Murder: ಕೇರಳದ ಕಣ್ಣೂರಿನಲ್ಲಿ ಸಿಪಿಐಎಂ ಕಾರ್ಯಕರ್ತನ ಬರ್ಬರ ಹತ್ಯೆ; ಕೊಲೆಯ ಹಿಂದೆ ಆರ್​ಎಸ್​ಎಸ್​ ಕೈವಾಡದ ಆರೋಪ

ಕೆಂಪು-ಕೇಸರಿ ಘರ್ಷಣೆಗಳಿಗೆ ಕುಖ್ಯಾತಿ ಪಡೆದಿರುವ ಉತ್ತರ ಕೇರಳ ಜಿಲ್ಲೆಯಲ್ಲಿ ನಡೆದ ಘರ್ಷಣೆಗಳಲ್ಲಿ ಕಳೆದ ಮೂರು ದಶಕಗಳಲ್ಲಿ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್‌ನ ಕನಿಷ್ಠ 200 ಕಾರ್ಯಕರ್ತರು ಕೊಲೆಯಾಗಿದ್ದಾರೆ.

Murder: ಕೇರಳದ ಕಣ್ಣೂರಿನಲ್ಲಿ ಸಿಪಿಐಎಂ ಕಾರ್ಯಕರ್ತನ ಬರ್ಬರ ಹತ್ಯೆ; ಕೊಲೆಯ ಹಿಂದೆ ಆರ್​ಎಸ್​ಎಸ್​ ಕೈವಾಡದ ಆರೋಪ
ಕೊಲೆಯಾದ ಸಿಪಿಐಎಂ ಕಾರ್ಯಕರ್ತ
Updated By: ಸುಷ್ಮಾ ಚಕ್ರೆ

Updated on: Feb 21, 2022 | 2:32 PM

ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಾರ್ಯಕರ್ತನಿಗೆ ಚಾಕುವಿನಿಂದ ಇರಿದು ಇಂದು ಮುಂಜಾನೆ ಹತ್ಯೆ ಮಾಡಲಾಗಿದೆ. ಈ ಕೊಲೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕೈವಾಡವಿದೆ ಎಂದು ಸಿಪಿಐ(ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂವಿ ಜಯರಾಜನ್ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಭಾರತೀಯ ಜನತಾ ಪಾರ್ಟಿ (BJP) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎನ್ ಹರಿಸದನ್ ತಳ್ಳಿ ಹಾಕಿದ್ದಾರೆ.

54 ವರ್ಷದ ಮೀನುಗಾರ ಕೆ. ಹರಿದಾಸ್ ಕೆಲಸ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ರಕ್ಷಿಸಲು ಯತ್ನಿಸಿದಾಗ ಆತನ ಸಹೋದರನಿಗೂ ಗಾಯಗಳಾಗಿವೆ. ದಾಳಿಕೋರರು ಎರಡು ಮೋಟಾರ್ ಬೈಕ್ ಗಳಲ್ಲಿ ಬಂದಿದ್ದು, ಅವರು ಹರಿದಾಸ್​ಗಾಗಿ ರಸ್ತೆ ಬದಿ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆಯನ್ನು ವಿರೋಧಿಸಿ ತಲಶ್ಶೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದ್ ಆಚರಿಸಲಾಗುತ್ತಿದೆ. ಕಳೆದ ವಾರ ಸ್ಥಳೀಯ ದೇವಸ್ಥಾನದ ಉತ್ಸವದ ವೇಳೆ ಆರ್‌ಎಸ್‌ಎಸ್ ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಸಣ್ಣ ಘರ್ಷಣೆ ನಡೆದಿದ್ದು, ಇದರಲ್ಲಿ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೇಡಿಗಾಗಿ ಸಿಪಿಐಎಂ ಕಾರ್ಯಕರ್ತನ ಹತ್ಯೆ ಮಾಡಿರುವ ಸಾಧ್ಯತೆಗಳೂ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಶಾಂತಿಯುತ ವಾತಾವರಣವನ್ನು ಹಾಳು ಮಾಡಲು ಆರ್‌ಎಸ್‌ಎಸ್ ಯತ್ನಿಸುತ್ತಿದೆ. ಕೋಮು ಸೌಹಾರ್ದತೆ ಕಾಪಾಡಲು ಪಕ್ಷವನ್ನು ಗುರಿಯಾಗಿಸುತ್ತಿದೆ. ಆರೆಸ್ಸೆಸ್-ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರಿಗೆ ಲಗಾಮು ಹಾಕಬೇಕು ಎಂದು ಎಂವಿ ಜಯರಾಜನ್ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ನಾಯಕರೊಬ್ಬರು ಕಳೆದ ವಾರ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆದರೆ ಬಿಜೆಪಿ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎನ್. ಹರಿಸದನ್ ಈ ಹತ್ಯೆಯಲ್ಲಿ ಆರ್​ಎಸ್​ಎಸ್​ ಪಾತ್ರವಿಲ್ಲ ಎಂದು ಖಚಿತಪಡಿಸಿದ್ದಾರೆ.

ಕೆಂಪು-ಕೇಸರಿ ಘರ್ಷಣೆಗಳಿಗೆ ಕುಖ್ಯಾತಿ ಪಡೆದಿರುವ ಉತ್ತರ ಕೇರಳ ಜಿಲ್ಲೆಯಲ್ಲಿ ನಡೆದ ಘರ್ಷಣೆಗಳಲ್ಲಿ ಕಳೆದ ಮೂರು ದಶಕಗಳಲ್ಲಿ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್‌ನ ಕನಿಷ್ಠ 200 ಕಾರ್ಯಕರ್ತರು ಕೊಲೆಯಾಗಿದ್ದಾರೆ.

ಇದನ್ನೂ ಓದಿ: ಗೃಹ ಸಚಿವರ ಜಿಲ್ಲೆಯಲ್ಲಿ ಕೊಲೆ ಆಗಿದೆ ಅಂದರೆ ಏನು ಅರ್ಥ, ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು; ಸಿದ್ದರಾಮಯ್ಯ

Shivamogga murder: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ! ಬೆಚ್ಚಿಬಿದ್ದ ಮಲೆನಾಡು ಜನ