ಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿಯ ಕೊಲೆ; ಮದುವೆ ಮನೆಯಲ್ಲೀಗ ಸೂತಕದ ಛಾಯೆ

|

Updated on: May 18, 2023 | 8:35 AM

ಆತ ಪತ್ನಿ ಮಕ್ಕಳನ್ನ ಬಿಟ್ಟು 9 ತಿಂಗಳಿನಿಂದ ದೂರವಾಗಿ ಬೇರೆ ಕಡೆ ವಾಸವಿದ್ದ. ಮನೆಯಲ್ಲಿ ಮಗಳ ಮದುವೆ ಇದೆಯೆಂದು ವಾಪಸ್ ನಿನ್ನೆ(ಮೇ.16) ಮನೆಗೆ ಬಂದಿದ್ದ. ರಾತ್ರಿ ಊಟ ಮಾಡಿ ಮಲಗಿದ್ದಾಗ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಬೆಳಗ್ಗೆದ್ದು ತಾಯಿಯನ್ನ ನೋಡಿದ ಮಕ್ಕಳು ಕಂಗಲಾಗಿ ಹೋಗಿದ್ದಾರೆ.

ಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿಯ ಕೊಲೆ; ಮದುವೆ ಮನೆಯಲ್ಲೀಗ ಸೂತಕದ ಛಾಯೆ
ಕೊಲೆ ಮಾಡಿದ ಪತಿ, ಮೃತ ಪತ್ನಿ
Follow us on

ಯಾದಗಿರಿ: ಕೌಟುಂಬಿಕ ಕಲಹ ಹಿನ್ನಲೆ ರಾತ್ರಿ ವೇಳೆ ಮಲಗಿದ್ದಾಗ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ, ಬೆಳಗ್ಗೆದ್ದು ತಾಯಿಯ ಶವ ನೋಡಿ ಕಂಗಲಾದ ಮಕ್ಕಳು. ಕೊಲೆ ಮಾಡಿ ಪೊಲೀಸ್ ಠಾಣೆ(Police Station)ಗೆ ಹೋಗಿ ಶರಣಾದ ಪತಿರಾಯ. ಹೌದು ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ (yadagiri) ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ. ನಿನ್ನೆ(ಮೇ.16) ರಾತ್ರಿ ಪತಿಯಿಂದಲೇ ಪತ್ನಿಯ ಕೊಲೆ ನಡೆದು ಹೋಗಿದೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದಂತಾಗಿದೆ. ಅಷ್ಟಕ್ಕೂ ಇಲ್ಲಿ ಕೊಲೆಯಾದ ಮಹಿಳೆಯ ಹೆಸರು ಲಕ್ಷ್ಮೀ(36) ಕೊಲೆ ಮಾಡಿದ್ದು ಬೇರೆಯಾರು ಅಲ್ಲ ಬದಲಿಗೆ ಇದೆ ಲಕ್ಷ್ಮೀಯ ಪತಿ ನಿಂಗಪ್ಪ(40). ಇಲ್ಲಿ ಎಲ್ಲವೂ ಸರಿಯಾಗಿ ನಡೆದಿದ್ರೆ, ಇಂದು(ಮೇ.18) ಈ ಇಬ್ಬರ ದಂಪತಿಯ ಮಗಳ ಮದುವೆ ನಡೆಯಬೇಕಿತ್ತು. ಆದ್ರೆ, ಮದುವೆ ನಡೆಯಬೇಕಿದ್ದ ಮೊದಲೇ ಈ ಮನೆಯಲ್ಲಿ ಕೊಲೆ ನಡೆದು ಹೋಗಿದೆ.

ಕೊಲೆಗಾರ ನಿಂಗಪ್ಪನ ಸ್ಟೋರಿ ಹೀಗಿದೆ

ಹೌದು ಮೊದಲು ಈ ಕೊಲೆಗಾರ ನಿಂಗಪ್ಪನ ಸ್ಟೋರಿ ಕೇಳಿ. ಕಳೆದ 20 ವರ್ಷಗಳ ಹಿಂದೆ ಈ ನಿಂಗಪ್ಪ ಮತ್ತು ಲಕ್ಷ್ಮೀ ಮದುವೆಯಾಗಿದೆ. ಇಬ್ಬರಿಗೆ ನಾಲ್ಕು ಜನ ಮಕ್ಕಳು ಕೂಡ ಇದ್ದಾರೆ. ಕಳೆದ ವರ್ಷ ಹಿರಿಯ ಮಗಳ ಮದುವೆ ಕೂಡ ಮಾಡಿದ್ದಾರೆ. ಆದ್ರೆ, ಕಳೆದ 9 ತಿಂಗಳ ಹಿಂದೆ ಪತ್ನಿ ಜೊತೆ ಈ ನಿಂಗಪ್ಪ ಜಗಳ ಮಾಡಿಕೊಂಡು ಹೊಡಿಬಡಿ ಮಾಡಿದ್ದಾನೆ. ಬಳಿಕ ಪತ್ನಿ ಮತ್ತು ನಾಲ್ಕು ಮಕ್ಕಳನ್ನ ಬಿಟ್ಟು ಬೇರೆ ಕಡೆ ವಾಸ ಮಾಡ್ತಾಯಿದ್ದ. ಆದ್ರೆ, ಕಳೆದ ತಿಂಗಳು ಎರಡನೇ ಮಗಳಿಗೆ ನಿಶ್ಚಾರ್ಥ ಹಿನ್ನಲೆ ಮನೆಗೆ ಬಂದಿದ್ದ ನಿಂಗಪ್ಪ ಮತ್ತೆ ಹೆಂಡತಿ ಮತ್ತು ಮಕ್ಕಳಿಗೆ ಹೊಡಿದಿದ್ದಾನೆ. ಈ ಬಗ್ಗೆ ಪತ್ನಿ ಮತ್ತು ಮಕ್ಕಳು ಪೊಲೀಸ್ ಠಾಣೆಗೆವರೆಗೂ ಹೋಗಿ ರಾಜಿ ಪಂಚಾಯ್ತಿ ಮಾಡಿಕೊಂಡಿದ್ದಾರೆ. ಆದ್ರೆ, ಮತ್ತೆ ನಿನ್ನೆ ಪತ್ನಿಗೆ ಕರೆ ಮಾಡಿ ನಾನೇ ಮುಂದೆ ನಿಂತು ಮಗಳ ಮದುವೆ ಮಾಡುತ್ತೆನೆ ಎಂದು ಹೇಳಿದ್ದಾನೆ. ಹೀಗಾಗಿ ಪತ್ನಿ ಕೂಡ ನಿಂಗಪ್ಪನಿಗೆ ಮನೆಯೊಳಗೆ ಸೇರಿಸಿಕೊಂಡಿದ್ದಾರೆ. ಸಂಜೆ ವೇಳೆ ಮನೆಗೆ ಬಂದಿದ್ದ ನಿಂಗಪ್ಪ ಮನೆಯಲ್ಲಿ ಊಟ ಮಾಡಿದ್ದಾನೆ. ಮಕ್ಕಳೆಲ್ಲರು ಮನೆಯಲ್ಲಿ ಮಲಗಿದ್ರೆ, ಪತಿ ಪತ್ನಿ ಇಬ್ಬರು ಮನೆಯ ಹಿಂದೆ ಬಯಲಲ್ಲಿ ಮಲಗಿದ್ರು. ಆದ್ರೆ, ರಾತ್ರಿ ವೇಳೆ ತಲೆಯಲ್ಲಿ ಅದೇನ್ ಬಂತೋ ಗೊತ್ತಿಲ್ಲ. ಪತ್ನಿ ಲಕ್ಷ್ಮೀಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:ಮಂಡ್ಯದಲ್ಲಿ ಭೀಕರ ಹತ್ಯೆ; ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಶಂಕೆ

ಪೊಲೀಸ್​ ಠಾಣೆಗೆ ಹೋಗಿ ಶರಣಾದ ಪತಿರಾಯ

ಇನ್ನು ಕೊಲೆ ಮಾಡಿದ ಕೂಡಲೇ ತಲೆ ಮರಿಸಿಕೊಂಡು ಓಡಿ ಹೋಗದ ನಿಂಗಪ್ಪ ನೇರವಾಗಿ ರಾತ್ರಿಯೇ ಶಹಾಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ರಾತ್ರಿ ಮಲಗಿದ್ದಾಗ ನನ್ನ ಪತ್ನಿಯನ್ನ ಕೊಲೆ  ಮಾಡಿದ್ದೆನೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಬೆಳಗ್ಗೆ 6 ಗಂಟೆಗೆ ಪೊಲೀಸರು ನೇರವಾಗಿ ದೋರನಹಳ್ಳಿ ಗ್ರಾಮಕ್ಕೆ ಬಂದು ವಿಚಾರಣೆ ನಡೆಸಲು ಮುಂದಾಗುತ್ತಾರೆ. ಮನೆಯಲ್ಲಿ ಮಲಗಿದ್ದ ಮಕ್ಕಳನ್ನ ಎಬ್ಬಿಸಿ ಕೊಲೆಯಾಗಿರುವ ಬಗ್ಗೆ ಹೇಳುತ್ತಾರೆ. ಅಷ್ಟೋತ್ತಿಗೆ ಮಕ್ಕಳಿಗೂ ಸಹ ತಾಯಿ ಕೊಲೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಹೇಳಿದ ಬಳಿಕ ತಾಯಿಯ ಕೊಲೆಯಾಗಿರೋದನ್ನ ಕಂಡ ಮಕ್ಕಳು ಕಣ್ಣೀರು ಹಾಕಿದ್ದಾರೆ. 9 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿ ತಂದೆಯೇ ವಾಪಸ್ ಬಂದು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗುತ್ತದೆ.

ಇನ್ನು ಪತಿ ಬಿಟ್ಟು ಹೋಗಿದ್ದ ಬಳಿಕ, ಲಕ್ಷ್ಮೀಯೇ ಕೂಲಿ ನಾಲಿ ಮಾಡಿಕೊಂಡು ಮಕ್ಕಳನ್ನ ಸಾಕುತ್ತಿದ್ಳು. ಇನ್ನು ಮಗಳ ಮದುವೆ ಮಾಡಬೇಕು ಅಂತ ಸಾಲು ಸೂಲ ಮಾಡಿ ಸಾಕಷ್ಟು ವಸ್ತುಗಳನ್ನ ತಂದಿದ್ದಾಳೆ. ಸಂಜೆ ವೇಳೆ ಮಗಳನ್ನ ಉಡಿ ತುಂಬಿ ಕಳುಹಿಸಿ ಇಂದು ಇದೆ ಶಹಾಪುರ ತಾಲೂಕಿನ ವರನ ಊರಾದ ದರಿಯಾಪುರ ಗ್ರಾಮದಲ್ಲಿ ಮದುವೆ ಮಾಡಬೇಕಿತ್ತು. ಆದ್ರೆ, ಪಾಪಿ ಪತಿ ಮದುವೆ ನಡೆಯಬೇಕಿದ್ದ ಒಂದು ದಿನ ಮೊದ್ಲೆ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಇನ್ನು ಸಂತೋಷ ಸಡಗರದಿಂದ ಕೂಡಿದ್ದ ಪುಟ್ಟ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದ್ದಾನೆ. ಪೊಲೀಸರು ಆರೋಪಿ ನಿಂಗಪ್ಪನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹಳಿಯಾಳ: ಜಮೀನು ವಿವಾದ, ಫಾರೆಸ್ಟ್ ವಾಚ್​ಮ್ಯಾನ್​ನ ಕಾಲು ಕತ್ತರಿಸಿ ಭೀಕರ ಕೊಲೆ

ಒಟ್ಟಿನಲ್ಲಿ 9 ತಿಂಗಳಿನಿಂದ ಮನೆ ಬಿಟ್ಟು ದೂರವಾಗಿದ್ದ ಕುಡುಕ ಪತಿ, ಮಗಳ ಮದುವೆಯನ್ನ ನಾನೇ ಮುಂದೆ ನಿಂತು ಮಾಡುತ್ತೆನೆ ಎಂದು ಹೇಳಿ ಪತ್ನಿಯನ್ನೇ ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸಧ್ಯ ಸಂತೋಷ ಸಡಗರದಿಂದ ಕೂಡಿರಬೇಕಿದ್ದ ಮನೆ ಈಗ ಸೂತಕದ ಛಾಯೆ ಆವರಿಸಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:35 am, Thu, 18 May 23