ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ? ದೇವೇಗೌಡರು ಆಕ್ರೋಶ

|

Updated on: Apr 25, 2024 | 10:37 AM

HD Deve Gowda Opposes Wealth Redistribution Plan of Congress: ಕಾಂಗ್ರೆಸ್ ಪಕ್ಷದ ಚುನಾವಣಾ ಆಶ್ವಾಸನೆಗಳಲ್ಲೊಂದಾದ ಸಂಪತ್ತು ಮರುಹಂಚಿಕೆ ವಿಚಾರವನ್ನು ಎಚ್.ಡಿ. ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪತ್ತು ಮರುಹಂಚಿಕೆ ಮಾಡಲು ಹೊರಟಿರುವ ರಾಹುಲ್ ಗಾಂಧಿ ತಮ್ಮನ್ನು ಮಾವೋವಾದಿ ನಾಯಕ ಎಂದು ಭಾವಿಸಿದ್ದಾರಾ ಎಂದು ಗೌಡರು ಪ್ರಶ್ನೆ ಮಾಡಿದ್ದಾರೆ. ಸಂಪತ್ತು ಮರುಹಂಚಿಕೆ, 30 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ ಮಾಡುವ ವಿಚಾರಗಳು ಅಪಕ್ವತೆಯನ್ನು ತೋರಿಸುತ್ತದೆ. ಇವೆಲ್ಲಾ ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ ಎಂದು ಹಾಸನದಲ್ಲಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ? ದೇವೇಗೌಡರು ಆಕ್ರೋಶ
ಎಚ್.ಡಿ. ದೇವೇಗೌಡ
Follow us on

ಹಾಸನ, ಏಪ್ರಿಲ್ 25: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ (Congress election manifesto) ಪ್ರಸ್ತಾಪಿಸಲಾಗಿರುವ ಸಂಪತ್ತು ಮರುಹಂಚಿಕೆ (wealth redistribution) ವಿಚಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರಿಗೆ ಕೇಂದ್ರದ 30 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೂ ಗೌಡರು (HD Deve Gowda) ತಿರುಗೇಟು ನಿಡಿದ್ದಾರೆ. ಆಸ್ತಿ ಮರುಹಂಚಿಕೆ ಮಾಡಲು ರಾಹುಲ್ ಗಾಂಧಿ ತನ್ನನ್ನು ಮಾವೋವಾದಿ ನಾಯಕ ಎಂದು ಭಾವಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ದೇವೇಗೌಡರು, ಸಂಪತ್ತು ಮರುಹಂಚಿಕೆ ವಿಚಾರವನ್ನು ಪ್ರಸ್ತಾಪಿಸುತ್ತಾ, ಇದು ಕಾಂಗ್ರೆಸ್ ಪಕ್ಷದ ಇಬ್ಬರು ಮಾಜಿ ಪ್ರಧಾನಿಗಳಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಉದಾರೀಕರಣ ನೀತಿ ಜಾರಿಗೆ ತಂದಿದ್ದ ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರನ್ನು ಗೌಡರು ಪ್ರಸ್ತಾಪಿಸಿದ್ದರು.

ಕಾಂಗ್ರೆಸ್ ಪಕ್ಷ ತನ್ನ ಚನಾವಣಾ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದೆ. ಅಧಿಕಾರಕ್ಕೆ ಬರುವ ವಿಶ್ವಾಸ ಇಲ್ಲದ ಪಕ್ಷದಿಂದ ಮಾತ್ರ ಇಂತಹ ಆಶ್ವಾಸನೆಗಳು ಬರಲು ಸಾಧ್ಯ. ಕಾಂಗ್ರೆಸ್ಸಿಗರು ಈ ದೇಶವನ್ನು ಕೆಳಗೆ ಕೊಂಡೊಯ್ಯಲು ಹೊರಟಿದ್ದಾರೆ. ಯಾವುದೇ ರೀತಿಯಿಂದಲಾದರೂ ಅಧಿಕಾರ ಪಡೆಯಬೇಕೆನ್ನುವ ಹತಾಶೆ ಅವರಲ್ಲಿರುವುದು ಸ್ಪಷ್ಟವಾಗಿದೆ ಎಂದು ಜೆಡಿಎಸ್ ಮುಖ್ಯಸ್ಥರಾದ ದೇವೇಗೌಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ದೇವೇಗೌಡ

ರಾಹುಲ್ ಗಾಂಧಿ ಆಸ್ತಿ ಸಮೀಕ್ಷೆ ಮಾಡಿ ಸಮಾನ ಸಂಪತ್ತು ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆ. ಅವರೇನು ಮಾವೋವಾದಿ ನಾಯಕರಾ? ಕ್ರಾಂತಿಯ ಕನಸು ಕಾಣುತ್ತಿದ್ದಾರಾ? ಇದೆಲ್ಲವೂ ಪ್ರಾಯೋಗಿಕವಾಗಿ ಸಾಧ್ಯವಾ? ಎಂದು ಮಾಜಿ ಪ್ರಧಾನಿಗಳು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನೀಡಲಾದ ಆಶ್ವಾಸನೆಯನ್ನು ಪ್ರಸ್ತಾಪಿಸಿದ ಗೌಡರು, ರಾತ್ರೋರಾತ್ರಿ ಇವರು 30 ಲಕ್ಷ ಹೊಸ ಉದ್ಯೋಗಳನ್ನು ಎಲ್ಲಿಂದ ತರುತ್ತಾರೆ? ಇವರಿಗೆ ಪ್ರಾಯೋಗಿಕ ಜ್ಞಾನ ಇಲ್ಲ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್​ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಪಿ ಚಿದಂಬರಂ ಕೂಡ ರಾಹುಲ್ ಗಾಂಧಿ ಅವರ ಈ ಅಪಕ್ವ ವಿಚಾರಗಳನ್ನು ಒಪ್ಪುತ್ತಾರಾ ಎಂದು ಎಚ್ ಡಿ ದೇವೇಗೌಡರು ಕೇಳಿದ್ದಾರೆ.

ಇದನ್ನೂ ಓದಿ: ಚೊಂಬು ಜಾಹೀರಾತಿನ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಹಾಸನ, ಮಂಡ್ಯದಲ್ಲಿ ಸಹಕಾರ ಸಿಗುತ್ತಿಲ್ಲ: ಎಚ್​ಡಿಡಿ ಬೇಸರ

ಇದೇ ವೇಳೆ, ಹಾಸನ ಮತ್ತು ಮಂಡ್ಯ ಕ್ಷೇತ್ರದಲ್ಲಿ ಕೆಲ ಬಿಜೆಪಿಗರಿಂದ ಬೆಂಬಲ ಸಿಗುತ್ತಿಲ್ಲ ಎಂದು ಎಚ್.ಡಿ. ದೇವೇಗೌಡರು ಇದೇ ವೇಳೆ ಬೇಸರ ಹೊರಹಾಕಿದ್ದಾರೆ. ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ. ಆದರೂ ಪ್ರಜ್ವಲ್ ರೇವಣ್ಣ ಗೆಲುವನ್ನು ತಡೆಯಲು ಆಗಲ್ಲ ಎಂದು ಅವರು ಹೇಳಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರು ಸಹಕರಿಸುತ್ತಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಇದರಿಂದ ಅಪಾಯ ಏನಾಗುವುದಿಲ್ಲ ಎಂದೂ ಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ