ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸಹೋದರರ ಕಾಳಗ; ಅಣ್ಣನನ್ನೇ ಹತ್ಯೆಗೈದ ತಮ್ಮ
ಅವರು ರಕ್ತ ಹಂಚಿಕೊಂಡು ಹುಟ್ಟಿದ್ದ ಅಣ್ಣ ತಮ್ಮಂದಿರು. ಒಟ್ಟಿಗೆ ಆಡುತ್ತಾ ಬೆಳೆದಿದ್ದರು ಕೂಡ ಮೂವರದ್ದು, ಒಂದೊಂದು ಕಥೆ. ಹೀಗಿರುವಾಗಲೇ ಶೋಕಿ ಮಾಡ್ಕೊಂಡಿದ್ದ ಅಣ್ಣನನ್ನು ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕೋಲಾರದ ಮಿಲ್ಲತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ, ನವೆಂಬರ್ 28: ಟೀ ಅಂಗಡಿ ಎದುರೇ ಲಾಂಗು ಹಿಡಿದು ಒಡಹುಟ್ಟಿದ ಅಣ್ಣನನ್ನೇ (Brother) ತಮ್ಮ ಕೊಲೆ (kill) ಮಾಡಿರುವಂತಹ ಘಟನೆ ಕೋಲಾರದ ಮಿಲ್ಲತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಸಲ್ಮಾನ್ ಮೊಹಮ್ಮದ್ನನ್ನು ಸಾಜಿದ್ ಕೊಲೆಗೈದಿದ್ದಾನೆ. ಸದ್ಯ ಕೊಲೆ ಆರೋಪಿ ಸಾಜಿದ್ನನ್ನು ಪೊಲೀಸರು ಬಂಧಿಸಿದ್ದು, ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಕಳೆದ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಸಾಜಿದ್ ಎಂಬಾತ ತನ್ನ ಒಡಹುಟ್ಟಿದ ಅಣ್ಣ ಸಲ್ಮಾನ್ ಎಂಬಾತನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಟಾಟಾ ಸುಮೋ ಕಾರ್ನಲ್ಲಿದ್ದ ಸಾಜಿದ್ ತನ್ನ ಅಣ್ಣನೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಕಾರ್ನಿಂದ ಒಂದು ಉದ್ದದ್ದ ಲಾಂಗ್ ತೆಗೆದು ಏಕಾಏಕಿ ಹಲ್ಲೆ ಮಾಡಿ, ನಂತರ ಕಾರ್ ಹತ್ತಿ ಅಲ್ಲಿಂದ ತೆರಳುತ್ತಾನೆ. ಕೂಡಲೇ ಹಲ್ಲೆಗೊಳಗಾದ ಸಲ್ಮಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದ. ಕೂಡಲೇ ಸ್ಥಳಕ್ಕೆ ಬಂದ ಗಲ್ ಪೇಟೆ ಪೊಲೀಸರು ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿ ಸಾಜಿದ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತಿಗೇ ಚಟ್ಟ ಕಟ್ಟಿದ ಪತ್ನಿ: ಕೊಲೆ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರ!
ಕೋಲಾರದ ಪ್ರಶಾಂತ್ ನಗರ ನಿವಾಸಿಗಳಾದ ಜಾಫರ್ ಹಾಗೂ ಫರಾನಾ ದಂಪತಿಗೆ ಮೂರು ಜನ ಗಂಡು ಮಕ್ಕಳು. ಮೊದಲನೆಯವನು ಸಾಧಿಕ್, ಎರಡನೆಯವನು ಸಲ್ಮಾನ್, ಮೂರನೇಯವನು ಸಾಜಿದ್. ಮೂರು ಜನಕ್ಕೆ ಇನ್ನು ಮದುವೆಯಾಗಿಲ್ಲ. ತಂದೆ ಜಾಫರ್ ಮೃತಪಟ್ಟು ಹತ್ತು ವರ್ಷಗಳೇ ಕಳೆದಿವೆ. ಆದರೆ ಮೂರು ಜನರನ್ನು ತಾಯಿಯೇ ಕೂಲಿ ನಾಲಿ ಮಾಡಿ ಸಾಕಿದ್ದಾರೆ. ಮೊದಲನೆಯವ ಸಾಧಿಕ್ ಹಾಗೂ ಮೂರನೇಯವ ಸಾಜಿದ್ ಕುಟುಂಬದೊಂದಿಗೆ ಇದ್ದು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು, ಆದರೆ ಕೊಲೆಯಾದ ಸಲ್ಮಾನ್, ಅವರ ತಾಯಿ ಹೇಳುವಂತೆ ಶೋಕಿಲಾಲ, ಮಾದಕ ವಸ್ತುಗಳಿಗೆ ದಾಸನಾಗಿ ಹೋಗಿದ್ದ.
ಈ ಮೊದಲು ಕೂಡ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ. ಸದ್ಯ ಅದು ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ನ.27 ರಂದು ಕೂಡ ಕೋರ್ಟ್ ವಿಚಾರಣೆ ಇತ್ತು. ಈ ವೇಳೆ ಲಾಯರ್ಗೆ ಹಣ ಕೊಡುವ ವಿಚಾರದಲ್ಲೇ ಸಲ್ಮಾನ್ ಹಾಗೂ ಸಾಜಿದ್ ನಡುವೆ ಜಗಳವಾಗಿದೆ. ಇದಾದ ನಂತರ ಸಲ್ಮಾನ್ ಮನೆಗೆ ಹೋಗಿ ತಾಯಿಯೊಂದಿಗೆ ಗಲಾಟೆ ಮಾಡಿ ಬಂದಿದ್ದ. ಈ ಎಲ್ಲಾ ವಿಷಯ ತಿಳಿದುಕೊಂಡಿದ್ದ ಸಾಜಿದ್ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಟೀ ಅಂಗಡಿಯ ಬಳಿ ಕುಳಿತಿದ್ದ ಸಲ್ಮಾನ್ ಜೊತೆಗೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಸಾಜಿದ್, ಲಾಂಗ್ನಿಂದ ತನ್ನ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್ಗೆ ನಾಲೆಗೆ ಹಾರಿದ ಮಹಿಳೆ
ಒಟ್ಟಾರೆ ರೂಢಿಸಿಕೊಂಡ ಕೆಲವೊಂದು ದುಷ್ಚಟಗಳು, ಸಹವಾಸಗಳು, ಮಾಡಬಾರದನ್ನು ಮಾಡಿಸಿ ಕೊನೆಗೆ ನಮ್ಮವರೇ ನಮ್ಮವರನ್ನು ಹತ್ಯೆ ಮಾಡುವಂತ ಸ್ಥಿತಿಗೆ ತಲುಪಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




