AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1954ರಿಂದಲೂ ಕಾಂಗ್ರೆಸ್ ಒಬಿಸಿ ಸಮುದಾಯದ ವಿರೋಧಿ​: ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

1954 ರಿಂದ ಇಲ್ಲಿಯವರಗೂ ಒಬಿಸಿ ಸಮುದಾಯದ ವಿರುದ್ಧ ಪಿತೂರಿ ಮಾಡಿಕೊಂಡು ಬಂದಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಬಂದಿದೆ. 1954ರಲ್ಲಿ ಕಾಕಾ ಕಾಲೇಲ್ಕರ್​ ಸಮಿತಿ ರಚನೆಯಾಗಿ, ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ದರ್ಜೆ ನೀಡಬೇಕೆಂದು ಸಮಿತಿ ವರದಿಯಲ್ಲಿ ತಿಳಿಸಿತ್ತು. ಆದರೆ 1954ರಿಂದ 2018ರವರೆಗು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರಗಳು​ ಇದನ್ನು ಮಾಡಿರಲಿಲ್ಲ. ಆದರೆ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ದರ್ಜೆ ನೀಡಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

1954ರಿಂದಲೂ ಕಾಂಗ್ರೆಸ್ ಒಬಿಸಿ ಸಮುದಾಯದ ವಿರೋಧಿ​: ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ
ಸಂಸದ ತೇಜಸ್ವಿ ಸೂರ್ಯ
ವಿವೇಕ ಬಿರಾದಾರ
|

Updated on:Mar 28, 2023 | 1:37 PM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸರ್ಕಾರ ಮೀಸಲಾತಿ (Reservation) ಬೇಡಿಕೆ ಈಡೇರಿಸುವ ಕೆಲಸ ಮಾಡಿದೆ. ಹಿಂದೆಂದೂ ಮಾಡದ ಐತಿಹಾಸಿಕ ಕೆಲಸ ನಮ್ಮ ಸರ್ಕಾರ ಮಾಡಿದೆ. ಅಚ್ಚರಿ ಪಡುವ ರೀತಿ ಕಾಂಗ್ರೆಸ್ (Congress) ಸಾಮಾಜಿಕ ನ್ಯಾಯ ವಿರೋಧಿಸುತ್ತಿದೆ. ಸಂವಿಧಾನ ಬಾಹಿರವಾಗಿದ್ದಂತಹ ಮುಸ್ಲಿಂರಿಗೆ (Muslim) ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ನೀಡಿದ್ದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramiah) ವಿರೋಧಿಸುತ್ತಿರುವುದು ಆಶ್ಚರ್ಯವುಂಟು ಮಾಡಿದೆ. ಇನ್ನು ನಾವು ಅಧಿಕಾರಕ್ಕೆ ಬಂದರೇ ಮತ್ತೆ ಮುಸ್ಲಿಂರಿಗೆ ಈ ಹಿಂದೆ ನೀಡಿದ್ದ ಶೇ 4 ರಷ್ಟು ಮೀಸಲಾತಿಯನ್ನು ಮರಳಿ ನೀಡುತ್ತೇವೆ ಅಂತ ಕಾಂಗ್ರೆಸ್​ ಹೇಳಿದೆ. ಇದು ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ವಾಗ್ದಾಳಿ ಮಾಡಿದರು.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಹಿಂದಿನಿಂದಲೂ 1954 ರಿಂದ ಇಲ್ಲಿಯವರಗೂ ಒಬಿಸಿ ಸಮುದಾಯದ ವಿರುದ್ಧ ಪಿತೂರಿ ಮಾಡಿಕೊಂಡು ಬಂದಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಬಂದಿದೆ. 1954ರಲ್ಲಿ ಕಾಕಾ ಕಾಲೇಲ್ಕರ್​ ಸಮಿತಿ ರಚನೆಯಾಗಿ, ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ದರ್ಜೆ ನೀಡಬೇಕೆಂದು ಸಮಿತಿ ವರದಿಯಲ್ಲಿ ತಿಳಿಸಿತ್ತು. ಆದರೆ 1954ರಿಂದ 2018ರವರೆಗು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರಗಳು​ ಇದನ್ನು ಮಾಡಿರಲಿಲ್ಲ. ಆದರೆ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ದರ್ಜೆ ನೀಡಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಲೋಕಸಭೆಯಲ್ಲಿ ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ದರ್ಜೆ ನೀಡುವ ವೇಳೆ ಕಾಂಗ್ರೆಸ್​ ವಿರೋಧಿಸಿತ್ತು. ಹಿಂದುಳಿದ ಹಿಂದೂ ಸಮುದಾಯದ ಮೇಲೆ ಕಾಂಗ್ರೆಸ್​ಗೆ ಏಕಿಷ್ಟು ಕೋಪ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ; ತಾಂಡಾದೊಳಗೆ ಬಿಜೆಪಿ ಮುಖಂಡರಿಗೆ ಪ್ರವೇಶ ನಿಷೇಧ

1990ರಲ್ಲಿ ಕೇಂದ್ರದಲ್ಲಿದ್ದ ವಿಪಿ ಸಿಂಗ್​ ಸರ್ಕಾರ, ಒಬಿಸಿ ಸಮುದಾಯಕ್ಕೆ ಸಂಬಂಧಿಸಿದ ಮಂಡಲ್ ಕಮೀಷನ್‌ ನಲ್ಲಿ ತಿಳಿಸಿದ್ದ ಶೇ 27 ರಷ್ಟು ಮೀಸಲಾತಿ ಜಾರಿ ವೇಳೆ ರಾಜೀವ್​ ಗಾಂಧಿಯವರು ವಿರೋಧ ಮಾಡಿದರು. ಆದರೆ ಇದನ್ನು ಜಾರಿಯಾಗಲು ಬಿಜೆಪಿ ಬೆಂಬಲ ನೀಡಿತು. ಒಬಿಸಿ ಸಮುದಾಯಗಳ ಮೆಡಿಕಲ್, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ಮೀಸಲಾತಿಯನ್ನು ಹೆಚ್ಚಿಸುವಂತೆ ಕೂಗು ಎದ್ದಿತ್ತು. ಆದರೆ ಕಾಂಗ್ರೆಸ್​ 10 ವರ್ಷ ಅಧಿಕಾರದಲ್ಲಿದ್ದಾಗ ಹೆಚ್ಚಿಸಲಿಲ್ಲ. ಕಾಂಗ್ರೆಸ್ ಯಾಕೆ ಹೆಚ್ಚಿಗೆ ಮಾಡಲಿಲ್ಲ? ಇದನ್ನು ಮಾಡಿದ್ದು ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಎಂದು ಹೇಳಿದರು.

ಸಂವಿಧಾನದ ಪ್ರಕಾರ ಹಿಂದುಳಿದ ಸಮುದಾಯಕ್ಕೆ ಸಿಗಬೇಕಾಗಿದ್ದ ಮೀಸಲಾತಿಯನ್ನು ಕಾಂಗ್ರೆಸ್​ ನಿರಾಕರಿಸುವುದರ ಜೊತೆಗೆ ವಿರೋಧಿಸಿಕೊಂಡು ಬಂದಿದೆ. ಅಲ್ಲದೆ ಒಬಿಸಿ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಕಿತ್ತುಕೊಂಡು ಕಾಂಗ್ರೆಸ್​ ಮುಸ್ಲಿಂರಿಗೆ ನೀಡಿ ತುಷ್ಟಿಕರಣ ರಾಜಕಾರಣ ಮಾಡುತ್ತಾ ಬಂದಿದೆ. 2005ರಲ್ಲಿ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್​ ಅಧಿಕಾರಲ್ಲಿದ್ದಾಗ ಶೇ 4 ರಷ್ಟು ಮೀಸಲಾತಿಯನ್ನು ಓಬಿಸಿಯಿಂದ ಕಿತ್ತು ಕೊಂಡು, ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ನೀಡಿತು. ಆದರೆ ಇದನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ಹೊಡೆದು ಹಾಕಿತು. ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್​ 2010 ರಲ್ಲಿ ಹೊಸ ಕಾನೂನು ತಂದು ಮತ್ತೆ ಮುಸ್ಲಿಂರಿಗೆ ಶೇ 4ರಷ್ಟು ಮೀಸಲಾತಿ ನೀಡಲು ಮುಂದಾಗಿತ್ತು, ಸದ್ಯ ಈ ಸುಪ್ರಿಂ ಕೋರ್ಟ್​ ಅಂಗಳದಲ್ಲಿದೆ ಎಂದರು.

2012ರಲ್ಲಿ ಯುಪಿಎ ಸರ್ಕಾರ ಮತ್ತೆ ಶೇ 4.5 ರಷ್ಟು ಹೊಸದಾಗಿ ಮೀಸಲಾತಿಯನ್ನು ಕೇವಲ ಮುಸ್ಲಿಮರಿಗೆ ಕೊಡುತ್ತೇವೆ ಎಂದು ಹೇಳಿತು. ಆ 4.5 ರಷ್ಟು ಮೀಸಲಾತಿಯನ್ನು ಓಬಿಸಿ ಸಮುದಾಯದಿಂದ ಕೊಡುವುದಾಗಿ ಘೋಷಿಸಿತು. ಹಾಗಿದ್ದರೇ ಓಬಿಸಿ ಕಂಡರೇ ಕಾಂಗ್ರೆಸ್‌ಗೆ ಯಾಕೆ ಅಸಡ್ಡೆ? ಕಾಂಗ್ರೆಸ್ ಪಾರ್ಟಿಯ ಮನಸ್ಥಿತಿ ಹಿಂದಿನಿಂದಲೂ ಓಬಿಸಿ ಸಮುದಾಯ ಹಾಗೂ ನಾಯಕರ ವಿರುದ್ಧವಾಗಿದೆ ಎಂದು ವಾಗ್ದಾಳಿ ಮಾಡಿದರು. ದೇಶದ ಎಲ್ಲ ಒಬಿಸಿ ಸಮುದಾಯದ ನಾಯಕರು ಕಾಂಗ್ರೆಸ್​ನ ನೀತಿಯನ್ನು ವಿರೋಧಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ, ಬಿಹಾರದ ಕರ್ಪೂರಿ ಠಾಕೂರ್, ಜಯಪ್ರಕಾಶ ನಾರಾಯಣ ಎಲ್ಲರೂ ಕಾಂಗ್ರೆಸ್ ನಿಲುವನ್ನು ವಿರೋಧಿಸಿದವರು. ಕಾಂಗ್ರೆಸ್ ಪಕ್ಷದಲ್ಲಿದ್ದ ಒಬಿಸಿ ನಾಯಕರಿಗೆ ಗಾಂಧಿ ಕುಟುಂಬ ಅನ್ಯಾಯ ಮಾಡಿಕೊಂಡು ಬಂದಿದೆ. ಕಾಂಗ್ರೆಸ್​ನ ಮಾಜಿ ಅಧ್ಯಕ್ಷರನ್ನು ಸೀತಾರಾಮ್ ಕೇಸರಿ ಅವರನ್ನು ಯಾವ ರೀತಿ ಅವಮಾನಿಸಲಾಯ್ತು? ಬಾತ್ ರೂಮ್​ನಲ್ಲಿ ಕೂಡಿ ಹಾಕಲಾಗಿತ್ತು. ದೇವಾರಜ್ ಅರಸು ಅವರನ್ನು ಹೇಗೆ ಅವಮಾನ ಮಾಡಿದರು ಅಂತ ಕರ್ನಾಟಕದ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ  ಎಂದು ಮಾತನಾಡಿದರು.

ಎಸ್​ಸಿ, ಎಸ್ಟಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ದಶಕಗಳ ಬೇಡಿಕೆಗೆ ನೀವು ಯಾಕೆ ಕಿವಿಗೊಡಲಿಲ್ಲ. ಎಸ್​ಸಿ, ಎಸ್ಟಿ ಸಮುದಾಯಕ್ಕೆ ಯಾಕೆ ನೀವು ಮೀಸಲಾತಿ ಹೆಚ್ಚಿಸಲಿಲ್ಲ. ನಾವು ಅಧಿಕಾರಕ್ಕೆ ಬಂದಮೇಲೆ ಶೇ 15 ರಷ್ಟು ಹಾಗೂ ಶೇ 7 ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೇ ಶೇ 4 ರಷ್ಟು, ಅಂತ ಡಿ.ಕೆ. ಶಿವಕುಮಾರ್ ಹೇಳುತ್ತಾರೆ, ಸಿದ್ದರಾಮಯ್ಯ ಅವರು ಶೇ 13 ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ವಾಪಸ್​ ಕೊಡುತ್ತೇವೆ ಅಂತಿದ್ದಾರೆ. ಯಾವ ಸಮುದಾಯದಿಂದ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತೀರಿ? ಒಕ್ಕಲಿಗ, ಲಿಂಗಾಯತ, ಕುರುಬ ಯಾವ ಸಮುದಾಯದಿಂದ ಕಿತ್ತು ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರಿ? ಎಂದು ಸವಾಲ್​ ಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Tue, 28 March 23

Follow Us