ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಆಯ್ಕೆ: ಬಿಜೆಪಿಗೆ ಎಂಜಿಪಿ, ಪಕ್ಷೇತರರ ಬೆಂಬಲ

ಸಾವಂತ್ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಕೇಳಿಬರುತ್ತಿದ್ದ ಸಾಕಷ್ಟು ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ.

ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಆಯ್ಕೆ: ಬಿಜೆಪಿಗೆ ಎಂಜಿಪಿ, ಪಕ್ಷೇತರರ ಬೆಂಬಲ
ಬಿಜೆಪಿ ನಾಯಕ ಪ್ರಮೋದ್ ಸಾವಂತ್
Edited By:

Updated on: Mar 21, 2022 | 7:16 PM

ಪಣಜಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮೋದ್ ಸಾವಂತ್ (Pramod Sawant) ಅವರನ್ನು ಗೋವಾ ಮುಖ್ಯಮಂತ್ರಿಯಾಗಿ (Goa CM) ಆಯ್ಕೆ ಮಾಡಲಾಗಿದೆ. ಇದೀಗ ಸಾವಂತ್ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಕೇಳಿಬರುತ್ತಿದ್ದ ಸಾಕಷ್ಟು ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ. ಮಾಜಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸಹ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಗೋವಾದಲ್ಲಿ ಬಹುಮತ ಸಾಧಿಸಲು 21 ಸ್ಥಾನಗಳ ಅಗತ್ಯವಿದೆ. ಇದೀಗ ಬಿಜೆಪಿ ಎಂಜಿಪಿ ಪಕ್ಷದ ಇಬ್ಬರು ಮತ್ತು ಮೂವರು ಪಕ್ಷೇತರರ ಬೆಂಬಲ ಪಡೆದುಕೊಂಡಿದೆ. ಹೀಗಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದೆ.

ಈ ಬಾರಿಯೂ ಬಿಜೆಪಿಗೆ ಗೋವಾ ಮತದಾರರು ಮನ್ನಣೆ ನೀಡುವುದರೊಂದಿಗೆ ಗೋವಾದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಂತೆ ಆಗಿದೆ. ಬಿಜೆಪಿ ನಾಯಕ ಮತ್ತು ಹಂಗಾಮಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಇದು ಎರಡನೇ ಅವಧಿ. ಈ ಬಾರಿ ಮುಖ್ಯಮಂತ್ರಿ ಹುದ್ದೆ ಪ್ರಮೋದ್ ಅವರೊಂದಿಗೆ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಹೆಸರುಗಳೂ ಕೇಳಿಬಂದಿದ್ದವು.

ಮಾರ್ಚ್ 23 ಅಥವಾ 25ರಂದು ಗೋವಾದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬಹುದು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಗೋವಾ ಬಿಜೆಪಿ ಘಟಕದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದಿದ್ದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 20, ಕಾಂಗ್ರೆಸ್ 11, ಆಮ್ ಆದ್ಮಿ ಪಕ್ಷ 2, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) 2, ಪಕ್ಷೇತರರು 3, ಗೋವಾ ಕ್ರಾಂತಿ ಪಕ್ಷ 1 ಮತ್ತು ಗೋವಾ ಫಾರ್ವರ್ಡ್ ಪಕ್ಷ 1 ಸ್ಥಾನ ಪಡೆದಿತ್ತು. ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 21 ಸ್ಥಾನದ ಅಗತ್ಯವಿದೆ.

ಇದನ್ನೂ ಓದಿ: ಗೋವಾದಿಂದ ಬರಿ ‘ಕೈ’ನಲ್ಲಿ ಬೆಂಗಳೂರಿಗೆ ವಾಪಸಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್​ ಸೋಲಿನ ಬಗ್ಗೆ ಏನಂದರು?

ಇದನ್ನೂ ಓದಿ: G Kishan Reddy: ಗೋವಾದಲ್ಲಿ ಬಿಜೆಪಿ ಜಯಭೇರಿ; ಈ ವಿಕ್ಟರಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ

Published On - 7:00 pm, Mon, 21 March 22