19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಸಂಬಂಧಿಕರಿಂದ ಪ್ರತಿಭಟನೆ

ಜ್ವರದಿಂದ ಬಳಲುತ್ತಿದ್ದ ನವ ವಿವಾಹಿತೆ ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಸಂಬಂಧಿಕರಿಂದ ಪ್ರತಿಭಟನೆ
ಸನಾ ಮಾಂಜ್ರೇಕರ್
Follow us
| Updated By: Rakesh Nayak Manchi

Updated on:May 29, 2022 | 12:57 PM

ಉತ್ತರ ಕನ್ನಡ: ಜ್ವರ (Fever)ದಿಂದ ಬಳಲುತ್ತಿದ್ದ ನವ ವಿವಾಹಿತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಾವ (Death)ನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಸನಾ ಮಾಂಜ್ರೇಕರ್(24)  ಮೃತಪಟ್ಟ ನವ ವಿವಾಹಿತೆ. ಸಾವಿನಿಂದ ಆಕ್ರೋಶಗೊಂಡ ಮೃತೆಯ ಸಂಬಂಧಿಕರು ಕಾರವಾರ ನಗರ ಠಾಣೆ ಎದುರು ಪ್ರತಿಭಟನೆ (Protest) ನಡೆಸಿದ್ದು, ಸನಾ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸುತ್ತಿದ್ದಾರೆ.

ಸ್ವಪ್ನಿಲ್ ಎಂಬವರ ಜೊತೆ 19 ದಿನಗಳ ಹಿಂದಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸನಾ ಮಾಂಜ್ರೇಕರ್ ಅವರಿಗೆ 8 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಗುಣಮುಖರಾಗಿದ್ದರು. ಆದರೆ, ನಿನ್ನೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕಾರವಾರ ನಗರದ ಕಾಜುಭಾಗ್‌ನ ಸಾವಂತ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸನಾ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ನಾಲ್ಕು ಇಂಜೆಕ್ಷನ್​ಗಳನ್ನು ನೀಡಿದ್ದು, ಇದರಿಂದ ಆಕೆ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಸಿಬ್ಬಂದಿ ಆಕೆಯನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸನಾ ಮಾಂಜ್ರೇಕರ್ ಸಾವನ್ನಪ್ಪಿದ್ದಾರೆ. ಅಲ್ಲದೆ ಸನಾ ಅವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರವಾರ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಕುಟುಂಬಸ್ಥರು ಸನಾ ಮಾಂಜ್ರೇಕರ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಕೊಲೆ ಪ್ರಕರಣ; ಒಂದು ವರ್ಷದಿಂದ ತಂಗಿ ಜೊತೆ ಮಾತು ಬಿಟ್ಟಿದ್ದ ಅಣ್ಣ

ಕೊಲೆ ಪ್ರಕರಣ ಬೇಧಿಸಿದ ಖಾಕಿ ಪಡೆ

ಚಿತ್ರದುರ್ಗ: ರಸ್ತೆ ಬದಿ ಪತ್ತೆಯಾದ ವ್ಯಕ್ತಿಯ ಶವ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು ಕೊಲೆ (Murder) ಪ್ರಕರಣವನ್ನು ಬೇಧಿಸುವಲ್ಲಿ ಯಶ್ವಿಯಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದ ರಸ್ತೆ ಪಕ್ಕದಲ್ಲಿ ಮೇ 27ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಮೃತರನ್ನು ಭರಮಸಾಗರದ ಭಾಷಾಸಾಬ್ (42)  ಎಂದು ಗುರುತಿಸಲಾಗಿತ್ತು. ಪ್ರಕರಣ ದಾಖಲಿಸಿದ್ದ ಭರಮಸಾಗರ ಠಾಣೆ‌ ಪೊಲೀಸರು, ತನಿಖೆ ನಡೆಸಿ ಕೊಲೆಯಾದ ಭಾಷಾಸಾಬ್ ಪತ್ನಿ ಪರ್ವೀನ್ ಬಾನು ಮತ್ತು ದಾದಾಪೀರ್​ ಎಂಬವರನ್ನು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ.

ಭಾಷಾಸಾಬ್ ಕೊಲೆಗೆ ಆಕೆಯ ಪತ್ನಿ ಹೊಂದಿದ್ದ ಅಕ್ರಮ ಸಂಬಂಧ (Illicit relationship)ವೆ ಕಾರಣ ಎಂದು ತಿಳಿದುಬಂದಿದೆ. ದಾದಾಪೀರ್ ಮತ್ತು ಪರ್ವೀನ್ ಅಕ್ರಮ ಸಂಬಂಧ ಹೊಂದಿದ್ದರು. ಈ ಕಾರಣಕ್ಕೆ ಆರೋಪಿಗಳು ಭಾಷಾಸಾಬ್​ ಅವರನ್ನು ಕೊಲೆ ಮಾಡಿ ಕೆ.ಬಳ್ಳೆಕಟ್ಟೆ ಗ್ರಾಮದ ರಸ್ತೆಪಕ್ಕದಲ್ಲಿ ಎಸೆದಿದ್ದರು.

ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಆಡಿಯೋ ಬಗೆಗಿನ ವಿಚಾರಣೆ ವೇಳೆ ಸುಮಾ ಸ್ಪೋಟಕ ಮಾಹಿತಿ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sun, 29 May 22