Karnataka Election: 38 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವಂತೆ ಮಾಡುತ್ತಾರಾ ಬೊಮ್ಮಾಯಿ?

38 ವರ್ಷಗಳ ಹಿಂದಿನ ದಾಖಲೆ ಮುರಿಯುವಲ್ಲಿ ಬೊಮ್ಮಾಯಿ ಯಶಸ್ವಿಯಾಗುತ್ತಾರೆಯೇ? ಯಾವುದು ಆ ದಾಖಲೆ? ಕರ್ನಾಟಕ ರಾಜಕೀಯ ಇತಿಹಾಸದ ಇಣುಕುನೋಟ ಇಲ್ಲಿದೆ ನೋಡಿ.

Karnataka Election: 38 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವಂತೆ ಮಾಡುತ್ತಾರಾ ಬೊಮ್ಮಾಯಿ?
ಸಾಂದರ್ಭಿಕ ಚಿತ್ರ
Follow us
|

Updated on:Apr 29, 2023 | 10:05 AM

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಯಾವ ಪಕ್ಷ ಗೆಲ್ಲಬಹುದು? ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಂತೆ ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಫಲರಾಗುತ್ತಾರಾ ಅಥವಾ ವಿಫಲರಾಗುತ್ತಾರಾ? ಮತ್ತೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಜೆಡಿಎಸ್ ಕಿಂಗ್ ಮೇಕರ್ ಪಾತ್ರ ವಹಿಸುತ್ತದೆಯೇ? ಅಥವಾ ಕಾಂಗ್ರೆಸ್ ಅಧಿಕಾರಕ್ಕೇರಲಿದೆಯೇ? ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಎಲ್ಲರನ್ನು ಸಹಜವಾಗಿ ಕಾಡುವ ಪ್ರಶ್ನೆ ಇದು. ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಜಯಿಸುವ ಬಗ್ಗೆಯೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಬಗ್ಗೆಯೂ ಸುಳಿವು ನೀಡಿವೆ. ಆದಾಗ್ಯೂ 38 ವರ್ಷಗಳ ಹಿಂದಿನ ದಾಖಲೆ ಮುರಿಯುವಲ್ಲಿ ಬೊಮ್ಮಾಯಿ ಯಶಸ್ವಿಯಾಗುತ್ತಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

ಏನು ಹೇಳುತ್ತದೆ ಕರ್ನಾಟಕ ರಾಜಕೀಯ ಇತಿಹಾಸ?

1957 ರಿಂದ ತೊಡಗಿ ಸುಮಾರು ಎರಡು ದಶಕಗಳ ಕಾಲ ಕರ್ನಾಟಕದಲ್ಲಿ ಕಾಂಗ್ರೆಸ್​ನದ್ದೇ ಪಾರುಪತ್ಯ. ಜನತಾ ಪಕ್ಷವು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ 1978 ರಲ್ಲಿ ಕೂಡ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 1983ರಲ್ಲಿ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಸ್ಥಾಪನೆಯಾಯಿತು. 1985ರಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದರು. ಇದೇ ಕೊನೆ, ನಂತರ ಯಾವ ಆಡಳಿತ ಪಕ್ಷವೂ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿಲ್ಲ.

1985 ರಿಂದ 1999 ರವರೆಗೆ ಜನತಾ ದಳದ ಘಟಕಗಳು ಮತ್ತು ಕಾಂಗ್ರೆಸ್ ಮಧ್ಯೆ ಅಧಿಕಾರ ಹಂಚಿಹೋಗಿದ್ದರೆ, 2004 ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿತು. ನಂತರ ಹೆಚ್​ಡಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದರು. ಆದರೆ ತಮ್ಮ ಅವಧಿ ಮುಗಿದ ಬಳಿಕ ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪದ್ದರಿಂದ ಬಿಜೆಪಿ ಬೆಂಬಲ ಹಿಂಪಡೆದು ಸರ್ಕಾರ ಪತನವಾಯಿತು. ಜೆಡಿಎಸ್​ ವಚನ ಭ್ರಷ್ಟ ಎಂಬುದನ್ನೇ ಅಸ್ತ್ರವಾಗಿಟ್ಟುಕೊಂಡು 2008ರ ವಿಧಾನಸಭೆ ಚುನಾವಣೆ ಎದುರಿಸಿದ ಬಿಜೆಪಿ ಬಹುಮತಕ್ಕೆ ಕೆಲವೇ ಸ್ಥಾನ ಕಡಿಮೆ ಪಡೆದು ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸರ್ಕಾರ ರಚನೆಗೆ ಮೂರ್ನಾಲ್ಕು ಶಾಸಕರ ಬೆಂಬಲ ಅಗತ್ಯವಿತ್ತು.

ಆಪರೇಷನ್ ಕಮಲಕ್ಕೆ ಕೈ ಹಾಕಿದ ಯಡಿಯೂರಪ್ಪ

ಮ್ಯಾಜಿಕ್ ಸಂಖ್ಯೆಗಾಗಿ ಪಕ್ಷೇತರ ಶಾಸಕರನ್ನು ಆಪರೇಷನ್ ಕಮಲ ಮೂಲಕ ಸೆಳೆದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಅವರ ಸಂಭ್ರಮ ಹೆಚ್ಚು ಕಾಲ ಬಾಳಲಿಲ್ಲ. ಹಲವು ಬಂಡಾಯಗಳು, ರೆಸಾರ್ಟ್ ರಾಜಕಾರಣವನ್ನು ಅವರು ಎದುರಿಸಬೇಕಾಗಿ ಬಂತು. ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗಬೇಕಾದ ಸಂದರ್ಭ ಬಂದೊದಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂದಿತು. ನಂತರ ಡಿವಿ ಸದಾನಂದ ಗೌಡ ಮುಖ್ಯಮಂತ್ರಿಯಾದರು. ಅದಾದ ಕೆಲವು ತಿಂಗಳುಗಳ ನಂತರ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತು.

ಕಾಂಗ್ರೆಸ್​​ಗೆ ವರವಾದ ಆಡಳಿತ ವಿರೋಧಿ ಅಲೆ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಮುಖ್ಯಮಂತ್ರಿಗಳ ಬದಲಾವಣೆಯಿಂದ ಬೇಸತ್ತಿದ್ದ ಮತದಾರರು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ಪರ ಮತ ನೀಡಿದರು. ಪರಿಣಾಮವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಆಡಳಿತಾವಧಿಯ ಕೊನೆಯಲ್ಲಿ ಹಮ್ಮಿಕೊಂಡ ಟಿಪ್ಪು ಜಯಂತಿಯೇ ಮೊದಲಾದ ಹಲವು ನಿರ್ಧಾರಗಳು ಸಿದ್ದರಾಮಯ್ಯಗೆ ಮುಳುವಾಯಿತು. ಮುಸ್ಲಿಂ ಓಲೈಕೆ ಸೇರಿದಂತೆ ಬಹುಸಂಖ್ಯಾತರ ಮನನೋಯಿಸುವಂಥ ಹಲವು ಕ್ರಮಗಳು ಆಡಳಿತ ವಿರೋಧಿ ಅಲೆಗೆ ಕಾರಣವಾಯಿತು.

2018ರಲ್ಲಿ ಮತ್ತೆ ಅತಂತ್ರ ವಿಧಾನಸಭೆ

2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ ಬಂದಿತು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ಒಂದೇ ದಿನಗದಲ್ಲಿ ರಾಜೀನಾಮೆ ನೀಡಬೇಕಾಯಿತು. ನಂತರ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಯಿತು. ಒಂದೇ ವರ್ಷದಲ್ಲಿ ಮೈತ್ರಿಯಲ್ಲಿ ಬಿರುಕು ಮೂಡಿದ್ದರ ಜತೆಗೆ ಬಿಜೆಪಿಯ ಆಪರೇಷನ್ ಕಮಲದ ಕಾರಣ ಸಮ್ಮಿಶ್ರ ಸರ್ಕಾರ ಪತನವಾಯಿತು. ಮರಳಿ ಬಿಜೆಪಿ ಸರ್ಕಾರ ರಚನೆಯಾಯಿತು. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ, ಒಂದೇ ವರ್ಷದಲ್ಲಿ ಅವರು ಸಿಎಂ ಸ್ಥಾನ ತ್ಯಜಿಸಬೇಕಾಗಿ ಬಂತು. ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಆಡಳಿತ ಪಕ್ಷಕ್ಕೆ ಮರಳಿ ಅಧಿಕಾರ ದೊರೆಯದಿರಲು ಐದು ಕಾರಣಗಳು

  1. ವರ್ಚಸ್ವಿ ನಾಯಕರ ಕೊರತೆ
  2. ಭ್ರಷ್ಟಾಚಾರ ಆರೋಪಗಳು
  3. ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಒಂದೇ, ಯಾರಿಂದಲೂ ಪ್ರಯೋಜನವಿಲ್ಲ ಎಂಬ ಭಾವನೆ ಮತದಾರರಲ್ಲಿರುವುದು
  4. ಅತಂತ್ರ ಫಲಿತಾಂಶಗಳು
  5. ಪ್ರಾದೇಶಿಕವಾರು ಪಕ್ಷಗಳ ಪ್ರಾಬಲ್ಯ

ಬಿಜೆಪಿ, ಬೊಮ್ಮಾಯಿಗೆ ಸವಾಲು

ಇದೀಗ 40 ಪರ್ಸೆಂಟ್ ಕಮಿಷನ್ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ಎದುರಿಸುತ್ತಿದೆ. ಆದರೆ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತು 38 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವಂತೆ ಮಾಡುವುದು ಬೊಮ್ಮಾಯಿ, ಬಿಜೆಪಿ ನಾಯಕರಿಗೆ ಸಾಧ್ಯವಾಗಲಿದೆಯಾ ಎಂಬ ಪ್ರಶ್ನೆಗೆ ಮೇ 13ರಂದು ಉತ್ತರ ದೊರೆಯಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 am, Sat, 29 April 23