ಗೋವಾದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ, ರಾಜ್ಯಪಾಲರನ್ನು ಭೇಟಿಯಾಗುತ್ತೇವೆ: ಸಿಎಂ ಪ್ರಮೋದ್ ಸಾವಂತ್​

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಕ್ವೆಲಿಮ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮೇಶ್​ ಸಗ್ಲಾನಿ ವಿರುದ್ಧ ಸುಮಾರು 600 ಮತಗಳ ಅಂತರದಿಂದ ಗೆದ್ದಿದ್ದಾರೆ.

ಗೋವಾದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ, ರಾಜ್ಯಪಾಲರನ್ನು ಭೇಟಿಯಾಗುತ್ತೇವೆ: ಸಿಎಂ ಪ್ರಮೋದ್ ಸಾವಂತ್​
ಪ್ರಮೋದ್ ಸಾವಂತ್​
Follow us
| Updated By: Lakshmi Hegde

Updated on: Mar 10, 2022 | 3:55 PM

ಚುನಾವಣೋತ್ತರ ಸಮೀಕ್ಷೆ ವರದಿಯಂತೆ ಗೋವಾದಲ್ಲಿ (Goa Election Result) ಯಾವ ಪಕ್ಷಕ್ಕೂ, ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಬಹುಮತ ಸಿಗುವ ಲಕ್ಷಣಗಳು ತೋರುತ್ತಿಲ್ಲ. ಹೀಗಿದ್ದಾಗ್ಯೂ ಬಿಜೆಪಿ ಸುಮಾರು 18 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗೋವಾದಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿದ್ದು ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು 21 ಸದಸ್ಯರ ಬಲ ಇರಬೇಕು. ಈ ಮಧ್ಯೆ ಗೋವಾ ಬಿಜೆಪಿ ನಾಯಕರು ತಮಗೆ ಮೂವರು ಪಕ್ಷೇತರ ಶಾಸಕರ ಬೆಂಬಲ ಸಿಕ್ಕಿದ್ದು, ನಾವೇ ಸರ್ಕಾರ ರಚನೆ ಮಾಡುವುದಾಗಿ ಪ್ರತಿಪಾದಿಸಿದ್ದಾರೆ.  ಗೋವಾದಲ್ಲಿ ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿದು ಗೆದ್ದಿರುವ ಅಂಟೋನಿಯೋ ವಾಸ್, ಚಂದ್ರಕಾಂತ್​ ಶೆಟ್ಯೆ ಮತ್ತು ಅಲೆಕ್ಸ್​ರೊಟ್ಟಿಗೆ  ನಾವು ಮಾತುಕತೆ ನಡೆಸಿದ್ದೇವೆ. ಅವರ ಸಹಾಯದಿಂದ ಸರ್ಕಾರ ರಚನೆ ಮಾಡಿ, ಮಾರ್ಚ್​ 14ರಂದು ಪ್ರಮೋದ್ ಸಾವಂತ್ (Pramod Sawant)​ ಅವರೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಇದನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್ ಕೂಡ ಸ್ಪಷ್ಟಪಡಿಸಿದ್ದಾರೆ. ನಾವು ಸರ್ಕಾರ ರಚನೆಗೆ ಬೆಂಬಲ ಕೊಡುವಂತೆ ಮಹಾರಾಷ್ಟ್ರವಾದಿ ಗೋಮಾಂತಕ್​ ಪಾರ್ಟಿ ಮತ್ತು ಸ್ವತಂತ್ರ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸುತ್ತೇವೆ. ಇಂದು ಸಂಜೆಯ ವೇಳೆ ರಾಜ್ಯಪಾಲರನ್ನು ಭೇಟಿಯಾಗಿ, ನಾವೇ ಸರ್ಕಾರ ರಚನೆ ಮಾಡುವುದಾಗಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಇದುವರೆಗಿನ ಟ್ರೆಂಡ್ ಪ್ರಕಾರ, ಬಿಜೆಪಿ 18 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, 3 ಕ್ಷೇತ್ರಗಳಲ್ಲಿ ಗೆಲುವು ದೃಢಪಟ್ಟಿದೆ. ಕಾಂಗ್ರೆಸ್​ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಂಜಿಪಿ 3ರಲ್ಲಿ ಮುನ್ನಡೆ ಸಾಧಿಸಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಕ್ವೆಲಿಮ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮೇಶ್​ ಸಗ್ಲಾನಿ ವಿರುದ್ಧ ಸುಮಾರು 600 ಮತಗಳ ಅಂತರದಿಂದ ಗೆದ್ದಿದ್ದಾರೆ. ಗೋವಾದಲ್ಲಿ ಫೆ.14ರಂದು ಚುನಾವಣೆ ನಡೆದಿತ್ತು. ಒಟ್ಟಾರೆ 79.61ರಷ್ಟು ಮತದಾನವಾಗಿತ್ತು. ಇಲ್ಲಿ ಎಂಜಿಪಿ ಗೋವಾದ ಅತ್ಯಂತ ಹಳೇ ಪ್ರಾದೇಶಿಕ ಪಕ್ಷ. ತೃಣಮೂಲ ಕಾಂಗ್ರೆಸ್​​ನೊಟ್ಟಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆದರೆ ಚುನಾವಣೆ ನಂತರ ಈ ಪಕ್ಷಕ್ಕೆ ಸಹಜವಾಗಿಯೇ ಬೇಡಿಕೆ ಹೆಚ್ಚಿದ್ದು, ಇದೀಗ ಬಿಜೆಪಿ ಕೂಡ ಎಂಜಿಪಿ ಬೆಂಬಲದ ನಿರೀಕ್ಷೆಯಲ್ಲಿದೆ. ಅತ್ತ ಕಾಂಗ್ರೆಸ್​ ಕೂಡ ಎಂಜಿಪಿ ಜತೆ ಸಂಪರ್ಕದಲ್ಲಿದೆ.  ಸದ್ಯ ಎಂಜಿಪಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ತನ್ನ ಮಿತ್ರ ಪಕ್ಷ ಟಿಎಂಸಿಯನ್ನು ಕೇಳದೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Five States Election Results 2022: ಬಿಜೆಪಿಗೆ ಸಿಹಿ, ಆಪ್​ಗೆ ಸಿಕ್ಕಿತು ಪಂಜಾಬ್​, ಕರ್ನಾಟಕಕ್ಕೆ ಮತ್ತೆ ಲಗ್ಗೆ ಇಡಬಹುದು ಬಿಜೆಪಿ?