ಕೊಡಗು: ವ್ಯಾಪಾರಿ ಮೇಲೆ ಗುಂಡಿನ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ವ್ಯಾಪಾರಿಯೋರ್ವರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗು: ವ್ಯಾಪಾರಿ ಮೇಲೆ ಗುಂಡಿನ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
Follow us
|

Updated on: Apr 22, 2023 | 2:29 PM

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ವ್ಯಾಪಾರಿ ಬೋಪಣ್ಣ ಎಂಬುವವರ ಮೇಲೆ ಗುಂಡಿನ ದಾಳಿ(Firing) ನಡೆಸಲಾಗಿದ್ದು, ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲ್ಲಮಕ್ಕಡ ರಂಜಿತ್ ಎಂಬಾತನೇ ಗುಂಡು ಹಾರಿಸಿದ ಆರೋಪಿ. ಇನ್ನು ಈ ಘಟನೆ ಕುರಿತು ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಬಂದೂಕಿನಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ

ಕೊಡಗು: ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಬಂದೂಕಿನಿಂದ ಹೊಡೆದು ವ್ಯಕ್ತಿಯೋರ್ವನ ಕೊಲೆ ಮಾಡಲಾಗಿತ್ತು. ಹೌದು ಸಮಾಜಸೇವೆ ಮಾಡುವ ಮೂಲಕ ಹೆಸರು ಮಾಡಿದ್ದ ಊರಿನ ಕೊಡುಗೈ ದಾನಿ ಮಧು(42) ಎಂಬಾತನನ್ನ ದುಷ್ಕರ್ಮಿಯೊಬ್ಬನ ಬಂದೂಕಿನಿಂದ ಹೊಡೆದು ಇವರ ಬದುಕನ್ನೇ ಮುಗಿಸಿಬಿಟ್ಟಿದ್ದ. ತನ್ನ ಪತ್ನಿ ಮತ್ತು ಮೂವರು ಮಕ್ಕಳ ಸುಖ ಸಂಸಾರ ಹೊಂದಿದ್ದ ಮಧು. ಕಾಫಿ ತೋಟದ ಮಾಲೀಕನಾಗಿದ್ದ. ಸಾಕಷ್ಟು ಸ್ಥಿತಿವಂತರೇ ಆಗಿದ್ದರು. ಈ ಊರಿನಲ್ಲಿ ಯಾವುದೇ ಜಾತ್ರೆ, ಹಬ್ಬ, ಕ್ರೀಡಾ ಚಟುವಟಿಕೆಗಳು ನಡೆದರೆ ಅದಕ್ಕೆ ಹಣ ಸಹಾಯ ಮಾಡ್ತಾ ಇದ್ದವರಲ್ಲಿ ಇವರೇ ಮೊದಲಿಗರಾಗಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು: ಹಾಡಹಗಲೇ ಗುಂಡಿನ ದಾಳಿ ನಡೆಸಿ ಬೈಕ್​ನಲ್ಲಿ ತೆರಳುತ್ತಿದ್ದ ಸವಾರರಿಬ್ಬರ ಹತ್ಯೆ

ಅದು ಇದೇ ಏಪ್ರಿಲ್ 15 ನೇ ತಾರೀಖು ತೋರಾ ಗ್ರಾಮದಲ್ಲಿ ಬಿಸು ಹಬ್ಬ. ಗೋಣಿಕೊಪ್ಪ ಪಟ್ಟಣಕ್ಕೆ ಹೋಗಿದ್ದ ಮಧು ಸಂಜೆ ವೇಳೆಗೆ ಹಿಂದಿರುಗಿದ್ದಾರೆ. ಹುಡುಗರು ಮಧು ಅವರನ್ನ ಮನೆಗೆ ಬನ್ನಿ ಅಣ್ಣ, ಬಿಸು ಹಬ್ಬ ಮಾಡುವ ಅಂತ ಕರೆದಿದ್ದಾರೆ. ಮಧು ಕೂಡ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಇವರ ಮನೆಯ ಸಮೀಪ ಶೀಲಾ ಅವರ ಮನೆಯಲ್ಲೇ ಸಂಜೆ ಹಬ್ಬದ ಪಾರ್ಟಿ ಅರೇಂಜ್ ಆಗಿದೆ. ಶೀಲಾ ಅವರೆ ತಮ್ಮ ಕೈಯಾರೆ ಬಿರಿಯಾನಿ ಮಾಡಿ ಬಡಿಸಿದ್ದಾರೆ. ಎಲ್ಲರು ಖುಷಿ ಖುಷಿಯಿಂದಲೇ ಊಟ ಮಾಡಿ ರಾತ್ರಿ 12 ಗಂಟೆ ಸುಮಾರಿಗೆ ಮಧು ಮನೆಗೆ ಹೋಗುತ್ತೇನೆ ಎಂದು ಹೊರಟಿದ್ದಾರೆ.

ಹುಡುಗರು ಕೂಡ ಆಯ್ತು ಅಣ್ಣ ಹೋಗೋಣ ಎಂದು ಮಧುವನ್ನು ಕರೆದುಕೊಂಡು ಅವರ ಕಾರಿನ ಬಳಿ ಬಂದಿದ್ದಾರೆ. ಕಾರಿನ ಸ್ವಲ್ಪ ದೂರದಲ್ಲೇ ರಿಮೋಟ್ ಮೂಲಕ ಮಧು ಲಾಕ್ ಓಪನ್ ಮಾಡಿದ್ದಾರೆ. ಅಷ್ಟೆ, ಅದೇ ವೇಳೆಗೆ ಡಂ ಎಂದು ಪಟಾಕಿ ಹೊಡೆದ ರೀತಿ ಶಬ್ಧವೊಂದು ಬಂದಿದೆ. ನೋಡಿದರೆ ಮಧು ಕುಸಿದು ಬಿದ್ದಿದ್ದ. ನೋಡ ನೋಡ್ತಾ ಇದ್ದ ಹಾಗೆನೇ ಮಧು ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದ. ಇದೀಗ ಮತ್ತೆ ಕೊಡಗಿನಲ್ಲಿ ಇಂತಹ ಘಟನೆ ಮರುಕಳಿಸಿದ್ದು, ಮತ್ತಷ್ಟು ಭಯಭೀತರಾಗುವಂತೆ ಮಾಡಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ