AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Elections 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದೇ ಮತದಾನ; ಗಮನಿಸಬೇಕಾದ ಐದು ಅಂಶಗಳು

ರಾಜ್ಯದಾದ್ಯಂತ ಇಂದು ಒಂದೇ ಹಂತದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ತಿಳಿಯಲೇಬೇಕಾದ ಕೆಲವು ಮಾಹಿತಿ ಇಲ್ಲಿದೆ.

Karnataka Elections 2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದೇ ಮತದಾನ; ಗಮನಿಸಬೇಕಾದ ಐದು ಅಂಶಗಳು
ಸಾಂದರ್ಭಿಕ ಚಿತ್ರ
Ganapathi Sharma
| Updated By: ರಮೇಶ್ ಬಿ. ಜವಳಗೇರಾ

Updated on:May 10, 2023 | 7:04 AM

Share

ರಾಜ್ಯದಾದ್ಯಂತ ಇಂದು ಒಂದೇ ಹಂತದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ (Karnataka Assembly Elections 2023) ಆರಂಭವಾಗಿದೆ. ಆಡಳಿತಾರೂಢ ಬಿಜೆಪಿಯು ಸುಮಾರು 38 ವರ್ಷಗಳ ಹಿಂದಿನ ಇತಿಹಾಸ ಮರುನಿರ್ಮಿಸಲು ಮತ್ತು ದಕ್ಷಿಣ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲಾ ಕಸರತ್ತುಗಳನ್ನು ಮಾಡಿದೆ. ಕಾಂಗ್ರೆಸ್ ಕೂಡ ತೀವ್ರ ಪೈಪೋಟಿ ನೀಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತದ ಸನಿಹ ತಲುಪಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳ ಪೈಕಿ ಕೆಲವು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಪರ ಜನರ ಒಲವು ಇರುವುದಾಗಿ ತಿಳಿಸಿವೆ. ಈ ಮಧ್ಯೆ, ಚುನಾವಣೆಗೆ ಸಂಬಂಧಿಸಿದ ತಿಳಿಯಲೇಬೇಕಾದ ಕೆಲವು ಮಾಹಿತಿ ಇಲ್ಲಿದೆ.

ಸಮೀಕ್ಷೆಗಳು ಏನು ಹೇಳುತ್ತಿವೆ?

‘ಟಿವಿ9’ ಸುದ್ದಿವಾಹಿನಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಯು ಸರಳ ಬಹುಮತದ ಸನಿಹ ತಲುಪಲಿದೆ ಎಂಬುದು ಇತ್ತೀಚೆಗೆ ತಿಳಿದುಬಂದಿತ್ತು. ಕೇಸರಿ ಪಕ್ಷವು ಒಟ್ಟಾರೆಯಾಗಿ 105ರಿಂದ 110 ಸ್ಥಾನ ಪಡೆಯಬಹುದು. ಕಾಂಗ್ರೆಸ್ ಪಕ್ಷವು 90 ರಿಂದ 97 ಸ್ಥಾನ ಗಳಿಸಬಹುದು. ಜೆಡಿಎಸ್ 19 ರಿಂದ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಇತರರು 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿತ್ತು.

ಇಂಡಿಯಾ ಟಿವಿ-ಸಿಎನ್‌ಎಕ್ಸ್‌ನ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ 105 ಸ್ಥಾನಗಳನ್ನು ಪಡೆಯಲಿದೆ ಮತ್ತು ಆಡಳಿತಾರೂಢ ಬಿಜೆಪಿ 85 ಸ್ಥಾನಗಳನ್ನು ಗಳಿಸಲಿದೆ. ಕರ್ನಾಟಕ ಚುನಾವಣೆಯ ಎಬಿಪಿ-ಸಿ-ವೋಟರ್ ಸಮೀಕ್ಷೆ ಕೂಡ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದಾಗಿ ತಿಳಿಸಿದೆ. ಎಬಿಪಿ-ಸಿ-ವೋಟರ್ ಪ್ರಕಾರ, ಕಾಂಗ್ರೆಸ್ 110-122 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಸರಳ ಬಹುಮತ ಸಾಧಿಸಲು ಅಥವಾ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯೆ 113 ಆಗಿದೆ.

ಚುನಾವಣಾಪೂರ್ವ ಸಮೀಕ್ಷೆಗಳನ್ನು ನಂಬಬಹುದೇ?

2018 ರ ಕರ್ನಾಟಕ ವಿಧಾನಸಭೆ ಚುನಾವಣೆಯ 13 ಸಮೀಕ್ಷೆಗಳ ಪೈಕಿ ಎರಡು ಮಾತ್ರ ಬಹುತೇಕ ನಿಜವಾಗಿತ್ತು. ಈ ಪೈಕಿ ಹತ್ತು ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಸರಿಸುಮಾರು ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಯಾವುದೇ ಹಾಲಿ ಮುಖ್ಯಮಂತ್ರಿ ಮರುಚುನಾವಣೆಯಲ್ಲಿ ಗೆದ್ದಿಲ್ಲ.

ಮೋದಿ ವರ್ಚಸ್ಸಿನಿಂದ ಬಿಜೆಪಿಗೆ ಎಷ್ಟು ಲಾಭವಾಗಬಹುದು?

ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಬಿಜೆಪಿಗೆ ಪ್ಲಸ್ ಪಾಯಿಂಟ್ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಪಕ್ಷ ಅಧಿಕಾರದಲ್ಲಿದ್ದಾಗ ಅಂದರೆ ಆಡಳಿತ ವಿರೋಧಿ ಅಲೆಯ ಸಂದರ್ಭದಲ್ಲಿಯೂ ಅವರ ಪ್ರಚಾರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. 2018ರಲ್ಲಿ ಕಾಂಗ್ರೆಸ್ ವಿರುದ್ಧದ ಆಡಳಿತವಿರೋಧಿ ಅಲೆ ಹಾಗೂ ಮೋದಿ ವರ್ಚಸ್ಸಿನ ಹೊರತಾಗಿಯೂ, ಬಿಜೆಪಿಗೆ ಬಹುಮತದ ಸಂಖ್ಯೆ ತಲುಪಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ.

2018ರ ಚುನಾವಣೆಯಲ್ಲಿ ಏನಾಯಿತು?

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, 104 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 87 ಮತ್ತು 30 ಸ್ಥಾನಗಳನ್ನು ಪಡೆದವು. ಒಂದು ದಿನದ ಮಟ್ಟಿಗೆ ಬಿಜೆಪಿ ಅಧಿಕಾರ ಸ್ವೀಕರಿಸಿತು. ಬಹುಮತ ಸಾಬೀತುಪಡಿಸಲಾಗದ ಸುಳಿವು ದೊರೆತ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದರು. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಯಿತು. ಈ ಸರ್ಕಾರ ಕೇವಲ 14 ತಿಂಗಳು ಇತ್ತು. ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು.

ಸದ್ಯದ ಟ್ರೆಂಡ್ ಹೇಗಿದೆ?

ಚುನಾವಣಾಪೂರ್ವ ಸಮೀಕ್ಷೆಗಳ ಪೈಕಿ ಹೆಚ್ಚಿನವು ಕಾಂಗ್ರೆಸ್​ ಪರ ಒಲವು ವ್ಯಕ್ತಪಡಿಸಿವೆ. ಆದಾಗ್ಯೂ, ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಾದ್ಯಂತ ಸಂಚರಿಸಿ ಬಿರುಸಸಿನ ಪ್ರಚಾರ ಮಾಡಿರುವುದು ಬಿಜೆಪಿ ಪಾಲಿಗೆ ವರದಾನವಾಗಲಿದೆ ಎನ್ನಲಾಗಿದೆ. ಆದರೆ, ಮೋದಿ ಅವರ ತೀವ್ರತರದ ಪ್ರಚಾರದ ನಂತರವೂ 2018ರಲ್ಲಿ ಕೇಸರಿ ಪಾಳೆಯಕ್ಕೆ ಬಹುಮತ ಪಡೆಯುವುದು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Tue, 9 May 23