಕ್ ಆಗಿದ್ದು, NIA ತನಿಖೆ ನಡೆಸ್ತಿದೆ. ತನಿಖೆ ಬಳಿಕ ಕೆಫೆಯಲ್ಲಿ ಬಾಂಬ್ ಸ್ಫೋಟಿಸೋ ಉದ್ದೇಶ ಏನಾಗಿತ್ತು ಎನ್ನುವುದು ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us