Assembly Elections 2022: ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ: ಪಂಚರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

| Updated By: ganapathi bhat

Updated on: Jan 08, 2022 | 4:34 PM

ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ ಮಾಡಿದ್ದದಾರೆ. ಕೇಂದ್ರ ಚುನಾವಣಾ ಆಯೋಗದಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದೆ.

Assembly Elections 2022: ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ: ಪಂಚರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ
Follow us on

ದೆಹಲಿ: ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ (Central Election Commission) ನಡೆಸಲಾಗಿದೆ. ದೆಹಲಿಯಲ್ಲಿ ಸಿಇಸಿ ಸುಶೀಲ್ ಚಂದ್ರ ಸುದ್ದಿಗೋಷ್ಠಿ ನಡೆಸಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ (Assembly Elections 2021) ದಿನಾಂಕ ಪ್ರಕಟ ಮಾಡಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ ಮಾಡಿದ್ದದಾರೆ. ಕೇಂದ್ರ ಚುನಾವಣಾ ಆಯೋಗದಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಚುನಾವಣಾ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊವಿಡ್ (Covid19) ಸಂದರ್ಭದಲ್ಲಿ ಚುನಾವಣೆ ಸವಾಲಿನ ಕೆಲಸ ಆಗಿದೆ. ಆದ್ರೆ ಚುನಾವಣೆ ನಡೆಸುವುದು ನಮ್ಮ ಕರ್ತವ್ಯವಾಗಿದೆ. ಕೊವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಚುನಾವಣೆ ನಡೆಸಲಾಗುವುದು. ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸಲಾಗುವುದು. ಚುನಾವಣೆ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.

ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 24.9 ಲಕ್ಷ ಜನರು ಮೊದಲ ಬಾರಿ ಮತ ಚಲಾಯಿಸ್ತಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸುತ್ತೇವೆ. ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. 5 ರಾಜ್ಯಗಳಲ್ಲಿ 2,15,368 ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ 1,250 ಜನ ಮತ ಚಲಾಯಿಸಬಹುದು. 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ ಮಾಡಲಾಗಿದೆ. 5 ರಾಜ್ಯಗಳಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯವಾರು ಚುನಾವಣಾ ದಿನಾಂಕ, ಹಂತಗಳ ವಿವರ ಕೆಳಗೆ ನೀಡಲಾಗಿದೆ.

3 ರಾಜ್ಯಗಳಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ
ಫೆಬ್ರವರಿ 14ಕ್ಕೆ ಪಂಜಾಬ್, ಗೋವಾ, ಉತ್ತರಾಖಂಡ್‌ನಲ್ಲಿ ಮತದಾನ ನಡೆಯಲಿದೆ. 3 ರಾಜ್ಯಗಳಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 14ರಂದು ಪಂಜಾಬ್‌ನ 117 ಕ್ಷೇತ್ರಗಳಿಗೆ ಮತದಾನ, ಗೋವಾದ 40 ಕ್ಷೇತ್ರಗಳಿಗೆ ಮತದಾನ, ಉತ್ತರಾಖಂಡ್‌ನ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ 7ಹಂತದಲ್ಲಿ ಮತದಾನ
ಫೆಬ್ರವರಿ 10ರಂದು ಮೊದಲ ಹಂತದ ಮತದಾನ
ಫೆಬ್ರವರಿ 14ರಂದು 2ನೇ ಹಂತದ ಮತದಾನ
ಫೆಬ್ರವರಿ 20ರಂದು 3ನೇ ಹಂತದ ಮತದಾನ
ಫೆಬ್ರವರಿ 23ರಂದು 4ನೇ ಹಂತದ ಮತದಾನ
ಫೆಬ್ರವರಿ 27ರಂದು 5ನೇ ಹಂತದ ಮತದಾನ
ಮಾರ್ಚ್ 3ರಂದು 6ನೇ ಹಂತದ ಮತದಾನ
ಮಾರ್ಚ್ 7ರಂದು 7ನೇ ಹಂತದ ಮತದಾನ
ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

ಮಣಿಪುರದ 60 ಕ್ಷೇತ್ರಗಳಿಗೆ 2 ಹಂತದಲ್ಲಿ ಮತದಾನ
ಫೆಬ್ರವರಿ 27ರಂದು ಮೊದಲ ಹಂತದ ಮತದಾನ
ಮಾರ್ಚ್ 3ರಂದು 2ನೇ ಹಂತದ ಮತದಾನ
ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ
ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು. ಸುವಿಧಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ ಮಾಡಬಹುದು. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. ಚುನಾವಣಾ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಮಿತಿಗೊಳಿಸಿದ ಆಯೋಗ
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಆಯಾ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. KNOW YOUR CANDIDATE ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು. ಪಕ್ಷದ ವೆಬ್​ಸೈಟ್​ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.

ರಾಜಕೀಯ ಪಕ್ಷಗಳು ವರ್ಚುವಲ್ ರಾಲಿ ಮಾಡಲು ಆದ್ಯತೆ; ಕೊರೊನಾ ಹಿನ್ನೆಲೆ ಹಲವು ನಿರ್ಬಂಧ
ಮತದಾನ ಅವಧಿ 1 ಗಂಟೆ ವಿಸ್ತರಿಸಲಾಗುವುದು. ರಾಜಕೀಯ ಪಕ್ಷಗಳು ವರ್ಚುವಲ್ ರಾಲಿ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಪಾದಯಾತ್ರೆ, ರೋಡ್‌ಶೋ, ರಾಲಿಗಳಿಗೆ, ಸಾರ್ವಜನಿಕ ಸಭೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸಭೆಗಳಿಗೆ ಜನವರಿ 15ರವರೆಗೆ ನಿರ್ಬಂಧ ಇರಲಿದೆ. ಗೆಲುವಿನ ಬಳಿಕ ಸಾರ್ವಜನಿಕ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮನೆ ಮನೆ ಪ್ರಚಾರಕ್ಕೆ ಐವರು ಮಾತ್ರ ತೆರಳಲು ಅವಕಾಶ ಇರಲಿದೆ. ರಾತ್ರಿ 8 ಗಂಟೆ ಬಳಿಕ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹಾಕಲಾಗಿದೆ. ದ್ವೇಷದ ಭಾಷಣ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಹೆಚ್ಚಳ; ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಓರ್ವ ಅಭ್ಯರ್ಥಿ ಎಷ್ಟು ಖರ್ಚು ಮಾಡಬಹುದು?

ಇದನ್ನೂ ಓದಿ: ಕೊವಿಡ್ ಉಲ್ಬಣದ ನಡುವೆ ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿನ ಪರಿಸ್ಥಿತಿಯ ಕುರಿತು ಚುನಾವಣಾ ಆಯೋಗಕ್ಕೆ ಕೇಂದ್ರ ವಿವರಣೆ

Published On - 3:45 pm, Sat, 8 January 22