ಜಾತಿಗಣತಿ ಹೆಸರಿನಲ್ಲಿ ಬಂದು ಮಹಿಳೆ ಮೇಲೆ ಹಲ್ಲೆ: ದರೋಡೆಗೆ ಯತ್ನ?

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ & ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಬಂದ ದುಷ್ಕರ್ಮಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಶಿವಮೊಗ್ಗದ ಕ್ಲಾಕ್‌ಪೇಟೆಯ ಆಜಾದ್ ನಗರದ 2ನೇ ತಿರುವಿನಲ್ಲಿನ ಮನೆಯಲ್ಲಿ ಪುರುಷರು ಇಲ್ಲದ ವೇಳೆ ಗಣತಿಗೆ ಎಂದು ಹೇಳಿಕೊಂಡು ಬಂದವರು ಆಧಾರ್​ ಕಾರ್ಡ್​ ಕೇಳುವ ನೆಪಮಾಡಿ ಅಟ್ಯಾಕ್​ ಮಾಡಿದ್ದಾರೆ ಎನ್ನಲಾಗಿದೆ.

ಜಾತಿಗಣತಿ ಹೆಸರಿನಲ್ಲಿ ಬಂದು ಮಹಿಳೆ ಮೇಲೆ ಹಲ್ಲೆ: ದರೋಡೆಗೆ ಯತ್ನ?
ದರೋಡೆ ಯತ್ನ

Updated on: Oct 03, 2025 | 10:09 PM

ಶಿವಮೊಗ್ಗ/ಬಾಗಲಕೋಟೆ, ಅಕ್ಟೋಬರ್​​ 03: ಜಾತಿಗಣತಿ ಹೆಸರಿನಲ್ಲಿ (Caste census) ಬಂದ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿರುವ ಆರೋಪ ಶಿವಮೊಗ್ಗದಲ್ಲಿ ಕೇಳಿಬಂದಿದೆ. ಮನೆಯಲ್ಲಿ ಪುರುಷರಿಲ್ಲದ ವೇಳೆ ಗಣತಿ ಹೆಸರಿನಲ್ಲಿ ಬಂದವರು, ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಆಧಾರ್​ ಕಾರ್ಡ್​ ತರಲು ಮನೆಯೊಳಗೆ ಹೋಗಿದ್ದ ಮಹಿಳೆ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಗೆ ಒಳಗಾದ ಮಹಿಳೆಯನ್ನ ದಿಲ್‌ಶಾದ್‌ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಶಿವಮೊಗ್ಗದ ಕ್ಲಾಕ್‌ಪೇಟೆಯ ಆಜಾದ್ ನಗರದ 2ನೇ ತಿರುವಿನಲ್ಲಿನ ಮನೆಗೆ ಗಣತಿ ಹೆಸರಿನಲ್ಲಿ ತಸ್ಲಿಮಾ ಹಾಗೂ ಅಸ್ಲಾಂ ದಂಪತಿ ಬಂದಿದ್ದರು. ಆಧಾರ್​ ಕಾರ್ಡ್​ ತೋರಿಸಿ ಎಂಬ ನೆಪ ಮಾಡಿಕೊಂಡು ಮನೆಯಲ್ಲಿದ್ದ ದಿಲ್‌ಶಾದ್‌ ಮೇಲೆ ಹಲ್ಲೆ ನಡೆಸಲಾಗಿದೆ. ಸ್ಥಳದಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದ ದಿಲ್‌ಶಾದ್‌ರ ರಕ್ಷಣೆಗೆ ಸ್ಥಳೀಯರು ಬಂದಿದ್ದು, ಮನೆಯಲ್ಲಿ ಅಡಗಿ ಕುಳಿತಿದ್ದ ತಸ್ಲಿಮಾನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕೆ ತಂದಿದ್ದ ಬ್ಯಾಗ್​ ನಲ್ಲಿ ಕೆಲವು ಮಾರಕಾಸ್ತ್ರಗಳು ಇದ್ದವು ಎಂದೂ ಸ್ಥಳೀಯರು ತಿಳಿಸಿದ್ದಾರೆ. ಗಾಯಾಳು ದಿಲ್‌ಶಾದ್‌ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳೀಯರು ಹೇಳೋದೇನು?

ಬೈಕ್​ ಅಪಘಾತ: ಶಿಕ್ಷಕಿ ಸಾವು

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ & ಶೈಕ್ಷಣಿಕ ಸಮೀಕ್ಷೆ ಮುಗಿಸಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕಿನಿಂದ ಬಿದ್ದು ಶಿಕ್ಷಕಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಬೋಡನಾಯಕನದಿನ್ನಿ ಕ್ರಾಸ್​​​ ಬಳಿ ನಡೆದಿದೆ. ಮೃತ ಶಿಕ್ಷಕಿಯನ್ನ ದಾನಮ್ಮ ಯಡಹಳ್ಳಿ(51) ಎಂದು ಗುರುತಿಸಲಾಗಿದ್ದು, ರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಸೀತಿಮನಿ ಗ್ರಾಮದಲ್ಲಿ ಸಮೀಕ್ಷೆ ಮುಗಿಸಿ ಮಗನ ಜೊತೆ ಬರುವಾಗ ಬೈಕ್​ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ದಾನಮ್ಮ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:59 pm, Fri, 3 October 25