ಕೋಲಾರ: ಎರಡು ಕುಟುಂಬಗಳ ಜಗಳ ಕೊಲೆಯಲ್ಲಿ ಅಂತ್ಯ; ಹತ್ಯೆ ಹಿಂದಿನ ಮಾಸ್ಟರ್‌ ಮೈಂಡ್​ಗೆ ಗುಂಡೇಟು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2023 | 5:59 PM

ಒಂದೇ ಗ್ರಾಮದ ಆ ಎರಡೂ ಕುಟುಂಬಗಳು ಸದಾ ದ್ವೇಷ ಕಾರುತ್ತಿದ್ದರು. ಯಾರೆಷ್ಟೇ ಬುದ್ದಿ ಹೇಳಿದ್ರೂ ಕೇಳದೆ ಹಠಕ್ಕೆ ಬಿದ್ದು ಜಗಳವಾಡ್ತಿದ್ರು. ಕುಟುಂಬಳ ಜಗಳ ತಾರಕ್ಕಕೇರಿ ಕೊನೆಗೆ ಕೊಲೆಯಲ್ಲಿ ಜಗಳ ಅಂತ್ಯವಾಗಬೇಕಾಯ್ತು. ಈ ಕೊಲೆ ಮಾಡಿಸಿ 15 ದಿನಗಳಿಂದ ತಲೆ ಮರಿಸಿಕೊಂಡವ ಖಾಕಿ ಮುಂದೆಯೂ ಬಾಲ ಬಿಚ್ಚಿದ ಪರಿಣಾಮ ಕಾಲಿಗೆ ಗುಂಡು ಹಾರಿಸಿ ಎಡೆಮುರಿ ಕಟ್ಟಿದ್ದಾರೆ.

ಕೋಲಾರ: ಎರಡು ಕುಟುಂಬಗಳ ಜಗಳ ಕೊಲೆಯಲ್ಲಿ ಅಂತ್ಯ; ಹತ್ಯೆ ಹಿಂದಿನ ಮಾಸ್ಟರ್‌ ಮೈಂಡ್​ಗೆ ಗುಂಡೇಟು
ಗುಂಡೇಟು ಬಿದ್ದ ಆರೋಪಿ
Follow us on

ಕೋಲಾರ, ನ.05: ಜಿಲ್ಲೆಯ ಮಾಲೂರು(Malur) ತಾಲೂಕಿನ ಕೋಡಿಹಳ್ಳಿ ಕ್ರಾಸ್‌ ಬಳಿ ಅಕ್ಟೋಬರ್‌ 21 ರ ಸಂಜೆ 4 ಗಂಟೆ ಸುಮಾರಿಗೆ ಮಾಲೂರು ಪಟ್ಟಣಕ್ಕೆ ಬರುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯ ಅನಿಲ್‌ ಕುಮಾರ್​ನನ್ನು ಬಬ೯ರವಾಗಿ ಕೊಲೆ ಮಾಡಲಾಗಿತ್ತು.ಕೂಡಲೇ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ನಾರಾಯಣ್‌, ಒಂದು ತಂಡವನ್ನ ರಚನೆ ಮಾಡಿ ಕೆಲವೇ ಗಂಟೆಗಳಲ್ಲಿ ಕೊಲೆಯ 7 ಆರೋಪಿಗಳ ಪೈಕಿ ಐವರನ್ನು ಬಂಧಿಸಿ ವಿಚಾರಿಸಿದಾಗ ಕೊಲೆಗೆ ಪ್ರಮುಖ ಕಾರಣ ತಿಳಿದು ಬಂದಿದೆ. ಮಿಣಸಂದ್ರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಮೃತ ಅನಿಲ್‌ ಕುಮಾರ್‌ ಹಾಗೂ ಗ್ರಾಮದ ಅಶೋಕ್‌ ಇಬ್ಬರ ನಡುವೆ ಹಲವಾರು ವಿಚಾರಗಳಲ್ಲಿ ಭಿನ್ನಾಬಿಪ್ರಾಯವಿತ್ತು.

ಸುಫಾರಿ ಕೊಟ್ಟು ,ಕೊಲೆ ಮಾಡಿಸಿ ತಲೆ ಮರಿಸಿಕೊಂಡಿದ್ದ ಆರೋಪಿ

ಒಂದೇ ಗ್ರಾಮದವರಾಗಿದ್ದ ಅನಿಲ್‌ ಹಾಗೂ ಅಶೋಕ್‌ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಜಕೀಯ ಕಿತ್ತಾಟ ಶುರುವಾಗಿತ್ತು. ಈ ಮಧ್ಯೆ ಅಶೋಕ್​ನ ​ತಮ್ಮನ ಪತ್ನಿ ವಿಚ್ಚೇದನ ನೀಡಿ ಬೇರೆ ಸಂಸಾರ ಮಾಡುತ್ತಿದ್ದಳು. ಇದಕ್ಕೆ ಮೃತ ಅನಿಲ್​ ಕುಮಕ್ಕು ಕೊಟ್ಟಿದ್ದ ಎನ್ನುವ ವಿಚಾರಗಳನ್ನು ಮುಂದಿಟ್ಟುಕೊಂಡ ಅಶೋಕ್‌, ಸುಫಾರಿ ಕೊಟ್ಟು ಅನಿಲ್​ನನ್ನು ಕೊಲೆ ಮಾಡಿಸಿ ತಲೆ ಮರಿಸಿಕೊಂಡಿದ್ದ. ಕೊಲೆ ಮಾಡಲು ಒಂದೂ ತಿಂಗಳಿನಿಂದ ಪ್ಲಾನ್‌ ಮಾಡಿದ್ದ ಅಶೋಕ್‌ ಹಾಗೂ ಕುಟುಂಬಸ್ಥರು, ಮುಂಚಿತವಾಗಿ ಹೊಸ ಮೊಬೈಲ್‌ ಹಾಗೂ ಸಿಮ್​ಗಳನ್ನು ಖರೀದಿ ಮಾಡಿದ್ದರು. ಪತ್ನಿ ಗೀತಾ ತನ್ನ ಒಡವೆಗಳನ್ನು ಮಾರಿ ಹಣವನ್ನು ಸುಪಾರಿ ಕಿಲ್ಲರ್ಸ್​ಗಳಿಗೆ ನೀಡಿದ್ದರು.

ಇದನ್ನೂ ಓದಿ:ಬೆಂಗಳೂರು: ಒಂಟಿಯಾಗಿ ನೆಲೆಸಿದ್ದ ಮಹಿಳಾ ಅಧಿಕಾರಿಯ ಮನೆಗೆ ನುಗ್ಗಿ ಕುತ್ತಿಗೆ ಕೊಯ್ದು ಬರ್ಬರ ಕೊಲೆ

ಖಚಿತ ಮಾಹಿತಿ ಪಡೆದು ಅ.21 ರಂದು ಮೃತ ಅನಿಲ್‌ ಬೈಕ್​ನಲ್ಲಿ ಬರುವಾಗ ಸುಫಾರಿ ಕಿಲ್ಲರ್‌ ರಾಹುಲ್‌ ಹಾಗೂ ಸಹೋದರ ಅನಿಲ್‌ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್‌ ಆಗಿದ್ರು. ಇದಾದ ಕೆಲವೇ ಗಂಟೆಗಳಲ್ಲಿ ಅಶೋಕ್​ನ ಸಹೋದರ ಅನಿಲ್‌, ಪತ್ನಿ ಗೀತಾ, ಆನಂದ್‌, ಕಿರಣ್‌, ಹರಿಕಾಂತ್‌ ಸೇರಿದಂತೆ ಐವರನ್ನು ಬಂಧಿಸಿದರು. ಇಷ್ಟು ದಿನಗಳ ಕಾಲ ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅಶೋಕ್‌ ಇಂದು ಮಾಲೂರು ತಾಲೂಕಿನ ಹುರಳಗೆರೆ ಬಳಿ ಬಂಧಿಸುವಾಗ ಪೊಲೀಸರ ಮೇಲೆ ಚಾಕುವಿನಲ್ಲಿ ಹಲ್ಲೆಗೆ ಮುಂದಾದಾಗಿದ್ದ. ಕೂಡಲೇ ಮಾಲೂರು ಸಿಪಿಐ ವಸಂತ್‌, ಆರೋಪಿ ಅಶೋಕ್​ನ ಬಲಗಾಲಿಗೆ ಫೈರಿಂಗ್‌ ಮಾಡಿ ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸ್‌ ಪೇದೆಗಳಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಫಾರಿ ಪಡೆದು ಕೊಲೆ ಮಾಡಿರುವ ರಾಹುಲ್‌ ಸಧ್ಯ ಬೇರೆ ಕೇಸ್​ನಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.

ಕೋಲಾರದಲ್ಲಿ ಕ್ರೈಂ ಕೇಸ್​ ಹೆಚ್ಚಳ;ಒಂದು ವಾರದಲ್ಲೇ ಮೂರನೇ‌ ಬಾರಿಗೆ ಪೈರಿಂಗ್​ ಮಾಡಿದ ಪೊಲೀಸ್​

ಹೌದು, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಹಾಗಾಗಿ ಕಳೆದ ಒಂದು ವಾರದಲ್ಲೇ ಮೂರನೇ‌ ಬಾರಿಗೆ ಆರೋಪಿಗಳ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಅ.23 ರಂದು ಶ್ರೀನಿವಾಸಪುರದ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣದ ಆರೋಪಿಗಳಾದ ವೇಣುಗೋಪಾಲ್ ಮತ್ತು ಮುನೇಂದ್ರ ಮೇಲೆ ಪೈರಿಂಗ್, ಮಾಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಡಕಾಯತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಸ್ಸಾಂ ಮೂಲದ ಸುಹೇಬ್ ಮತ್ತು ಶ್ಯಾಮ್ ಸುಹೇಲ್ ಎಂಬ‌‌ ಇಬ್ಬರ ಮೇಲೆ ಪೈರಿಂಗ್, ಇಂದು ಬೆಳ್ಳಿಗೆ 6 ಗಂಟೆ ಸುಮಾರಿಗೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಶೋಕ್ ಮೇಲೆ‌ ಫೈರಿಂಗ್ ಮಾಡಲಾಗಿದೆ.

ಇದನ್ನೂ ಓದಿ:ಹಾವೇರಿ: ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ ಮೈದುನ ಪರಾರಿ

ಇದರ ಜೊತೆಗೆ ಎಸ್ಪಿ ನಾರಾಯಣ್‌ ಅವರು ಖಡಕ್‌ ನಿಧಾ೯ರಗಳನ್ನು ತೆಗೆದುಕೊಂಡು ಶ್ರೀನಿವಾಸಪುರ ಹಾಗೂ ಮಾಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಕತ೯ವ್ಯಲೋಪದಡಿ ಶ್ರೀನಿವಾಸಪುರ ಠಾಣೆಯ ಪಿಎಸ್‌ಐ ಈಶ್ವರಪ್ಪ,ಮುಖ್ಯ ಪೇದೆ ದೇವರಾಜ್‌,ಪೇದೆ ಮಂಜುನಾಥ್‌.ಮಾಲೂರು ಪೊಲೀಸ್‌ ಠಾಣೆಯ ಎಎಸ್‌ಐ ಪ್ರಕಾಶ್‌,ಪೇದೆಗಳಾದ ರಾಮಪ್ಪ,ಅನಂತಮೂತಿ೯,ಇದರ ಜೊತೆ ಮತ್ತೊಂದು ಕೇಸ್‌ ನಲ್ಲಿ ಡಿಎಆರ್‌ ಪೇದೆ ಅನಿಲ್‌ ಸೇರಿದಂತೆ ಒಟ್ಟು ಏಳು ಜನರನ್ನು ಅಮಾನತ್ತು ಮಾಡಲು ಎಸ್ಪಿ ಆದೇಶ ಮಾಡಿದ್ದಾರೆ. ಒಟ್ಟಾರೆ ಕೋಲಾರದಲ್ಲಿ ಅಪರಾದ ಪ್ರಕರಣಗಳು ಹೆಚ್ಚಾಗ್ತಿದ್ದು,ಪೊಲೀಸರು ಮುಲಾಜಿಲ್ಲದೇ ಫೈರಿಂಗ್ ಮಾಡುವ ಮೂಲಕ‌ ಆರೋಪಿಗಳಿಗೆ ಎಚ್ಚರಿಕೆಯನ್ನು ನೀಡ್ತಿದ್ದಾರೆ.ಅಪರಾಧ ಕೃತ್ಯಗಳನ್ನು ಮಾಡುವ ಮುನ್ನಾ ಪೊಲೀಸರ ಗುಂಡೇಟು ತಿನ್ನಲೂ ಸಹ ತಯಾರಾಗಿ ಅನ್ನೋ ಸಂದೇಶ ಕೊಡ್ತಿದ್ದಾರೆ..

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ