ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಬಲೆಗೆ ಬಿದ್ದ ಯುವತಿ ಊರ ಹಬ್ಬದ ದಿನ ಗಂಡನ ಕೈಯಲ್ಲಿ ಹತ್ಯೆ!

| Updated By: ವಿವೇಕ ಬಿರಾದಾರ

Updated on: May 01, 2024 | 10:25 AM

ಗಂಡನ ನಡುವಳಿಕೆ ಸರಿಯಿಲ್ಲ ಅಂತ ಪತಿ ಮನೆ ತೊರೆದು ತವರು ಮನೆ ಸೇರಿದ್ದಳು ಮಹಿಳೆ. ಆದರೂ ಕೂಡ ಗಂಡನ ಕಾಟ ತಪ್ಪಲಿಲ್ಲ. ಹೀಗಾಗಿ ತಾಯಿ ಮತ್ತು ಮಗಳು ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮ ಬಿಟ್ಟು, ಶಿವಮೊಗ್ಗದಲ್ಲಿ ವಾಸವಾಗಿದ್ದರು. ಜಾತ್ರೆ ಅಂತ ತಾಯಿ ಮತ್ತು ಮಗಳು ಕರಕುಚ್ಚಿ ಗ್ರಾಮಕ್ಕೆ ಬಂದಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ..

ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಬಲೆಗೆ ಬಿದ್ದ ಯುವತಿ ಊರ ಹಬ್ಬದ ದಿನ ಗಂಡನ ಕೈಯಲ್ಲಿ ಹತ್ಯೆ!
ಆರೋಪಿ ಚರಣ್​ (ಎಡಚಿತ್ರ) ಕೊಲೆಯಾದ ಯುವತಿ ಮೇಘಾ (ಬಲಚಿತ್ರ)
Follow us on

ಚಿಕ್ಕಮಗಳೂರು, ಮೇ 01: ಅವರಿಬ್ಬರೂ ಒಂದೇ ಗ್ರಾಮದವರು, ಪರಸ್ಪರ ಪ್ರೀತಿಸಿ (Love) ಮದುವೆಯಾಗಿದ್ದರು. ಮದುವೆಯಾದ ಆರು ತಿಂಗಳಲ್ಲಿ ಸ್ವರ್ಗದಂತಿದ್ದ ಗಂಡನ ಮನೆ ನರಕವಾಗಿತ್ತು. ಪ್ರೀತಿಸಿ ಕೈ ಹಿಡಿದಿದ್ದ ಗಂಡನ ಟಾರ್ಚರ್ ಮಿತಿಮೀರಿತ್ತು. ಅಪ್ರಾಪ್ತ ವಯಸ್ಸಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗಿದ್ದ ಯುವತಿ ಸಾಕಪ್ಪ ಸಾಕು ಅಂತ ಗಂಡನ ಬಿಟ್ಟು ತಾಯಿ ಜೊತೆ ಊರನ್ನೇ ಬಿಟ್ಟು ಹೋಗಿ, ಮುಳಕಟ್ಟಮ್ಮ ಜಾತ್ರೆಗೆ ಊರಿಗೆ ಬಂದವಳು ಭದ್ರಾ ನದಿಯ (Bhadra River) ನಾಲೆಯಲ್ಲಿ ಹೆಣವಾಗಿ ಹೋಗಿದ್ದಾಳೆ.

ಮುಳಕಟಮ್ಮ ಜಾತ್ರೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ ಸಂಭ್ರಮದಿಂದ ಆಚರಿಸುವ ಉತ್ಸವ. ಪ್ರತಿ ವರ್ಷ ಏಪ್ರಿಲ್​ನಲ್ಲಿ ಆಚರಣೆ ಮಾಡುವ ಹಬ್ಬಕ್ಕೆ ಅದರದೇ ಆದ ಇತಿಹಾಸವಿದೆ. ಕರಕುಚ್ಚಿ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಯ ಜನ ಶ್ರದ್ಧೆಯಿಂದ ಹಬ್ಬ ಮಾಡಿ ಜಾತ್ರೆಯನ್ನು ನಡೆಸುತ್ತಾರೆ. ವರ್ಷದಿಂದ ಊರಿಗೆ ಬಾರದೇ ಇರುವವರು ಜಾತ್ರೆಯ ನೆಪದಲ್ಲಿ ಊರಿಗೆ ಬಂದೇ ಬರುತ್ತಾರೆ. ಹತ್ತಾರು ಹಳ್ಳಿಯ ಜನ ಒಟ್ಟಿಗೆ ಸೇರಿ ಮುಳಕಟ್ಟಮ್ಮ ಜಾತ್ರೆ ಮಾಡಿ ಸಂಭ್ರಮಿಸುತ್ತಾರೆ. ಮುಳಕಟ್ಟಮ್ಮ ಜಾತ್ರೆಯಂದರೇ ಕರಗುಚಿ ಗ್ರಾಮದಲ್ಲಿ ಅದೇನೋ ಸಂಭ್ರಮ. ವರ್ಷಕ್ಕೆ ಒಮ್ಮೆ ನೆಂಟರನ್ನು ಕರೆದು ದೊಡ್ಡಮಟ್ಟದ ಹಬ್ಬ ಮಾಡುತ್ತಾರೆ. ಕರಗುಚಿ ಗ್ರಾಮದಲ್ಲಿ ಜಾತ್ರೆ ತಿಂಗಳ ಕೊನೆಯ ದಿನ ಅಂದರೆ ಮಂಗಳವಾರ (ಏ.30) ರಂದು ನಡೆಯಬೇಕಿತ್ತು, ಜಾತ್ರೆಯಲ್ಲಿ ಊರ ದೇವಿಯ ಕಂಡು ಭಕ್ತರು ಪುನೀತರಾಗಬೇಕಿತ್ತು. ಆದರೆ ಆ ಊರಲ್ಲಿ ಜಾತ್ರೆಯ ಸಂಭ್ರಮವೇ ಇಲ್ಲ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಜಾತ್ರೆ ದಿನವೇ ವಿವಾಹಿತೆ ಮೇಘಾ (20 ವರ್ಷದ) ಹೊಳೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಭದ್ರಾ ನದಿಯ ನಾಲೆಯ ನೀರಲ್ಲಿ ರಕ್ತವನ್ನು ಕಂಡ ಗ್ರಾಮಸ್ಥರು ಅಕ್ಷರಶಃ ಆತಂಕಗೊಂಡಿದ್ದರು, ಹಾಗೇ ಆಕ್ರೋಶಗೊಂಡಿದ್ದರು. ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಮಾಡಿ, ಹೀಗೆ ಜೀವ ಬಿಡುವ ಸ್ಥಿತಿ ಬಂತಲ್ಲ ಅಂತ ಮೇಘಾಳ ಕುಟುಂಬಸ್ಥರು ಎದೆ ಬಡಿದುಕೊಂಡಿದ್ದರು.

ಇದನ್ನೂ ಓದಿ: ಯುವತಿಯೊಂದಿಗೆ ಚಾಟ್​ ಮಾಡಿದ್ದಕ್ಕೆ ಪ್ರಿಯಕರನಿಂದ ಆಕೆಯ ಗೆಳೆಯನ ಮೇಲೆ ಹಲ್ಲೆ

ಮೇಘಾ ಅಪ್ರಾಪ್ತ ವಯಸ್ಸಿನಲ್ಲೇ ಇದೇ ಗ್ರಾಮದ ಚರಣ್​ನ ಪ್ರೀತಿಯಲ್ಲಿ ಬಿದ್ದಿದ್ದಳು. 10ನೇ ತರಗತಿ ಓದುವಾಗಲೇ ಪ್ರಿಯಕರ ಚರಣ್​ನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಚರಣ್ ಜೊತೆ ಮೇಘಾ ಊರು ಬಿಟ್ಟ ಮೇಲೆ, ಮೇಘಾ ತಾಯಿ ಕೋಮಲ ಆತಂಕಗೊಂಡು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಚರಣ್ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಲಕ್ಕವಳ್ಳಿ ಪೊಲೀಸರು ಚರಣ್ ವಿರುದ್ಧ ಪೋಸ್ಕೋ ಕೇಸ್ ದಾಖಲಿಸಿ ಜೈಲಿಗೆ ಅಟ್ಟಿದ್ದರು. ಮೇಘ ಮಾತ್ರ ತಾಯಿಯ ಮಾತು ಕೇಳದೆ ತನ್ನ ಗಂಡ ಚರಣ್​ಗಾಗಿ ಪಟ್ಟು ಹಿಡಿದಿದ್ದಳು.

ಪ್ರೀತಿಸಿದ ಹುಡುಗನ ಜೊತೆ ಮಗಳು ಚೆನ್ನಾಗಿರಲಿ ಅಂತ, 2022ರಲ್ಲಿ ಮೇಘಾಳಿಗೆ 18 ವರ್ಷ ತುಂಬುತ್ತಿದ್ದಂತೆ ತಾಯಿ ಕೋಮಲ ಊರಿನವರನ್ನು ಸೇರಿಸಿ ಚರಣ್​ ಜೊತೆ ಮದುವೆ ಮಾಡಿದರು. ಮೇಘಾ ನೂರಾರು ಕನಸುಗಳನ್ನು ಕಟ್ಟಿಕೊಂಡು ಚರಣ್ ಮನೆ ಸೇರಿದಳು.

ಆದರೆ, ಮೇಘಾಳಿಗೆ ಮದುವೆಯಾದ 6 ತಿಂಗಳಲ್ಲಿ ಚರಣ್ ಮನೆ ನರಕವಾಗ ತೊಡಗಿತ್ತು. ಊರಲ್ಲಿ ಕಳ್ಳ ಎಂಬ ಪಟ್ಟ ಕಟ್ಟಿಕೊಂಡಿದ್ದ ಚರಣ್, ಗಾಂಜಾ ಚಟ ಕೂಡ ಅಂಟಿಸಿಕೊಂಡಿದ್ದನು. ದಿನದಿಂದ ದಿನಕ್ಕೆ ಚರಣ್​ನಲ್ಲಿ ಮೇಘಾಳ ಮೇಲಿದ್ದ ಪ್ರೀತಿ ಕಡಿಮೆಯಾಗ ತೊಡಗಿತ್ತು. ಊರಲ್ಲಿ ನಡೆದಿದ್ದ ಮನೆ ಕಳ್ಳತನದಲ್ಲಿ ಚರಣ್ ಹೆಸರು ಕೇಳಿ ಬಂದಿತ್ತು‌. ಕಳ್ಳ ಗಂಡನ ಜೊತೆ ಬದುಕಬಾರದು ಅಂತ ನಿರ್ಧಾರ ಮಾಡಿದ್ದ ಮೇಘಾ ತಾಯಿ ಮನೆ ಸೇರಿಕೊಂಡಳು.

ತಾಯಿ ಮನೆ ಸೇರಿದ ಮೇಘಾಳಿಗೆ ನಿತ್ಯ ಮನೆಗೆ ಬಂದು ಚರಣ್ ಹಿಂಸೆ ಕೊಡಲಾರಂಬಿಸಿದನು. ಈ ಊರಲ್ಲಿ ಇದ್ದರೆ ಸರಿಯಾಗಲ್ಲ ಅಂತ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಅಜ್ಜಿ ಮನೆಗೆ ತಾಯಿ ಮತ್ತು ಮಗಳು ಹೋದರು.
ಶಂಕರಘಟ್ಟದಲ್ಲಿ ಮೇಘಾ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದಳು. ವರ್ಷದಿಂದ ಊರಿಗೆ ಬಾರದೆ ಇದ್ದವರು ಸೋಮವಾರ (ಏ.29)ರ ಬೆಳಗ್ಗೆ ಕರಕುಚ್ಚಿ ಗ್ರಾಮಕ್ಕೆ ಬಂದಿದ್ದರು. ಊರಲ್ಲಿ ಮುಳುಕಟ್ಟಮ್ಮ ಜಾತ್ರೆ ಇರುವುದರಿಂದ ತಾಯಿ-ಮಗಳು ಮನೆ ಸ್ವಚ್ಛ ಮಾಡಿದ್ದರು. ಮಧ್ಯಾಹ್ನ ಊಟ ಮುಗಿಸಿ ಊರಿನ ಹೊರ ವಲಯದಲ್ಲಿದ್ದ ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಮೇಘಾ ಏಕಾಂಗಿ ಯಾಗಿ ಹೋಗಿದ್ದಳು. ಊರಿಗೆ ಮೇಘಾ ಬಂದಿರುವ ವಿಚಾರ ತಿಳಿದಿದ್ದ ಚರಣ್ ಮೇಘಾಳನ್ನ ಹಿಂಬಾಲಿಸಿದ್ದನು. ನಾಲೆಯ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಮೇಘಾಳ ಮೇಲೆ ಹತ್ಯೆ ಮಾಡುವ ಪ್ಲಾನ್ ಮಾಡಿ ಜೊತೆ ತಂದಿದ್ದ ಮಚ್ಚಿನಿಂದ ತಲೆ, ಕೈಗೆ ಕೊಚ್ಚಿ ಪರಾರಿಯಾಗಿದ್ದನು. ಮೇಘಾ ನಾಲೆಯಲ್ಲಿ ಒಬ್ಬಳೇ ಇದ್ದಿದ್ದರಿಂದ ರಕ್ತದ ಮಡುವಿನಲ್ಲಿ ನಾಲೆಯ ಒಳಗೆ ಸತ್ತು ಬಿದ್ದಳು. ರಕ್ತದ ಮಡುವಿನಲ್ಲಿ ಬಿದಿದ್ದ ಮೇಘಾಳನ್ನ ನೋಡಿದ ಗ್ರಾಮಸ್ಥರು ಲಕ್ಕವಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಊರಿಗೆ ಬರುವ ಮುನ್ನವೇ ಕೊಲೆಗಾರ ಯಾರು ಎಂಬುದು ಪೊಲೀಸರು ಸೇರಿದಂತೆ ಗ್ರಾಮಸ್ಥರಿಗೆ ತಿಳಿದಿತ್ತು.

ಚರಣ್ ಮೇಘಾಳನ್ನು ಹತ್ಯೆ ಮಾಡಿ ಬೆಂಗಳೂರಿಗೆ ಬರಲು ಪ್ಲಾನ್ ಮಾಡಿದ್ದನು. ಆದರೆ ಲಕ್ಕವಳ್ಳಿ ಪೊಲೀಸರು ಹತ್ಯೆ ನಡೆದ ಒಂದು ಗಂಟೆಯಲ್ಲೇ ಚರಣ್​ನನ್ನು ಬಂಧಿಸಿದರು. ಇನ್ನೂ ಮಗಳ ಹತ್ಯೆ ನೋಡಿ ಎದೆ ಬಡಿದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದರೇ, ಗ್ರಾಮಸ್ಥರು ಚರಣ್ ವಿರುದ್ಧ ಆಕ್ರೋಶಗೊಂಡಿದ್ದರು. ಪ್ರೀತಿ ಪ್ರೇಮದ ನಾಟಕವಾಡಿ ಅಪ್ರಾಪ್ತ ಬಾಲಕಿಯನ್ನ ಬದುಕನ್ನ ಮುಗಿಸಿ ಬಿಟ್ಟರಲ್ಲ ಅಂತ ಆಕ್ರೋಶಗೊಂಡಿದ್ದರು. ಚಿಕ್ಕಮಗಳೂರು ASP ಕೃಷ್ಣಮೂರ್ತಿ ಸೇರಿದಂತೆ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿದ್ದರು.

ಶಾಸಕರ ಮುಂದೆ ಬೇಡಿಕೆಟ್ಟ ಗ್ರಾಮಸ್ಥರು ಚರಣ್​ನನ್ನು ಗ್ರಾಮಕ್ಕೆ ಕರೆ ತರಬೇಕು, ಕರೆ ತರದೆ ಇದ್ದರೆ ಶವವನ್ನು ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಮನವೊಲಿಸಿದ ಹಿರಿಯ ಅಧಿಕಾರಿಗಳು ಮಧ್ಯರಾತ್ರಿ ಮೇಘಾಳ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು. ಶವ ಪರೀಕ್ಷೆಯ ಬಳಿಕ ಕರಕುಚ್ಚಿ ಗ್ರಾಮದಲ್ಲಿ ಮೇಘಾಳ ಅಂತಿಮಕ್ರಿಯೆ ನಡೆಸಿದ ಗ್ರಾಮಸ್ಥರು ಬದುಕಿ ಬಾಳಬೇಕಿದ್ದ ಹುಡುಗಿ ದುರಂತ ಸಾವನ್ನು ಕಂಡಳಲ್ಲ ಎಂದು ಕಣ್ಣೀರು ಸುರಿಸಿದರು.

ಎಷ್ಟು ಹೇಳಿದರೂ ವಾಪಸ್ ಮನೆಗೆ ಬರಲಿಲ್ಲ ಎಂಬ ಸಿಟ್ಟಿಗೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನ ಹತ್ಯೆಮಾಡಿ ಚರಣ್ ಪೋಲೀಸರಿಗೆ ಅತಿಥಿಯಾಗಿದ್ದಾನೆ. ಇನ್ನು ಹತ್ಯೆಯಾದ ಮೇಘಾಳ ತಾಯಿ ಕೋಮಲ ಚರಣ್ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಮರ್ಡರ್ ಕೇಸ್ ದಾಖಲಿಸಿದ್ದು, ಚರಣ್ ಮತ್ತು ಚರಣ್ ತಾಯಿಯನ್ನ ಪೊಲೀಸರು ಬಂಧಿಸಿದ್ದಾರೆ. ಚರಣ್ ತಂದೆ ಹಾಗೂ ಅಣ್ಣನಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮಕ್ಕೆ ಬಿದ್ದ ಯುವತಿ ತನ್ನ ಗಂಡನ ಕೈಯಿಂದ ಹತ್ಯೆಯಾಗಿದ್ದು ದುರಂತವೇ ಸರಿ. ಕರಕುಚ್ಚಿ ಗ್ರಾಮದಲ್ಲಿ ನಡೆಯಬೇಕಿದ್ದ ಮುಳಕಟ್ಟಮ್ಮ ಜಾತ್ರೆಯಲ್ಲಿ ನೀರವ ಮೌನ ಆವರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Wed, 1 May 24