PM Narendra Modi Speech: ಅಂಬೇಡ್ಕರ್​​ರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದ ಕಾಂಗ್ರೆಸ್; ಮೋದಿ ಆರೋಪ

ಬೀದರ್​​ನ ಚಿನಕೇರಾ ಕ್ರಾಸ್​​​ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ, ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

PM Narendra Modi Speech: ಅಂಬೇಡ್ಕರ್​​ರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದ ಕಾಂಗ್ರೆಸ್; ಮೋದಿ ಆರೋಪ
ಬೀದರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us
|

Updated on: Apr 29, 2023 | 12:17 PM

ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಂಥ ಮಹಾಪುರುಷರನ್ನೂ ಕಾಂಗ್ರೆಸ್ ನಿಂದಿಸಿತ್ತು. ಬಾಬಾ ಸಾಹೇಬ್ ಅವರನ್ನು ಕಾಂಗ್ರೆಸ್ ನಾಯಕರು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗಂಭೀರ ಆರೋಪ ಮಾಡಿದರು. ಬೀದರ್​​ನ ಚಿನಕೇರಾ ಕ್ರಾಸ್​​​ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ, ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕೆಸರು ಎರಚಿದಷ್ಟು ಕರ್ನಾಟಕದಲ್ಲಿ ಕಮಲ ಅರಳಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕನ್ನಡದಲ್ಲೇ ಮೋದಿ ಮಾತು

‘ಜಗದ್ಗುರು ಬಸವೇಶ್ವರ, ಶಿವ ಶರಣರ ನಾಡಿಗೆ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್​​ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್​​ನ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಹೇಳಿದರು.

‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’

ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಹೇಳಿದ ಮೋದಿ ಭಾಷಣದುದ್ದಕ್ಕೂ ಹಲವು ಬಾರಿ ಬಹುಮತದ ಸರ್ಕಾರದ ಅಗತ್ಯವನ್ನು ಒತ್ತಿಹೇಳಿದರು. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕ ನಂಬರ್ 1 ರಾಜ್ಯ ಆಗಬಲ್ಲದು ಎಂದು ಹೇಳಿದರು.

ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ

  1. ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಂದು ಇಡೀ ದೇಶಕ್ಕೆ ಸಂದೇಶ ನೀಡಿದ್ದೀರಿ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’.
  2. ರಾಜ್ಯದ ಈ ಚುನಾವಣೆ 5 ವರ್ಷಗಳಿಗೆ ಸರ್ಕಾರ ರಚಿಸುವುದಕ್ಕಷ್ಟೇ ಇರುವ ಚುನಾವಣೆಯಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ಮಾಡಲಿರುವ ಚುನಾವಣೆಯಾಗಿದೆ.
  3. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕ ಎತ್ತ ಸಾಗುತ್ತಿದೆ? ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ. ಹೆದ್ದಾರಿ, ಮೆಟ್ರೋ ವಿಸ್ತರಣೆಯಾಗುತ್ತಿವೆ.
  4. ಡಬಲ್ ಎಂಜಿನ್ ಸರ್ಕಾರದ ಶಕ್ತಿಯಿಂದ ಕರ್ನಾಟಕವನ್ನು ನಂಬರ್ 1 ಮಾಡುವುದನ್ನು ಯಾರೂ ತಡೆಯಲಾರರು. ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಬಿಜೆಪಿ ಸರ್ಕಾರದಿಂದ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಹೆಚ್ಚಾಗಿದೆ.
  5. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರವೂ ಹಣ ಸೇರಿಸಿ ನೀಡಲಾರಂಭಿಸಿತು.
  6. ರಾಜಸ್ಥಾನದಲ್ಲಿ ಕಾಂಗ್ರೆಸ್​​ ಸರ್ಕಾರ ಸಾಲಮನ್ನಾ ಮಾಡುವುದಾಗಿ ಸುಳ್ಳು ಹೇಳಿ ರೈತರಿಗೆ ವಂಚನೆ ಮಾಡಿದೆ. ಇದು ಕಾಂಗ್ರೆಸ್​​ನ ಅಸಲೀ ಮುಖವಾಗಿದೆ.
  7. ಎಥೆನಾಲ್ ಉತ್ಪಾದನೆ ಹೆಚ್ಚಿಸಿದ್ದೇವೆ. ಅದರಿಂದ ರೈತರಿಗೆ ಲಾಭವಾಗಲಿದೆ. ಪೆಟ್ರೋಲ್ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ. ಸಿರಿಧಾನ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಂಡಿದ್ದೇವೆ. ಇದರಿಂದಲೂ ರೈತರಿಗೆ ಪ್ರಯೋಜನವಾಗಿದೆ.
  8. ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಬಿಜೆಪಿಯು ಬಡವರಿಗೆ ಮನೆ ಕಲ್ಪಸುವ ಯೋಜನೆಗೆ ವೇಗ ನೀಡಿತು. ಕರ್ನಾಟಕದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ.
  9. ಒಂಬತ್ತು ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. ಬೀದರ್ ಜಿಲ್ಲೆಯೊಂದರಲ್ಲೇ ಮೂವತ್ತು ಸಾವಿರ ಮನೆಗಳ ನಿರ್ಮಾಣವಾಗಿವೆ. ಮಹಿಳೆಯರ ಹೆಸರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ.
  10. ಜಲ್​ಜೀವನ್​ ಮಿಷನ್​ ಯೋಜನೆಯಡಿ ದೇಶದಲ್ಲಿ 9 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆಇಂದು ದೇಶದಲ್ಲಿ 9 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿಯೂ ಲಕ್ಷಾಂತರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಸಲಾಗಿದೆ.
  11. ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿರಲಿಲ್ಲ. ನಾವು ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು, ಮೀಸಲಾತಿ ನೀಡಿದ್ದೇವೆ. ನಮ್ಮ ಸರ್ಕಾರ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಮಾಡಿದೆ. ಕಾಂಗ್ರೆಸ್ ಪಕ್ಷ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸಮಾಜದಲ್ಲಿ ಕಂದಕ ಸೃಷ್ಟಿಸುವ ಕೆಲಸ ಕಾಂಗ್ರೆಸ್​ ಮಾಡುತ್ತಿದೆ.

ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ

ಡಬಲ್ ಎಂಜಿನ್​ನ ಡಬಲ್​ ಸ್ಪೀಡ್​ನಿಂದ ಅಭಿವೃದ್ಧಿ ಸಾಧ್ಯವಾಗಿದೆ. ಒಂದು ವೇಳೆ ಡಬಲ್ ಎಂಜಿನ್ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿಗೆ ವೇಗ ದೊರೆಯುತ್ತಿರಲಿಲ್ಲ. ಬೀದರ್​​ನಲ್ಲಿಯೂ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ವೇಗ ಪಡೆದುಕೊಂಡಿವೆ. ನೀವೆಲ್ಲ ನೋಡುತ್ತಿದ್ದೀರಿ. ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಬಹಳಷ್ಟು ನೆರವಾಗಿದೆ. ಸಣ್ಣಪುಟ್ಟ ಖರ್ಚಿಗೆ ರೈತರಿಗೆ ನೆರವಾಗಿದೆ. ಯೋಜನೆ ಶುರು ಮಾಡಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇಲ್ಲಿತ್ತು. ಆಗ ಜನರಿಗೆ ಕೇಂದ್ರದ ಯೋಜನೆ ಸರಿಯಾಗಿ ತಲುಪುತ್ತಿರಲಿಲ್ಲ. ಫಲಾನುಭವಿಗಳ ಪಟ್ಟಿಯನ್ನೂ ಇಲ್ಲಿನ ಮೈತ್ರಿ ಸರ್ಕಾರ ನೀಡಿರಲಿಲ್ಲ. ರಾಜ್ಯ ಸರ್ಕಾರ ಒಂದು ಪೈಸೆ ಕೊಡೋದು ಬೇಕಿರಲಿಲ್ಲ. ಆದರೂ ಅವರು ಪಟ್ಟಿ ಕೊಡಲಿಲ್ಲ. ಯಾಕೆಂದರೆ ಅದರಿಂದ ಅವರಿಗೆ ಲಾಭ ಆಗುತ್ತಿರಲಿಲ್ಲ. ಹಾಗಾಗಿ ಅವರು ಫಲಾನುಭವಿಗಳ ಪಟ್ಟಿಯನ್ನೂ ಕೊಡಲಿಲ್ಲ.

ಇದನ್ನೂ ಓದಿ: Karnataka Election: 38 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವಂತೆ ಮಾಡುತ್ತಾರಾ ಬೊಮ್ಮಾಯಿ?

ನನ್ನನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​​ನವರು ನನ್ನನ್ನು ಬೈಯ್ಯುತ್ತಿದ್ದಾರೆ. 91 ಬಾರಿ ಕಾಂಗ್ರೆಸ್​​ನವರು ನನಗೆ ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲೇ ಕಾಂಗ್ರೆಸ್​​ನವರು ಸಮಯ ವ್ಯರ್ಥ ಮಾಡ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್​​ನವರ ಚಾಳಿ. ಮೊದಲು ಚೌಕೀದಾರ್ ಚೋರ್ ಎಂದರು. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ.ಅಂಬೇಡ್ಕರ್​​ ಅವರನ್ನು ಕೂಡ ಕಾಂಗ್ರೆಸ್​​ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಕಾಂಗ್ರೆಸ್​​ನವರು. ಅವರಂತ ಮಹಾನ್ ಪುರುಷರನ್ನೂ ಕಾಂಗ್ರೆಸ್​ ನಿಂದಿಸಿದೆ. ವೀರ ಸಾವರ್ಕರ್​​ ಅವರನ್ನೂ ಕಾಂಗ್ರೆಸ್​ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನೂ ನಿಂದಿಸುತ್ತಿದ್ದಾರೆ. ಮಹಾನ್​ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್​​ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇದ್ದಾಗ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಮೋದಿ ಹೇಳಿದರು.

ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬೇಕು. ಇದರಿಂದ ಮೂಲಸೌಕರ್ಯ, ವಿದೇಶಿ ಹೂಡಿಕೆ ಉತ್ತಮವಾಗಲಿದೆ. ಕರ್ನಾಟಕಕ್ಕೆ ಯಾಕೆ ಡಬಲ್ ಎಂಜಿನ್ ಸರ್ಕಾರ ಬೇಕೆಂದರೆ ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ನನಗೆ ವಿಶ್ವಾಸವಿದೆ. ಮತಗಟ್ಟೆಗೆ ತೆರಳಿ ಕಮಲದ ಚಿಹ್ನೆಗೆ ಮತ ನೀಡಿ. ಈ ಬಾರಿಯ ಮತ ಕರ್ನಾಟಕವನ್ನು ನಂಬರ್ 1 ಮಾಡಲು, ಅಮೃತ ಕಾಲಕ್ಕೆ ಕೊಡುಗೆ ನೀಡಲು ಎಂಬುದು ನೆನಪಿಡಿ. ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿ ಎಂದು ಪ್ರಧಾನಿ ಮತದಾರರಲ್ಲಿ ಮನವಿ ಮಾಡಿದರು.

ಮೇ 10ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ನೀಡಿ. ಕರ್ನಾಟಕದ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ. ಹಗಲಿರುಳು ನಿಮ್ಮೆಲ್ಲರ ಸೇವೆಗೂ ನಾನು ಬದ್ಧನಾಗಿದ್ದೇನೆ. ನಿಮ್ಮ ಆಶೀರ್ವಾದದಿಂದ ಬೈಗುಳಗಳು ಮಣ್ಣಲ್ಲಿ ಮಣ್ಣಾಗುತ್ತೆ. ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ. ನಿಮ್ಮ ಸೇವಕ ಮೋದಿಯಿಂದ ನಿಮಗೆಲ್ಲ ನಮಸ್ಕಾರಗಳು ಎಂದು ಮೋದಿ ಭಾಷಣ ಮುಗಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ