ಪಾಕಿಸ್ತಾನದ ಕರಾಚಿಯಲ್ಲಿ ಪ್ರವಾಹ ಸಂತ್ರಸ್ತರು ಪ್ರಯಾಣಿಸುತ್ತಿದ್ದ ಬಸ್​ಗೆ ಬೆಂಕಿ; 21 ಜನ ಸಜೀವ ದಹನ

| Updated By: ಸುಷ್ಮಾ ಚಕ್ರೆ

Updated on: Oct 13, 2022 | 11:44 AM

ಮೃತರೆಲ್ಲರೂ ಪ್ರವಾಹ ಸಂತ್ರಸ್ತರಾಗಿದ್ದರು. ಅವರೆಲ್ಲರೂ ಕರಾಚಿಯಿಂದ ತಮ್ಮ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

ಪಾಕಿಸ್ತಾನದ ಕರಾಚಿಯಲ್ಲಿ ಪ್ರವಾಹ ಸಂತ್ರಸ್ತರು ಪ್ರಯಾಣಿಸುತ್ತಿದ್ದ ಬಸ್​ಗೆ ಬೆಂಕಿ; 21 ಜನ ಸಜೀವ ದಹನ
ಪಾಕಿಸ್ತಾನದಲ್ಲಿ ಬೆಂಕಿ ಅಪಘಾತ
Follow us on

ಕರಾಚಿ: ಪಾಕಿಸ್ತಾನದಲ್ಲಿ ಭೀಕರ ಅಪಘಾತ (Pakistan Accident) ಉಂಟಾಗಿದ್ದು, ರಸ್ತೆಯಲ್ಲಿದ್ದ ಬಸ್‌ಗೆ ಬೆಂಕಿ (Fire Accident) ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ 21 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಮಧ್ಯರಾತ್ರಿ ಸಿಂಧ್ ಪ್ರಾಂತ್ಯದ ಜಮ್‌ಶೋರೊ ಜಿಲ್ಲೆಯ ನೂರಿಯಾಬಾದ್ ಬಳಿಯ ಎಂ9 ಮೋಟರ್‌ವೇಯಲ್ಲಿ ಈ ಅಪಘಾತ ಸಂಭವಿಸಿದೆ. ಎಸಿ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಮೃತರೆಲ್ಲರೂ ಪ್ರವಾಹ ಸಂತ್ರಸ್ತರಾಗಿದ್ದರು. ಅವರೆಲ್ಲರೂ ಕರಾಚಿಯಿಂದ ತಮ್ಮ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಅಧಿಕಾರಿಗಳು ನೀಡಿದ ವಿವರಗಳ ಪ್ರಕಾರ, ಆಗಸ್ಟ್‌ನಲ್ಲಿ ಪಾಕಿಸ್ತಾನವನ್ನು ಪ್ರವಾಹಕ್ಕೆ ಒಳಪಡಿಸಿದ ನಂತರ ಪ್ರವಾಹ ಸಂತ್ರಸ್ತರನ್ನು ಕರಾಚಿಯ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಪರಿಸ್ಥಿತಿ ಕೊಂಚ ಸುಧಾರಿಸಿದ್ದರಿಂದ ಅವರೆಲ್ಲರೂ ತಮ್ಮ ಊರುಗಳಿಗೆ ತೆರಳುತ್ತಿದ್ದರು.

ಇದನ್ನೂ ಓದಿ: Shocking Video: ಬೆಂಕಿ ಹೊತ್ತಿಕೊಂಡ ಬಸ್ ಕೆಳಗೆ ಬಿದ್ದು ಬೈಕ್ ಸವಾರ ಸಜೀವ ದಹನ; ದಿಕ್ಕಾಪಾಲಾಗಿ ಓಡಿದ ಪೊಲೀಸರು

ಈ ವೇಳೆ ಸಿಂಧ್ ಪ್ರಾಂತ್ಯದ ಖೈರ್‌ಪುರನಾಥನ್ ಶಾ ಪ್ರದೇಶದ 45 ಜನರು ಎಸಿ ಬಸ್‌ನಲ್ಲಿ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಆದರೆ, ಬಸ್ ನೂರಿಯಾಬಾದ್ ಬಳಿ ತಲುಪಿದ ತಕ್ಷಣ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಲೇ ಬಸ್​ಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತು. ಅದರಲ್ಲಿದ್ದವರೆಲ್ಲ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಎಸಿ ಬಸ್ ಆಗಿದ್ದರಿಂದ ಕಿಟಕಿಗಳೆಲ್ಲ ಮುಚ್ಚಿದ್ದರಿಂದ ಬಸ್​ನಿಂದ ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಕೆಲವರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು, ಇನ್ನು ಕೆಲವರು ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಕರಾಚಿಯ ಬಂದರು ನಗರವನ್ನು ಹೈದರಾಬಾದ್ ಮತ್ತು ಸಿಂಧ್ ಪ್ರಾಂತ್ಯದ ಜಮ್ಶೋರೊ ನಗರಗಳೊಂದಿಗೆ ಸಂಪರ್ಕಿಸುವ M-9 ಮೋಟಾರುಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. “ಇದುವರೆಗೆ, ಅಪಘಾತದಲ್ಲಿ 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳಿಂದ ಚಿಕಿತ್ಸೆ ನೀಡಲಾಗಿದೆ” ಎಂದು ಪಾಕಿಸ್ತಾನದ ಸಂಸದೀಯ ಆರೋಗ್ಯ ಕಾರ್ಯದರ್ಶಿ ಸಿರಾಜ್ ಖಾಸಿಮ್ ಸೂಮ್ರೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Maharashtra: ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ, ಸುಟ್ಟು ಕರಕಲಾದ ಬಸ್‌

ದಾದು ಜಿಲ್ಲೆ ಸಿಂಧ್ ಪ್ರಾಂತ್ಯದ ಅತಿ ಹೆಚ್ಚು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಬೆಂಕಿಗೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ, ಆದರೆ ಬಸ್‌ನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ಸಂಪೂರ್ಣ ಬಸ್ ಅನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವು ಪ್ರಯಾಣಿಕರು ಬಸ್‌ನಿಂದ ಜಿಗಿದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ