ಲವ್ವಿಡವ್ವಿ ಇಟ್ಟುಕೊಂಡಿದ್ದ ಮಹಿಳೆಯಿಂದಲೇ ಕೊಲೆಯಾದ ಯುವಕ: ಪ್ರಕರಣ ಬೇಧಿಸಿದ್ದೇ ರೋಚಕ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2024 | 5:55 PM

ಇತ್ತೀಚೆಗೆ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾಗಳನ್ನು ಬಳಸುತ್ತಾರೆ. ಸೋಶಿಯಲ್ ಮೀಡಿಯಾಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಆದ್ರೆ ಅವು ಎಷ್ಟು ಅನಕೂಲವಾಗಿವೆಯೋ ಅಷ್ಟೇ ಅವುಗಳಿಂದ ಅನಾಹುತಗಳು ಕೂಡಾ ಆಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯನಾಗಿದ್ದ ಯುವಕನೋರ್ವ, ವಿಧವೆ ಮಹಿಳೆಯ ಸಂಪರ್ಕಕ್ಕೆ ಸಿಲುಕಿ, ಆಕೆಯ ಸಂಬಂಧ ಬೆಳಸಿ, ನಂತರ ಆಕೆಯಿಂದಲೇ ಕೊಲೆಯಾಗಿ ಹೋಗಿದ್ದಾನೆ.

ಲವ್ವಿಡವ್ವಿ ಇಟ್ಟುಕೊಂಡಿದ್ದ ಮಹಿಳೆಯಿಂದಲೇ ಕೊಲೆಯಾದ ಯುವಕ: ಪ್ರಕರಣ ಬೇಧಿಸಿದ್ದೇ ರೋಚಕ
ಶರಣಪ್ಪ, ಕೊಲೆಯಾದ ಯುವಕ
Follow us on

ಕೊಪ್ಪಳ, ಅಕ್ಟೋಬರ್ 08): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಯುವಕನೋರ್ವ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೆಪ್ಟಂಬರ್ 30 ರಂದು ಶರಣಪ್ಪ ಮಸ್ಕಿ ಮನೆಯಲ್ಲಿ ಸಾವನ್ನಪ್ಪಿದ್ದ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದೇ ನಿಗೂಢವಾಗಿತ್ತು. ಈ ಸಂಬಂಧ ಪ್ರಕರಣದ ತನಿಖೆಗಿಳಿದ ಕುಷ್ಟಗಿ ಠಾಣೆಯ ಪೊಲೀಸರಿಗೆ ಇಂದೊಂದು ಕೊಲೆ ಎನ್ನುವುದು ಗೊತ್ತಾಗಿದೆ. ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದ ವಿಧವೆ ಮಹಿಳೆಯೇ ಶರಣಪ್ಪನನ್ನು ಕೊಲೆ ಮಾಡಿರುವುದು ಗೊತ್ತಾಗಿದ್ದು, ಸದ್ಯ ಕೊಲೆ ಪಾತಕಿ ಪೊಲೀಸರ ಅತಿಥಿಯಾಗಿದ್ದಾಳೆ. ಇನ್ನು ಈ ಪ್ರಕರಣವನ್ನು ಬೇಧಿಸಿದ್ದೇ ರೋಚಕ.

ಇನ್ಸ್ಟಾದಲ್ಲಿ ಪರಿಚೆಯವಾದ ಮಹಿಳೆಯಿಂದಲೇ ಕೊಲೆ

ಶರಣಪ್ಪನನ್ನು ಕೊಲೆ ಮಾಡಿದವರು ಬೆಳಗಾವಿ ಜಿಲ್ಲೆಯ ಮುಗಳಖೋಡ ಗ್ರಾಮದ ನಿವಾಸಿಗಳಾದ ಮೂವತ್ತು ವರ್ಷದ ಭಾಗ್ಯಶ್ರೀ ಮತ್ತು ಇಬ್ರಾಹೀಂ ಅನ್ನೋರು. ಆರೋಪಿ ಭಾಗ್ಯಶ್ರೀಗೆ ಮದುವೆಯಾಗಿದ್ದು ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನಂತೆ. ಇನ್ನು ವರ್ಷದ ಹಿಂದೆ ಶರಣಪ್ಪಳಿಗೆ ಇನ್ಸ್ಟಾಗ್ರಾಂ ಮೂಲಕ ಭಾಗ್ಯಶ್ರೀ ಪರಿಚೆಯವಾಗಿದ್ದಳಂತೆ. ಇದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ಕೂಡಾ ಕಾರಣವಾಗಿತ್ತು. ಹೀಗಾಗಿ ಆಗಾಗ ಭಾಗ್ಯಶ್ರೀ, ಶರಣಪ್ಪನ ಸ್ವಗ್ರಾಮವಾಗಿರೋ ಹಿರೇಮನ್ನಾಪುರ ಗ್ರಾಮಕ್ಕೆ ಬಂದು ಹೋಗುತ್ತಿದ್ದಳಂತೆ. ಶರಣಪ್ಪ ಕೂಡಾ ಬಾಗ್ಯಶ್ರೀ ಇದ್ದಲಿ ಹೋಗಿ ಬರ್ತಿದ್ದನಂತೆ.

ಅವಿವಾಹಿತನಾಗಿದ್ದ ಶರಣಪ್ಪ ಮತ್ತು ಭಾಗ್ಯಶ್ರೀ ಇಬ್ಬರು ಇದ್ದಾಗ ಅನೇಕ ಖಾಸಗಿ ಕ್ಷಣಗಳ ಪೋಟೋಗಳನ್ನು ತನ್ನ ಮೊಬೈಲ್ ನಲ್ಲಿ ತಗೆದುಕೊಂಡಿದ್ದನಂತೆ. ಇನ್ನು ಭಾಗ್ಯಶ್ರೀಗೆ ಶರಣಪ್ಪನ ಜೊತೆ ಸಂಬಂಧವಿದ್ರು ಕೂಡಾ ತನ್ನದೇ ಗ್ರಾಮದಲ್ಲಿರುವ ಇಬ್ರಾಹಿಂ ಅನ್ನೋನ ಜೊತೆ ಕೂಡಾ ಸಂಬಂಧ ಬೆಳಸಿದ್ದಳಂತೆ. ಇಬ್ರಾಹಿಂ ಗೆ, ಭಾಗ್ಯಶ್ರೀಗೆ ಶರಣಪ್ಪಳ ಜೊತೆ ಸಂಬಂಧ ಇರೋದು ಗೊತ್ತಾಗಿತ್ತು. ಹೀಗಾಗಿ ಶರಣಪ್ಪನ ತಂಟೆಗೆ ಹೋಗಂತೆ ಭಾಗ್ಯಶ್ರೀಗೆ ಹೇಳಿದ್ದ. ಹೀಗಾಗಿ ಭಾಗ್ಯಶ್ರೀ, ಶರಣಪ್ಪನಿಂದ ದೂರವಾಗುತ್ತಾ ಹೊರಟಿದ್ದಳು. ಇದು ಶರಣಪ್ಪನ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ತಾವು ಇಬ್ಬರು ಇರೋ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಭಾಗ್ಯಶ್ರಿಗೆ ಶರಣಪ್ಪ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಗದಗ: ತಂಗಿಯನ್ನು ಪ್ರೀತಿಸಿದ ಎಂದು ಯುವಕನಿಗೆ ಚಾಕು ಇರಿದ ಅಣ್ಣ, ಸಾವು ಬದುಕಿನ ನಡುವೆ ಯುವಕನ ಹೋರಾಟ

ಪೋಟೋಗಳು ವೈರಲ್ ಆದ್ರೆ ತನ್ನ ಮರ್ಯಾದೆ ಹಾಳಾಗುತ್ತದೆ ಅಂತ ತಿಳಿದ ಭಾಗ್ಯಶ್ರೀ, ಸೆಪ್ಟಂಬರ್ 30 ರಂದು ಇಬ್ರಾಹಿಂ ನನ್ನು ಕರೆದುಕೊಂಡು ಬೈಕ್ ಮೇಲೆ ರಾತ್ರಿ ಹಿರೇಮನ್ನಾಪುರ ಗ್ರಾಮಕ್ಕೆ ಬಂದಿದ್ದಳು. ರಾತ್ರಿ ಎರಡು ಗಂಟೆ ಸಮಯದಲ್ಲಿ ಕೊಲೆ ಮಾಡಿ, ಪೆಟ್ರೋಲ್ ಹಾಕಿ ಶವ ಸುಟ್ಟು, ನಂತರ ಗ್ಯಾಸ್ ಬಳಿ ಶವ ಹಾಕಿ ಪರಾರಿಯಾಗಿದ್ದರು. ಹೋಗುವಾಗ ಶರಣಪ್ಪನ ಮೊಬೈಲ್ ಕೂಡಾ ತಗೆದುಕೊಂಡು ಹೋಗಿದ್ದರು. ತಮ್ಮೂರಿಗೆ ಹೋಗಿದ್ದ ಭಾಗ್ಯಶ್ರೀ ಮತ್ತು ಇಬ್ರಾಹಿಂ, ತಮ್ಮ ಪಾಡಿಗೆ ತಾವು ಇದ್ದರಂತೆ.

ಆರೋಪಿಗಳು ಸಿಕ್ಕಿದ್ದು ಹೇಗೆ ಗೊತ್ತಾ?

ಶರಣಪ್ಪನ ಕೊಲೆಯಾಗಿದ್ದರ ಬಗ್ಗೆ ತನಿಖೆ ಆರಂಭಿಸಿದ್ದ ಕುಷ್ಟಗಿ ಠಾಣೆಯ ಪೊಲೀಸರಿಗೆ ಸೂಕ್ತ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆದ್ರೆ ಆರೋಪಿಗಳು ಬಂದು ಕೊಲೆ ಮಾಡಿ ಹೋಗಿದ್ದನ್ನು ಯಾರು ನೋಡಿರಲಿಲ್ಲಾ. ಹೀಗಾಗಿ ಯಾರು ಕೊಲೆ ಮಾಡಿದ್ದರು ಅನ್ನೋದು ಪತ್ತೆ ಮಾಡುವದೇ ಸವಾಲಾಗಿತ್ತು. ಆದ್ರೆ ಕಳೆದ ಕೆಲ ದಿನಗಳಿಂದ ಶರಣಪ್ಪನ ಮೊಬೈಲ್ ಗೆ ಯಾರೆಲ್ಲರ ಕರೆಗಳು ಬಂದಿವೆ ಅನ್ನೋದನ್ನು ಪತ್ತೆ ಮಾಡಿದಾಗ ಭಾಗ್ಯಳ ನಂಬರ್ ಸಿಕ್ಕಿದೆ. ಹೀಗಾಗಿ ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಚ್ಚರಿಯೆಂದ್ರೆ ಆರೋಪಿಗಳು ಇಬ್ಬರು ಕೂಡಾ, ಕೊಲೆ ಮಾಡಲು ಬರುವಾಗ, ಮೊಬೈಲ್ ತಂದ್ರೆ ಸಿಕ್ಕಿ ಬೀಳ್ತೇವೆ ಅಂತ ತಿಳಿದು ಮೊಬೈಲ್ ಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರಂತೆ.

ಸದ್ಯ ಭಾಗ್ಯ ಮತ್ತು ಇಬ್ರಾಹಿಂನನ್ನು ಬಂಧಿಸಿರೋ ಕುಷ್ಟಗಿ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನ್ಕಕೊಪ್ಪಿಸಿದ್ದಾರೆ. ಆದ್ರೆ ಮದುವೆಯಾಗಿ ಚನ್ನಾಗಿ ಸಂಸಾರ ನಡೆಸೋದನ್ನು ಬಿಟ್ಟು, ವಿಧವೆ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಶರಣಪ್ಪ ಕೊಲೆಯಾಗಿ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

ಘಟನೆ ವಿವರ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ, ಸೆಪ್ಟಂಬರ್ 30 ಯುವಕನೋರ್ವ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಇನ್ನು ಯುವಕನ ಹೆಸರು ಶರಣಪ್ಪ ಮಸ್ಕಿ ಅಂತ. ಇಪ್ಪತ್ತೆರಡು ವರ್ಷದ ಶರಣಪ್ಪ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ತಾಯಿ ಅನೇಕ ವರ್ಷಗಳ ಹಿಂದೆಯೇ ಬಾರದ ಲೋಕಕ್ಕೆ ಹೋಗಿದ್ದಳು. ತಂದೆಗೆ ವಯಸ್ಸಾಗಿದ್ದರಿಂದ, ಆತ ಸಹೋದರಿ ಜೊತೆ ಬೇರೆ ಗ್ರಾಮದಲ್ಲಿ ಇದ್ದ. ಅವಿವಾಹಿತನಾಗಿದ್ದ ಶರಣಪ್ಪ ಒಬ್ಬನೇ ಮನೆಯಲ್ಲಿ ಇರ್ತಿದ್ದ. ಆದ್ರೆ ಸೆಪ್ಟಂಬರ್ 30 ರಂದು ಮುಂಜಾನೆ ಕೆಲಸಕ್ಕೆ ಕರೆಯಲು ಹೋದಾಗ, ಮನೆ ಬಾಗಿಲು ಒಳಗಿನಿಂದ ಲಾಕ್ ಇರಲಿಲ್ಲಾ. ಬಾಗಿಲು ದೂಡಿದಾಗ, ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶವ ನೋಡಿದ ಸುತ್ತಮುತ್ತಲಿನ ಜನರು, ಆತ್ಮಹತ್ಯೆ ಇರಬಹುದು ಅಂತ ಅಂದುಕೊಂಡಿದ್ದರು. ಆದ್ರೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಬಂದು ನೋಡಿದಾಗ ಗೊತ್ತಾಗಿದೆ, ಶರಣಪ್ಪನದು ಆತ್ಮಹತ್ಯೆಯಲ್ಲಾ, ಬದಲಾಗಿ ಕೊಲೆ ಅನ್ನೋದು.

ಹೌದು ಸೆಪ್ಟಂಬರ್ 29 ರಂದು ರಾತ್ರಿ ಮನೆಗೆ ಬಂದಿದ್ದ ಹಂತಕರು, ಕೊಲೆ ಮಾಡಿ, ನಂತರ ಗ್ಯಾಸ್ ಸಿಲಿಂಡರ್ ಬಳಿ ಶವಹಾಕಿ, ಬೆಂಕಿ ಹಚ್ಚಿದ್ದಲ್ಲದೇ, ಗ್ಯಾಸ್ ಆನ್ ಮಾಡಿ, ಇಡೀ ಮನೆಯನ್ನು ಸ್ಪೋಟಗೊಳ್ಳುವಂತೆ ಮಾಡಿ ಹೋಗಿದ್ದಾರೆ. ಆದ್ರೆ ಗ್ಯಾಸ್ ಖಾಲಿಯಾಗಿದ್ದರಿಂದ ಯಾವುದೇ ದೊಡ್ಡ ಅನಾಹುತವಾಗಿಲ್ಲಾ.ಇನ್ನು ಆತ್ಮಹತ್ಯೆ ಅಂತ ತಿಳಿದಿದ್ದವರಿಗೆ ಕೊಲೆ ಅನ್ನೋದು ಗೊತ್ತಾಗುತ್ತಿದ್ದಂತೆ ಕುಟುಂಬದವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂದಿಸಿದಂತೆ ಕುಷ್ಟಗಿ ಪೊಲೀಸರು ಇದೀಗ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ