ಚಿತ್ರದುರ್ಗದಲ್ಲಿ ಶೀಲ ಶಂಕಿಸಿ ಹೆಂಡತಿಯ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

| Updated By: ಸುಷ್ಮಾ ಚಕ್ರೆ

Updated on: Sep 17, 2024 | 5:19 PM

ಚಿತ್ರದುರ್ಗದಲ್ಲಿ 2021ರಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟವಾಗಿದೆ. ಶೀಲ ಶಂಕಿಸಿ ಹತ್ಯೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಚಿತ್ರದುರ್ಗದಲ್ಲಿ ಶೀಲ ಶಂಕಿಸಿ ಹೆಂಡತಿಯ ಕೊಲೆ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಚಿತ್ರದುರ್ಗ: ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ ಪ್ರಕಟವಾಗಿದ್ದು, ನ್ಯಾಯಾಧೀಶರಾದ ರೋಣಾ ವಾಸುದೇವ್​​ ಇಂದು ಜೀವಾವಧಿ ಶಿಕ್ಷೆ ಪ್ರಕಟ ಮಾಡಿದ್ದಾರೆ. 3 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಹೊರಬಿದ್ದಿದೆ.

2021ರ ಸೆಪ್ಟೆಂಬರ್ 10ರಂದು ಚಿತ್ರದುರ್ಗದ ಬಳಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಚಳ್ಳಕೆರೆ ರಸ್ತೆಯಲ್ಲಿ ಚಿತ್ರದುರ್ಗದ ಅಮೀನಾಬಾನು ಅವರ ಕೊಲೆ ನಡೆದಿತ್ತು. ಚಾಕುವಿನಿಂದ ಇರಿದು ಮೆಹಬೂಬ್ ಪಾಷಾ ಎಂಬ ವ್ಯಕ್ತಿ ಪತ್ನಿಯನ್ನು ಕೊಂದಿದ್ದ. ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಮೆಹಬೂಬ್​ನಿಂದ ಈ ಕೊಲೆ ನಡೆದಿತ್ತು.

ಇದನ್ನೂ ಓದಿ: Crime News: ಟಿವಿ ವಾಲ್ಯೂಮ್ ಯಾಕಿಷ್ಟು ಜೋರಾಗಿದೆ? ಎಂದ ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ

ಗಂಡನ ಮನೆಯಿಂದ ತವರುಮನೆಗೆ ಬಂದಿದ್ದ ಪತ್ನಿ ಬಳಿ ಬಂದಿದ್ದ ಮೆಹಬೂಬ್ ಪಾಷಾ ಆಕೆಯನ್ನು ಚಳ್ಳಕೆರೆ ಬಳಿಯ ದರ್ಗಾಕ್ಕೆ ಕರೆದೊಯ್ದಿದ್ದ. ಅಲ್ಲಿಂದ ವಾಪಸ್ ಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿ ಇದೀಗ ಮೆಹಬೂಬ್​ಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ